ಆ್ಯಪ್ನಗರ

ಕನ್ನಡವೇ ನನ್ನ ಶಾಶ್ವತ ನೆಲೆ: ಹೇಳಿದ ಮಾತಿಗೆ ಬದ್ಧರಾಗಿರುವ ಕಿಚ್ಚ ಸುದೀಪ್!

"ಪರಭಾಷೆಗಳ ಸಿನಿಮಾಗಳಲ್ಲಿ ಯಾವ ಪಾತ್ರ, ಏನು ಎತ್ತ ಎಂದು ಹೆಚ್ಚಿಗೆ ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ. ನಿರ್ದೇಶಕರು ಏನು ಹೇಳಿದ್ದಾರೆ ಅದನ್ನು ಅವರ ನಿರೀಕ್ಷೆಗೆ ತಕ್ಕಂತೆ ಮಾಡಿ ಬರುತ್ತೇನೆ. ಸಿನಿಮಾ ಕಲಾವಿದನಿಗೆ ಭಾಷೆಯ ಮಿತಿ ಇಲ್ಲ ಎಂಬುದಷ್ಟೇ ನನಗೆ ಗೊತ್ತು...

Vijaya Karnataka Web 5 May 2019, 2:08 pm
ಹತ್ತು ವರ್ಷಗಳ ಹಿಂದೆ (2008) ಕನ್ನಡದ ನಟ ಕಿಚ್ಚ ಸುದೀಪ್ ಅವರು ಹಿಂದಿಯ 'ಫೂಂಕ್' ಸಿನಿಮಾ ಮೂಲಕ ಕನ್ನಡದ ನಟ ಕಿಚ್ಚ ಸುದೀಪ್ ಬಾಲಿವುಡ್‌ಗೆ ಕಾಲಿಟ್ಟರು. ಆ ಬಳಿಕ ಸುದೀಪ್ ಹಿಂದಿಯ ರಣ್, ತೆಲುಗಿನ 'ರಕ್ತ ಚರಿತ್ರ' ಚಿತ್ರಗಳಲ್ಲಿ ನಟಿಸಿದರು. ಇದಾದ ಬಳಿಕ ಬಹುಶಃ ಸುದೀಪ್ ಇನ್ಮುಂದೆ ಕನ್ನಡ ಚಿತ್ರಗಳಲ್ಲಿ ನಟಿಸಲಿಕ್ಕಿಲ್ಲ ಎಂದವರೇ ಹೆಚ್ಚು. ಸುದೀಪ್ ಇನ್ನು ಕನ್ನಡಕ್ಕೆ ಗುಡ್ ಬೈ ಹೇಳಿ ಬಾಲಿವುಡ್ ನಲ್ಲಿಯೇ ನೆಲೆ ನಿಲ್ಲುತ್ತಾರಾ ಎಂಬ ಪ್ರಶ್ನೆ ಚಿತ್ರಪ್ರೇಮಿಗಳಲ್ಲಿ ಹುಟ್ಟಿಕೊಂಡಿತ್ತು.
Vijaya Karnataka Web sudeep0405-2


ಆ ಪ್ರಶ್ನೆಯನ್ನು ಸ್ವತಃ ಕಿಚ್ಚ ಸುದೀಪ್ ಅವರಿಗೆ ಬಹಿರಂಗವಾಗಿಯೇ ಅಂದು ಕೇಳಲಾಗಿತ್ತು. ಅದಕ್ಕೆ ಸುದೀಪ್ ಅಂದು ಮಾರ್ಮಿಕವಾಗಿ "ನಿರ್ದೇಶಕರು ಕರೆದಾಗ ಹೋಗಿ ನಟಿಸಿ ಬರುತ್ತೇನೆ. ಯಾವತ್ತಿಗೂ ಕನ್ನಡವೇ ನನ್ನ ಶಾಶ್ವತ ನೆಲೆ.." ಎಂದು ಉತ್ತರ ಕೊಟ್ಟಿದ್ದರು. ಅಂದು ಆಡಿದ ಮಾತನ್ನು ಇಂದಿನವರೆಗೂ ಸುದೀಪ್ ಉಳಿಸಿಕೊಂಡು ಬಂದಿದ್ದಾರೆ. ನಂತರದ ವರ್ಷಗಳಲ್ಲಿ ತೆಲುಗು, ತಮಿಳಿನಲ್ಲಿ ಕೂಡ ನಟಿಸಿದರು. ಇದೀಗ ಮತ್ತೊಮ್ಮೆ ಬಾಲಿವುಡ್ ಚಿತ್ರಗಳತ್ತ ಮುಖ ಮಾಡಿದ್ದಾರೆ.

ಪರಭಾಷೆಗಳಲ್ಲಿ ಅವರು ನಟಿಸುವಾಗ ಆಯ್ಕೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಸುದೀಪ್ "ಪರಭಾಷೆಗಳ ಸಿನಿಮಾಗಳಲ್ಲಿ ಯಾವ ಪಾತ್ರ, ಏನು ಎತ್ತ ಎಂದು ಹೆಚ್ಚಿಗೆ ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ. ನಿರ್ದೇಶಕರು ಏನು ಹೇಳಿದ್ದಾರೆ ಅದನ್ನು ಅವರ ನಿರೀಕ್ಷೆಗೆ ತಕ್ಕಂತೆ ಮಾಡಿ ಬರುತ್ತೇನೆ. ಸಿನಿಮಾ ಕಲಾವಿದನಿಗೆ ಭಾಷೆಯ ಮಿತಿ ಇಲ್ಲ ಎಂಬುದಷ್ಟೇ ನನಗೆ ಗೊತ್ತು" ಎಂದಿದ್ದಾರೆ ನಟ ಕಿಚ್ಚ ಸುದೀಪ್.

"ಮತ್ತೆ 10 ವರ್ಷಗಳ ಬಳಿಕ ಮತ್ತೆ ಬಾಲಿವುಡ್ ಗೆ ಹೋಗುತ್ತಿರುವ ಈ ಸಂದರ್ಭದಲ್ಲಿ ನನಗೆ ಯಾವುದೂ ಇನ್ನು ಮುಂದೆ ಹೊಸದಲ್ಲ ಎನಿಸುತ್ತದೆ. ರಕ್ತ ಚರಿತ್ರ ನಂತರ ನಾನು ನನ್ನ ಗಮನವನ್ನು ಸಂಪೂರ್ಣವಾಗಿ ಕನ್ನಡ ಚಿತ್ರಗಳ ಮೇಲೆ ಕೇಂದ್ರೀಕರಿಸಿದೆ. ತೆಲುಗಿನಲ್ಲಿ ರಾಜಮೌಳಿಯವರಿಂದ 'ಈಗ' ಚಿತ್ರಕ್ಕೆ ಅವಕಾಶ ಬಂತು. ಅದು ನನ್ನ ವೃತ್ತಿಜೀವನಕ್ಕೆ ಹೊಸ ದಿಕ್ಕನ್ನೇ ನೀಡಿತು. ನಾನು ಯಾವುದನ್ನೂ ಯೋಜನೆ ಹಾಕಿ ಮಾಡಿದವನಲ್ಲ. ನನ್ನ ಪಾಲಿಗೆ ಬಂದಿದ್ದನ್ನು, ಸಿಕ್ಕ ಅವಕಾಶವನ್ನು ಮಾಡಿಕೊಂಡು ಹೋಗಿದ್ದೇನೆ" ಎಂದಿದ್ದಾರೆ ನಟ ಸುದೀಪ್.

ಇನ್ನು, ಬಾಲಿವುಡ್ ಚಿತ್ರರಂಗದ ಬಗ್ಗೆ ಕೇಳಿದ ಪ್ರಶ್ನೆಗೆ "ಇಂದು ದಕ್ಷಿಣ ಭಾರತದ ಚಿತ್ರರಂಗ ಇಡೀ ದೇಶದ ಗಮನ ಸೆಳೆದಿದೆ. ಚಿತ್ರಪ್ರೇಮಿಗಳಿಗೆ ಇಂದು ಭಾಷೆಯ ಚೌಕಟ್ಟು ಇಲ್ಲ. ಆದರೂ, ಚಿತ್ರೋದ್ಯಮ, ವ್ಯಾಪಾರ, ಹಣದ ವಿಚಾರ ಬಂದಾಗ ಹಿಂದಿ ಚಿತ್ರೋದ್ಯಮ ಅಗ್ರ ಸ್ಥಾನದಲ್ಲಿ ನಿಲ್ಲುತ್ತದೆ. ತೆಲುಗಿನ 'ಬಾಹುಬಲಿ' ಚಿತ್ರ ಇಡೀ ಭಾರತೀಯರ ಗಮನ ಸೆಳೆಯಿತು. ಇಂದು ಬೇರೆ ಭಾಷೆಗಳಲ್ಲಿ ಕೂಡ ಬಾಹುಬಲಿಯಂತೆ ಸಿನಿಮಾ ಮಾಡಬೇಕು ಎನ್ನಲಾಗುತ್ತಿದೆ.

ಬಾಲಿವುಡ್‌ಗೆ ತನ್ನದೇ ಆದ ನಿಖರತೆ, ವಿಶ್ವಾಸಾರ್ಹತೆಯಿದೆ. ಇನ್ನು ಸಮಾನತೆ, ಬಜೆಟ್, ಮೇಕಿಂಗ್, ಸೃಜನಶೀಲತೆ ಇಂಥ ವಿಚಾರಗಳಲ್ಲಿ ಕಲಾವಿದನಾಗಿ ನಾನು ಎಲ್ಲಾ ಭಾಷೆಯ ಚಿತ್ರಗಳನ್ನು ಸಮಾನವಾಗಿ ಕಾಣುತ್ತೇನೆ" ಎಂದಿದ್ದಾರೆ. ಒಟ್ಟಿನಲ್ಲಿ ಸುದೀಪ್ ಮತ್ತೆ ಬಾಲಿವುಡ್‌ ಕಡೆ ಮುಖ ಮಾಡಿದ್ದಾರೆ. ಇತ್ತ ಸುದೀಪ್ ನಾಯಕತ್ವದ 'ಪೈಲ್ವಾನ್' ಚಿತ್ರವು ಆಗಸ್ಟ್‌ ತಿಂಗಳಿನಲ್ಲಿ ಬಿಡುಗಡೆಯಾಗಿ ಕಮಾಲ್ ಮಾಡಲು ಸಜ್ಜಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌