ಆ್ಯಪ್ನಗರ

ಸೆನ್ಸಾರ್‌ ಮಂಡಳಿ ವಿರುದ್ಧ ಬೀದಿಗಿಳಿದ ಕನ್ನಡ ನಿರ್ಮಾಪಕರು

ವಾಣಿಜ್ಯ ಮಂಡಳಿ ಎದುರು ಇಂದು ಪ್ರತಿಭಟನೆ | ಮಾತುಕತೆಯಿಂದ ಸಮಸ್ಯೆಗೆ ಪರಿಹಾರ: ಚಿನ್ನೇಗೌಡ | ನಿಯಮದಂತೆ ಮಂಡಳಿ ಕೆಲಸ ಮಾಡುತ್ತಿದೆ ಎಂದ ಸೆನ್ಸಾರ್‌ ಅಧಿಕಾರಿ.

Vijaya Karnataka 25 Jul 2018, 10:51 am
*ಶರಣು ಹುಲ್ಲೂರು/ ಹರೀಶ್‌
Vijaya Karnataka Web censor


ಕನ್ನಡ ಚಿತ್ರರಂಗ ಹಾಗೂ ಸೆನ್ಸಾರ್‌ ಮಂಡಳಿ ನಡುವೆ ಮತ್ತೊಮ್ಮೆ ತಿಕ್ಕಾಟ ಶುರುವಾಗಿದ್ದು, ಇದೀಗ ನಿರ್ಮಾಪಕರು ಹಾಗೂ ನಿರ್ದೇಶಕರು ಸೆನ್ಸಾರ್‌ ಮಂಡಳಿಯ ಧೋರಣೆ ವಿರುದ್ಧ ಬುಧವಾರ ಪ್ರತಿಭಟನೆಗೆ ಮುಂದಾಗಿದ್ದಾರೆ.

ಬೆಂಗಳೂರು ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಅಧಿಕಾರಿ ಶ್ರೀನಿವಾಸಪ್ಪ ವಿರುದ್ಧವೇ ನೇರವಾಗಿ ನಿರ್ಮಾಪಕರು ಸಿಡಿದೆದ್ದಾರೆ. ಅವರು ಸರಿಯಾದ ಕ್ರಮದಲ್ಲಿ ಸಿನಿಮಾ ನೋಡುತ್ತಿಲ್ಲ ಮತ್ತು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ಸಿನಿಮಾ ಟೀಮ್‌ಗಳಿಗೆ ತೊಂದರೆ ಕೊಡುತ್ತಿದ್ದಾರೆಂದು ನಿರ್ಮಾಪಕರ ನೇತೃತ್ವ ವಹಿಸಿರುವ ರಾಜೇಶ್‌ ಬ್ರಹ್ಮಾವರ್‌ ತಿಳಿಸಿದ್ದಾರೆ.

ಈಗಾಗಲೇ ಈ ಬಗ್ಗೆ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿದ್ದು, ಬುಧವಾರದ ಪ್ರತಿಭಟನೆಯಲ್ಲಿ ಸೆನ್ಸಾರ್‌ ಮಂಡಳಿಯ ವರ್ತನೆಯಿಂದ ನೊಂದಿರುವ 40ಕ್ಕೂ ಹೆಚ್ಚು ನಿರ್ಮಾಪಕರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆಂದು ಗೊತ್ತಾಗಿದೆ. ಪ್ರತಿಭಟನೆ ಹಿನ್ನೆಲೆಯಲ್ಲೇ ಈ ಬಗ್ಗೆ ಪ್ರತಿಕ್ರಿಯಿಸಿರುವ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ. ಚಿನ್ನೇಗೌಡ, ಸೆನ್ಸಾರ್‌ ಮಂಡಳಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಬಿಕ್ಕಟ್ಟು ಬಗೆಹರಿಸುವುದಾಗಿ ತಿಳಿಸಿದ್ದಾರೆ.

ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಅಧಿಕಾರಿ ಶ್ರೀನಿವಾಸಪ್ಪ, ವಾಣಿಜ್ಯ ಮಂಡಳಿ ಬರೆದಿರುವ ಪತ್ರ ನನಗೆ ಸಿಕ್ಕಿದೆ. ನಾನು ಅದಕ್ಕೆ ಉತ್ತರ ಬರೆದಿದ್ದೇನೆ. ಮಂಡಳಿಯ ಪದಾಧಿಕಾರಿಗಳು ಬುಧವಾರ ಮಂಡಳಿ ಕಚೇರಿಗೆ ಬಂದು ಕೇಂದ್ರ ಸೆನ್ಸಾರ್‌ ಮಂಡಳಿಯ ನಿಯಮಗಳನ್ನು ಗಮನಿಸಲಿದ್ದಾರೆ. ನಾನು ಅದೇ ನಿಯಮಗಳಂತೆ ಕೆಲಸ ಮಾಡುತ್ತಿದ್ದೇನೆ. ಪ್ರತಿಭಟನೆ ಬಗ್ಗೆ ಏನನ್ನೂ ಪ್ರತಿಕ್ರಿಯಿಸಲಾರೆ ಎಂದು ಲವಲವಿಕೆಗೆ ತಿಳಿಸಿದ್ದಾರೆ.

ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದು, ಈಗಾಗಲೇ ಸೆನ್ಸಾರ್‌ನಿಂದ ಆಗುತ್ತಿರುವ ತೊಂದರೆ ಬಗ್ಗೆ ನಿರ್ಮಾಪಕರು ಚೇಂಬರ್‌ಗೆ ಲಿಖಿತ ದೂರು ನೀಡಿದ್ದಾರೆ.

ಈ ಹಿಂದೆ ಕೇಂದ್ರ ಸೆನ್ಸಾರ್‌ ಮಂಡಳಿ ಅಧ್ಯಕ್ಷರಾಗಿದ್ದ ಪಹ್ಲೆಜ್‌ ನಿಹ್ಲಾನಿ ಸಹ ಇದೇ ರೀತಿ ವರ್ತಿಸುತ್ತಿದ್ದರು ಎಂಬ ಕಾರಣಕ್ಕೆ ಅವರ ವಿರುದ್ಧ ಬಾಲಿವುಡ್‌ ಆಕ್ರೋಶಗೊಂಡಿತ್ತು. ತೀವ್ರ ಒತ್ತಡದ ನಂತರ ಕೇಂದ್ರ ಸರಕಾರವೇ ಪಹ್ಲೇಜ್‌ಗೆ ಕೇಂದ್ರ ಸೆನ್ಸಾರ್‌ ಮಂಡಳಿಯಿಂದ ಗೇಟ್‌ಪಾಸ್‌ ನೀಡಿತ್ತು. ಈಗಾಗಲೇ ಕೆಲ ಚಿತ್ರಗಳು ಸೆನ್ಸಾರ್‌ ಮುಂದೆ ಇದ್ದು, ವಿವಾದದ ಬಗ್ಗೆ ಮಾತನಾಡಲು ಬಹುತೇಕ ನಿರ್ಮಾಕರು ನಿರಾಕರಿಸಿದ್ದಾರೆ.

'ಕಳೆದ ನಾಲ್ಕೈದು ತಿಂಗಳಲ್ಲಿ 30ಕ್ಕೂ ಹೆಚ್ಚು ಚಿತ್ರಗಳಿಗೆ 'ಎ' ಪ್ರಮಾಣ ಪತ್ರ ನೀಡಿದ್ದಾರೆ. ಬೇಕಾಬಿಟ್ಟಿ ದೃಶ್ಯಗಳನ್ನು ಕತ್ತರಿಸಲು ಹೇಳುತ್ತಾರೆ. ಸಿನಿಮಾ ಟೀಮ್‌ ಜತೆ ಚರ್ಚಿಸಲು ಅವಕಾಶವನ್ನೇ ಕೊಡುವುದಿಲ್ಲ. ಗೌರವದೊಂದಿಗೆ ಮಾತನಾಡುವುದಿಲ್ಲ. ಹಾಗಾಗಿ ಇವರ ವರ್ತನೆಗೆ ಬೇಸತ್ತು ನಾವು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲು ನಿರ್ಧಾರ ಮಾಡಿದ್ದೇವೆ. ಶೀಘ್ರದಲ್ಲಿಯೇ ನವದೆಹಲಿಗೆ ನಿಯೋಗ ಹೋಗುತ್ತೇವೆ' ಎಂದು ರಾಜೇಶ್‌ ಬ್ರಹ್ಮಾವರ್‌ ತಿಳಿಸಿದ್ದಾರೆ.


'ನಮ್ಮ ರವಿ ಹಿಸ್ಟರಿ ಸಿನಿಮಾವನ್ನು ಸೆನ್ಸಾರ್‌ಗೆ ಕಳುಹಿಸಿದ್ದೆವು. ಹಾಡೊಂದರಲ್ಲಿ ಡ್ರಿಂಕ್ಸ್‌ ಅನ್ನು ವೈಭವೀಕರಿಸಿದ್ದೀರಿ ಅಂತ ಅಧಿಕಾರಿ ಶ್ರೀನಿವಾಸಪ್ಪ ತಗಾದೆ ತಗೆದರು. ನಮಗೆ ಮಾತನಾಡಲು ಅವಕಾಶವನ್ನೂ ಕೊಡಲಿಲ್ಲ. ನಮಗೂ ಮಾತನಾಡಲು ಬಿಡಿ ಎಂದಾಗ ನಮ್‌ ಟೀಮ್‌ ಜತೆ ಅವರು ಕೆಟ್ಟದ್ದಾಗಿ ಮಾತನಾಡಿದರು. ಹೀಗಾಗಿ ನ್ಯಾಯಕ್ಕಾಗಿ ನಾವು ಟ್ರಿಬ್ಯುನಲ್‌ಗೆ ಮೊರೆ ಹೋದೆವು. ಯಾವುದೇ ಕಟ್‌ ಕೊಡದೇ ಟ್ರಿಬ್ಯುನಲ್‌ ನಮ್ಮ ಚಿತ್ರಕ್ಕೆ 'ಯು ಎ' ಪ್ರಮಾಣ ಪತ್ರ ನೀಡಿತು. ಶ್ರೀನಿವಾಸಪ್ಪ ಮತ್ತು ಟೀಮ್‌ ನಡೆಯನ್ನು ಪ್ರಶ್ನಿಸಿತು. ಟ್ರಿಬ್ಯುನಲ್‌ಗೆ ಹೋಗಿ ಸೆನ್ಸಾರ್‌ ಮಾಡಿಸಲು ಸಾಕಷ್ಟು ಸಮಯ ಬೇಕು. ಹಣ ಕೂಡ ಖರ್ಚಾಗುತ್ತದೆ. ಎಲ್ಲರಿಗೂ ಹೀಗೆ ಮಾಡಲು ಆಗುವುದಿಲ್ಲ. ಹೀಗಾಗಿ ಸೆನ್ಸಾರ್‌ ಅಧಿಕಾರಿಯನ್ನು ಬದಲಾಯಿಸಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ' ಅಂತಾರೆ ನಿರ್ದೇಶಕ ಮಧುಚಂದ್ರ.


ನಿರ್ಮಾಪಕರಿಂದ ದೂರು ಬಂದ ಹಿನ್ನೆಲೆಯಲ್ಲಿ ನಾವು ಈಗಾಗಲೇ ಸೆನ್ಸಾರ್‌ ಮಂಡಳಿ ಅಧಿಕಾರಿಗೆ ಪತ್ರ ಬರೆದು, ಮಾತುಕತೆಗೆ ಕರೆದಿದ್ದೇವೆ. ಈವರೆಗೂ ಅವರಿಂದ ಉತ್ತರ ಬಂದಿಲ್ಲ. ಅವರೊಂದಿಗೆ ಮಾತನಾಡಿ ಎಲ್ಲಿ ಸಮಸ್ಯೆ ಆಗುತ್ತಿದೆ ಅಂತ ಪರಿಶೀಲಿಸುತ್ತೇವೆ.
ಎಸ್‌.ಎ. ಚಿನ್ನೇಗೌಡ, ಅಧ್ಯಕ್ಷರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ


ಸೆನ್ಸಾರ್‌ ಅಧಿಕಾರಿಯ ವರ್ತನೆಗೆ ಬೇಸತ್ತಿರುವ ನಾವೆಲ್ಲ ಅವರ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದೇವೆ. ಕೇಂದ್ರದ ಗಮನ ಸೆಳೆಯಲು ನಿಯೋಗ ತಗೆದುಕೊಂಡು ಹೋಗಲು ನಿರ್ಧರಿಸಿದ್ದೇವೆ. ಕೋಟ್ಯಂತರ ರೂ. ಖರ್ಚು ಮಾಡಿ ಸಿನಿಮಾ ಮಾಡಿರುವ ನಮಗೂ ಗೌರವಿದೆ. ಅದಕ್ಕೆ ಚ್ಯುತಿ ಬಂದರೆ ಸುಮ್ಮನೆ ಕೂರುವುದಿಲ್ಲ.
ರಾಜೇಶ್‌ ಬ್ರಹ್ಮಾವರ, ನಿರ್ಮಾಪಕ

ಸೆನ್ಸಾರ್‌ ಮಂಡಳಿ ನಿಯಮಗಳಿಗೆ ವಿರುದ್ಧ ಕೆಲಸ ಮಾಡಲು ಸಾಧ್ಯವಿಲ್ಲ. ಅದರಂತೆ ನಾನು ಕೆಲಸ ಮಾಡುತ್ತಿದ್ದೇನೆ.
ಶ್ರೀನಿವಾಸಪ್ಪ, ಸೆನ್ಸಾರ್‌ ಮಂಡಳಿ ಅಧಿಕಾರಿ


ನಿರ್ಮಾಪಕರ ಆರೋಪವೇನು?

-ಸಿನಿಮಾಗೆ ಕೊಡುವ ಸರ್ಟಿಫಿಕೇಟ್‌ ಬಗ್ಗೆ ಚರ್ಚಿಸಲು ಅವಕಾಶ ಕೊಡಿ ಅಂತ ಕೇಳಿದರೆ, ಕೆಲಸಕ್ಕೆ ಅಡ್ಡಿಪಡಿಸಿದ್ದೀರಿ ಅಂತ ಕೇಸ್‌ ಹಾಕುವುದಾಗಿ ಸೆನ್ಸಾರ್‌ ಅಧಿಕಾರಿ ಬೆದರಿಸುತ್ತಾರೆ.

-ಅವರು ಹೇಳಿದ ಸ್ಥಳದಲ್ಲೇ ಸಿನಿಮಾ ತೋರಿಸಬೇಕು ಅಂತ ತಾಕೀತು ಮಾಡುತ್ತಾರೆ.

-ಮಂಡಳಿಗೆ ಸಲ್ಲಿಸಿದ್ದ ಸಿನಿಮಾ ಪೈರಸಿಯಾದರೆ ಅದಕ್ಕೆ ನಿರ್ಮಾಪಕರೇ ಹೊಣೆ ಎಂದು ಪತ್ರ ಬರೆದುಕೊಡಲು ಕೇಳುತ್ತಾರೆ.

-ಇವರು ಕೊಟ್ಟಿರುವ 'ಎ' ಸರ್ಟಿಫಿಕೇಟ್‌ ತಗೆದುಕೊಂಡು ಟ್ರಿಬ್ಯುನಲ್‌ಗೆ ಹೋದಾಗ ಅಲ್ಲಿ 'ಯು' ಪ್ರಮಾಣ ಪತ್ರ ಸಿಕ್ಕಿವೆ. ಹಾಗಾದರೆ ತಪ್ಪು ಯಾರಿಂದ ಆಗುತ್ತಿದೆ?

-ಸೆನ್ಸಾರ್‌ ಮಂಡಳಿಗೆ ಹೋದ ನಿರ್ಮಾಪಕರಿಗೆ ಅವಮಾನ ಆಗುವಂತೆ ನಡೆದುಕೊಳ್ಳುತ್ತಾರೆ. ಅನುಚಿತವಾಗಿ ವರ್ತಿಸುತ್ತಾರೆ. ಈ ಕುರಿತು ಈಗಾಗಲೇ ಎರಡ್ಮೂರು ಬಾರಿ ಅವರ ಮೇಲೆ ಆರೋಪ ಮಾಡಿದ ಉದಾಹರಣೆಗಳಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌