ಆ್ಯಪ್ನಗರ

ಮೋಷನ್‌ ಪೋಸ್ಟರ್‌ನಲ್ಲಿ ಜಾಗ್ವಾರ್‌ ಝಲಕ್‌

ಯುಗಾದಿಗೆ ಸ್ಪೆಷಲ್‌ ಉಡುಗೊರೆ ನೀಡಲು ಜಾಗ್ವಾರ್‌ ಚಿತ್ರತಂಡ ಸಜ್ಜಾಗಿದೆ. ಮೊದಲ ಹಂತದ ಶೂಟಿಂಗ್‌ ಮುಗಿಸಿರುವ ನಿರ್ದೇಶಕರು, ಈ ಹಬ್ಬಕ್ಕಾಗಿ ಮೋಷನ್‌ ಪೋಸ್ಟರ್‌ ರಿಲೀಸ್‌ ಮಾಡಲಿದ್ದಾರೆ.

Vijaya Karnataka Web 8 Apr 2016, 4:51 am
- ಶರಣು ಹುಲ್ಲೂರು
Vijaya Karnataka Web motion posters jaguar jhalak
ಮೋಷನ್‌ ಪೋಸ್ಟರ್‌ನಲ್ಲಿ ಜಾಗ್ವಾರ್‌ ಝಲಕ್‌


ಸತತ ಶೂಟಿಂಗ್‌ನಲ್ಲಿ ಬಿಝಿ ಆಗಿರುವ ಜಾಗ್ವಾರ್‌ ಸಿನಿಮಾ ತಂಡ, ಯುಗಾದಿಗಾಗಿ ಕೊಂಚ ಬಿಡುವು ಮಾಡಿಕೊಂಡಿದೆ. ಪ್ರೇಕ್ಷಕರಿಗೆ ಹಬ್ಬದ ಉಡುಗೊರೆ ನೀಡಲು ಮೋಷನ್‌ ಪೋಸ್ಟರ್‌ ರಿಲೀಸ್‌ ಮಾಡುತ್ತಿದ್ದು, ಇದು ಕೂಡ ಟೀಸರ್‌ನಂತೆಯೇ ವೈರಲ್‌ ಆಗುವ ಸೂಚನೆ ಸಿಕ್ಕಿದೆ.

ಮುಹೂರ್ತದಂದೇ ಜಾಗ್ವಾರ್‌ ಸಿನಿಮಾದ ಟೀಸರ್‌ ರಿಲೀಸ್‌ ಆಗಿತ್ತು. ಅದು ಸಖತ್‌ ಹವಾ ಕ್ರಿಯೇಟ್‌ ಮಾಡಿತ್ತು. ಆ ಟೀಸರ್‌ನಲ್ಲಿ ನಿಖಿಲ್‌ ಕುಮಾರಸ್ವಾಮಿ ತಾವು ಸಿನಿಮಾಗಾಗಿ ಕಲಿತ ಸಾಹಸ ಕಲೆಗಳನ್ನು ಪ್ರದರ್ಶನ ಮಾಡಿದ್ದರು. ಅಲ್ಲದೇ, ಚಿತ್ರಕತೆಯ ಹಲವು ಅಂಶಗಳು ಕೂಡ ಅದರಲ್ಲಿ ಸೇರಿದ್ದವು. ಹೀಗಾಗಿ ಟೀಸರ್‌ ಗಮನ ಸೆಳೆದಿತ್ತು. ಈಗ ರಿಲೀಸ್‌ ಆಗಲಿರುವ ಮೋಷನ್‌ ಪೋಸ್ಟರ್‌ನಲ್ಲೂ ಹಲವು ವಿಶೇಷಗಳು ಇವೆ. ಸಿನಿಮಾದಲ್ಲಿ ನಿಖಿಲ್‌ ಹೇಗೆ ಕಾಣಿಸಲಿದ್ದಾರೆ ಅನ್ನುವ ಝಲಕ್‌ ಅದರಲ್ಲಿದೆಯಂತೆ.

ಜಾಗ್ವಾರ್‌ ಸಿನಿಮಾದಲ್ಲಿ ನಿಖಿಲ್‌ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲಿ ಮೆಡಿಕಲ್‌ ಸ್ಟೂಡೆಂಟ್‌ನ ಲುಕ್‌ ಒಂದಾದರೆ, ಮತ್ತೊಂದು ಅದಕ್ಕಿಂತ ಭಿನ್ನವಾಗಿದೆಯಂತೆ. ಆ ಕುರಿತು ಸದ್ಯ ಏನೂ ಹೇಳುವುದಿಲ್ಲ ಅಂತಾರೆ ನಿಖಿಲ್‌.

ಮೊದಲ ಹಂತದ ಬಹುತೇಕ ಶೂಟಿಂಗ್‌ ಮೈಸೂರಿನಲ್ಲೇ ನಡೆದಿದೆ. ಅಲ್ಲದೇ ಮಾತಿನ ಭಾಗದ ಸಾಕಷ್ಟು ದೃಶ್ಯಗಳನ್ನು ಶೂಟ್‌ ಮಾಡಿದ್ದಾರೆ ನಿರ್ದೇಶಕರು. ದಕ್ಷಿಣ ಭಾರತದ ಖ್ಯಾತ ನಟರಾದ ಸಂಪತ್‌, ಜಗಪತಿಬಾಬು ಸೇರಿದಂತೆ ಸಾಕಷ್ಟು ಕಲಾವಿದರು ಮೊದಲ ಹಂತದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದು ವಿಶೇಷ. ಎರಡನೇ ಹಂತದ ಶೂಟಿಂಗ್‌ ಕೂಡ ಮೈಸೂರಿನಲ್ಲೇ ನಡೆಯಲಿದ್ದು, ತೆಲುಗಿನ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಈ ಬಾರಿ ಜಾಗ್ವಾರ್‌ ತಂಡವನ್ನು ಸೇರಲಿರುವುದು ವಿಶೇಷ.

ಸಿನಿಮಾದಲ್ಲಿ ಇನ್ನೂ ಸಾಕಷ್ಟು ವಿಶೇಷಗಳಿವೆ. ರಾಜಮೌಳಿ ಶಿಷ್ಯ ಮಹದೇವ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ರಾಜಮೌಳಿಯ ತಂದೆ ವಿಜಯೇಂದ್ರ ಪ್ರಸಾದ್‌ ಈ ಚಿತ್ರಕ್ಕೆ ಕತೆ ಬರೆದಿದ್ದಾರೆ. ಸಾಹಸ ಸನ್ನಿವೇಶಗಳನ್ನು ರವಿವರ್ಮ ಕಂಪೋಸ್‌ ಮಾಡಿದ್ದಾರೆ.

‘ಮಾತಿನ ಭಾಗದ ಶೂಟಿಂಗ್‌ ಮುಗಿಯುತ್ತಿದ್ದಂತೆಯೇ ಸಾಹಸ ದೃಶ್ಯಗಳನ್ನು ಶೂಟ್‌ ಮಾಡಲಿದ್ದೇವೆ. ಅದಕ್ಕಾಗಿಯೇ ಬೆಂಗಳೂರಿನಲ್ಲಿ ಸೆಟ್‌ ಹಾಕುತ್ತಿದ್ದೇವೆ. ಅಲ್ಲದೇ ಮೈಸೂರಿನಲ್ಲೂ ಕೂಡ ಫೈಟಿಂಗ್‌ ಸನ್ನಿವೇಶವನ್ನು ಚಿತ್ರೀಕರಿಸುತ್ತಿದ್ದೇವೆ. ಅದಕ್ಕಾಗಿ ನಿಖಿಲ್‌ ತಯಾರಿ ಮಾಡಿಕೊಳ್ಳುತ್ತಿದ್ದಾನೆ. ಅದ್ಧೂರಿಯಾಗಿಯೇ ಸಾಹಸ ದೃಶ್ಯಗಳನ್ನು ಶೂಟ್‌ ಮಾಡಲಿದ್ದೇವೆ’ ಅಂತಾರೆ ಚಿತ್ರದ ನಿರ್ಮಾಪಕ ಕುಮಾರಸ್ವಾಮಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌