ಆ್ಯಪ್ನಗರ

ಎಳ್ಳುಬೆಲ್ಲ ಬೀರಿ ಸಂಕ್ರಾಂತಿ ಸಂಭ್ರಮ ಆಚರಿಸಿದ ಕನ್ನಡ ತಾರೆಯರು

ಮಕರ ಸಂಕ್ರಾಂತಿಯಂದು ಸೂರ್ಯ ಪಥ ಬದಲಿಸುತ್ತಿರುವಂತೆಯೇ ಕನ್ನಡ ಚಿತ್ರರಂಗವೂ ತನ್ನ ಪಥ ಬದಲಿಸುತ್ತಾ ಎಂಬ ನಿರೀಕ್ಷೆ ಮೂಡಿದೆ. ಅದಕ್ಕೆ ಪೂರಕವೆಂಬಂತೆ ತಾರೆಯರು ಸುಗ್ಗಿ ಹಬ್ಬವನ್ನು ಆಚರಿಸಿದ್ದಾರೆ.

Vijaya Karnataka 16 Jan 2019, 7:38 am
ಪದ್ಮಾ ಶಿವಮೊಗ್ಗ
Vijaya Karnataka Web shekar


ಈ ಸಂಕ್ರಾಂತಿ ಹಬ್ಬ ಸ್ಯಾಂಡಲ್‌ವುಡ್‌ನಲ್ಲಿ ಸಂಭ್ರಮವನ್ನು ತುಂಬಿದ್ದರೆ, ವಿವಿಧ ತಾರೆಯರು ಹೊಸ ಕೆಲಸಗಳಿಗೆ ಚಾಲನೆ ನೀಡಿದ್ದಾರೆ. ನಟ ಶ್ರೀಮುರಳಿ ತಮ್ಮ ಮುಂದಿನ ಚಿತ್ರ ಮದಗಜ ಸ್ಕ್ರಿಪ್ಟ್‌ ಅನ್ನು ಹಬ್ಬದ ದಿನವೇ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿಟ್ಟು ಪೂಜೆ ಸಲ್ಲಿಸಿದ್ದಾರೆ. ಇಡೀ ಚಿತ್ರತಂಡ ಮುರಳಿ ಜತೆ ತಾಯಿ ಚಾಮುಂಡಿ ಸನ್ನಿಧಿಯಲ್ಲೇ ಸುಗ್ಗಿ ಹಬ್ಬವನ್ನು ಆಚರಿಸಿದೆ. 'ಸದ್ಯದಲ್ಲೇ ಮದಗಜ ಚಿತ್ರದ ಶೂಟಿಂಗ್‌ ಪ್ರಾರಂಭಿಸಲಿದ್ದೇವೆ. ಸಂಕ್ರಾಂತಿ ಹಬ್ಬದಂದು ಅಮ್ಮನ ಸನ್ನಿಧಿಯಲ್ಲಿ ಚಿತ್ರದ ಕೆಲಸ ಪ್ರಾರಂಭ ಆಗಬೇಕು ಎಂದು ಬಯಸಿದ್ದೆವು. ಅದರಂತೆ ಸ್ಕ್ರಿಪ್ಟ್‌ ಮತ್ತು ಹಾಡುಗಳ ಸಾಹಿತ್ಯ ಸಿದ್ಧವಾಗಿದ್ದು, ಇಂದು ಪೂಜೆ ಸಲ್ಲಿಸಿದೆವು. ಇದು ಸಂತಸ ನೀಡಿದೆ' ಎಂದು ಶ್ರೀಮುರಳಿ ತಿಳಿಸಿದ್ದಾರೆ.

ಕನ್ನಡ, ತೆಲುಗಿನಲ್ಲಿ ರಶ್ಮಿಕಾ ಹಾರೈಕೆ

ನಟಿ ರಶ್ಮಿಕಾ ಮಂದಣ್ಣ ಟ್ವಿಟ್ಟರ್‌ನಲ್ಲಿ ಎಲ್ಲರಿಗೆ ಶುಭ ಹಾರೈಸಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳೆರಡರಲ್ಲೂ ಕನ್ನಡಿಗರು ಮತ್ತು ತೆಲುಗಿನವರಿಗೆ ಸಂಕ್ರಾಂತಿ ಶುಭಾಶಯಗಳನ್ನು ತಿಳಿಸಿದ್ದಾರೆ. 'ಈ ಹಬ್ಬವು ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಹೆಚ್ಚು ಅಭಿವೃದ್ಧಿ ನೀಡಲಿ..' ಎಂದು ಹೇಳಿದ್ದಾರೆ. ಸದ್ಯಕ್ಕೆ ಚೆನ್ನೈನಲ್ಲಿ ಶೂಟಿಂಗ್‌ನಲ್ಲಿರುವ ರಶ್ಮಿಕಾ ಅಲ್ಲೇ ತಮ್ಮ ತಾಯಿಯ ಜತೆ ಎಳ್ಳುಬೆಲ್ಲ ಬೀರಿ ಸಂಭ್ರಮಿಸಿದ್ದಾರೆ.

ಬಾಗಿನ ಕೊಟ್ಟ ಮಯೂರಿ

ನಟಿ ಮಯೂರಿ ವಿಶೇಷವಾಗಿ ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಮನೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಅಮ್ಮನೊಂದಿಗೆ ಆಚರಿಸಿದ್ದಾರೆ. 'ಸಂಕ್ರಾಂತಿಯನ್ನು ನಾವು ಸ್ವಲ್ಪ ವಿಶೇಷವಾಗಿ ಆಚರಿಸುತ್ತೇವೆ. ಮನೆಗೆ ಸ್ನೇಹಿತರನ್ನು ಕರೆದು ಎಳ್ಳುಬೆಲ್ಲ ಕೊಟ್ಟು, ಬಾಗಿನ ಅರ್ಪಿಸುತ್ತೇವೆ. ಈ ಸಂಕ್ರಾಂತಿಯಲ್ಲೂ ಮನೆಯಲ್ಲಿ ಎಲ್ಲರೂ ಸೇರಿ ಸಂಭ್ರಮದಿಂದ ಆಚರಿಸಿದೆವು' ಎಂದು ತಿಳಿಸಿದ್ದಾರೆ.

ಹಾಲಿನಂತೆ ಆನಂದ ಉಕ್ಕಿ ಚೆಲ್ಲಲಿ ಎಂದ ರಮೇಶ್‌


ನಿರ್ದೇಶಕ ರಮೇಶ್‌ ಅರವಿಂದ್‌ ಗಂಗೆಯಲ್ಲಿ ಸ್ನಾನ ಮಾಡಿದ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ. 'ಹಾಲಿನಂತೆ ಆನಂದವು ಉಕ್ಕಿ ಚೆಲ್ಲಲಿ. ಮಕರ ಸಂಕ್ರಾಂತಿಯ ಶುಭಾಶಯಗಳು. ಗಂಗಾತೀರದ ಈ ದೃಶ್ಯ ನೆನಪಾಯಿತು' ಎಂದು ಹಳೆಯ ನೆನಪನ್ನು ಮೆಲಕು ಹಾಕಿದ್ದಾರೆ. ರಮೇಶ್‌ ಬೆಂಗಳೂರಿನ ತಮ್ಮ ನಿವಾಸದಲ್ಲೇ ಫ್ಯಾಮಿಲಿ ಜತೆ ಸಂಕ್ರಾಂತಿ ಆಚರಿಸಿದ್ದಾರೆ.

ಎತ್ತಿನ ಜತೆ ದರ್ಶನ್‌

ದರ್ಶನ್‌ ಸಂಕ್ರಾಂತಿಯನ್ನು ಪ್ರತಿ ವರ್ಷ ವಿಶೇಷವಾಗಿ ಆಚರಿಸುತ್ತಾರೆ. ಮೈಸೂರಿನಲ್ಲಿರುವ ತಮ್ಮ ತೋಟದಲ್ಲಿ ತಾವು ಸಾಕಿರುವ ಎತ್ತು, ಹಸುಗಳನ್ನು ಪೂಜಿಸಿ ಕೆಂಡವನ್ನು ಹಾಯಿಸಿದ್ದಾರೆ. ಸಂಪ್ರದಾಯದ ಆಚರಣೆಯನ್ನು ತಪ್ಪದೆ ಪಾಲಿಸುತ್ತಾರೆ. ಅದರಂತೆ ಎತ್ತಿಗೆ ಪೂಜೆ ಮಾಡುತ್ತಿರುವ, ಹೊಸ ಚಿತ್ರ ಯಜಮಾನದ ಪೋಸ್ಟರ್‌ ಹಾಕಿ ಎಲ್ಲರಿಗೆ ಸಂಕ್ರಾಂತಿಗೆ ಶುಭ ಹಾರೈಸಿದ್ದಾರೆ. 'ಎಳ್ಳು ಬೆಲ್ಲ ಸವಿಯುತ್ತಾ ಒಳ್ಳೆ ಮಾತಾಡಿ. ನಿಮಗೂ ನಿಮ್ಮ ಕುಟುಂಬದವರಿಗೂ ನನ್ನ ಯಜಮಾನ ಚಿತ್ರದ ಮೊದಲ ಹಾಡು 'ಶಿವನಂದಿ' ನಿಮ್ಮ ಮುಂದೆ. ಕೇಳಿ ಆನಂದಿಸಿ' ಎಂದು ಬರೆದಿದ್ದಾರೆ.

ಹಾಲು ಉಕ್ಕಿಸಿದ ನಿರ್ದೇಶಕ ಶೇಖರ್‌

ಇನ್ನು ನಿರ್ದೇಶಕ ಪಿ.ಸಿ. ಶೇಖರ್‌ ಕೂಡ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಿದ್ದಾರೆ. ತಮ್ಮ ಮನೆಯ ಟೆರೇಸ್‌ನಲ್ಲಿ ಸಂಪ್ರದಾಯದಂತೆ ಕಬ್ಬಿನ ಜಲ್ಲೆಯನ್ನು ಇಟ್ಟು, ಸೌದೆ ಒಲೆ ಹಚ್ಚಿ ಹಾಲು ಉಕ್ಕಿಸಿ ಮಕರ ಸಂಕ್ರಾಂತಿಯನ್ನು ಆಚರಿಸಿದ್ದಾರೆ. ಪ್ರಜ್ವಲ್‌ ನಟನೆಯ ಹೊಸ ಚಿತ್ರ ನಿರ್ದೇಶನಕ್ಕೆ ಸಿದ್ಧರಾಗಿರುವ ಅವರು, 'ಹೊಸ ಚಿತ್ರ ಪ್ರಾರಂಭಿಸಲು ಸಜ್ಜಾಗಿದ್ದೇವೆ. ಹಾಗಾಗಿ ಈ ಸಂಕ್ರಾಂತಿ ನಮಗೆಲ್ಲ ವಿಶೇಷ. ಈಗಾಗಲೇ ಸ್ಕ್ರಿಪ್ಟ್‌ ಸಿದ್ಧವಾಗಿದೆ. ಸದ್ಯದಲ್ಲೇ ಚಿತ್ರ ಸೆಟ್ಟೇರಲಿದೆ' ಎಂದು ಶೇಖರ್‌ ತಿಳಿಸಿದ್ದಾರೆ.

ಸುದೀಪ್‌ ಹಾರೈಕೆ

ನಟ ಸುದೀಪ್‌ ಸಂಕ್ರಾಂತಿ ಹಬ್ಬಕ್ಕೆ ನಾಡಿನ ಎಲ್ಲರಿಗೂ ಶುಭ ಹಾರೈಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು 'ನಾಡಿನ ಸ್ನೇಹಿತರಿಗೂ ಹಾಗೂ ನಿಮ್ಮ ಕುಟುಂಬದವರಿಗೂ ಈ ನಿಮ್ಮ ಪ್ರೀತಿಯ ಕಿಚ್ಚನಿಂದ 'ಸಂಕ್ರಾಂತಿ ಹಬ್ಬ'ದ ಶುಭಾಶಯಗಳು. ಈ ಸಂಕ್ರಾಂತಿ ಹಬ್ಬದಂದು ನಿಮ್ಮ ಆಸೆಗಳೆಲ್ಲ ಉಕ್ಕಿ ಹರಿಯಲಿ' ಎಂದು ಶುಭ ಹಾರೈಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌