ಆ್ಯಪ್ನಗರ

ಬಂಧನ ಭೀತಿಯಿಂದ ಅರ್ಜುನ್ ಸರ್ಜಾ ಸದ್ಯಕ್ಕೆ ನಿರಾಳ

ಮುಂದಿನ ವಿಚಾರಣೆ ನಡೆಯುವವರೆಗೂ ಅರ್ಜುನ್ ಸರ್ಜಾರನ್ನು ಬಂಧಿಸಬೇಡಿ, ಆದರೆ ತನಿಖೆ ಮುಂದುವರೆಸಿ ಎಂದು ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ.

Vijaya Karnataka Web 2 Nov 2018, 6:52 pm
#MeToo ವಿವಾದಕ್ಕೆ ಸಂಬಂಧಿಸಿದಂತೆ ನಟಿ ಶ್ರುತಿ ಹರಿಹರನ್ ಸಲ್ಲಿಸಿದ್ದ ಎಫ್‌ಐಆರ್ ರದ್ದು ಕೋರಿ ನಟ ಅರ್ಜುನ್ ಸರ್ಜಾ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನಡೆಸಿದ ಹೈಕೋರ್ಟ್ ವಿಚಾರಣೆಯನ್ನು ನವೆಂಬರ್ 14ಕ್ಕೆ ಮುಂದೂಡಿದೆ. ಮುಂದಿನ ವಿಚಾರಣೆ ನಡೆಯುವವರೆಗೂ ಅರ್ಜುನ್ ಸರ್ಜಾರನ್ನು ಬಂಧಿಸಬೇಡಿ, ಆದರೆ ತನಿಖೆ ಮುಂದುವರೆಸಿ ಎಂದ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ.
Vijaya Karnataka Web arjun-sarja


ಪಬ್ಲಿಸಿಟಿಗಾಗಿ, ಸರ್ಜಾ ಘನತೆಗೆ ಕುಂದು ತರಲು ಶ್ರುತಿ ಹರಿಹರನ್ ಸುಳ್ಳು ಆರೋಪ ಮಾಡಿದ್ದಾರೆಂದು ಅರ್ಜುನ್ ಸರ್ಜಾ ಪರ ವಕೀಲ ಬಿ.ವಿ. ಆಚಾರ್ಯ ವಾದ ಮಂಡಿಸಿದ್ದಾರೆ. ನ್ಯಾ. ಪಿ.ಎಸ್‌.ದಿನೇಶ್‌ ಕುಮಾರ್‌ ಅವರಿದ್ದ ನ್ಯಾಯಪೀಠದ ಮುಂದೆ ವಿಷಯ ಮಂಡಿಸಿ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಆಚಾರ್ಯ ಮನವಿ ಮಾಡಿದರು.

ಶ್ರುತಿ ಹರಿಹರನ್‌ ತಮ್ಮ ವಿರುದ್ಧ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದವು, ಆರೋಪ ಸಾಬೀತುಪಡಿಸಲು ಯಾವ ಸಾಕ್ಷ್ಯಾಧಾರಗಳೂ ಇಲ್ಲ. ದುರುದ್ದೇಶದಿಂದ ಸುಳ್ಳು ಆರೋಪ ಮಾಡಿದ್ದಾರೆ. ಹಾಗಾಗಿ ಆಧಾರ ರಹಿತ ದೂರು ಆಧರಿಸಿ ಕಬ್ಬನ್‌ಪಾರ್ಕ್‌ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸಬೇಕೆಂದು ಸರ್ಜಾ ಕೋರಿದ್ದರು.

ಕಳೆದ 36 ವರ್ಷಗಳಿಂದ ಚಿತ್ರರಂಗದಲ್ಲಿದ್ದು, ನಾಲ್ಕು ಭಾಷೆಗಳ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೇನೆ. ತಮ್ಮ ಸಿನಿಮಾ ಬದುಕಿನಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯೂ ಇಲ್ಲ. ಶ್ರುತಿ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಸಮಾಜದಲ್ಲಿ ಕೆಟ್ಟ ಹೆಸರು ತರುವ ದುರುದ್ದೇಶದಿಂದ ಸುಳ್ಳು ದೂರು ನೀಡಲಾಗಿದೆ. ಇಡೀ ಕುಟುಂಬ ಮುಜುಗರಕ್ಕೀಡಾಗಿದೆ. ಸಿನಿಮಾದಲ್ಲಿ ಕಥೆಗೆ ತಕ್ಕಂತೆ ಗಂಡ ಹೆಂಡತಿ ರೋಮ್ಯಾಂಟಿಕ್‌ ದೃಶ್ಯ ಮಾಡಲಾಗಿದೆ. ಚಿತ್ರ ಬಿಡುಗಡೆಯಾಗಿ ಯಶಸ್ಸು ಕಂಡಾಗ ಸುಮ್ಮನಿದ್ದ ಶ್ರುತಿ ಮೂರು ವರ್ಷಗಳ ನಂತರ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸರ್ಜಾ ಅರ್ಜಿಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌