ಆ್ಯಪ್ನಗರ

ಕನ್ನಡದ 'ಧನ್ಯೋಸ್ಮಿ' ಸಿನಿಮಾ ಯುವ ನಿರ್ದೇಶಕ ದಿಗ್ವಿಜಯ್ ನಿಧನ

'ಧನ್ಯೋಸ್ಮಿ' ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದ 24ರ ವಯಸ್ಸಿನ ದಿಗ್ವಿಜಯ್, ಕಳೆದ ತಿಂಗಳು ಈ ಚಿತ್ರದ ಟೀಸರ್ ಸಹ ಬಿಡುಗಡೆ ಮಾಡಿದ್ದರು. ಯಾವುದೇ ಸಿನಿಮಾ ಹಿನ್ನೆಲೆಯಿಲ್ಲದ ಹೊಸ ಹೀರೋ ನಿಖಿಲ್ ಗೌಡ 'ಧನ್ಯೋಸ್ಮಿ' ಚಿತ್ರದ ನಾಯಕರಾಗಿದ್ದರೆ ಚೈತ್ರಾ ನಾಯಕಿ.

Vijaya Karnataka Web 5 Jun 2019, 11:06 am
ಕನ್ನಡದ ಯುವ ನಿರ್ದೇಶಕ 'ದಿಗ್ವಿಜಯ್ ಬಿಎಸ್' ಅವರು ಬೈಕ್ ಅಪಘಾತದಲ್ಲಿ ನಿಧನ ಹೊಂದಿದ್ದಾರೆ. ಮೊನ್ನೆ(ಮೇ 31, 2019) ತಡರಾತ್ರಿ 10-30ರ ಸುಮಾರಿಗೆ ಬೈಕ್ ಅಪಘಾತದಲ್ಲಿ ಆಸ್ಪತ್ರೆ ಸೇರಿದ್ದ ದಿಗ್ವಿಜಯ್, 11ರ ಹೊತ್ತಿಗೆ ನಿಧನರಾಗಿದ್ದಾರೆ. ನಿನ್ನೆ ಪೊಲೀಸ್ ಮಹಜರು ಬಳಿಕ ದಿಗ್ವಿಜಯ್ ಅವರ ಅಂತ್ಯಕ್ರಿಯೆಯನ್ನು ಬೆಂಗಳೂರಿನ ವಿಲ್ಸನ್ ಗಾರ್ಡನ್‌ ಬಳಿ ಪೋಷಕರು, ಬಂಧುಗಳು ಮತ್ತು ಸ್ನೇಹಿತಬಳಗದ ಸಮ್ಮುಖದಲ್ಲಿ ನಡೆಸಲಾಗಿದೆ. ಯುವ ನಿರ್ದೇಶಕ ದಿಗ್ವಿಜಯ್, ತಮ್ಮ ಪೋಷಕರು ಮತ್ತು ಕಿರಿಯ ಸಹೋದರ ವಿವೇಕ್ ಅವರನ್ನು ಅಗಲಿದ್ದಾರೆ.
Vijaya Karnataka Web Digvijay


'ಧನ್ಯೋಸ್ಮಿ' ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದ 24ರ ವಯಸ್ಸಿನ ದಿಗ್ವಿಜಯ್, ಕಳೆದ ತಿಂಗಳು ಈ ಚಿತ್ರದ ಟೀಸರ್ ಸಹ ಬಿಡುಗಡೆ ಮಾಡಿದ್ದರು. ಹೊಸ ಹೀರೋ ನಿಖಿಲ್ ಗೌಡ 'ಧನ್ಯೋಸ್ಮಿ' ಚಿತ್ರದ ನಾಯಕರಾಗಿದ್ದರೆ ಚೈತ್ರಾ ನಾಯಕಿ. ನಾರಾಯಣಮೂರ್ತಿ ಎಂ ಹಾಗೂ ರವೀಂದ್ರನಾಥ್ ಎಚ್‌ಎಂ ನಿರ್ಮಾಣದಲ್ಲಿ 'ಧನ್ಯೋಸ್ಮಿ' ಚಿತ್ರವನ್ನು ಪ್ರಾರಂಭಿಸಿದ್ದ ದಿಗ್ವಿಜಯ್, ಕಥೆ-ಚಿತ್ರಕಥೆಯನ್ನು ತಾವೇ ಬರೆದಿದ್ದರು. ಸುಮಾರು 6 ತಿಂಗಳ ಹಿಂದೆ ಶುರುವಾದ 'ಧನ್ಯೋಸ್ಮಿ' ಚಿತ್ರದ ಮೂಲಕ ದಿಗ್ವಿಜಯ್ ತಮ್ಮ ಮೊದಲ 'ಸಿನಿಮಾ ಜರ್ನಿ' ಪ್ರಾರಂಭಿಸಿದ್ದರು. ಕಳೆದ ತಿಂಗಳು 'ಟೀಸರ್' ಬಿಡುಗಡೆ ಮಾಡಿಕೊಂಡು ಚಿತ್ರತಂಡವು ಭಾರೀ ಖುಷಿಪಟ್ಟಿತ್ತು.

ನಿಖಿಲ್ ಗೌಡ-ಚೈತ್ರಾ ಮುಖ್ಯ ಭೂಮಿಕೆಯ 'ಧನ್ಯೋಸ್ಮಿ' ಚಿತ್ರದ ಶೂಟಿಂಗ್ ಅರ್ಧದಷ್ಟು ಮುಗಿದು, ಆ ಭಾಗದ ಡಬ್ಬಿಂಗ್ ಸಹ ಮುಗಿಸಿತ್ತು ಚಿತ್ರತಂಡ. "ಹಲವು ಅಡೆತಡೆಗಳನ್ನು ದಾಟಿ ತಮ್ಮ ಕನಸಿನ ಚಿತ್ರದ ಮುಂದಿನ ಶೂಟಿಂಗ್ ಶೆಡ್ಯೂಲ್ ಪ್ಲಾನ್ ಮಾಡಿಕೊಂಡ ದಿಗ್ವಿಜಯ್, ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರೀಕರಣಕ್ಕೆ ಹೋಗಲು ಸಜ್ಜಾಗಿದ್ದರು. ಸಿನಿಮಾ ನಿರ್ದೇಶನ ಮಾಡುವುದನ್ನೇ ಕನಸನ್ನಾಗಿಸಿಕೊಂಡಿದ್ದ ಕನಸುಗಾರ ಯುವ ನಿರ್ದೇಶಕ ದಿಗ್ವಿಜಯ್, ಹೊಸಬರ ತಂಡ ಕಟ್ಟಿಕೊಂಡು 'ಧನ್ಯೋಸ್ಮಿ' ಹೆಸರಿನಲ್ಲಿ ಸಿನಿಮಾ ಪ್ರಾರಂಭಿಸಿ ಒಂದು ಹಂತದ ಕೆಲಸ ಮುಗಿಸಿಕೊಂಡಿದ್ದರು. ಆದರೆ, ದುರದೃಷ್ಟವಶಾತ್ ಕನಸನ್ನು ಬಿಟ್ಟು ಬಹುದೂರ ಹೊರಟುಹೋಗಿದ್ದಾರೆ" ಎಂದಿದ್ದಾರೆ ದಿಗ್ವಿಜಯ್ ಆಪ್ತ ಮತ್ತು 'ಧನ್ಯೋಸ್ಮಿ ನಾಯಕ ನಿಖಿಲ್ ಗೌಡ.

ನಾರಾಯಣಮೂರ್ತಿ ಎಂ ಹಾಗೂ ರವೀಂದ್ರನಾಥ್ ಎಚ್‌ಎಂ ನಿರ್ಮಾಣ, ದಿಗ್ವಿಜಯ್ ನಿರ್ದೇಶನದ 'ಧನ್ಯೋಸ್ಮಿ' ಚಿತ್ರಕ್ಕೆ ಅಲ್ವಿನ್ ಬ್ರೂನೋ ಹಾಗೂ ಯಶಭ್ ಸಂಗೀತ ನೀಡಿದ್ದಾರೆ. ಹರ್ಷವರ್ಧನ್ ಕ್ಯಾಮರಾ ಕೆಲಸ ಮಾಡಿದ್ದರೆ ಅನೀಶ್ ಈ ಚಿತ್ರದ ಸಂಕಲನಕಾರರು. ಅನ್ಶುಲ್ ಕಲೆ, ಪ್ರಭಾಸ್ ಸಾಹಿತ್ಯವಿರುವ 'ಧನ್ಯೋಸ್ಮಿ' ಚಿತ್ರವನ್ನು ಬರುವ ಅಕ್ಟೋಬರ್ ತಿಂಗಳ ಕೊನೆಯಲ್ಲಿ ತೆರೆಗೆ ತರಲು ನಿರ್ಧರಿಸಿದ್ದರಂತೆ ದಿಗ್ವಿಜಯ್. ಆದರೆ ಅಷ್ಟರಲ್ಲಿ, ಸಿನಿಮಾ ಕನಸನ್ನು ಉಸಿರಾಗಿಸಿಕೊಂಡಿದ್ದ ಯುವ ನಿರ್ದೇಶಕ ದಿಗ್ವಿಜಯ್, ಮತ್ತೆ ಬರಲಾಗದ ಲೋಕಕ್ಕೆ ಪ್ರಯಾಣ ಬೆಳೆಸಿ ಆಗಸದ ತಾರೆಯಾಗಿದ್ದು ದುರಂತವೇ ಸರಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌