ಆ್ಯಪ್ನಗರ

ಸ್ಯಾಂಡಲ್‌ವುಡ್‌ನಲ್ಲಿ ಶ್ವಾನಗಳಿಗೆ ಬಂದಿದೆ ಭರ್ಜರಿ ಡಿಮಾಂಡ್‌

ಸ್ಯಾಂಡಲ್‌ವುಡ್‌ನ ಹಲವಾರು ಸಿನಿಮಾಗಳಲ್ಲಿ ಈಗಾಗಲೆ ಶ್ವಾನಗಳನ್ನು ಬಳಸಿಕೊಳ್ಳಲಾಗಿದೆ. ಇದೀಗ ಮತ್ತೆ ಶ್ವಾನಗಳಿಗೆ ಭಾರಿ ಬೇಡಿಕೆ ಬಂದಿದೆ. 777 ಚಾರ್ಲಿ, ನನ್ನ ಪ್ರಕಾರ, ನಾನು ಮತ್ತು ಗುಂಡ, ಕಾಣದಂತೆ ಮಾಯವಾದನು ಮುಂತಾದ ಚಿತ್ರಗಳಲ್ಲಿ ಶ್ವಾನಗಳನ್ನು ಬಳಸಿಕೊಳ್ಳಲಾಗಿದೆ.

Vijaya Karnataka 23 Jul 2019, 12:25 pm
* ಶರಣು ಹುಲ್ಲೂರು
Vijaya Karnataka Web dog


ಕನ್ನಡ ಸಿನಿಮಾ ರಂಗದಲ್ಲೀಗ ನಾಯಿಗಳಿಗೆ ಭಾರೀ ಬೇಡಿಕೆ ಬಂದಿದೆ. ಮುದ್ದಿನ ನಾಯಿಗಳನ್ನು ಪ್ರಧಾನವಾಗಿಟ್ಟುಕೊಂಡು ಚಿತ್ರ ಮಾಡಲಾಗುತ್ತಿದೆ. ಸಿನಿಮಾಗಳಲ್ಲಿ ಪ್ರಾಣಿಗಳ ಬಗ್ಗೆ ಕಠಿಣ ನಿಯಮಗಳಿದ್ದರೂ, ಪ್ರಾಣಿ ಪ್ರಿಯರಿಗಾಗಿ ರಿಸ್ಕ್‌ ತಗೆದುಕೊಂಡು ಚಿತ್ರ ಮಾಡುತ್ತಿದ್ದಾರೆ ನಿರ್ದೇಶಕರು.

777 ಚಾರ್ಲಿ :
ರಕ್ಷಿತ್‌ ಶೆಟ್ಟಿ ಮುಖ್ಯ ಭೂಮಿಕೆಯ '777 ಚಾರ್ಲಿ' ಸಿನಿಮಾದಲ್ಲಿ ನಾಯಿಗೆ ಪ್ರಮುಖ ಪಾತ್ರ ನೀಡಿದ್ದಾರೆ ನಿರ್ದೇಶಕ ಕಿರಣ್‌ರಾಜ್‌. ಪ್ರಾಣಿ ಮತ್ತು ಮನುಷ್ಯನ ನಡುವಿನ ಸೂಕ್ಷ್ಮ ಸಂಬಂಧವನ್ನು ಈ ಚಿತ್ರದಲ್ಲಿ ಹೇಳಲು ಹೊರಟಿದ್ದಾರೆ ನಿರ್ದೇಶಕರು. ನಾಯಿಗೂ ಪ್ರಮುಖ ಪಾತ್ರ ಇರುವುದರಿಂದ ಅದಕ್ಕೆ ಒಂದಷ್ಟು ತರಬೇತಿ ನೀಡಿದ್ದಾರೆ.

'ಪ್ರಾಣಿಗಳ ಜತೆ ನಟಿಸುವುದು ತುಂಬಾ ಕಷ್ಟ. ಅವುಗಳ ಮನಸ್ಸು ಒಂದು ಕ್ಷಣದಲ್ಲಿ ಇದ್ದಂತೆ ಮತ್ತೊಂದು ಕ್ಷಣದಲ್ಲಿ ಇರುವುದಿಲ್ಲ. ಅಲ್ಲದೆ, ಅವುಗಳು ಯಾವ ಕ್ಷಣದಲ್ಲಿ ಹೇಗಿರುತ್ತವೆಯೋ ಹಾಗೆಯೇ ನಾವೂ ನಟಿಸಬೇಕಾಗುತ್ತದೆ. ಚಾರ್ಲಿಯಲ್ಲಿ ನಾಯಿ ಅದ್ಭುತವಾಗಿ ನಟಿಸಿದೆ' ಎಂದು ರಕ್ಷಿತ್‌ ಶೆಟ್ಟಿತಿಳಿಸಿದ್ದಾರೆ.

ಕಥಾ ನಾಯಕ ಇರುವಷ್ಟು ಹೊತ್ತೂ ನಾಯಿಯೂ ತೆರೆಯ ಮೇಲೆ ಕಾಣಿಸಿಕೊಳ್ಳುವುದು ಈ ಸಿನಿಮಾಗಳ ವಿಶೇಷಗಳಲ್ಲಿ ಒಂದು.

ನನ್ನ ಪ್ರಕಾರ :
ವಿನಯ್‌ ಬಾಲಾಜಿ ನಿರ್ದೇಶನದ 'ನನ್ನ ಪ್ರಕಾರ' ಸಿನಿಮಾದಲ್ಲಿಯೂ ನಾಯಿಯು ಪ್ರಮುಖವಾಗಿ ನಟಿಸಿದೆ. ಕಲಾವಿದರಷ್ಟೇ ನಾಯಿಗೂ ಪ್ರಧಾನ ಪಾತ್ರ ನೀಡಿದ್ದಾರಂತೆ ನಿರ್ದೇಶಕರು. 'ಈಗಾಗಲೇ ರಿಲೀಸ್‌ ಆಗಿರುವ ಟ್ರೇಲರ್‌ನಲ್ಲೂ ನಾಯಿ ಬಳಕೆ ಆಗಿದೆ. ಹಾಡೊಂದರಲ್ಲೂ ನಾಯಿ ಕಾಣಿಸಿಕೊಂಡಿದೆ. ಸಖತ್‌ ಕ್ಯೂರಿಯಾಸಿಟಿ ಕ್ರಿಯೇಟ್‌ ಮಾಡುವಂಥ ದೃಶ್ಯಗಳಲ್ಲಿ ಈ ನಾಯಿ ಕಾಣಿಸಿಕೊಳ್ಳುತ್ತದೆ' ಎನ್ನುತ್ತಾರೆ ನಿರ್ದೇಶಕರು.

ಈ ಸಿನಿಮಾದಲ್ಲಿ ಪ್ರಿಯಾಮಣಿ ಮತ್ತು ಕಿಶೋರ್‌ ಒಟ್ಟಿಗೆ ಈ ನಾಯಿ ಕಾಣಿಸಿಕೊಂಡಿದೆ. ಮಯೂರಿ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ.

ನಾನು ಮತ್ತು ಗುಂಡ:
ಶ್ರೀನಿವಾಸ್‌ ತಿಮ್ಮಯ್ಯ ನಿರ್ದೇಶನದ 'ನಾನು ಮತ್ತು ಗುಂಡ' ಸಿನಿಮಾದಲ್ಲಿಯೇ ನಾಯಿಯೇ ಹೀರೋ. ಹಾಗಾಗಿ ಬಿಳಿ ಬಣ್ಣದ ಲ್ಯಾಬ್ರಾಡರ್‌ ನಾಯಿಗೆ ಟ್ರೈನಿಂಗ್‌ ನೀಡಿ, ತಮ್ಮ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ ನಿರ್ದೇಶಕರು. ಇದೊಂದು ನೈಜ ಘಟನೆಯನ್ನು ಆಧರಿಸಿದ ಚಿತ್ರವಾಗಿದ್ದು, ನಾಯಿ ಮತ್ತು ಅದರ ಮಾಲೀಕನ ನಡುವಿಗೆ ಬಾಂಧವ್ಯವನ್ನು ಈ ಚಿತ್ರದಲ್ಲಿ ಹೇಳುತ್ತಿದ್ದಾರಂತೆ ಶ್ರೀನಿವಾಸ್‌.

'ಈ ಸಿನಿಮಾದಲ್ಲಿ ನಾನು ಸಿಂಬ ಎಂಬ ಹೆಸರಿನಲ್ಲಿ ನಾಯಿಯನ್ನು ಬಳಸಿದ್ದೇನೆ. ಮರಿದೇವರು ಎನ್ನುವವರು ಅದಕ್ಕೆ ತರಬೇತಿ ನೀಡಿದ್ದಾರೆ. ತುಂಬಾ ಚೆನ್ನಾಗಿ ಅದು ಕಾಣಿಸಿಕೊಂಡಿದೆ' ಎನ್ನುತ್ತಾರೆ ನಿರ್ದೇಶಕರು. ಶಿವರಾಜ್‌ ಕೆ.ಆರ್‌. ಪೇಟೆ ಮತ್ತು ಸಂಯುಕ್ತ ಹೊರನಾಡು ಈ ಸಿನಿಮಾದ ಪ್ರಮುಖ ಪಾತ್ರಧಾರಿಗಳು.

ಕಾಣದಂತೆ ಮಾಯವಾದನು:
ವಿಕಾಸ್‌ ಮುಖ್ಯ ಭೂಮಿಕೆಯ 'ಕಾಣದಂತೆ ಮಾಯವಾದನು' ಸಿನಿಮಾದಲ್ಲಿಯೂ ಕೂಡ ನಾಯಿಯನ್ನು ಬಳಸಿಕೊಂಡಿದ್ದಾರೆ ನಿರ್ದೇಶಕರು. ಇದೊಂದು ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಮಾದರಿಯ ಚಿತ್ರವಾಗಿದ್ದರಿಂದ, ನಾಯಿ ಕೂಡ ಚಿತ್ರಕಥೆಯ ಅನೇಕ ತಿರುವುಗಳಿಗೆ ಸಾಕ್ಷಿ ಆಗಲಿದೆಯಂತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌