ಆ್ಯಪ್ನಗರ

ವೈದ್ಯಲೋಕದ ವಿಸ್ಮಯ ತೆರೆದಿಡುವ ಸಂಕಷ್ಟಕರ ಗಣಪತಿ

'ಸಂಕಷ್ಟಕರ ಗಣಪತಿ' ಸಿನಿಮಾದಲ್ಲಿ ವೈದ್ಯಲೋಕದ ಕೆಲ ವಿಸ್ಮಯಗಳನ್ನು ತೆರೆದಿಟ್ಟಿದ್ದಾರಂತೆ ನಿರ್ದೇಶಕ ಅರ್ಜುನ್‌ ಕುಮಾರ್‌. ಆ ಕೌತುಕದ ಅಂಶಗಳನ್ನು ಹುಡುಕುವುದಕ್ಕಾಗಿ ಅವರು ಹರಸಾಹಸ ಮಾಡಿದ್ದಾರೆ.

Vijaya Karnataka 23 Jul 2018, 11:46 am
*ಶರಣು ಹುಲ್ಲೂರು
Vijaya Karnataka Web sankastakara


ಕನ್ನಡದಲ್ಲಿ ಮೊದಲ ಬಾರಿಗೆ ಏಲಿಯನ್‌ ಹ್ಯಾಂಡ್‌ ಸಿಂಡ್ರೋಮ್‌ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುವ ವ್ಯಕ್ತಿಯೊಬ್ಬನ ಸ್ಟೋರಿಯನ್ನು ಸಿನಿಮಾ ಮಾಡಲಾಗಿದ್ದು, ಈ ರೋಗವನ್ನು ಸಿನಿಮಾ ಚೌಕಟ್ಟಿಗೆ ತರಲು ತುಂಬಾ ಕಷ್ಟಪಟ್ಟಿದ್ದೇನೆಂದು ಹೇಳಿದ್ದಾರೆ ನಿರ್ದೇಶಕ ಅರ್ಜುನ್‌ ಕುಮಾರ್‌.

'ಇಂಥದ್ದೊಂದು ಕಾಯಿಲೆಯಿದೆ ಎಂದು ಗೊತ್ತಾದಾಗ ಸ್ವತಃ ನಾನೂ ಅಚ್ಚರಿಪಟ್ಟೆ. ಕುತೂಹಲಕ್ಕಾಗಿ ಈ ಕುರಿತು ತಡಕಾಡಿದೆ. ಓದಿದೆ ಆ ಬಗ್ಗೆ. ಇದನ್ನು ಸಿನಿಮಾ ರೂಪದಲ್ಲಿ ತೋರಿಸಬೇಕು ಎಂಬ ಆಸಕ್ತಿ ನನ್ನಲ್ಲಿ ಬೆಳೆಯಿತು. ಹಾಗಾಗಿ ಬೇರೆ ಬೇರೆ ಆಯಾಮಗಳಲ್ಲಿ ಶೋಧನೆಗೆ ಮುಂದಾದೆ. ವೈದ್ಯಲೋಕದ ಹಲವು ವೆಬ್‌ಗಳಲ್ಲಿ ಮೊರೆ ಹೋದೆ. ಈ ವಿಷಯದ ಬಗ್ಗೆ ಸಿನಿಮಾ ಏನಾದರೂ ಬಂದಿದೆಯಾ ಎಂದು ತಿಳಿದುಕೊಳ್ಳಲು ಯತ್ನಿಸಿದೆ. ಹಾಲಿವುಡ್‌, ಅರೇಬಿಕ್‌ ಸೇರಿ ಹಲವು ಭಾಷೆಗಳ ಸಿನಿಮಾಗಳನ್ನು ನೋಡಿದೆ. ತೆಲುಗಿನ ಒಂದು ಕಿರುಚಿತ್ರ ಮತ್ತು ಬಿಬಿಸಿಯಲ್ಲಿ ಪ್ರಸಾರವಾದ ಸಾಕ್ಷ್ಯಚಿತ್ರವೊಂದು ಈ ಚಿತ್ರದ ಕಥೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಸಹಾಯಕ್ಕೆ ಬಂತು' ಎಂದು ಹೇಳಿದ್ದಾರೆ ಅವರು.

ಈ ಸಿನಿಮಾದ ಕಥೆಯೇ ಹೊಸ ರೀತಿಯದ್ದಾಗಿದೆ. ಹಾಗಾಗಿ ಸಿದ್ಧ ಮಾದರಿಯ ಚಿತ್ರಕಥೆ ಇಲ್ಲಿಲ್ಲ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಕಥಾ ನಾಯಕನಿಗೆ ಖಳನಾಯಕ ಎದುರಾಗಿ ನಿಲ್ಲುವುದು ವಾಡಿಕೆ. ಈ ಸಿನಿಮಾದಲ್ಲಿ ನಾಯಕನ ಒಂದು ಕೈ ಅವನಿಗೆ ವಿಲನ್‌. ಅದಕ್ಕಾಗಿಯೇ ಚಿತ್ರಕ್ಕೆ 'ಸಂಕಷ್ಟಕರ ಗಣಪತಿ' ಎಂದು ಹೆಸರಿಟ್ಟಿದ್ದೇನೆಂದು ಅವರು ತಿಳಿಸಿದ್ದಾರೆ.

'ಗಂಭೀರ ಕಾಯಿಲೆಯ ಕುರಿತು ಸಿನಿಮಾ ರೂಪದಲ್ಲಿ ಹೇಳುವುದು ಸುಲಭವಲ್ಲ, ಹಾಗಾಗಿ ಹಲವು ತಂತ್ರಗಳನ್ನು ಚಿತ್ರಕಥೆಯಲ್ಲಿ ಬಳಸಿಕೊಳ್ಳಲಾಗಿದೆ. ರೊಮ್ಯಾಂಟಿಕ್‌ ಮತ್ತು ಕಾಮಿಡಿ ಅಂಶಗಳನ್ನು ಕೂಡ ಬೆರೆಸಿದ್ದೇವೆ. ಹಾಗಾಗಿ ಎಲ್ಲಿಯೂ ಬೋರ್‌ ಹೊಡೆಸುವುದಿಲ್ಲ ಸಿನಿಮಾ. ನಗಿಸುತ್ತಲೇ ಗಂಭೀರ ವಿಷಯವನ್ನು ಹೇಳುತ್ತದೆ' ಎಂದು ಅರ್ಜುನ್‌ ತಿಳಿಸಿದ್ದಾರೆ.

ಕಥೆ ಮತ್ತು ತಾಂತ್ರಿಕ ಕೆಲಸಗಳ ಸಮ್ಮಿಲನ ಈ ಸಿನಿಮಾ. ಹಿನ್ನೆಲೆ ಸಂಗೀತ ಕೂಡ ಚಿತ್ರಕ್ಕೆ ಪ್ಲಸ್‌ ಪಾಯಿಂಟ್‌. ಹಾಗಾಗಿ ತುಂಬಾ ಟೈಮ್‌ ತಗೆದುಕೊಂಡು ಹಿನ್ನೆಲೆ ಸಂಗೀತ ನೀಡಿದ್ದಾರಂತೆ ರಿತ್ವಿಕ್‌ ಮುರಳೀಧರ್‌. ಲಿಖಿತ್‌ ನಾಯಕನಾಗಿ ಕಾಣಿಸಿಕೊಂಡಿದ್ದು, ಪಾತ್ರಕ್ಕಾಗಿ ಸಾಕಷ್ಟು ತಯಾರಿ ಕೂಡ ಮಾಡಿಕೊಂಡಿದ್ದಾರಂತೆ.

ವೈದ್ಯಕೀಯ ಲೋಕದ ಹಲವು ವಿಸ್ಮಯಗಳು ಸಿನಿಮಾದಲ್ಲಿವೆ. ಗಂಭೀರವಾದ ಸಮಸ್ಯೆಯೊಂದನ್ನು ಕಾಮಿಡಿ ರೂಪದಲ್ಲಿ ಹೇಳಿದ್ದೇವೆ. ಹಾಗಾಗಿ ಪ್ರೇಕ್ಷಕನಿಗೆ ಈ ಸಿನಿಮಾ ಹೊಸ ರೀತಿಯಲ್ಲಿ ಕಾಣಿಸಿಕೊಳ್ಳಲಿದೆ.
ಅರ್ಜುನ್‌ ಕುಮಾರ್‌, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌