ಆ್ಯಪ್ನಗರ

ಡಿಮಾಂಡ್‌ ಹೆಚ್ಚಿಸಿಕೊಂಡ ಕವಲುದಾರಿ ಸಂಪತ್‌

ಪುನೀತ್‌ ರಾಜ್‌ಕುಮಾರ್‌ ನಿರ್ಮಾಣದ ಕವಲು ದಾರಿ ಸಿನಿಮಾದಲ್ಲಿ ವಿಭಿನ್ನ ಪಾತ್ರ ಮಾಡಿದ್ದ ಸಂಪತ್‌ ಕುಮಾರ್‌, ಈಗ ಕನ್ನಡದ ಬಿಝಿ ನಟರ ಸಾಲಲ್ಲಿ ಸೇರ್ಪಡೆ ಆಗಿದ್ದಾರೆ.

Vijaya Karnataka 10 May 2019, 8:03 pm
ಕವಲುದಾರಿಯ ಫರ್ನಾಂಡಿಸ್‌ ಅಲಿಯಾಸ್‌ ಮೈಲೂರು ಶ್ರೀನಿವಾಸ್‌ ಪಾತ್ರದ ಮೂಲಕ ಅಪಾರ ಜನಮೆಚ್ಚುಗೆ ಗಳಿಸಿರುವ ನಟ ಸಂಪತ್‌ ಕುಮಾರ್‌, ಈಗ ಕನ್ನಡದ ಬಹುಬೇಡಿಕೆಯ ನಟರಾಗಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ನಿರ್ಮಾಣದ ಮತ್ತೆರಡು ಚಿತ್ರಗಳಲ್ಲಿ ಇವರು ನಟಿಸುತ್ತಿದ್ದು, ಜತೆಗೆ ಐದಾರು ಚಿತ್ರಗಳಲ್ಲಿ ವಿಭಿನ್ನ ಪಾತ್ರ ಮಾಡುತ್ತಿದ್ದಾರೆ.
Vijaya Karnataka Web sampath


ಸದ್ಯ ಪನ್ನಗಾಭರಣ ನಿರ್ದೇಶನದ ಹೊಸ ಸಿನಿಮಾದಲ್ಲಿ ಮತ್ತು ಮಾಯಾಬಜಾರ್‌ ಚಿತ್ರದಲ್ಲಿ ಹೊಸ ಬಗೆಯ ಪಾತ್ರ ಮಾಡುತ್ತಿರುವ ಇವರು, ಗ್ರಾಮಾಯಣ, ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ, ಕಂಟ್ರಿಮೇಡ್‌ ಚಾರಿ, ಅಮೃತ್‌ ಅಪಾರ್ಟ್‌ಮೆಂಟ್‌ ಸೇರಿದಂತೆ ಹಲವು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ.

ಮೂಲತಃ ರಂಗಭೂಮಿ ಕಲಾವಿದರು ಸಂಪತ್‌ ಕುಮಾರ್‌. ಖಡಕ್‌ ವಾಯ್ಸ್‌ ಮತ್ತು ಕಣ್ಣುಗಳಲ್ಲೇ ಅಭಿನಯಿಸಬಲ್ಲ ಅಪರೂಪದ ನಟ. ಹಾಗಾಗಿಯೇ ಇವರನ್ನು ಬಾಲಿವುಡ್‌ನ ಖ್ಯಾತ ನಟ ನವಾಜುದ್ದೀನ್‌ ಸಿದ್ಧಕಿ ಅವರಿಗೆ ಹೋಲಿಸುತ್ತಾರೆ.

'ನಟನಾಗಿ ಎಲ್ಲ ರೀತಿಯ ಪಾತ್ರವನ್ನು ಮಾಡುವುದಕ್ಕೂ ಸೈ. ಈವರೆಗೂ ಹಲವು ಬಗೆಯ ಪಾತ್ರಗಳನ್ನು ನಿರ್ವಹಿಸಿದ್ದೇನೆ. ಕೆಜಿಎಫ್‌ ಮತ್ತು ಕವಲುದಾರಿ ಸಿನಿಮಾಗಳಲ್ಲಿ ನನ್ನ ವಯಸ್ಸಿಗೂ ಮೀರಿದ ಪಾತ್ರ ಮಾಡಿದೆ. ಅದನ್ನು ಜನರು ಒಪ್ಪಿಕೊಂಡರು. ಸವಾಲಿನ ಪಾತ್ರಗಳನ್ನು ಮಾಡಲು ಯಾವಾಗಲೂ ನಾನು ರೆಡಿ' ಎನ್ನುತ್ತಾರೆ ಸಂಪತ್‌.

'ಒಂದೊಂದು ಪಾತ್ರಕ್ಕೂ ಅದರದ್ದೇ ಆದ ಸಿದ್ಧತೆ ಬೇಕು' ಎನ್ನುವ ಇವರು, ಮೂಕಹಕ್ಕಿ ಸಿನಿಮಾದಲ್ಲಿ ಅಲೆಮಾರಿ ಜನಾಂಗದ ವ್ಯಕ್ತಿಯಾಗಿ ನಟಿಸಿದ್ದರು. ಈ ಪಾತ್ರಕ್ಕಾಗಿ ಅವರು ಹಲವು ತಿಂಗಳ ಕಾಲ, ಅಲೆಮಾರಿ ಜನಾಂಗದವರ ಜತೆ ಕಾಲಕಳೆದಿದ್ದರು.

ಸಿನಿಮಾದಲ್ಲಿ ಎಷ್ಟೇ ಬಿಝಿ ಆಗಿದ್ದರೂ, ರಂಗಭೂಮಿಯ ಒಂದಿಲ್ಲೊಂದು ಚಟುವಟಿಕೆಯಲ್ಲಿ ಭಾಗವಹಿಸುತ್ತಲೇ ಇರುತ್ತಾರೆ. ಅದರಲ್ಲೂ ಐತಿಹಾಸಿಕ ಸಿನಿಮಾಗಳಲ್ಲಿ ನಟಿಸುವ ಆಸೆ ಇವರದ್ದು.

ನನಗೆ ಎಲ್ಲ ರೀತಿಯ ಪಾತ್ರಗಳನ್ನು ಮಾಡಲು ಇಷ್ಟ. ಒಳ್ಳೊಳ್ಳೆ ಪಾತ್ರಗಳು ಸಿಗುತ್ತಿವೆ. ಜನರೂ ಆ ಪಾತ್ರಗಳನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಸವಾಲಿನ ಪಾತ್ರಗಳಿಗೆ ನಾನಂತೂ ಸದಾ ಸಿದ್ಧ.

- ಸಂಪತ್‌ ಕುಮಾರ್‌, ನಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌