ಟಗರು ಚಿತ್ರದ ನಂತರ ಸೂರಿ ನಿರ್ದೇಶನದಲ್ಲಿ ಬರುತ್ತಿರುವ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾದ ಮೂವರು ನಾಯಕಿಯರಲ್ಲಿ ಒಬ್ಬರಾಗಿ ಸಪ್ತಮಿ ಆಯ್ಕೆಯಾಗಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ದಕ್ಷ ಅಧಿಕಾರಿ ಎಂದೇ ಹೆಸರು ಮಾಡಿರುವ ಉಮೇಶ್ ಅವರ ಪುತ್ರಿಯಾಗಿರುವ ಸಪ್ತಮಿಗೆ ಇದು ಮೊದಲ ಚಿತ್ರವಾಗಿದೆ. ಸಿವಿಲ್ ಎಂಜಿನಿಯರಿಂಗ್ ಮುಗಿಸಿರುವ ಸಪ್ತಮಿ, ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ.
'ಸೂರಿಯವರು ಮತ್ತು ನಮ್ಮ ತಂದೆ ಇಬ್ಬರೂ ಸ್ನೇಹಿತರು, ಆಗಾಗ ನಮ್ಮ ಮನೆಗೆ ಬರುತ್ತಿರುತ್ತಾರೆ. ಹೀಗೆ ಒಮ್ಮೆ ಬಂದಾಗ ಹೊಸ ಚಿತ್ರದಲ್ಲಿ ಗಿರಿಜಾ ಎನ್ನುವ ಕ್ಯಾರೆಕ್ಟರ್ ಇದೆ ಇದೆ ಮಾಡುತ್ತೀರಾ ಎಂದರು. ನನಗೆ ಸಂತೋಷ ಆಶ್ಚರ್ಯ ಎರಡೂ ಒಟ್ಟಿಗೆ ಆಯಿತು ಎನ್ನುತ್ತಾರೆ ಸಪ್ತಮಿ .
'ನಾನು ಎಂದಿಗೂ ನಟಿಯಾಗುತ್ತೇನೆ ಎಂದುಕೊಂಡವಳಲ್ಲ. ಸೂರಿಯವರಂಥಹ ನಿರ್ದೇಶಕರ ಸಿನಿಮಾದ ಮೂಲಕ ಈ ಕ್ಷೇತ್ರಕ್ಕೆ ಬರುತ್ತಿರುವುದು ಖುಷಿಯ ವಿಚಾರ. ಜಿಮ್, ಸ್ವಿಮ್ಮಿಂಗ್ ಮಾಡಿಕೊಂಡು ಬಂದಿರುವ ಕಾರಣ ಫಿಟ್ ಆಗಿದ್ದೇನೆ. ನನಗೂ ಆ ಪಾತ್ರದ ಬಗ್ಗೆ ಕುತೂಹಲ ಇದೆ. ಇನ್ನು ಧನಂಜಯ ಅತ್ಯುತ್ತಮ ನಟರು ಎಂಬುದು ಈಗಾಗಲೇ ಪ್ರೂವ್ ಆಗಿದೆ. ಅವರ ಜತೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿರುವುದರಿಂದ ಖುಷಿಯಲ್ಲಿದ್ದೇನೆ. ನನ್ನ ತಂದೆ ಮತ್ತು ಮನೆಯವರ ಪ್ರೋತ್ಸಾಹ ನನಗೆ ಬಹಳಷ್ಟಿದೆ. ಶೂಟಿಂಗ್ ಬಗ್ಗೆ ನಮ್ಮ ಮನೆಯವರೂ ಸಹ ಸಾಕಷ್ಟು ಕುತೂಹಲದಿಂದ ಕಾಯುತ್ತಿದ್ದಾರೆ,'ಅಂತಾರೆ ಸಪ್ತಮಿ.
ಪಾಪ್ಕಾರ್ನ್ ಮಂಕಿ ಟೈಗರ್ ನನಗೆ ಗೋಲ್ಡನ್ ಆಪರ್ಚುನಟಿ,ನಮ್ಮ ತಂದೆ ಕೂಡಾ ಈ ಅವಕಾಶ ಮಿಸ್ ಮಾಡಿಕೊಳ್ಳಬೇಡ ಎಂದು ಹೇಳಿದರು ಹಾಗಾಗಿ ಒಪ್ಪಿಕೊಂಡೆ.
-ಸಪ್ತಮಿ, ನಟಿ