ಉದ್ಯಮಿ ಮುಸ್ತಾಫಾ ರಾಜ್ ಅವರೊಂದಿಗಿನ ತಮ್ಮ ನಿಶ್ಚಿತಾರ್ಥದ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ನಟಿ ಪ್ರಿಯಾಮಣಿ ಈಗ ಈ ಕುರಿತಾಗಿ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ.
ಇದೊಂದು ಅಂತರ್ಧರ್ಮೀಯ ವಿವಾಹ ಎನ್ನುವ ಕಾರಣಕ್ಕೆ ಟೀಕೆ-ಟಿಪ್ಪಣಿಗಳು ವ್ಯಕ್ತವಾಗುತ್ತಿವೆ. ಈ ಕುರಿತು ಬೇಸರ ವ್ಯಕ್ತಪಡಿಸಿರುವ ಪ್ರಿಯಾಮಣಿ, 'ಜನರಿಂದ ಬಂದ ಟೀಕೆ ಮತ್ತು ನೆಗೆಟಿವ್ ಕಾಮೆಂಟ್ಗಳಿಂದ ನೋವಾಗಿದೆ. ನಾನು ಈ ರೀತಿಯ ಟೀಕೆಗಳನ್ನು ಎಂದಿಗೂ ನಿರೀಕ್ಷೆ ಮಾಡಿರಲಿಲ್ಲ' ಎಂದಿದ್ದಾರೆ.
ಈ ತೆರನಾದ ಹೇಳಿಕೆಗಳು ಬಂದ ಒಂದು ದಿನದೊಳಗೆ ಅಂತರ್ಜಾಲ ತಾಣದಿಂದ ನಿಶ್ಚಿತಾರ್ಥದ ಫೋಟೊ ತೆಗೆದು ಹಾಕಿರುವ ಪ್ರಿಯಾಮಣಿ ಕಟುವಾದ ಪ್ರತಿಕ್ರಿಯೆಯನ್ನೂ ಹಾಕಿದ್ದಾರೆ. 'ನನ್ನ ನಿಶ್ಚಿತಾರ್ಥದ ಕುರಿತು ಬಂದಿರುವ ಟೀಕೆಗಳ ಬಗ್ಗೆ ನನಗೆ ನೋವಾಗಿದೆ. ಬದುಕಿನ ನನ್ನ ಹೊಸ ಪಯಣಕ್ಕೆ ನೀವೆಲ್ಲಾ ಆಶೀರ್ವಾದ ಮಾಡಿ ಮತ್ತು ಉತ್ತಮ ಸಂದೇಶಗಳನ್ನು ನೀಡಲಿ ಎನ್ನುವ ಉದ್ದೇಶದಿಂದ ನಾನು ಫೋಟೋ ಪೋಸ್ಟ್ ಮಾಡಿದ್ದೆ. ಆದರೆ ನೆಗೆಟಿವ್ ಪ್ರತಿಕ್ರಿಯೆಗಳೇ ಹೆಚ್ಚಾಗಿ ಬಂದಿವೆ. ಇದು ನನ್ನ ಜೀವನ. ಇದಕ್ಕಾಗಿ ನಾನು ನನ್ನ ಹೆತ್ತವರು ಮತ್ತು ಭಾವಿ ಪತಿಯನ್ನು ಹೊರತುಪಡಿಸಿ ಯಾರಿಗೂ ಸ್ಪಷ್ಟೀಕರಣ ನೀಡಬೇಕಾದ ಅಗತ್ಯವಿಲ್ಲ' ಎಂದಿದ್ದಾರೆ.