ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂದು ಸದಾ ಹಂಬಲಿಸುವ ಶಿವರಾಜ್ಕುಮಾರ್, 'ಬಂಗಾರ, ಸನ್ ಆಫ್ ಬಂಗಾರದ ಮನುಷ್ಯ' ಚಿತ್ರದಲ್ಲಿಯೂ ಅದನ್ನು ಮುಂದುವರಿಸಿದ್ದಾರೆ. ಯೋಗಿ ಜಿ. ರಾಜ್ ನಿರ್ದೇಶನದ ಈ ಸಿನಿಮಾದಲ್ಲಿ ರೈತರ ನೋವಿಗೆ ಸ್ಪಂದಿಸುವ ಎನ್ನಾರೈ ಪಾತ್ರದಲ್ಲಿ ಅವರು ನಟಿಸಿದ್ದಾರೆ.
ಈ ಚಿತ್ರದಲ್ಲಿ ವಿದೇಶದಿಂದ ಭಾರತಕ್ಕೆ ಬರುವ ಶಿವರಾಜ್ಕುಮಾರ್, ಇಲ್ಲಿನ ರೈತರ ಕಷ್ಟ ನೋಡಿ ರೆವಲ್ಯೂಷನರಿಯಾಗಿ ಅನ್ನದಾತನ ಸಹಾಯಕ್ಕೆ ನಿಲ್ಲುತ್ತಾರಂತೆ. ಇದೊಂದು ರೈತಪರ ಚಿತ್ರ ಎನ್ನುವ ನಿರ್ದೇಶಕ, 'ರೈತಪರ ಎಂದಾಕ್ಷಣ ಇಲ್ಲಿ ಶಿವರಾಜ್ಕುಮಾರ್ ಅವರದ್ದು ರೈತನ ಪಾತ್ರವಲ್ಲ. ಬದಲಿಗೆ ಅನ್ನದಾತ ಸದ್ಯದ ಪರಿಸ್ಥಿತಿಯಲ್ಲಿ ಅನುಭವಿಸುತ್ತಿರುವ ಕಷ್ಟಕ್ಕೆ ಸ್ಪಂದಿಸಿ ಸರಕಾರದ ವಿರುದ್ಧ ಸಿಡಿದೇಳುವ ಕ್ಯಾರೆಕ್ಟರ್. ಇನ್ನು ಶಿವರಾಜ್ಕುಮಾರ್ ಇದುವರೆಗೂ ನಿರ್ವಹಿಸದ ಪಾತ್ರ ಇದಾಗಿದೆ' ಎನ್ನುತ್ತಾರೆ.
ಡಾ. ರಾಜ್ಕುಮಾರ್ ಅಭಿನಯದ ಬಂಗಾರದ ಮನುಷ್ಯ ಸಿನಿಮಾಗೂ, ಈ ಚಿತ್ರಕ್ಕೂ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ ಎಂದು ಹೇಳುವ ಯೋಗಿ, ಶಿವರಾತ್ರಿಯಂದು ಸಿನಿಮಾದ ಟೀಸರ್ ಬಿಡುಗಡೆ ಮಾಡುತ್ತಾರಂತೆ.