ಆ್ಯಪ್ನಗರ

ಜೋಡಿ ಎತ್ತುಗಳು ಮಂಡ್ಯದಿಂದ ಕಾಣೆಯಾಗಿವೆ: ಯಾರಿಂದ ಅಪಪ್ರಚಾರ?

ನಟರಾದ ದರ್ಶನ್ ಮತ್ತು ಯಶ್ ಅವರನ್ನು 'ಜೋಡಿ ಎತ್ತುಗಳು' ಎಂದು ಕರೆದು, 'ಮಂಡ್ಯದಿಂದ ಕಾಣೆಯಾಗಿವೆ', 'ಮಿಸ್ಸಿಂಗ್, ಮಿಸ್ಸಿಂಗ್' ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಡುತ್ತಿದ್ದಾರೆ.

Vijaya Karnataka Web 25 Mar 2019, 4:29 pm
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ 'ಜೋಡಿ ಎತ್ತುಗಳು ಮಂಡ್ಯದಿಂದ ಕಾಣೆಯಾಗಿವೆ' ಎಂದು ಪೋಸ್ಟ್ ಮಾಡುವ ಮೂಲಕ ನಟರಾದ ದರ್ಶನ್ ಮತ್ತು ಯಶ್ ವಿರುದ್ಧ ಟೀಕೆ ಗಳು ಕಾಣಿಸಿಕೊಳ್ಳುತ್ತಿವೆ.
Vijaya Karnataka Web yash-darshan2303


ನಟಿ ಹಾಗೂ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಸಮಲತಾ ಪರ ನಟರಾದ ದರ್ಶನ್ ಮತ್ತು ಯಶ್ ಅವರು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಇತ್ತೀಚಿಗೆ, ಮಂಡ್ಯದಲ್ಲಿ ಸುಮಲತಾ ಅವರು ನಾಮಪತ್ರ ಸಲ್ಲಿಸುವ ವೇಳೆ ಮಂಡ್ಯಕ್ಕೆ ಆಗಮಿಸಿ ರಾಲಿಯಲ್ಲಿ ಪಾಲ್ಗೊಂಡು ಭರ್ಜರಿ ಭಾಷಣ ಮಾಡಿದ್ದ ನಟರಾದ ಯಶ್ ಮತ್ತು ದರ್ಶನ್, ಆ ನಂತರ ಮತ್ತೆ ಮಂಡ್ಯ ಪ್ರಚಾರದಲ್ಲಿ ಕಾಣಿಸಿಕೊಳ್ಳಲಿಲ್ಲ.

ಈ ಹಿನ್ನೆಲೆಯಲ್ಲಿ, ನಟರಾದ ದರ್ಶನ್ ಮತ್ತು ಯಶ್ ಅವರನ್ನು 'ಜೋಡಿ ಎತ್ತುಗಳು' ಎಂದು ಕರೆದು, 'ಮಂಡ್ಯದಿಂದ ಕಾಣೆಯಾಗಿವೆ', 'ಮಿಸ್ಸಿಂಗ್, ಮಿಸ್ಸಿಂಗ್' ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಡುತ್ತಿದ್ದಾರೆ. ಈ ಅಪ-ಪ್ರಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಯಾರು ಮಾಡಿಸುತ್ತಿದ್ದಾರೆ ಎಂಬುದನ್ನು ಕರ್ನಾಟಕದ ಜನತೆ ಕುತೂಹಲದಿಂದ ನೋಡುತ್ತಿದೆ ಎನ್ನಬಹುದು.

ಈ ಘಟನೆಗೆ ಸಂಬಂಧ ಪಡದಿದ್ದರೂ, ಕನ್ನಡದ ನಟ, ಚಾಲೆಂಜಿಂಗ್‌ ಸ್ಟಾರ್ ದರ್ಶನ್ ಅವರ ಮನೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿ ಓಡಿಹೋಗಿರುವ ಘಟನೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಷ್ಟೇ ಅಲ್ಲ, ನಟ ದರ್ಶನ್ ಅವರ ಕಾರಿನ ಗ್ಲಾಸ್ ಕೂಡ ಪುಡಿ ಪುಡಿ ಆಗಿದೆ. ಇಂದು, ಮಾರ್ಚ್ 23ರಂದು ಬೆಳಗಿನ ಜಾವ ಒಂದು ಗಂಟೆ ಸುಮಾರಿಗೆ ಈ ದುಷ್ಕೃತ್ಯ ನಡೆದಿದೆ ಎಂದು ಹೇಳಲಾಗಿದೆ.

ಈ ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ನಟಿ ಹಾಗೂ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು "ದರ್ಶನ್ ಹೆಸರೇ ಚಾಲೆಂಜಿಂಗ್ ಸ್ಟಾರ್. ಇದನ್ನೆಲ್ಲಾ ಅವರು ಚಾಲೆಂಜ್ ಆಗಿಯೇ ಸ್ವೀಕರಿಸುತ್ತಾರೆ. ಯಶ್ ಮತ್ತು ದರ್ಶನ್ ಅವರನ್ನು ಹೆದರಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಇದಕ್ಕೆಲ್ಲ ಯಶ್ ಮತ್ತು ದರ್ಶನ ತಲೆಕೆಡಿಸಿಕೊಳ್ಳುವುದಿಲ್ಲ. ಎಲ್ಲವನ್ನು ಚಾಲೆಂಜ್ ಆಗಿ ಸ್ವೀಕರಿಸುತ್ತಾರೆ" ಎಂದಿದ್ದಾರೆ.

ಈ ಸಂಗತಿಗೆ ಸಂಬಂಧಪಟ್ಟಂತೆ, ನಟ ದರ್ಶನ್ ಮ್ಯಾನೇಜರ್ ಶ್ರೀನಿವಾಸ ಈ ಕುರಿತು ದೂರು ದಾಖಲಿಸಿದ್ದಾರೆ. ಪಶ್ಚಿಮ ವಿಭಾಗದ ಡಿಸಿಪಿ 'ರವಿ ಡಿ ಚನ್ನಣ್ಣನವರ್' ಅವರು ತನಿಖೆ ಚುರುಕುಗೊಳಿಸುವಂತೆ ಎಸಿಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ರಾಜರಾಜೇಶ್ವರಿ ನಗರ ಪೊಲೀಸರು ಹಾಗೂ ಕೆಂಗೇರಿ ಗೇಟ್ ಪೊಲೀಸ್ ಎಸಿಪಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಅವರ ಮನೆಯ ಸಿಸಿ ಟಿವಿ ಪೂಟೇಜ್ ಹಾಗೂ ಸುತ್ತಮುತ್ತಲಿನ ಪರಿಸರದ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ, ಅದನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ

ರಾಜರಾಜೇಶ್ವರಿ ನಗರದಲ್ಲಿರುವ ನಟ ದರ್ಶನ್ ಮನೆ 'ತೂಗುದೀಪ ನಿಲಯ'ದ ಮೇಲೆ ನಡದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯ ಸೆಕ್ಯೂರಿಟಿ ಗಾರ್ಡ್ ಕೆಂಪೇಗೌಡ ಹೇಳಿಕೆ ನೀಡಿದ್ದಾರೆ. "ಮಧ್ಯರಾತ್ರಿ ಒಬ್ಬ ದುಷ್ಕರ್ಮಿ ಮನೆಗೆ ಬಂದು ಕಲ್ಲು ತೂರಿ ಓಡಿ ಹೋಗಿದ್ದಾನೆ. ನಾನು ಅಲ್ಲಿಗೆ ಬರುವಷ್ಟರಲ್ಲಿಯೇ ಆತ ಓಡಿ ಹೋಗಿದ್ದಾನೆ" ಎಂದು ತಿಳಿಸಿದ್ದಾನೆ ಎನ್ನಲಾಗಿದೆ. ತನಿಖೆ ನಂತರ ಮಿಕ್ಕ ಸಂಗತಿಗಳು ತಿಳಿದು ಬರಲಿದೆ ಎನ್ನಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌