ಆಮೀರ್ ಖಾನ್ ಸಮಾಜಮುಖಿ ಚಿಂತಕ ಎಂದ ವಿಶ್ವ ಸುಂದರಿ ಮಾನಷಿ ಛಿಲ್ಲರ್
ಆಮೀರ್ ಖಾನ್ ಸಮಾಜಮುಖಿ ಚಿಂತಕ ಎಂದ ವಿಶ್ವ ಸುಂದರಿ ಮಾನಷಿ ಛಿಲ್ಲರ್ ಇಂಟ್ರೊ : ಸಿನಿಮಾ ನಟನೆಯ ಜತೆಗೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿರುವ ಬಾಲಿವುಡ್ನ ಖ್ಯಾತ ನಟ ...
ಸಿನಿಮಾ ನಟನೆಯ ಜತೆಗೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿರುವ ಬಾಲಿವುಡ್ನ ಖ್ಯಾತ ನಟ ಆಮೀರ್ ಖಾನ್ ಕುರಿತು ವಿಶ್ವ ಸುಂದರಿ ಮಾನಷಿ ಛಿಲ್ಲರ್ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ.
- ವಿಕ ಸುದ್ದಿ ಲೋಕ
ಬಾಲಿವುಡ್ ನಟ ಅಮೀರ್ ಖಾನ್ ಕುರಿತು ಮಿಸ್ ವಲ್ಡ್ಗೆ ಮಾನುಷಿ ಛಿಲ್ಲರ್ಗೆ ಇನ್ನಿಲ್ಲದ ಗೌರವ. ಇದಕ್ಕೆ ಕಾರಣ ಏನು ಎಂದು ಕೆದಕಿದರೆ ಸಿನಿಮಾ ನಟನೆಯ ಉದ್ದೇಶವಲ್ಲ ಎಂಬುದು ಖಚಿತವಾಗಿದೆ. ಈ ಕುರಿತು ಅವರೇ ಸ್ಪಷ್ಟನೆ ನೀಡಿದ್ದಾರೆ. ಸದ್ಯದ ಮಟ್ಟಿಗೆ ಸಿನಿಮಾ ರಂಗಕ್ಕೆ ಬರುವ ಆಸಕ್ತಿ ಇಲ್ಲ. ಯಾಕೆಂದರೆ ಮಿಸ್ ವಲ್ಡ್ಗಾಗಿ ಒಂದು ವರ್ಷ ಸ್ಥಗಿತಗೊಳಿಸಿದ ಓದನ್ನು ಮುಂದುವರಿಸಲು ಅವರು ಆದ್ಯತೆ ನೀಡುತ್ತನೇ. ಆದರೂ ಒಂದು ವೇಳೆ ಸಿನಿಮಾ ರಂಗಕ್ಕೆ ಬಂದರೆ ಆಮೀರ್ ಖಾನ್ ಜೊತೆ ನಟಿಸುವ ಆಸೆಯಿದೆ ಎಂದವರು ಹೇಳಿದ್ದಾರೆ.
ಆಮೀರ್ ಖಾನ್ ಅವರ ಜೊತೆಗೇ ನಟಿಸುವ ಮಿಸ್ ವಲ್ಡ್ನ ಕನಸಿಗೆ ಕಾರಣಗಳು ಇಲ್ಲದಿಲ್ಲ. ಅವರ ಸಿನಿಮಾಗಳು ಕೇವಲ ಮನರಂಜನೆ ಒದಗಿಸುವುದಲ್ಲದೆ, ಸಾಮಾಜಿಕ ಕಳಕಳಿಯ ಅಂಶಗಳನ್ನೂ ಒಳಗೊಂಡಿರುತ್ತವೆ. ಹೀಗಾಗಿ ಒಂದೊಮ್ಮೆ ಸಿನಿಮಾ ರಂಗ ಪ್ರವೇಶಿಸಿದರೂ ಸಮಾಜಮುಖಿ ಆಮೀರ್ ಜೊತೆ ನಟಿಸುವುದು ತಮ್ಮ ಆದ್ಯತೆ ಎಂದವರು ಹೇಳಿದ್ದಾರೆ. ಇದನ್ನು ಹೊರತು ಪಡಿಸಿ ಮಿಸ್ ವಲ್ಡ್ ಪ್ರಶಸ್ತಿಯನ್ನು ಮೊತ್ತ ಮೊದಲ ಬಾರಿಗೆ ಗೆದ್ದ ಏಷ್ಯಾದ ಯುವತಿ ವೈದ್ಯರೂ ಆಗಿದ್ದ ರೀಟಾ ಫರೀನಾ ಅವರನ್ನು ಕೂಡ ಒಂದು ಬಾರಿಯಾದರೂ ಭೇಟಿಯಾಗಬೇಕು ಎಂಬ ಆಕಾಂಕ್ಷೆಯನ್ನು ಹೊಂದಿರುವುದಾಗಿ ಹೇಳಿದ್ದಾರೆ.
ಈ ವರ್ಷಾರಂಭದಲ್ಲಿ ಎಫ್ಬಿಬಿ ಕಲರ್ಸ್ ಫೆಮಿನಾ ಮಿಸ್ ಇಂಡಿಯಾ ಕಿರೀಟವನ್ನು ಛಿಲ್ಲರ್ ಮುಡಿಗೇರಿಸಿಕೊಂಡಿದ್ದರು. ಛಿಲ್ಲರ್ ಅವರನ್ನು ಹರಿಯಾಣ ರಾಜ್ಯದ ಅ್ಯನಿಮಿಯಾ (ರಕ್ತಹೀನತೆ) ತಡೆ ಆಂದೋಲನಕ್ಕೆ ಬ್ರಾಂಡ್ ಅಂಬಾಸಡರ್ ಆಗಿ ಅಲ್ಲಿನ ಮುಖ್ಯಮಂತ್ರಿ ಎಂ.ಎಲ್. ಕಟ್ಟರ್ ಈಗಾಗಲೇ ಘೋಷಿಸಿದ್ದಾರೆ.
ವೈದ್ಯರು ಅತ್ಯುತ್ತಮ ನಟನಾ ಕೌಶಲ್ಯವನ್ನೂ ಹೊಂದಿರಬೇಕು ಎಂದು ತಮ್ಮ ತಂದೆ ಸದಾ ಹೇಳುತ್ತಿದ್ದರು ಎನ್ನುತ್ತಾರೆ ಛಿಲ್ಲರ್. ಅದಕ್ಕೆ ಕಾರಣವೂ ಇಲ್ಲದಿಲ್ಲ. ವೈದ್ಯರು ಯಾವಾಗಲೂ ರೋಗಿಗಳೊಂದಿಗೆ ತುಂಬಾ ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಕೆಲಸ ಮಾಡುತ್ತಾರೆ. ಆಗ ರೋಗಿಗಳು ಆರಾಮವಾಗಿರುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಮುಖ ಭಾವದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ. ಈ ಮೂಲಕ ರೋಗಿಗಳಲ್ಲಿ ನಿರಾಳತೆ ಮೂಡಿಸುವುದು ಮುಖ್ಯ ಎಂಬುದು ಅವರ ಅಭಿಪ್ರಾಯ.
ಯುವತಿಯರು ತಮ್ಮ ಕನಸುಗಳನ್ನು ಯಾವತ್ತೂ ಬಿಟ್ಟುಕೊಡಬಾರದು. ನನಗೇನೋ ಹೆತ್ತವರ ಸಂಪೂರ್ಣ ಬೆಂಬಲ ಸಿಕ್ಕಿತ್ತು. ಆದರೆ ಕೆಲವು ಯುವತಿಯರಿಗೆ ಅಂತಹ ಅವಕಾಶ ಸಿಗಲಾರದು. ಆದರೂ ಅವರು ತಮ್ಮ ಕನಸನ್ನು ಬಿಟ್ಟುಕೊಡಬಾರದು. ಆದರೆ ಯಾವುದೇ ಕೆಲಸ ಮಾಡಿದರೂ ಅದನ್ನು ಅದೊಂದು ಹೋರಾಟ ಎಂದು ಪರಿಗಣಿಸದೆ ಪ್ರೀತಿಯಿಂದ ಕೆಲಸ ಮಾಡಬೇಕು. ಅದರಲ್ಲಿ ಆನಂದ ಪಡಬೇಕು. ಹಾಗಿದ್ದರೆ ಮಾತ್ರ ಯಶಸ್ಸು ತಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದಿದ್ದಾರೆ.
ಋುತುಸ್ರಾವದ ಸಂದರ್ಭದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತಾವು ಆರಂಭಿಸಿದ 'ಪ್ರಾಜೆಕ್ಟ್ ಶಕ್ತಿ' ಆಂದೋಲನವನ್ನು ಇನ್ನುಷ್ಟು ಬಲಪಡಿಸಲು ನಿರ್ಧರಿಸಿರುವ ಅವರು, ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವು ಅತ್ಯಂತ ಮಹತ್ವದ್ದು. ಇದಕ್ಕಾಗಿ ತಮ್ಮಿಂದಾಗುವ ಎಲ್ಲಾ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.