ಆ್ಯಪ್ನಗರ

ಗುಲ್ಟು ಸಿನಿಮಾ ಹಾಡುಗಳಿಗೆ ಸ್ಕಾಟ್‌ಲ್ಯಾಂಡ್‌ ವಾದ್ಯಗಾರರು

ಜನಾರ್ದನ್‌ ಚಿಕ್ಕಣ್ಣ ನಿರ್ದೇಶನದ 'ಗುಳ್ಟು' ಸಿನಿಮಾದ ಹಾಡುಗಳಿಗೆ ಸ್ಕಾಟ್‌ಲ್ಯಾಂಡ್‌ನ ಪ್ರಸಿದ್ಧ ಸಂಗೀತಗಾರರು ಕೆಲಸ ಮಾಡಿದ್ದಾರೆ.

Vijaya Karnataka Web 12 Feb 2018, 11:26 am

- ಶರಣು ಹುಲ್ಲೂರು

ಜನಾರ್ದನ್‌ ಚಿಕ್ಕಣ್ಣ ನಿರ್ದೇಶನದ 'ಗುಳ್ಟು' ಸಿನಿಮಾದ ಹಾಡುಗಳಿಗೆ ಸ್ಕಾಟ್‌ಲ್ಯಾಂಡ್‌ನ ಪ್ರಸಿದ್ಧ ಸಂಗೀತಗಾರರು ಕೆಲಸ ಮಾಡಿದ್ದಾರೆ. ಅಲ್ಲಿನ ಅಪರೂಪದ ವಾದ್ಯಗಳನ್ನು ಕೂಡ ಬಳಸಿಕೊಳ್ಳಲಾಗಿದೆ.

ಗುಳ್ಟು ಸಿನಿಮಾದ ಹಾಡುಗಳು ಸಖತ್‌ ಸೌಂಡ್‌ ಮಾಡುತ್ತಿದ್ದು, ಹೊಸ ರೀತಿಯ ಮ್ಯೂಸಿಕ್‌ನಿಂದಾಗಿ ಗಮನ ಸೆಳೆಯುತ್ತಿವೆ. ಪ್ರತಿ ಹಾಡು ಹೊಸದಾಗಿ ಕೇಳಿಸುತ್ತಿರುವುದಕ್ಕೆ ಕಾರಣವಿದೆ. ಇದನ್ನು ಚಿತ್ರದ ನಿರ್ದೇಶಕ ಜನಾರ್ದನ್‌ ಚಿಕ್ಕಣ್ಣ ಲವಲವಿಕೆ ಜತೆ ಹಂಚಿಕೊಂಡಿದ್ದಾರೆ. ಜತೆಗೆ ಸಂಗೀತ ನಿರ್ದೇಶಕ ಅಮಿತ್‌ ಆನಂದ್‌, ಹಾಡುಗಳ ಸಂಯೋಜನೆಯ ವಿವರಗಳನ್ನು ವಿವರಿಸಿದ್ದಾರೆ.

ಗುಳ್ಟು ಸಿನಿಮಾದಲ್ಲಿ ಐದು ಹಾಡುಗಳಿವೆ. ಒಂದೊಂದು ಹಾಡಿಗೂ ವಿಭಿನ್ನ ರೀತಿಯ ವಾದ್ಯಗಳನ್ನು ಬಳಸಿದ್ದಾರೆ ಸಂಗೀತ ನಿರ್ದೇಶಕರು. ಸ್ಕಾಟ್‌ಲ್ಯಾಂಡ್‌ನ ಹೆಸರಾಂತ ಡ್ರಮ್ಮರ್‌ ಕಾಟ್‌ ಡೊನಾಲ್ಡೊ, ಚೆಲ್ಲೋ ವಾದ್ಯಗಾರ ಕ್ರಿಶ್‌ ಮೆಕ್ಯುವಿನ್‌, ಮ್ಯೂಸಿಕ್‌ ಕೋ ಪ್ರೊಡ್ಯೂಸರ್‌ ಆಡಮ್‌ ಮೆಕ್‌ಡಾಗಲ್‌ ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಇವರನ್ನು ಕನ್ನಡಕ್ಕೆ ಕರೆತಂದಿದ್ದಾರೆ ಅಮಿತ್‌ ಆನಂದ್‌.

Vijaya Karnataka Web gultoo cinema songs
ಗುಲ್ಟು ಸಿನಿಮಾ ಹಾಡುಗಳಿಗೆ ಸ್ಕಾಟ್‌ಲ್ಯಾಂಡ್‌ ವಾದ್ಯಗಾರರು


'ಗುಳ್ಟು ಸಿನಿಮಾದ ನಿರ್ದೇಶಕ ಜನಾರ್ದನ್‌ ಮತ್ತು ನಾನು ಸ್ನೇಹಿತರು. ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವ ವೇಳೆಯಲ್ಲಿ ನಾನು ಸ್ಕಾಟ್‌ಲ್ಯಾಂಡ್‌ಗೆ ತರಬೇತಿಗಾಗಿ ಹೋಗಿದ್ದೆ. ಅಲ್ಲಿಯೇ ಈ ಸಿನಿಮಾದ ಹಾಡುಗಳನ್ನು ಕಂಪೋಸ್‌ ಮಾಡಿದೆ. ಭಾರತೀಯ ಸಂಗೀತಗಾರರು ಮತ್ತು ಸ್ಕಾಟ್‌ಲ್ಯಾಂಡ್‌ನ ಸಂಗೀತಗಾರರ ಸಮ್ಮಿಲನದಲ್ಲಿ ಈ ಹಾಡುಗಳು ಮೂಡಿ ಬಂದಿವೆ. ಹಾಗಾಗಿ ಅವುಗಳು ಹೊಸ ರೀತಿಯಲ್ಲಿ ಕೇಳಿಸುತ್ತಿವೆ' ಅಂತಾರೆ ಅಮಿತ್‌.

ಚೆಲ್ಲೋ ವಾದ್ಯವನ್ನು ಹಿನ್ನೆಲೆ ಸಂಗೀತ ಮತ್ತು ಒಂದು ಹಾಡಿಗೆ ಬಳಸಿಕೊಂಡಿದ್ದರೆ, 'ಸಾಲಾಗಿ..' ಸಾಂಗ್‌ನಲ್ಲಿ ಡ್ರಮ್‌ ಬಳಕೆಯಾಗಿದೆ. 'ನೀನೊಂದು ಆಶ್ಚರ್ಯ..' ಗೀತೆಯಲ್ಲೂ ಹಲವು ವಾದ್ಯಗಳನ್ನು ಬಳಸಿಕೊಂಡು ಸಂಯೋಜನೆ ಮಾಡಲಾಗಿದೆ. ಹಾಗಾಗಿ ಕನ್ನಡದಲ್ಲಿ ಮಾತ್ರವಲ್ಲ ಸ್ಕಾಟ್‌ಲ್ಯಾಂಡ್‌ನಲ್ಲೂ ಈ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ನಿರ್ದೇಶಕರು ಹೇಳಿದ್ದಾರೆ.

'ನಿರ್ದೇಶಕರು ನನಗೆ ಎಲ್ಲ ಸ್ವಾತಂತ್ರ್ಯ ನೀಡಿದ್ದರು. ಅಲ್ಲದೆ ಜಯಂತ್‌ ಕಾಯ್ಕಿಣಿ ಅಂತಹ ಹೆಸರಾಂತ ಸಾಹಿತಿಗಳು ಹಾಡುಗಳನ್ನು ಬರೆದಿದ್ದರು. ಹಾಗಾಗಿ ಉತ್ತಮ ಗೀತೆಗಳನ್ನು ಕೊಡಲು ಸಾಧ್ಯವಾಯಿತು. ಒಂದೊಂದು ಹಾಡು ಮಾಡುವಾಗಲೂ ಹಲವು ಆಯ್ಕೆಗಳನ್ನು ಕೊಡುತ್ತಿದ್ದೆ. ಎಲ್ಲರೂ ಮೆಚ್ಚಿದ್ದನ್ನು ಮಾತ್ರ ಉಳಿಸಿಕೊಳ್ಳುತ್ತಿದ್ದೆವು. ಇಂತಹ ಅವಕಾಶ ನನಗೆ ಸಿಕ್ಕಿದ್ದು ನಿಜಕ್ಕೂ ಖುಷಿಯಾಗುತ್ತಿದೆ' ಅನ್ನುವುದು ಸಂಗೀತ ನಿರ್ದೇಶಕರ ಮಾತು.

ಅಂದಹಾಗೆ ಈ ಸಿನಿಮಾದಲ್ಲಿ ಡಿಜಿಟಲ್‌ ಯುಗದ ಸ್ಟೋರಿಯನ್ನು ಹೇಳುತ್ತಿದ್ದಾರಂತೆ ನಿರ್ದೇಶಕರು. ಈ ಹೊತ್ತಿನ ನಮ್ಮ ಯೂತ್ಸ್‌ ಡಿಜಿಟಲ್‌ ರೋಗಕ್ಕೆ ಅಂಟಿಕೊಂಡಿದ್ದಾರೆ. ಅಡಿಕ್ಟ್ ಕೂಡ ಆಗಿದ್ದಾರೆ. ಇದರ ಸಾಧಕ ಬಾಧಕ ಕುರಿತಾದ ಸಿನಿಮಾವಿದು. ಈ ಸಿನಿಮಾದ ಮೂಲಕ ನವೀನ್‌ ಶಂಕರ್‌ ನಾಯಕನಾಗಿ ಸಿನಿಮಾ ರಂಗ ಪ್ರವೇಶ ಮಾಡುತ್ತಿದ್ದಾರೆ. ಸೋನು ಗೌಡ ನಾಯಕಿ. ಇಬ್ಬರೂ ಇಲ್ಲಿ ಹೊಸ ಬಗೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಇವರೊಂದಿಗೆ ಅವಿನಾಶ್‌ ಮತ್ತು ರಂಗಾಯಣ ರಘು ಕೂಡ ತಾರಾಗಣದಲ್ಲಿ ಇದ್ದಾರೆ.

ಪ್ರಶಾಂತ್‌ ರೆಡ್ಡಿ ಮತ್ತು ದೇವರಾಜ್‌ ರಾಮಣ್ಣ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಮಾರ್ಚ್‌ನಲ್ಲಿ ತೆರೆಗೆ ತರುವ ಪ್ಲಾನ್‌ ಮಾಡಿದೆ ಚಿತ್ರತಂಡ.

ಸಂಗೀತ ನಿರ್ದೇಶಕ ಅಮಿತ್‌ ಮತ್ತು ನಾನು ಸ್ನೇಹಿತರು. ಈ ಸ್ನೇಹವೇ ಇಂದು ಒಟ್ಟಿಗೆ ಕೆಲಸ ಮಾಡಲು ಅವಕಾಶ ನೀಡಿದೆ. ಈಗಾಗಲೇ ರಿಲೀಸ್‌ ಆಗಿರುವ ಹಾಡುಗಳು ಸಖತ್‌ ಹಿಟ್‌ ಆಗಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಗೀತೆಗಳು ಸದ್ದು ಮಾಡಿವೆ.

- ಜನಾರ್ದನ್‌ ಚಿಕ್ಕಣ್ಣ, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌