ಆ್ಯಪ್ನಗರ

'ಕೆಜಿಎಫ್' ಕಮಾಲ್ : ಯಶ್ ಬಾಡಿಗೆ ಮನೆ ಸಮಸ್ಯೆಗೆ ಸಿಕ್ಕಿತು ಮುಕ್ತಿ

ರಾಕಿಂಗ್ ಸ್ಟಾರ್ ಯಶ್ ಪಾಲಿನ ಲಕ್ಕಿ ಮನೆ ಎನ್ನಿಸಿದ್ದ ಬನಶಂಕರಿಯ ಬಾಡಿಗೆ ಮನೆ ಸಮಸ್ಯೆ ಈಗ ಪರಿಹಾರ ಕಂಡಿದೆ. ಬಾಕಿ ಹಣ ₹ 23 ಲಕ್ಷ ಯಶ್ ಕುಟುಂಬ ಪಾವತಿಸುತ್ತಿದೆ. ಇದೆಲ್ಲಾ ಕೆಜಿಎಫ್ ಕಮಾಲ್ ಅಲ್ಲದೆ ಇನ್ನೇನು ಅಲ್ಲ. ಕೆಜಿಎಫ್ ಗೆಲುವಿನ ಕಾರಣ ಯಶ್ ಬಾಡಿಗೆ ಮನೆ ಸಮಸ್ಯೆಗೂ ಮುಕ್ತಿ ಸಿಕ್ಕಿದೆ.

Bangalore Mirror Bureau 2 Jan 2019, 7:07 pm
[This story originally published in Bangalore Mirror on Jan 02, 2019]
Vijaya Karnataka Web yash-house


ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ಗಲ್ಲಾಪೆಟ್ಟಿಗೆ ತುಂಬಿ ತುಳುಕುತ್ತಿರುವುದು ಗೊತ್ತೇ ಇದೆ. ಇದುವರೆಗೆ ಎಲ್ಲಾ ಭಾಷೆಯ ಆವೃತ್ತಿಗಳೂ ಸೇರಿ ₹ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿವೆ ಎನ್ನುತ್ತವೆ ಮೂಲಗಳು. ಇದೀಗ ಯಶ್ ಬಾಡಿಗೆ ಮನೆ ಸಮಸ್ಯೆಗೂ ಮುಕ್ತಿ ಸಿಕ್ಕಿದೆ.

ಡಾ.ಮುನಿಪ್ರಸಾದ್ ಮತ್ತು ಡಾ.ವನಜಾ ಎಂಬ ದಂಪತಿಗಳು ಬನಶಂಕರಿಯ ತಮ್ಮ ಮನೆಯನ್ನು ಯಶ್ ಕುಟುಂಬಕ್ಕೆ 2010ರಲ್ಲಿ ಬಾಡಿಗೆಗೆ ನೀಡಿದ್ದರು. ಡಿಸೆಂಬರ್ 31, 2018ಕ್ಕೆ ಬಾಕಿ ಉಳಿದಿರುವ ಬಾಡಿಗೆಯನ್ನು ಪಾವತಿಸಬೇಕು ಎಂದು ಹೈಕೋರ್ಟ್ ಡೆಡ್‌ಲೈನ್ ನೀಡಿದ್ದು ಇದೀಗ ಬಾಕಿ ಮೊತ್ತ ₹ 23 ಲಕ್ಷಗಳ ಡಿಡಿ ಆ ದಂಪತಿಗಳ ಕೈಸೇರುತ್ತಿದೆ. ಯಶ್ ಕುಟುಂಬ ಈ ಲಕ್ಕಿ ಮನೆಯನ್ನು ಮಾರ್ಚ್ 31, 2019ಕ್ಕೆ ಖಾಲಿ ಮಾಡುತ್ತಿದೆ ಎಂದು ಈ ಪ್ರಕರಣದ ವಕೀಲರು 'ಬೆಂಗಳೂರು ಮಿರರ್‌'ಗೆ ತಿಳಿಸಿದ್ದಾರೆ. [ಸ್ಯಾಂಡಲ್‍ವುಡ್ಡನ್ನು ದಂಗುಬಡಿಸುತ್ತಿರುವ 'ಕೆಜಿಎಫ್' ಕಲೆಕ್ಷನ್]

"ಈ ಪ್ರಾಪರ್ಟಿ ವಿಚಾರವಾಗಿ ಎರಡೂ ಕುಟುಂಬಗಳು ಸಾಕಷ್ಟು ಸಮಯದಿಂದ ಹೋರಾಡುತ್ತಿವೆ. ಇದೀಗ ಡಿಡಿ ವಕೀಲರ ಮುಖಾಂತರ ಅವರ ಕೈ ಸೇರಲಿದೆ" ಎಂದಿದ್ದಾರೆ ವೈದ್ಯ ದಂಪತಿಗಳ ಪರ ವಕೀಲರಾದ ಎಂಟಿ ನಾಣಯ್ಯ. ಬಾಡಿಗೆ ವಿಚಾರವಾಗಿ ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು.

"ಕೆಜಿಎಫ್ ಸಿನಿಮಾ ಗೆದ್ದಿದ್ದು ಈಗ ಹಣಕ್ಕೇನು ತೊಂದರೆ ಇಲ್ಲ. ₹ 23 ಲಕ್ಷದ ಡಿಡಿ ರೆಡಿಯಾಗಿದೆ ಎಂದು ಮಾಹಿತಿ ನನಗೆ ನೀಡಲಾಗಿದೆ. ಬಹುಶಃ ಬುಧವಾರ (ಜನವರಿ 2) ಡಿಸೆಂಬರ್ 27ರ ದಿನಾಂಕವುಳ್ಳ ಡಿಡಿ ವಕೀಲರ ಕೈ ಬದಲಾಗಲಿದೆ" ಎಂದಿದ್ದಾರೆ ಹೈಕೋರ್ಟ್‌ನಲ್ಲಿ ವಾದಿಸಿರುವ ವಕೀಲರು.

2015ರಲ್ಲಿ XLII ಸಿಟಿ ಸಿವಿಲ್ ಕೋರ್ಟ್ ಮೆಟ್ಟಿಲೇರುವ ಮೂಲಕ ಕಾನೂನು ಹೋರಾಟ ಆರಂಭವಾಯಿತು. ಎ ಪುಷ್ಪಾ (ಯಶ್ ತಾಯಿ) ಹೆಸರಿನಲ್ಲಿದ್ದ ಬನಶಂಕರಿಯ ಬಾಡಿಗೆ ಮನೆಯನ್ನು ಖಾಲಿ ಮಾಡಿಸಬೇಕು ಎಂದು ಮಾಲೀಕರು ಕೋರ್ಟ್‌ ಮೆಟ್ಟಿಲೇರಿದ್ದರು. ಅಕ್ಟೋಬರ್ 2010ರಲ್ಲಿ ಈ ಮನೆಯನ್ನು ತಿಂಗಳಿಗೆ ₹ 40,000 ಬಾಡಿಗೆಗೆ ನೀಡಲಾಗಿತ್ತು. ಲೀಸ್ ಅವಧಿ 11 ತಿಂಗಳು. ಲೀಸ್ ಅವಧಿ ಮುಗಿದ ಬಳಿಕ ಶೇ.5ರಷ್ಟು ಬಾಡಿಗೆ ಏರಿಕೆ ಮಾಡುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. 2015ರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಯಶ್ ಮತ್ತವರ ಅಭಿಮಾನಿಗಳು ನಮಗೆ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಮಾಲೀಕರು ಆರೋಪಿಸಿದ್ದರು.


2010 ಮತ್ತು 2015 ನಡುವೆ ಬಾಡಿಗೆ ಕಟ್ಟಿಲ್ಲ ಎಂದು ಆರೋಪಿದ್ದ ಮಾಲೀಕರು ಬಾಕಿ ಹಣ ₹ 13,08,600 ಆಗಿದೆ ಎಂದಿದ್ದರು. ಬಾಡಿಗೆದಾರರು ಕರಾರಿನ ನಿಯಮಗಳನ್ನು ಉಲ್ಲಂಘಿಸಿ ಮನೆಯನ್ನು ವಾಸಕ್ಕೆ ಅಲ್ಲದೆ ಬೇರೆ ಕೆಲಸಗಳಿಗೆ ಬಳಸುತ್ತಿದ್ದಾರೆ. ಅಲ್ಲಿ ಚಿಟ್‌ಫಂಡ್ ಬಿಝಿನೆಸ್ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಮನೆಯನ್ನು ಲೀಸ್‍ಗೆ ಪಡೆದಾಗ ಇನ್ನೂ ನಿರ್ಮಾಣ ಪೂರ್ಣಗೊಂಡಿರಲಿಲ್ಲ. ಬಾಕಿ ಕೆಲಸ ಮುಗಿಸಲು ನಾವು ₹ 12.5 ಲಕ್ಷ ಖರ್ಚು ಮಾಡಿದ್ದೇವೆ. ಅದನ್ನೇ ಬಾಕಿ ಹಣಕ್ಕೆ ಹೊಂದಿಸಿಕೊಳ್ಳುವಂತೆ ಹೇಳಿದ್ದೆವು ಎಂದು ವಾದಿಸಲಾಗಿತ್ತು. 2013ರಿಂದ ಬಾಕಿ ಇರುವ ಬಾಡಿಗೆ ಮೊತ್ತವನ್ನು ತಿಂಗಳಿಗೆ ₹ 40,000ದಂತೆ ಪಾವತಿಸಲು ಸಿಟಿ ಸಿವಿಲ್ ಕೋರ್ಟ್ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.

ನ್ಯಾಯಮೂರ್ತಿ ಎಎಸ್ ಬೋಪಣ್ಣ ಮತ್ತು ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠದ ಮುಂದೆ ಸೆಪ್ಟೆಂಬರ್ 5, 2018ರಂದು ಈ ಪ್ರಕರಣ ವಿಚಾರಣೆಗೆ ಬಂತು. ಸಿವಿಲ್ ಕೋರ್ಟ್ ನೀಡಿದ್ದ ತೀರ್ಪನ್ನು ಹೈಕೋರ್ಟ್ ತಡೆಹಿಡಿಯಿತು. ಮನೆಯ ಕಾಂಪೌಂಡ್ ಇನ್ನಿತರೆ ಕೆಲಸಗಳಿಗೆ ತುಂಬಾ ಹಣ ಖರ್ಚಾಗಿದೆ ಎಂಬ ಬಾಡಿಗೆದಾರರ ವಾದ ಸಾಕ್ಷ್ಯಾಧಾರಗಳಿಲ್ಲದ ಕಾರಣ ಸಾಬೀತಾಗಲಿಲ್ಲ. ಆದರೆ ಮಾಲೀಕರಿಗೆ ನೀಡಬೇಕಾಗಿರುವ ಬಾಕಿ ಹಣಕ್ಕೆ ಶೇ.9ರ ವಾರ್ಷಿಕ ಬಡ್ಡಿಗೆ ಬದಲಾಗಿ ಶೇ.6ರಷ್ಟನ್ನು ವಿಧಿಸಲಾಯಿತು.


ಬಾಡಿಗೆದಾರರು ಸಂಪೂರ್ಣ ಬಾಕಿಯನ್ನು ಬಡ್ಡಿ ಸಮೇತ ಹಾಗೂ ಮನೆಗೆ ಆಗಿರುವ ಹಾನಿಯನ್ನು 31.3.2019ರಂದು ಅಥವಾ ಅಷ್ಟರೊಳಗೆ ಭರಿಸಿದರೆ ಖಾಲಿ ಮಾಡಬಹುದು ಎಂದು ಕೋರ್ಟ್ ಆದೇಶಿಸಿದೆ. ಒಂದು ವೇಳೆ ನಿಗದಿತ ಸಮಯದಲ್ಲಿ ಪಾವತಿಸದಿದ್ದರೆ 31.12.2018ಕ್ಕೆ ಖಾಲಿ ಮಾಡಬೇಕು ಎಂದು ಕೋರ್ಟ್ ಆದೇಶಿಸಿದೆ.

ಯಶ್ ಪಾಲಿನ ಲಕ್ಕಿ ಮನೆ
2010ರಲ್ಲಿ ಯಶ್ ಆಗಿನ್ನೂ ಉದಯೋನ್ಮುಖ ನಟ. ಅದೇ ವರ್ಷ ಅವರ ಅಭಿನಯದ ಸಿನಿಮಾ ಬಿಡುಗಡೆಯಾಗಿತ್ತು. ಬಳಿಕ ನಿಧಾನಕ್ಕೆ ಅವರ ವರ್ಚಸ್ಸು ಬೆಳೆಯುತ್ತಾ ಹೋಯಿತು. ಈ ಮನೆ ಲಕ್ಕಿ ಎಂಬ ಕಾರಣಕ್ಕೆ ಖಾಲಿ ಮಾಡಿರಲಿಲ್ಲ ಎನ್ನಲಾಗಿದೆ. ಕೆಲ ವರ್ಷಗಳಲ್ಲೇ ಈ ಬಾಡಿಗೆ ಮನೆಯಿಂದ ಇನ್ನೂ ದೊಡ್ಡ ಮನೆಗೆ ಸ್ಥಳಾಂತವಾಗಿತ್ತು ಯಶ್ ಕುಟುಂಬ. ಆದರೆ ಬನಶಂಕರಿಯ ಈ ಮನೆಯನ್ನು ಬಿಟ್ಟುಕೊಟ್ಟಿರಲಿಲ್ಲ. ಇದನ್ನು ಕಚೇರಿಯಾಗಿ ಬಳಸಿಕೊಳ್ಳಲಾಗುತ್ತಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌