ಹರೀಶ್ ಬಸವರಾಜ್
ರಣವಿಕ್ರಮ ಚಿತ್ರದ ನಂತರ ಪುನೀತ್ ರಾಜ್ಕುಮಾರ್, ನಿರ್ದೇಶಕ ಪವನ್ ಒಡೆಯರ್ ಮತ್ತೊಮ್ಮೆ 'ನಟ ಸಾರ್ವಭೌಮ' ಸಿನಿಮಾದ ಮೂಲಕ ಒಂದಾಗಿದ್ದು, ಈ ಚಿತ್ರದ ನಾಯಕಿಯಾಗಿ ರಚಿತಾ ರಾಮ್ ಅವರನ್ನು ಆಯ್ಕೆ ಮಾಡಿದ್ದಕ್ಕೆ ಪುನೀತ್ ಅಭಿಮಾನಿಗಳು ಸಿಟ್ಟಾಗಿದ್ದಾರೆ.
ಅಪ್ಪು ಸಿನಿಮಾದಲ್ಲಿ ರಚಿತಾ ಬೇಡ ಎಂದು ಹ್ಯಾಶ್ಟ್ಯಾಗ್ ಮಾಡಿರುವ ಅಭಿಮಾನಿಗಳು ಟ್ವಿಟರ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರು ಮಾಡಿಕೊಂಡಿದ್ದಾರೆ. ಇನ್ನೊಂದೆಡೆ ಚಿತ್ರದ ಶೂಟಿಂಗ್ ಕೂಡ ಪ್ರಾರಂಭವಾಗಿದೆ.
'ನಟ ಸಾರ್ವಭೌಮ' ಚಿತ್ರಕ್ಕೆ ಈ ಮೊದಲು ಪ್ರಿಯಾಂಕಾ ಜ್ವಾಲಾಕರ್ ನಾಯಕಿಯಾಗಿ ಆಯ್ಕೆಯಾಗಿದ್ದರು. ಅವರಿಗೆ ಡೇಟ್ಗಳ ಸಮಸ್ಯೆಯಾದ ಕಾರಣ ನಿರ್ದೇಶಕರು ಆ ಜಾಗಕ್ಕೆ ರಚಿತಾ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಪ್ಪು ಅಭಿಮಾನಿಗಳು ಬೇಸರಗೊಂಡು ತಮ್ಮ ಅಭಿಪ್ರಾಯಗಳನ್ನು ಟ್ವಿಟರ್ನಲ್ಲಿ ಬರೆಯುತ್ತಿದ್ದಾರೆ. ಜತೆಗೆ, ಕೂಡಲೇ ರಚಿತಾ ಅವರನ್ನು ಈ ಚಿತ್ರದಿಂದ ಕೈಬಿಡಿ ಎಂದು ನಿರ್ದೇಶಕರನ್ನು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ.
ಕೆಲ ಮೂಲಗಳ ಪ್ರಕಾರ 'ಚಕ್ರವ್ಯೂಹ' ಚಿತ್ರದ ಪ್ರಚಾರದ ವೇಳೆ ರಚಿತಾ ಆಡಿದ್ದರೆನ್ನಲಾದ ಮಾತುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭಿಮಾನಿಗಳು ಹೀಗೆ ಮಾಡುತ್ತಿರಬಹುದು ಎನ್ನಲಾಗಿದೆ. ಜತೆಗೆ 'ರಣವಿಕ್ರಮ' ಚಿತ್ರವನ್ನು ಡೇಟ್ಗಳ ಸಮಸ್ಯೆಯಿಂದ ರಚಿತಾ ಕೈಬಿಟ್ಟಿದ್ದರು. ಈ ಎರಡು ವಿಷಯಗಳನ್ನು ಇಟ್ಟುಕೊಂಡು ಅಭಿಮಾನಿಗಳು ಈ ರೀತಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ವಿವಾದದ ಬಗ್ಗೆ ರಚಿತಾ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
'ಈ ರೀತಿ ನನಗೆ ಯಾಕೆ ಟ್ವೀಟ್ ಮಾಡುತ್ತಿದ್ದಾರೆ ಎಂಬುದು ನನಗೆ ತಿಳಿಯುತ್ತಿಲ್ಲ. ಮೇಲಿನ ಎರಡು ವಿಷಯಗಳು ಅನಗತ್ಯವಾಗಿ ವಿವಾದವಾಗಿರುವುದು. ನಾನು ಯಾವುದೇ ತಪ್ಪು ಮಾಡಿಲ್ಲ. ಈ ಚಿತ್ರದ ಪಾತ್ರ ನನಗೆ ಒಪ್ಪುತ್ತದೆ ಎನ್ನುವ ಕಾರಣಕ್ಕೆ ನಿರ್ದೇಶಕರು ನನ್ನನ್ನು ಆಯ್ಕೆ ಮಾಡಿಕೊಂಡಿದ್ದಾರೆ. ರಚಿತಾ ಕನ್ನಡದ ಹುಡುಗಿ. ನಮ್ಮವರು ಎಂದು ಹೇಳುವವರೇ ನನ್ನ ಬಗ್ಗೆ ಇಂಥ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ರಚಿತಾ ಬೇಡ ಎಂದು ಆನ್ಲೈನ್ ಅಭಿಯಾನ ಮಾಡುತ್ತಿರುವುರಿಂದ ನನಗೆ ನಿಜಕ್ಕೂ ನೋವಾಗಿದೆ. ಒಂದು ಚಿತ್ರಕ್ಕೆ ನಾಯಕಿ ಆಯ್ಕೆಯಾಗಬೇಕಾದರೆ, ನಿರ್ದೇಶಕ, ನಿರ್ಮಾಪಕ ಹಾಗೂ ಚಿತ್ರತಂಡ ಎಲ್ಲರೂ ಚರ್ಚೆ ಮಾಡಿ ಫೈನಲ್ ಮಾಡುತ್ತಾರೆ. ಹಾಗಾಗಿ ಇದರಲ್ಲಿ ನನ್ನ ಪಾತ್ರವೇನೂ ಇಲ್ಲ. ಇದನ್ನು ಯಾರು ಮಾಡುತ್ತಿದ್ದಾರೆ? ಯಾಕೆ ಮಾಡುತ್ತಿದ್ದಾರೆ? ಎಂಬುದು ನನಗೆ ತಿಳಿದಿಲ್ಲ. ನಾನು ತಪ್ಪು ಮಾಡಿಲ್ಲ. ಸಿನಿಮಾ ಮಾತ್ರ ಮಾಡುತ್ತಿದ್ದೇನೆ' ಎನ್ನುತ್ತಾರೆ ರಚಿತಾ.
'ರಣವಿಕ್ರಮ ಸಿನಿಮಾದಿಂದ ಹೊರಗೆ ಬಂದೆ ಎನ್ನುವ ಕಾರಣಕ್ಕೆ ಇದೆಲ್ಲಾ ಆಗುತ್ತಿರಬಹುದು. ಆದರೆ ಈ ಚಿತ್ರಕ್ಕೂ ಪವನ್ ಅವರೇ ನಿರ್ದೇಶಕರು, ಪುನೀತ್ ಅವರೇ ನಾಯಕರು. ಆದರೂ ನನ್ನನ್ನು ಈ ಚಿತ್ರಕ್ಕೆ ಆಯ್ಕೆ ಮಾಡಿದ್ದಾರೆ. ಇದರರ್ಥ ನಾನೇನು ತಪ್ಪು ಮಾಡಿಲ್ಲ ಎಂದು ಅರ್ಥವಲ್ಲವೆ? ಯಾವುದೇ ತಪ್ಪು ಮಾಡದಿರುವ ನನ್ನ ಮೇಲೇಕೆ ಈ ಮಟ್ಟಿಗಿನ ಕೋಪ ಎಂಬುದು ನನಗೆ ತಿಳಿಯುತ್ತಿಲ್ಲ. ರಚಿತಾ ಎನ್ನುವ ಅಂಶ ಪಕ್ಕಕ್ಕಿಟ್ಟರೆ ಒಬ್ಬ ಹೆಣ್ಣುಮಗಳಾಗಿಯೂ ನನಗೆ ನೋವಾಗಿದೆ. ಈ ವಿಚಾರವಾಗಿ ಪುನೀತ್ ಅವರು ರಿಲ್ಯಾಕ್ಸ್ ಆಗಿರಿ. ತಲೆ ಕೆಡಿಸಿಕೊಳ್ಳದೆ ನಿಮ್ಮ ಕೆಲಸ ನೀವು ಮಾಡಿಕೊಂಡು ಹೋಗಿ ಎಂದು ನನಗೆ ಧೈರ್ಯ ಹೇಳಿದ್ದಾರೆ'ಎಂದು ರಚಿತಾ ತಿಳಿಸಿದ್ದಾರೆ.
ಇನ್ನು ಟ್ವೀಟ್ ಮತ್ತು ವೈರಲ್ ಬಗ್ಗೆ ನನಗೆ ಹೆಚ್ಚೇನು ಮಾಹಿತಿ ಗೊತ್ತಿಲ್ಲ. ನಾನು ನನ್ನ ಕೆಲಸದಲ್ಲಿ ಬಿಝಿಯಾಗಿದ್ದೇನೆ. ಆದರೂ ಈ ರೀತಿ ಯಾರು ಮಾಡುತ್ತಿದ್ದಾರೆಂಬುದು ಗೊತ್ತಿಲ್ಲ ಎಂದಿದ್ದಾರೆ ನಿರ್ದೇಶಕ ಪವನ್ ಒಡೆಯರ್.
ಒಟ್ಟಿನಲ್ಲಿ ನಟ ಸಾರ್ವಭೌಮ ಚಿತ್ರದ ನಾಯಕಿಯ ಆಯ್ಕೆಯ ಬಗ್ಗೆ ಅಪ್ಪು ಅಭಿಮಾನಿಗಳ್ಯಾಕೆ ಬೇಸರಗೊಂಡಿದ್ದಾರೆ ಎಂಬುದನ್ನು ಅಭಿಮಾನಿಗಳು ಸಹ ಯಾವುದೇ ಟ್ವೀಟ್ನಲ್ಲೂ ಹೇಳಿಲ್ಲ.
---------
ಯಾವುದೇ ತಪ್ಪು ಮಾಡದಿರುವ ನನಗೆ ಈ ರೀತಿ ಏಕೆ ಆಗುತ್ತಿದೆ ಎಂಬುದೇ ನೋವಾಗಿದೆ. ನನಗೆ ಡಾ.ರಾಜ್ಕುಮಾರ್ ಫ್ಯಾಮಿಲಿ ಬಗ್ಗೆ ಗೌರವ ಇದೆ. ಪುನೀತ್ ಅವರ ಜತೆ ನಟಿಸುತ್ತಿರುವುದಕ್ಕೆ ನನಗೆ ನಿಜಕ್ಕೂ ಖುಷಿ ಇದೆ. ದಯವಿಟ್ಟು ವಿನಾಕಾರಣ ನನ್ನ ಮೇಲೆ ಆರೋಪ ಮಾಡಬೇಡಿ. ನಾನು ನಿಮ್ಮ ಮನೆಯ ಹೆಣ್ಣು ಮಗಳು.
-ರಚಿತಾ ರಾಮ್, ನಟಿ
----
ಈ ಟ್ವೀಟ್ ವಿವಾದದ ಬಗ್ಗೆ ನನಗೇನು ಗೊತ್ತಿಲ್ಲ. ನಾನು ಅದನ್ನು ಗಮನಿಸಿಲ್ಲ. ಶೂಟಿಂಗ್ನಲ್ಲಿ ಬಿಝಿ ಇದ್ದೇನೆ. ಇದನ್ನು ಯಾರು, ಯಾಕೆ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ.
-ಪವನ್ ಒಡೆಯರ್, ನಿರ್ದೇಶಕ