ಆ್ಯಪ್ನಗರ

ಸಿದ್ಧಗಂಗಾ ಚೇತನಕ್ಕೆ ತಾರೆಯರ ಅಂತಿಮ ನಮನ

ಅಗಲಿದ ಮಹಾಚೇತನ ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನಕ್ಕಾಗಿ ಸ್ಯಾಂಡಲ್‌ವುಡ್‌ ಸಿಲೆಬ್ರಿಟಿಗಳು ಶ್ರೀಮಠಕ್ಕೆ ಧಾವಿಸಿ ಬಂದಿದ್ದಾರೆ. ಕಾಯಕಯೋಗಿಯನ್ನು ಕೊನೆಯದಾಗಿ ಕಣ್ತುಂಬಿಕೊಂಡು ಕಣ್ಣೀರಿಟ್ಟಿದ್ದಾರೆ ಅವೆರೆಲ್ಲರೂ.

Vijaya Karnataka 23 Jan 2019, 5:00 am
-ಶರಣು ಹುಲ್ಲೂರು
Vijaya Karnataka Web prakash


ಶತಮಾನದ ಸಂತ ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನ ಪಡೆಯಲು ಸ್ಯಾಂಡಲ್‌ವುಡ್‌ ಸಿಲೆಬ್ರಿಟಿಗಳಾದ ದರ್ಶನ್‌, ಪುನೀತ್‌ ರಾಜ್‌ಕುಮಾರ್‌, ಜಗ್ಗೇಶ್‌, ಧನಂಜಯ್‌, ರಾಘವೇಂದ್ರ ರಾಜ್‌ಕುಮಾರ್‌, ಶ್ರೀಮುರುಳಿ, ಪ್ರಕಾಶ್‌ ರೈ, ನಿರ್ದೇಶಕರಾದ ಇಂದ್ರಜಿತ್‌ ಲಂಕೇಶ್‌, ಸಾಯಿ ಪ್ರಕಾಶ್‌, ಹಿರಿಯ ನಟಿ ಸುಮಲತಾ ಅಂಬರೀಶ್‌, ಅವರ ಪುತ್ರ ಅಭಿಷೇಕ್‌ ಸೇರಿ ಅನೇಕರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಅಂತಿಮ ದರ್ಶನ ಪಡೆದಿದ್ದಾರೆ.

ಅನ್ನ, ಅಕ್ಷರ ಹಾಗೂ ಆಶ್ರಯದ ಮೂಲಕ ತ್ರಿವಿಧ ದಾಸೋಹಿಯಾಗಿದ್ದ ಶ್ರೀಗಳ ಅಗಲಿಕೆಯಿಂದ ನಾವೆಲ್ಲರೂ ಅನಾಥರಾದಂತೆ ಆಗಿದೆ ಎಂದು ಅವರೆಲ್ಲರೂ ದುಃಖ ವ್ಯಕ್ತಪಡಿಸಿದ್ದಾರೆ.

ಯಾವ ಪ್ರಶಸ್ತಿ ನೀಡಿದರೂ ಕಡಿಮೆಯೇ: ಪುನೀತ್‌

ಲಕ್ಷಾಂತರ ಮಕ್ಕಳಿಗೆ ವಿದ್ಯೆ ಮತ್ತು ಅನ್ನದಾನ ಮಾಡಿದ ಮಹಾಚೇತನ ಸಿದ್ಧಗಂಗಾ ಶ್ರೀಗಳು. ಅಪಾರ ಭಕ್ತರನ್ನು ಹೊಂದಿರುವ ಶ್ರೀಮಠಕ್ಕೆ ನಾನೂ ಅನೇಕ ಬಾರಿ ಭೇಟಿ ಮಾಡಿದ್ದೇನೆ. ನನ್ನ ಸಿನಿಮಾದ ಆಡಿಯೋ ಬಿಡುಗಡೆಯನ್ನೂ ಶ್ರೀಗಳು ಮಾಡಿದ್ದಾರೆ. ಅಪ್ಪಾಜಿ (ಡಾ.ರಾಜ್‌) ಕೂಡ ಅನೇಕ ಬಾರಿ ಶ್ರೀಗಳ ದರ್ಶನ ಪಡೆದಿದ್ದಾರೆ. ಅವರ ಅಗಲಿಕೆ ಬಹಳ ನೋವುಂಟು ಮಾಡಿದೆ. ಅಲ್ಲದೇ, ಈ ಸಂದರ್ಭದಲ್ಲಿ ಅವರಿಗೆ ಭಾರತರತ್ನ ಪುರಸ್ಕಾರ ಕೊಡುವ ವಿಚಾರ ಚರ್ಚೆಗೆ ಬಂದಿದೆ. ಶ್ರೀಗಳಿಗೆ ಯಾವ ಪುರಸ್ಕಾರ ಕೊಟ್ಟರೂ ಕಡಿಮೆಯೇ. ಪ್ರಶಸ್ತಿಗೂ ಮೀರಿದ ವ್ಯಕ್ತಿತ್ವ ಅವರದ್ದು ಎಂದು ಹೇಳಿದ್ದಾರೆ ಪುನೀತ್‌ ರಾಜ್‌ಕುಮಾರ್‌.

ನಮ್ಮೆಲ್ಲರ ಮನದಲ್ಲಿ ಶ್ರೀಗಳು ಇದ್ದಾರೆ: ದರ್ಶನ್‌

ಮಂಗಳವಾರ ಬೆಳಗ್ಗೆ ತಮಕೂರಿಗೆ ಆಗಮಿಸಿದ ದರ್ಶನ್‌, ಶ್ರೀಗಳ ಅಂತಿಮ ದರ್ಶನ ಪಡೆದಿದ್ದಾರೆ. ಕಿರಿಯ ಶ್ರೀಗಳ ಆಶೀರ್ವಾದ ಕೂಡ ಪಡೆದ ಅವರು ತುಂಬಾ ದುಃಖ ವ್ಯಕ್ತಪಡಿಸಿದರು. 'ಶ್ರೀಗಳು ನಮ್ಮಿಂದ ದೂರವಾಗಿಲ್ಲ. ಅವರು ಅಪಾರ ಭಕ್ತರ ಹೃದಯದಲ್ಲಿ ಇದ್ದಾರೆ. ನಮ್ಮೆಲ್ಲರ ಮನದಲ್ಲಿ ಮನೆ ಮಾಡಿದ್ದಾರೆ. ಅವರನ್ನು ಕಳೆದುಕೊಂಡಿರುವುದು ನೋವಿನ ಸಂಗತಿ. ಸದಾ ನಮ್ಮೆಲ್ಲರನ್ನೂ ಅವರು ಕಾಪಾಡುತ್ತಾರೆ ಎಂದರು ದರ್ಶನ್‌.

ಆಧುನಿಕ ಶಿವ ಸಿದ್ಧಗಂಗಾ ಶ್ರೀಗಳು: ಜಗ್ಗೇಶ್‌

ನಾನು ಅನೇಕ ಸಲ ಶ್ರೀಗಳ ದರ್ಶನ ಪಡೆದಿದ್ದೇನೆ. ಈ ಸಲ ಅಂತಿಮ ನಮಸ್ಕಾರ ಮಾಡಲು ಬಂದಿದ್ದೇನೆ. ದೇವರು ದೇವರ ಬಳಿ ಹೋಗಿದ್ದಾರೆ. ಅವರು ಒಂದು ರೀತಿಯಲ್ಲಿ ಶಿವ ಸ್ವರೂಪಿ. ಅವರ ಕಾಯಕ ಗುಣಕ್ಕೆ ತಲೆಬಾಗಿದ್ದೇವೆ. ಅಸಂಖ್ಯಾತ ಭಕ್ತರಲ್ಲಿ ನಾವು ಅವರನ್ನು ಕಾಣುತ್ತೇವೆ ಎಂದರು ಜಗ್ಗೇಶ್‌.

ದಾರಿದೀಪವಾಗಿದ್ದ ಶ್ರೀಗಳು: ಶ್ರೀಮುರಳಿ

ಚಿಕ್ಕವಯಸ್ಸಿನಿಂದಲೂ ನಾನು ಶ್ರೀಮಠಕ್ಕೆ ಬರುತ್ತಿದ್ದೇನೆ. ನಮ್ಮ ತಂದೆಯವರು ಯಾವಾಗಲೂ ಇಲ್ಲಿಗೆ ಕರೆದುಕೊಂಡು ಬರುತ್ತಿದ್ದರು. ಅವರ ಆಶೀರ್ವಾದ ನಮ್ಮ ಮೇಲಿದೆ. ಲಿಂಗೈಕ್ಕೆರಾಗಿರುವ ಶ್ರೀಗಳು ಸ್ಮರಣೀಯರು. ಹಾಗಾಗಿಯೇ ಅವರು ಯಾವಾಗಲೂ ನಮ್ಮೊಂದಿಗೆ ಇರುತ್ತಾರೆ. ಬಡವ, ಬಲ್ಲಿದ, ಜಾತಿ, ಧರ್ಮಗಳನ್ನು ನೋಡದೇ ತ್ರಿವಿಧ ದಾಸೋಹ ಮಾಡಿದ್ದಾರೆ. ಈ ನಾಡಿನ ಮಕ್ಕಳಾದ ನಾವೆಲ್ಲ ಅವರ ಋುಣದಲ್ಲಿದ್ದೇವೆ. ಅದನ್ನು ಕಾಯಕದ ಮೂಲಕವೇ ನಾವೂ ತೀರಿಸಬೇಕಿದೆ ಎಂದಿದ್ದಾರೆ ಶ್ರೀಮುರಳಿ.

ನಿಜಶರಣರು ಶ್ರೀಗಳು: ಧನಂಜಯ್‌


ನಿಜ ಶರಣ, ಕಾಯಕಯೋಗಿ, ನಾಡಿಗೆ ಬೆಳಕಾಗಿದ್ದವರು. ಅವರು ಯಾವತ್ತೂ ಜಾತಿ ಕೇಳಲಿಲ್ಲ. ಧರ್ಮದ ಬಗ್ಗೆ ಮಾತನಾಡಲಿಲ್ಲ. ಶಿಕ್ಷಣ, ಆಹಾರಕ್ಕೆ ಪರದಾಡುತ್ತಿದ್ದ ಬಡವರಲ್ಲಿ ದೇವರನ್ನು ಕಂಡವರು. ಅಂತಹ ಶಿವನ ಸ್ವರೂಪಿಯನ್ನು ನಾವೆಲ್ಲ ಕಳೆದುಕೊಂಡಿದ್ದೇವೆ. ಅಂಥ ಮಹಾನ್‌ ಚೇತನ ಹುಟ್ಟಿರುವ ನಾಡಿನಲ್ಲಿ ನಾವೆಲ್ಲ ಬದುಕುತ್ತಿದ್ದೇವೆ ಎನ್ನುವುದೇ ನಮಗೊಂದು ಹೆಮ್ಮೆ ಎಂದರು ಧನಂಜಯ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌