ಆ್ಯಪ್ನಗರ

ಕನ್ನಡ ಸಿನಿಮಾಗಳ ರೀಮೇಕ್‌ ರಿಂಗಣ

ಕನ್ನಡ ಚಿತ್ರಗಳಿಗೆ ಮತ್ತೆ ಡಿಮ್ಯಾಂಡ್‌. ಇತ್ತೀಚೆಗೆ ಬೇರೆ ಭಾಷೆಗಳಿಗೆ ಸ್ಯಾಂಡಲ್‌ವುಡ್‌ ಸಿನಿಮಾಗಳು ರೀಮೇಕ್‌ ಆಗುತ್ತಿರುವುದು ಹೆಚ್ಚಾಗುತ್ತಿದೆ.

Vijaya Karnataka Web 23 May 2016, 3:56 am
ಕನ್ನಡ ಚಿತ್ರಗಳಿಗೆ ಮತ್ತೆ ಡಿಮ್ಯಾಂಡ್‌. ಇತ್ತೀಚೆಗೆ ಬೇರೆ ಭಾಷೆಗಳಿಗೆ ಸ್ಯಾಂಡಲ್‌ವುಡ್‌ ಸಿನಿಮಾಗಳು ರೀಮೇಕ್‌ ಆಗುತ್ತಿರುವುದು ಹೆಚ್ಚಾಗುತ್ತಿದೆ. ತೆಲುಗು, ಮಲಯಾಳಂ ಹಾಗೂ ತಮಿಳಿನಿಂದ ಕತೆಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಕನ್ನಡ ಫಿಲ್ಮ್‌ ಇಂಡಸ್ಟ್ರಿ ಈಗ ಪರಭಾಷೆಗೆ ಕತೆಗಳನ್ನು ರಫ್ತು ಮಾಡುತ್ತಿದೆ. ಕನ್ನಡದಲ್ಲೂ ಕ್ವಾಲಿಟಿ ಸ್ಕ್ರಿಪ್ಟ್‌ ತಯಾರಾಗುತ್ತಿರುವುದು ಇದರಿಂದ ಸ್ಪಷ್ಟವಾಗುತ್ತಿದೆ. ಇಲ್ಲಿವೆ ಕೆಲವು ಎಕ್ಸಾಂಪಲ್ಸ್‌.
Vijaya Karnataka Web kannada movies are being remade
ಕನ್ನಡ ಸಿನಿಮಾಗಳ ರೀಮೇಕ್‌ ರಿಂಗಣ


- ಪದ್ಮಿನಿ ಜೈನ್‌ ಎಸ್‌.

ಎದ್ದೇಳು ಮಂಜುನಾಥ:



ಕನ್ನಡದಲ್ಲಿ ವಿಶಿಷ್ಟವಾದ ಸ್ಟೋರಿ ಲೈನ್‌ ಪರಿಚಯಿಸಿದವರಲ್ಲಿ ನಿರ್ದೇಶಕ ಗುರುಪ್ರಸಾದ್‌ ಕೂಡ ಒಬ್ಬರು. ಇವರ ನಿರ್ದೇಶನದ ‘ಮಠ’, ‘ಡೈರೆಕ್ಟರ್ಸ್‌ ಸ್ಪೆಷಲ್‌’ ಹಾಗೂ ‘ಎದ್ದೇಳು ಮಂಜುನಾಥ’ ಚಿತ್ರಗಳು ಇದಕ್ಕೆ ಸಾಕ್ಷಿ. ಇವುಗಳಲ್ಲಿ ‘ಎದ್ದೇಳು ಮಂಜುನಾಥ’ ಚಿತ್ರ ತಮಿಳಿಗೆ ರೀಮೇಕ್‌ ಆಗುತ್ತಿದೆ. ಜಗ್ಗೇಶ್‌ ಇದರಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ತಮಿಳಿನಲ್ಲಿ ಗುರುಪ್ರಸಾದ್‌ ಅವರೇ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ರಥಾವರ:



ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಹಾಗೂ ನಟ ಶ್ರೀಮುರಳಿಗೆ ದೊಡ್ಡ ಮಟ್ಟದ ಬ್ರೇಕ್‌ ಕೊಟ್ಟ ಚಿತ್ರ ‘ರಥಾವರ’. ಕನ್ನಡದಲ್ಲಿ ಯಶಸ್ವಿ ಪ್ರದರ್ಶನ ಕಂಡ ಚಿತ್ರವನ್ನು ತಮಿಳು ಭಾಷೆಯಲ್ಲಿ ರೀಮೇಕ್‌ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಬಂಡಿಯಪ್ಪ ಅವರೇ ತಮಿಳು ಆವೃತ್ತಿಗೂ ನಿರ್ದೇಶನ ಮಾಡಲಿದ್ದು ವಿಶಾಲ್‌ ನಾಯಕನಾಗಿ ನಟಿಸಲಿದ್ದಾರೆ. ಆದರೆ ನಟರ ಡೇಟ್‌ ಪ್ರಾಬ್ಲಂನಿಂದಾಗಿ ಚಿತ್ರದ ಕೆಲಸಗಳು ಕೊಂಚ ನಿಧಾನವಾಗಿ ಸಾಗುತ್ತಿವೆ.

ರಾಮಾಚಾರಿ:

ಯಶ್‌ ಹಾಗೂ ರಾಧಿಕಾ ಪಂಡಿತ್‌ ನಟಿಸಿದ್ದ ‘ಮಿಸ್ಟರ್‌ ಆ್ಯಂಡ್‌ ಮಿಸಸ್‌ ರಾಮಾಚಾರಿ’ ಚಿತ್ರ ಬಾಕ್ಸ್‌ ಆಫೀಸಿನಲ್ಲಿ ದೊಡ್ಡ ಸದ್ದು ಮಾಡಿತ್ತು. ಹಾಗಾಗಿ ಪರಭಾಷೆಗಳಿಂದ ಈ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. ಆರ್ಯ ಅಥವಾ ಶಿವಕಾರ್ತಿಕೇಯನ್‌ ಇಲ್ಲವೆ ವಿಶಾಲ್‌ ತಮಿಳಿನಲ್ಲಿ ಯಶ್‌ ಪಾತ್ರವನ್ನು ನಿರ್ವಹಿಸಿಲಿದ್ದಾರೆ ಎಂಬ ಸುದ್ದಿ ಇತ್ತು. ತೆಲುಗಿನಲ್ಲಿ ಸಾಯಿ ಧರ್ಮತೇಜ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎನ್‌.ಎಸ್‌. ರಾಜ್‌ಕುಮಾರ್‌ ನಿರ್ಮಾಣದಲ್ಲಿ ಚಿತ್ರ ಮೂಡಿಬರಲಿದೆ. ವೀರ ಕನ್ನಡಿಗ ಚಿತ್ರದ ಖ್ಯಾತಿಯ ಕೆ.ಎಸ್‌. ರಾಮ ತೆಲುಗು ಆವೃತ್ತಿಯನ್ನು ನಿರ್ದೇಶಿಸಲಿದ್ದಾರೆ.

ಚಾರ್‌ ಮಿನಾರ್‌:



ಪ್ರೇಮ್‌ ಹಾಗೂ ಮೇಘನಾ ಗಾಂವ್ಕರ್‌ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಚಿತ್ರ ‘ಚಾರ್‌ ಮಿನಾರ್‌’ ಚಿತ್ರ ರಸಿಕರ ಮನಸ್ಸು ಗೆದ್ದಿತ್ತು. ಆರ್‌. ಚಂದ್ರು ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿತ್ತು. ಈ ಚಿತ್ರದ ಸಕ್ಸಸ್‌ ತೆಲುಗು ಚಿತ್ರ ರಂಗವನ್ನು ಸೆಳೆದಿದ್ದು ‘ಕೃಷ್ಣಮ್ಮ ಕಲಿಪಿಂದಿ’ ಹೆಸರಿನಲ್ಲಿ ರೀಮೇಕ್‌ ಆಗಿತ್ತು. ಈ ಮೂಲಕ ಚಂದ್ರು ತೆಲುಗು ನಿರ್ದೇಶಕ ಅನಿಸಿಕೊಂಡರು. ಸುಧೀರ್‌ ಬಾಬು ಹಾಗೂ ನಂದಿತಾ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.



ಗೂಗ್ಲಿ:
ಯಶ್‌ ಬದುಕಿನಲ್ಲಿ ದೊಡ್ಡ ತಿರುವು ಕೊಟ್ಟ ಚಿತ್ರ ‘ಗೂಗ್ಲಿ’. ಕೃತಿ ಕರಬಂಧ ಹಾಗೂ ಯಶ್‌ ಜೋಡಿಗೆ ವೀಕ್ಷಕ ಫಿದಾ ಆಗಿದ್ದ. ಗೂಗ್ಲಿಯ ಜಯಭೇರಿ ಬಂಗಾಳಿ ಚಿತ್ರ ನಿರ್ಮಾಪಕರಿಗೂ ಕೇಳಿಸಿದ್ದು ಈಗಾಗಲೇ ‘ಎಸ್ಕೆ ಮೂವೀಸ್‌’ ಗೂಗ್ಲಿಯ ಬಂಗಾಳಿ ರಿಮೇಕ್‌ ಹಕ್ಕನ್ನು ಖರೀದಿಸಿದೆ. ಅಲ್ಲದೆ ತೆಲುಗು ಭಾಷೆಯಲ್ಲೂ ಗೂಗ್ಲಿ ರೀಮೇಕ್‌ ಆಗಲಿದೆ. ನಾಗಚೈತನ್ಯ ತೆಲುಗಿನ ಗೂಗ್ಲಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇವಿಷ್ಟೇ ಅಲ್ಲದೆ ಸೂಪರ್‌ ಹಿಟ್‌ ಚಿತ್ರ ‘ಮೈನಾ’ ಈಗಾಗಲೇ ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ತೆರೆಕಂಡಿದೆ. ‘ವಿಕ್ಟರಿ’, ‘ಗೊಂಬೆಗಳ ಲವ್‌’, ‘ಗೋವಿಂದಾಯ ನಮಃ’, ‘ಮುಂಗಾರು ಮಳೆ’, ಚಿತ್ರಗಳೂ ಪರ ಭಾಷೆಗಳಿಗೆ ರೀಮೇಕ್‌ ಆಗಿದ್ದು ಕನ್ನಡದ ಚಿತ್ರಗಳ ಸ್ಟೇಟಸ್‌ ಹೆಚ್ಚುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌