ಆ್ಯಪ್ನಗರ

ರಘು ದೀಕ್ಷಿತ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಇದೇ ನನ್ನ ಉತ್ತರ ಎಂದ ಗಾಯಕ

ಪ್ರತಿಯೊಬ್ಬರೂ ಚಿನ್ಮಯಿ ವಿರುದ್ಧ ದಾಳಿ ನಡೆಸುತ್ತಿದ್ದಾರೆ. ದಯವಿಟ್ಟು ನಿಲ್ಲಿಸಿ. ಚಿನ್ಮಯಿ ಒಳ್ಳೆಯವರು. ಬೇರೆಯವರ ಪರ ಅವರು ಧ್ವನಿ ಎತ್ತುತ್ತಿದ್ದಾರೆ. ಈ ಹಿಂದೆ ಅವರ ಜತೆ ಮಾತನಾಡಿದಾಗ ತುಂಬಾ ಚೆನ್ನಾಗಿ ಮಾತನಾಡಿದ್ದರು. ಹೈದರಾಬಾದ್‌ನಲ್ಲಿ ಕಾನ್ಸರ್ಟ್‌ನಲ್ಲಿ ನನ್ನ ಜೊತೆ ಪಾಲ್ಗೊಂಡಿದ್ದರು. ಅವರ ಮನೆಗೆ ಊಟಕ್ಕೂ ಆಹ್ವಾನಿಸಿದ್ದರು.

Vijaya Karnataka Web 10 Oct 2018, 7:06 pm
ತಮಿಳಿನ ಖ್ಯಾತ ಗೀತಸಾಹಿತಿ ವೈರಮುತ್ತು ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಗಾಯಕಿ ಚಿನ್ಮಯಿ ಶ್ರೀಪಾದ ಈಗ ಸ್ಯಾಂಡಲ್‍ವುಡ್ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ವಿರುದ್ಧ ಅಂತಹದ್ದೇ ಆರೋಪಗಳುಳ್ಳ ಎರಡು ಅನಾಮಿಕ ಮಹಿಳೆಯರ ಎರಡು ಪತ್ರಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಸ್ಯಾಂಡಲ್‍ವುಡ್‌ನಲ್ಲೂ #Metoo ಅಭಿಯಾನದ ಕಿಡಿ ಹೊತ್ತಿಸಿದ್ದಾರೆ.
Vijaya Karnataka Web raghu-dixit


ಒಂದು ಪತ್ರದ ಸಾರಾಂಶ ಈ ರೀತಿ ಇದೆ, "ರಘು ದೀಕ್ಷಿತ್ ಪರಭಕ್ಷಕರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕೆಲವು ವರ್ಷಗಳ ಹಿಂದೆ ರೆಕಾರ್ಡಿಂಗ್‌ಗಾಗಿ ಅವರ ಸ್ಟುಡಿಯೋಗೆ ಆಹ್ವಾನಿಸಲಾಗಿತ್ತು. ಅವರ ಪತ್ನಿಗೆ ಹುಷಾರಿಲ್ಲ ಎಂದಿದ್ದರು (ಮದುವೆಯಾದ ಎಲ್ಲಾ ಪುರುಷರಂತೆ). ಅವರ ಪತ್ನಿ ಒಳ್ಳೆಯರು. ಅವರು ಬಂದ ಕಾರಣ ರೆಕಾರ್ಡಿಂಗ್ ಕೆಲಸ ನಡೆಯಲಿಲ್ಲ. ಕೆಲಸಕ್ಕಾಗಿ ಬಂದಿದ್ದೇನೆ ಎಂದು ಪತ್ನಿ ಬಳಿ ನಟಿಸುವಂತೆ ತಿಳಿಸಿದರು. ಈ ಬಗ್ಗೆ ಅವರ ಜತೆ ವಾಗ್ವಾದ ನಡೆಯಿತು. ಬಳಿಕ ಅವರ ಪತ್ನಿ ಬಂದು ಚೆನ್ನಾಗಿಯೇ ಮಾತನಾಡಿಕೊಂಡು ಹೊರಟು ಹೋದರು. ರೆಕಾರ್ಡಿಂಗ್ ಮುಗಿದ ಬಳಿಕ ಚೆಕ್‌ಗೆ ಸಹಿ ಹಾಕುವ ಸಂದರ್ಭದಲ್ಲಿ ನನ್ನನ್ನು ಹತ್ತಿರಕ್ಕೆ ಬರಸೆಳೆದು ಚುಂಬಿಸುವಂತೆ ಕೇಳಿದರು. ಬಳಿಕ ಬಾಗಿಲ ಬಳಿ ನನ್ನನ್ನು ಎತ್ತಿಕೊಳ್ಳಲು ಪ್ರಯತ್ನಿಸಿದರು, ನಾನಾಗ ಕೂಗುತ್ತಾ ಕೆಳಗೆ ಓಡಿ ಹೋದೆ. ಬಹಳಷ್ಟು ಹೆಣ್ಣುಮಕ್ಕಳು ಅವರ ಕೈಯಲ್ಲಿ ಇದೇ ರೀತಿ ಅನುಭವಿಸಿರುತ್ತಾರೆ ಎಂದು ನನಗೆ ಗೊತ್ತು. ಹೇಸಿಗೆ ಆಗುತ್ತದೆ. ನನ್ನ ಹೆಸರನ್ನು ಬಹಿರಂಗಪಡಿಸಲು ಇಚ್ಚಿಸಲ್ಲ. ನಿಜವಾಗಿ ನನಗೆ ಆ ಗಟ್ಸ್ ಇಲ್ಲ, ನಾನಿನ್ನೂ ಸಂಗೀತದಲ್ಲಿ ನೆಲೆನಿಲ್ಲುತ್ತಿದ್ದೇನೆ" ಎಂದಿದ್ದಾರೆ.


ಇನ್ನೊಂದು ಪತ್ರವೂ ಇದೇ ರೀತಿಯ ಆರೋಪದಿಂದ ಕೂಡಿದೆ. "ಹೊಸ ಟ್ಯೂನ್ ಬಗ್ಗೆ ಅಭಿಪ್ರಾಯ ಕೇಳಲು ರಘು ದೀಕ್ಷಿತ್ ನನ್ನನ್ನು ಮನೆಗೆ ಆಹ್ವಾನಿಸಿದ್ದರು. ಬಳಿಕ ತನ್ನ ತೊಡೆ ಮೇಲೆ ಕೂರುವಂತೆ ರಘು ದೀಕ್ಷಿತ್ ಹೇಳಿದ್ದರು. ಇದರಿಂದ ಟ್ಯೂನ್‌ಗಳನ್ನು ಹತ್ತಿರದಿಂದ ಕೇಳಲು ಸಾಧ್ಯವಾಗುತ್ತದೆ" ಎಂದಿದ್ದರಂತೆ. ಆದರೆ ಆ ಮಹಿಳೆ ಅದಕ್ಕೆ ಅಂಗೀಕರಿಸಲಿಲ್ಲ. ಬಳಿಕ ಅವರ ಗೆಳೆಯರು ಬಂದರು ಆಗ ಅವರಿಗೆ ಆಕೆ ಪತ್ರಕರ್ತೆ ಎಂದು ಪರಿಚಯ ಮಾಡಿಸಿದ್ದರು ಎಂದಿದ್ದಾರೆ ಚಿನ್ಮಯಿ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರಘು ದೀಕ್ಷಿತ್, "ನನ್ನ ವಿರುದ್ಧ ಆರೋಪಿಸಿರುವ ಅನಾಮಿಕರಿಗೆ ನನ್ನ ಪ್ರತಿಕ್ರಿಯೆ ಇಲ್ಲಿದೆ. ನನ್ನ ಕಡೆಯಿಂದ ಏನೇ ತಪ್ಪಾಗಿದ್ದರೂ ಕ್ಷಮೆ ಇರಲಿ. ನನ್ನ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ. ನಾನು ಚಿನ್ಮಯಿ ವಿರುದ್ಧ ಆಕ್ರಮಣ ಮಾಡಲು ಹೋಗಲ್ಲ. ನಾನು ಪ್ರಾಮಾಣಿಕವಾಗಿದ್ದೇನೆ ಎಂಬರ್ಥದಲ್ಲಿ ಸುದೀರ್ಘ ಪತ್ರ ಬರೆದಿದ್ದಾರೆ. ನನ್ನ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ನನಗೆ "ತೀವ್ರ ಅರಿವಿದೆ". ಇದೊಂದು ತಿಳಿವಳಿಕೆಯಿಲ್ಲದ ತಪ್ಪು ನಿರ್ಣಯ ಎಂದಿದ್ದಾರೆ.


ಪ್ರತಿಯೊಬ್ಬರೂ ಚಿನ್ಮಯಿ ವಿರುದ್ಧ ದಾಳಿ ನಡೆಸುತ್ತಿದ್ದಾರೆ. ದಯವಿಟ್ಟು ನಿಲ್ಲಿಸಿ. ಚಿನ್ಮಯಿ ಒಳ್ಳೆಯವರು. ಬೇರೆಯವರ ಪರ ಅವರು ಧ್ವನಿ ಎತ್ತುತ್ತಿದ್ದಾರೆ. ಈ ಹಿಂದೆ ಅವರ ಜತೆ ಮಾತನಾಡಿದಾಗ ತುಂಬಾ ಚೆನ್ನಾಗಿ ಮಾತನಾಡಿದ್ದರು. ಹೈದರಾಬಾದ್‌ನಲ್ಲಿ ಕಾನ್ಸರ್ಟ್‌ನಲ್ಲಿ ನನ್ನ ಜೊತೆ ಪಾಲ್ಗೊಂಡಿದ್ದರು. ಅವರ ಮನೆಗೆ ಊಟಕ್ಕೂ ಆಹ್ವಾನಿಸಿದ್ದರು.

ಚಿನ್ಮಯಿ ಹೇಳಿರುವ ವ್ಯಕ್ತಿಗೆ ನಾನು ಈ ಹಿಂದೆಯೇ ಅವರು ಬಯಸಿದಂತೆ ಸಾರ್ವಜನಿಕವಾಗಿ ಅಲ್ಲದೆ, ಖಾಸಗಿಯಾಗಿ ಕ್ಷಮೆ ಕೋರಿದ್ದೆ. ಮತ್ತೊಮ್ಮೆ ಕೇಳುತ್ತೇನೆ. ಆ ಘಟನೆ ಹೇಗೋ ನಡೆದು ಹೋಯಿತು. ಆದರೆ ಅವರು ವಿವರಿಸಿದಂತೆ ಅಲ್ಲ. ರೆಕಾರ್ಡಿಂಗ್ ಬಳಿಕ ಒಂದು ಹಗ್ ಕೊಟ್ಟಿದ್ದೆ. ಅದೇ ರೀತಿ ಚುಂಬಿಸಲು ಪ್ರಯತ್ನಿಸಿದೆ. ಆದರೆ ಅವರು ತಡೆದ ಕಾರಣ ಆ ರೀತಿ ಮಾಡಲಾಗಲಿಲ್ಲ. ಬಳಿಕ ನಾನು ಸ್ಟುಡಿಯೋದಿಂದ ಹೊರಟು ಹೋದೆ. ನನ್ನ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಇದಕ್ಕೆ ನಾನು ಕ್ಷಮೆ ಕೋರಿದ್ದೆ ಎಂದಿದ್ದು ತನ್ನ ವಿರುದ್ಧದ ಆರೋಪಗಳನ್ನು ಬಹುತೇಕ ನಿರಾಕರಿಸಿದ್ದಾರೆ ರಘು ದೀಕ್ಷಿತ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌