ಆ್ಯಪ್ನಗರ

ಕಾದಂಬರಿ ಕಥೆಗಳ ಬೆನ್ನತ್ತಿದ ಕನ್ನಡ ನಿರ್ದೇಶಕರು

ಕಾದಂಬರಿ ಆಧರಿಸಿದ ಚಿತ್ರಗಳನ್ನು ಮಾಡುವಾಗ ಆ ಪಾತ್ರಗಳು ಯಥಾವತ್ತಾಗಿ ನಮ್ಮನ್ನು ಆವರಿಸಿಕೊಳ್ಳುತ್ತವೆ. ಹಾಗಾಗಿ ಪಾತ್ರ ಮಾಡುವಾಗ ಕಲಾವಿದರಿಗೆ ಸವಾಲೆನಿಸುತ್ತದೆ. ಒಂದು ರೀತಿಯಲ್ಲಿ ಖುಷಿ ಕೊಡುವಂಥ ಸಂಗತಿ ಕೂಡ ಇದಾಗಿದೆ ಎಂದಿದ್ದಾರೆ ನಟ ಅನೀಶ್.

Vijaya Karnataka 10 Jul 2019, 10:43 am
* ಶರಣು ಹುಲ್ಲೂರು
Vijaya Karnataka Web darshan1


ಕನ್ನಡ ಚಿತ್ರರಂಗದಲ್ಲಿ ಮತ್ತೆ ಕಾದಂಬರಿ ಕಥೆ ಆಧರಿಸಿದ ಸಿನಿಮಾಗಳ ಹವಾ ಆರಂಭವಾಗಿದೆ. ಹಿಂದೆ ಡಾ.ರಾಜ್‌ ಕುಮಾರ್‌ ಸೇರಿದಂತೆ ಸ್ಯಾಂಡಲ್‌ವುಡ್‌ನ ಖ್ಯಾತ ನಟರು ಇಂಥ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದನ್ನು ಮರುಕಳಿಸುವಂತೆ, ಈಗಿನ ಕೆಲ ನಿರ್ದೇಶಕರು ಕಥೆಗಳಿಗಾಗಿ ಕಾದಂಬರಿಕಾರರ ಮೊರೆ ಹೋಗಿದ್ದಾರೆ.

ಕೆಲ ವರ್ಷಗಳಿಂದ ಸ್ವಂತ ಕಥೆಗಳತ್ತ ಚಿತ್ತ ಹರಿಸಿದ್ದ ನಿರ್ದೇಶಕರು ಕಾದಂಬರಿಗಳ ಕಡೆ ವಿಮುಖರಾಗಿದ್ದರು. ಆದರೆ ಕಾಲ ಬದಲಾದಂತೆ ಮತ್ತೆ ಕಾದಂಬರಿಗಳಿಗೆ ಡಿಮಾಂಡ್‌ ಬಂದಿದೆ. ಸದ್ಯಕ್ಕೆ ಹತ್ತಕ್ಕೂ ಹೆಚ್ಚು ಕಾದಂಬರಿ ಆಧರಿಸಿದ ಸಿನಿಮಾಗಳು ತಯಾರಾಗುತ್ತಿವೆ. ದರ್ಶನ್‌, ಚಿರಂಜೀವಿ ಸರ್ಜಾ, ಅನೀಶ್‌ ಸೇರಿ ಕೆಲ ಸ್ಟಾರ್‌ ನಟರು ಈ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಚಿರು ನಟನೆಯ ಜುಗಾರಿ ಕ್ರಾಸ್‌
ಪೂರ್ಣಚಂದ್ರ ತೇಜಸ್ವಿ ಅವರ 'ಜುಗಾರಿ ಕ್ರಾಸ್‌' ಕಾದಂಬರಿ ಆಧರಿಸಿ ನಿರ್ದೇಶಕ ಟಿ.ಎಸ್‌.ನಾಗಾಭರಣ ಸಿನಿಮಾ ಮಾಡುತ್ತಿದ್ದಾರೆ. ಕೆಲ ತಿಂಗಳ ಹಿಂದೆಯಷ್ಟೇ ಇದಕ್ಕೆ ಚಾಲನೆ ಸಿಕ್ಕಿದ್ದು, ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸುತ್ತಿದ್ದಾರೆ. ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆ ಇರುವ ಈ ಕಾದಂಬರಿ ಒಂದೇ ಗುಕ್ಕಿನಲ್ಲಿ ಓದಿಸಿಕೊಳ್ಳುವಷ್ಟು ಗಟ್ಟಿ ಕಥೆಯನ್ನು ಹೊಂದಿದೆ.

ಅನೀಶ್‌ ನಟನೆಯ ಒಮಾರ್ಟ್‌
ಗುಳ್ಟು ಸಿನಿಮಾದ ಮೂಲಕ ಭರವಸೆ ಮೂಡಿಸಿರುವ ಜನಾರ್ದನ್‌ ಚಿಕ್ಕಣ್ಣ ಈಗ ರವಿ ಬೆಳಗೆರೆ ಅವರ 'ಒಮಾರ್ಟ್‌' ಕಾದಂಬರಿಯನ್ನು ಸಿನಿಮಾ ಮಾಡುತ್ತಿದ್ದಾರೆ. ಅಪರಾಧ ಜಗತ್ತಿನ ಹಿನ್ನೆಲೆಯಲ್ಲಿ ಮೂಡಿ ಬಂದಿರುವ ಕಥೆ ಇದಾಗಿದ್ದು, ಅನೀಶ್‌ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

ಬಿ.ಎಲ್‌ ವೇಣು ಅವರ 3 ಕಾದಂಬರಿ
ಕನ್ನಡದ ಹೆಸರಾಂತ ಬರಹಗಾರ ಬಿ.ಎಲ್‌.ವೇಣು ಅವರ ಮೂರು ಕಾದಂಬರಿಗಳು ಸದ್ಯ ಸಿನಿಮಾವಾಗುತ್ತಿವೆ. 'ಬಿಚ್ಚುಗತ್ತಿ ಭರಮಣ್ಣ ನಾಯಕ' ಕಾದಂಬರಿಯನ್ನು ಆಧರಿಸಿ 'ಬಿಚ್ಚುಗತ್ತಿ' ಸಿನಿಮಾ ರೆಡಿ ಆಗುತ್ತಿದ್ದರೆ, ಇವರದ್ದೇ ಮತ್ತೊಂದು ಕಾದಂಬರಿಯನ್ನು ಆಧಾರವಾಗಿಟ್ಟುಕೊಂಡು 'ಚಿತ್ರದುರ್ಗದ ಒನಕೆ ಓಬವ್ವ' ಚಿತ್ರ ನಿರ್ಮಾಣವಾಗುತ್ತಿದೆ. ಅಲ್ಲದೇ, ದರ್ಶನ್‌ ಕೂಡ ಇವರ 'ಗಂಡುಗಲಿ ಮದಕರಿ ನಾಯಕ' ಕಾದಂಬರಿಯನ್ನು ಆಧರಿಸಿದ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದೊಂದು ಬಹುಕೋಟಿ ಬಜೆಟ್‌ನ ಚಿತ್ರವಾಗಿದ್ದು, ಸದ್ಯದಲ್ಲೇ ಸೆಟ್ಟೇರಲಿದೆ.

ಈಗಾಗಲೇ ಜೋಗಿ ಅವರ 'ನದಿ ನೆನಪಿನ ಹಂಗು' ಶಿವರಾಮ್‌ ಕಾರಂತ ಅವರ ಸುಪ್ರಸಿದ್ಧ ಕಾದಂಬರಿ 'ಮೂಕಜ್ಜಿಯ ಕನಸುಗಳು', ಶಿವಾನಂದ ಬೂಷಿ ಅವರ 'ವೇಷಧಾರಿ' ಹೀಗೆ ಅನೇಕ ಕಾದಂಬರಿಗಳು ಸಿನಿಮಾವಾಗಿವೆ.

'ಈಗಾಗಲೇ ಕನ್ನಡದಲ್ಲಿ ಅನೇಕ ಕೃತಿಗಳು ಸಿನಿಮಾವಾಗಿವೆ. ಪ್ರಸಿದ್ಧ ಕಾದಂಬರಿಗಳನ್ನು ಸಿನಿಮಾ ಮಾಡಿ ಗೆದ್ದವರೂ ಇದ್ದಾರೆ. ಕೃತಿಗಳನ್ನು ಆಧರಿಸಿ ಸಿನಿಮಾ ಮಾಡುವುದು ಸುಲಭವಲ್ಲ. ಯಥಾವತ್ತಾಗಿ ಕಾದಂಬರಿಯನ್ನೂ ಸಿನಿಮಾ ಮಾಡುವುದು ಕಷ್ಟ. ಈ ಎಲ್ಲ ಸಾಧ್ಯತೆಗಳನ್ನು ಅರಿತುಕೊಂಡು ಚಿತ್ರ ಮಾಡಿದರೆ, ಪ್ರೇಕ್ಷಕರು ಇಷ್ಟ ಪಡುತ್ತಾರೆ' ಎನ್ನುತ್ತಾರೆ ನಿರ್ದೇಶಕ ಜನಾರ್ಧನ್‌ ಚಿಕ್ಕಣ್ಣ.

ದಿಗ್ಗಜರ ಕೃತಿಗಳ ಸಿನಿಮಾಗಳು
ತ್ರಿವೇಣಿ, ತರಾಸು, ಅನಕೃ, ಎಸ್‌.ಎಲ್‌.ಭೈರಪ್ಪ, ಶಿವರಾಮ ಕಾರಂತ, ಕುವೆಂಪು, ವೈದೇಹಿ, ಪೂರ್ಣಚಂದ್ರ ತೇಜಸ್ವಿ, ಕುಂ.ವೀರಭದ್ರಪ್ಪ, ಗಿರೀಶ್‌ ಕಾರ್ನಾಡ್‌ ಸೇರಿ ಅನೇಕ ಸಾಹಿತಿಗಳ ಕೃತಿಗಳು ಈಗಾಗಲೇ ಸಿನಿಮಾವಾಗಿವೆ. ಭಾರತೀಯ ಸಿನಿಮಾ ರಂಗದಲ್ಲಿ ಇವುಗಳನ್ನು ಕನ್ನಡ ಚಿತ್ರಕ್ಕೆ ತನ್ನದೇ ಆದ ಸ್ಥಾನ ಸಿಗುವಂತೆ ಮಾಡಿವೆ. ಈಗ ಹೊಸ ತಲೆಮಾರಿನ ನಿರ್ದೇಶಕರು ಮತ್ತೆ ಕಾದಂಬರಿಯನ್ನು ಆಧರಿಸಿದ ಸಿನಿಮಾಗಳ ಮಾಡುವ ಮೂಲಕ ಸಾಹಿತ್ಯ ಲೋಕದೊಂದಿಗೆ ಸಿನಿಮಾ ರಂಗದ ನಂಟು ಬೆಳೆಯುವಂತೆ ಮಾಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌