ಆ್ಯಪ್ನಗರ

'ಚಂಬಲ್‌' ಚಿತ್ರಕ್ಕೆ ತಡೆ ಕೋರಿದ ಡಿ.ಕೆ.ರವಿ ಪೋಷಕರು

ಚಿತ್ರದ ಪ್ರತಿಯೊಂದು ದೃಶ್ಯದಲ್ಲೂ ರವಿ ಅವರನ್ನೇ ಅನುಕರಿಸಲಾಗಿದೆ. ಟ್ರೇಲರ್‌ನಲ್ಲೂ ರವಿ ಅವರನ್ನು ಹೋಲುವಂತೆ ಚಿತ್ರಿಸಲಾಗಿದೆ. ಈ ಬಗ್ಗೆ ಚಿತ್ರ ತಂಡದ ಗಮನ ಸೆಳೆದರೂ ಏನೂ ಪ್ರಯೋಜನವಾಗಿಲ್ಲ. ಸೆನ್ಸಾರ್‌ ಮಂಡಳಿ ಚಿತ್ರಕ್ಕೆ ನೀಡಿರುವ ಸರ್ಟಿಫಿಕೇಟ್‌ ವಾಪಸ್‌ ಪಡೆಯುವಂತೆ ಆದೇಶ ನೀಡಬೇಕು,’’ ಎಂದು ಅರ್ಜಿಯಲ್ಲಿ ಕೋರಲಾಗಿದೆ.

Vijaya Karnataka 20 Feb 2019, 5:23 pm
ಮೃತ ಐಎಎಸ್‌ ಅಧಿಕಾರಿ ಡಿ.ಕೆ.ರವಿ ಅವರ ಜೀವನಚರಿತ್ರೆ ಆಧರಿಸಿ, ಅವರ ವ್ಯಕ್ತಿತ್ವಕ್ಕೆ ಕುಂದಾಗುವಂತೆ ಚಿತ್ರೀಕರಿಸಿದೆ ಎನ್ನಲಾದ ‘ಚಂಬಲ್‌’ ಚಲನಚಿತ್ರದ ಬಿಡುಗಡೆಗೆ ತಡೆ ನೀಡಬೇಕೆಂದು ಕೋರಿ ರವಿ ಅವರ ಪೋಷಕರು ಹೈಕೋರ್ಟ್‌ ಮೊರೆ ಹೋಗಿದ್ದಾರೆ.
Vijaya Karnataka Web chambal1


ರವಿ ಅವರ ತಾಯಿ ಗೌರಮ್ಮ ಮತ್ತು ತಂದೆ ಕರಿಯಪ್ಪ ಸಲ್ಲಿಸಿದ್ದ ಅರ್ಜಿ ಮಂಗಳವಾರ ನ್ಯಾ.ಸುನಿಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯಪೀಠದ ಮುಂದೆ ವಿಚಾರಣೆಗೆ ಬಂದಿತು. ಅರ್ಜಿದಾರರ ವಾದ ಆಲಿಸಿದ ನ್ಯಾಯಪೀಠ, ‘‘ಕೇಂದ್ರ ಮತ್ತು ರಾಜ್ಯ ಸರಕಾರ, ಚಲನಚಿತ್ರ ವಾಣಿಜ್ಯ ಮಂಡಳಿ, ಸೆನ್ಸಾರ್‌ ಬೋರ್ಡ್‌, ಚಿತ್ರದ ನಿರ್ಮಾಪಕ ದಿನೇಶ್‌ ರಾಜ್‌ಕುಮಾರ್‌, ನಟ ನೀನಾಸಂ ಸತೀಶ್‌ ಮತ್ತು ನಟಿ ಸೋನು ಗೌಡ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಿ, ಮಧ್ಯಾಂತರ ಆದೇಶದ ಬಗ್ಗೆ ಗುರುವಾರ ವಿಚಾರಣೆ ನಡೆಸುತ್ತೇವೆ,’’ಎಂದು ಹೇಳಿತು.

ಅರ್ಜಿದಾರರ ಪರ ನ್ಯಾಯವಾದಿ ಎನ್‌.ಪಿ.ಅಮೃತೇಶ್‌ ‘‘ಬಡತನದಲ್ಲಿ ಹುಟ್ಟಿದ್ದ ರವಿ ರಾಜ್ಯದಲ್ಲಿ ಒಳ್ಳೆಯ ಹೆಸರು ಮಾಡಿದ್ದರು. ಅವರು ಹಲವು ಯುವಕರಿಗೆ ಸ್ಪೂರ್ತಿಯಾಗಿದ್ದರು.2015ರ ಮಾ26ರಂದು ನಿಗೂಢ ರೀತಿಯಲ್ಲಿ ಅವರು ಸಾವನ್ನಪ್ಪಿದ್ದರು. ಅವರ ಜೀವನವನ್ನು ಆಧರಿಸಿ ನಿರ್ಮಿಸಿದ ‘ಚಂಬಲ್‌’ ಚಿತ್ರದಲ್ಲಿ ರವಿ ಅವರ ವ್ಯಕ್ತಿತ್ವಕ್ಕೆ ಕುಂದಾಗುವ ರೀತಿ ಚಿತ್ರೀಸಲಾಗಿದೆ. ಹೀಗಾಗಿ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬಾರದು,’’ ಎಂದು ನ್ಯಾಯಪೀಠವನ್ನು ಕೋರಿದರು.

‘‘ಚಿತ್ರದ ಪ್ರತಿಯೊಂದು ದೃಶ್ಯದಲ್ಲೂ ರವಿ ಅವರನ್ನೇ ಅನುಕರಿಸಲಾಗಿದೆ. ಟ್ರೇಲರ್‌ನಲ್ಲೂ ರವಿ ಅವರನ್ನು ಹೋಲುವಂತೆ ಚಿತ್ರಿಸಲಾಗಿದೆ. ಈ ಬಗ್ಗೆ ಚಿತ್ರ ತಂಡದ ಗಮನ ಸೆಳೆದರೂ ಏನೂ ಪ್ರಯೋಜನವಾಗಿಲ್ಲ. ಸೆನ್ಸಾರ್‌ ಮಂಡಳಿ ಚಿತ್ರಕ್ಕೆ ನೀಡಿರುವ ಸರ್ಟಿಫಿಕೇಟ್‌ ವಾಪಸ್‌ ಪಡೆಯುವಂತೆ ಆದೇಶ ನೀಡಬೇಕು,’’ ಎಂದು ಅರ್ಜಿಯಲ್ಲಿ ಕೋರಲಾಗಿದೆ.

ನೀನಾಸಂ ಸತೀಶ್‌ ನಟನೆಯ ಚಂಬಲ್‌ ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಹಲವು ಒಳ್ಳೆಯ ಉದ್ದೇಶಗಳನ್ನು ಹೊಂದಿರುವ ಒಬ್ಬ ದಕ್ಷ ಐಎಎಸ್‌ ಅಧಿಕಾರಿ ಹೇಗಿರುತ್ತಾನೆ? ಅವನಿಗೆ ಈ ಸಮಾಜದಲ್ಲಿ ಎದುರಾಗುವ ಸವಾಲುಗಳೇನು? ಎಂಬುದನ್ನು ಚಂಬಲ್‌ ಸಿನಿಮಾ ಸಮರ್ಥವಾಗಿ ಹೇಳುತ್ತದೆ ಎಂದು ಚಿತ್ರತಂಡ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌