ಆ್ಯಪ್ನಗರ

ವಿಕ ಓದುಗರ ಪ್ರೀತಿಗೆ ವಿಸ್ಮಿತರಾದ ನಿಖಿಲ್‌ ಕುಮಾರ್‌

ನಿಖಿಲ್‌ಕುಮಾರ್‌ ನಟನೆಯ ಸೀತಾರಾಮ ಕಲ್ಯಾಣ ಸಿನಿಮಾದ ವಿಶೇಷ ಪ್ರದರ್ಶನ ಸೋಮವಾರ ನಡೆಯಿತು. ಹೌಸ್‌ಫುಲ್‌ ಪ್ರದರ್ಶನ ಕಂಡ ಈ ಶೋದಲ್ಲಿ ಜನ ಸಿನಿಮಾ ನೋಡಿ ಮೆಚ್ಚಿಕೊಂಡರು.

Vijaya Karnataka 30 Jan 2019, 7:42 am
ಸೋಮವಾರ ಸಂಜೆ ವಿಜಯ ಕರ್ನಾಟಕದ ಕಚೇರಿ ಪಕ್ಕದಲ್ಲಿರುವ ಕಲಾವಿದರ ಸಂಘದ ಕಟ್ಟಡದ ಮುಂಭಾಗ ಅಕ್ಷರಶಃ ಸಿನಿಮಾ ಜಾತ್ರೆಯೇ ಸೇರಿತ್ತು. ವಿಶೇಷ ಪಾಸ್‌ ಗಳಿಸಿದ ಅದೃಷ್ಟಕ್ಕೆ ಪಾತ್ರರಾಗಿದ್ದ ವಿಕ- ಲವಲವಿಕೆ ಓದುಗರಿಗಾಗಿ ಏರ್ಪಡಿಸಲಾಗಿದ್ದ ಸೀತಾರಾಮ ಕಲ್ಯಾಣ ಸಿನಿಮಾದ ವಿಶೇಷ ಪ್ರದರ್ಶನದಲ್ಲಿ ಕಂಡುಬಂದ ದೃಶ್ಯವಿದು. ಕಳೆದ ವಾರ ಬಿಡುಗಡೆಯಾಗಿದ್ದ ಈ ಸಿನಿಮಾ ಒಂದು ಕಂಪ್ಲೀಟ್‌ ಫ್ಯಾಮಿಲಿ ಎಂಟರ್‌ಟೇನರ್‌ ಎಂಬ ಅಭಿಪ್ರಾಯ ಓದುಗರಿಂದ ವ್ಯಕ್ತವಾಯಿತು.
Vijaya Karnataka Web Nikhil


ಇನ್ನು ಥಿಯೇಟರ್‌ನ ಎಲ್ಲ ಕುರ್ಚಿಗಳು ತುಂಬಿದ್ದವು. ಓದುಗರು ಮೆಟ್ಟಿಲುಗಳ ಮೇಲೆ ಕುಳಿತುಕೊಂಡೇ ಸಿನಿಮಾ ವೀಕ್ಷಿಸಿ ಖುಷಿಪಟ್ಟರು. ಸಿನಿಮಾ ಮುಗಿಯುವ ಹೊತ್ತಿಗೆ ಥಿಯೇಟರ್‌ಗೆ ಬಂದ ನಾಯಕ ನಿಖಿಲ್‌ಕುಮಾರ್‌, ನೆರೆದಿದ್ದ ಜನರನ್ನು ನೋಡಿದ ಖುಷಿ ಪಟ್ಟರು.

'ನನ್ನ ಸಿನಿಮಾವನ್ನು ಈ ಪ್ರಮಾಣದಲ್ಲಿ ಪ್ರೀತಿಸಿದ್ದಕ್ಕೆ ಧನ್ಯವಾದಗಳು. ನಾನು ಇಷ್ಟೊಂದು ಓದುಗರು ಸೇರಿರುತ್ತಾರೆ ಎಂದುಕೊಂಡಿರಲಿಲ್ಲ. ಈಗಾಗಲೇ ಎಲ್ಲ ಕಡೆಯೂ ಪ್ರೇಕ್ಷಕರು ಪ್ರೀತಿಯಿಂದ ಈ ಸಿನಿಮಾ ನೋಡುತ್ತಿದ್ದಾರೆ. ನಾನು ಮತ್ತು ನನ್ನ ತಂಡದ ಶ್ರಮಕ್ಕೆ ಜನ ಒಳ್ಳೆಯ ಪ್ರತಫಲ ನೀಡುತ್ತಿದ್ದಾರೆ. ಅಲ್ಲದೇ ಓದುಗರಿಗೆ ಸಿನಿಮಾದ ಪ್ರದರ್ಶನ ಏರ್ಪಡಿಸಿದ ವಿಕ ಬಳಗಕ್ಕೆ ವಿಶೇಷ ಧನ್ಯವಾದಗಳು ಎಂದರು. ಅದೇ ಸಮಯದಲ್ಲಿ ಒಂದಷ್ಟು ಮಂದಿ ರಾಜಕೀಯಕ್ಕೆ ಯಾವಾಗ ಬರುತ್ತೀರಾ ಎಂದು ಪ್ರಶ್ನಿಸಿದರು. ತಕ್ಷಣ ಉತ್ತರಿಸಿದ ನಿಖಿಲ್‌ 'ಇದು ರಾಜಕೀಯದ ವೇದಿಕೆಯಲ್ಲ. ಸಿನಿಮಾ ಬಗ್ಗೆ ಮಾತ್ರ ಮಾತಾಡೋಣ ಎಂದರು.

ದೂರದ ಆನೇಕಲ್‌ನಿಂದ ಬಂದಿದ್ದ ಕವನಾ ಎಂಬ ಯುವತಿ ಸಿನಿಮಾದಲ್ಲಿ ರೈತರಿಗಾಗಿ ಅಣೆಕಟ್ಟು ಕಟ್ಟುವ ಯೋಜನೆ ಬಹಳ ಚೆನ್ನಾಗಿದೆ. ಅದನ್ನು ಕಂಪ್ಲೀಟ್‌ ಮಾಡುವ ದೃಶ್ಯದ ಅವಶ್ಯಕತೆ ಇತ್ತು ಎಂದು ಹೇಳಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ನಿಖಿಲ್‌, ಆ ಬಗ್ಗೆ ನನಗೆ ಸಾಕಷ್ಟು ಮಂದಿ ಹೇಳಿದ್ದಾರೆ. ಕ್ಷಮೆ ಇರಲಿ ಎಂದರು. ಪೀಣ್ಯಾದಿಂದ ಬಂದಿದ್ದ ಶೈಲಾ ಎಂಬುವವರು ನಿಮ್ಮ ಕುಟುಂಬದಲ್ಲಿ ಯಾರೂ ಸಿನಿಮಾರಂಗದಲ್ಲಿ ಇಲ್ಲ. ಆದರೂ ಇಷ್ಟು ಚೆನ್ನಾಗಿ ನಟಿಸುತ್ತಿದ್ದೀರಾ, ಒಳ್ಳೆ ಸಿನಿಮಾ ಮಾಡಿದ್ದೀರಿ, ಇದು ಹೇಗೆ ಎಂದು ಪ್ರಶ್ನಿಸಿದರು.

'ನಾನು ನಟನಾಗಬೇಕು ಎಂದು ನಿರ್ಧಾರ ಮಾಡಿಕೊಂಡೇ ಈ ಕ್ಷೇತ್ರಕ್ಕೆ ಬಂದಿದ್ದೇನೆ. ಅಲ್ಲದೆ ನಮ್ಮ ತಂದೆಯವರು ರಾಜಕೀಯಕ್ಕೆ ಬರುವ ಮೊದಲು ನಿರ್ಮಾಪಕ ಮತ್ತು ವಿತರಕರಾಗಿದ್ದವರು. ಆ ಸೆಳೆತ ನನ್ನಲ್ಲಿದೆ. ಹಾಗಾಗಿ ಇದೆಲ್ಲವೂ ಸಾಧ್ಯವಾಯಿತು ಎಂದು ಉತ್ತರ ನೀಡಿದರು.

ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರೇಕ್ಷಕರೊಂದಿಗೆ ನಿಖಿಲ್‌ಕುಮಾರ್‌ ಸಂವಾದ ನಡೆಸಿದರು. ತದ ನಂತರ ಜನ ತಾ ಮುಂದು ನಾ ಮುಂದೆ ಎಂದು ನಿಖಿಲ್‌ ಅವರ ಜತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.

ಓದುಗರ ಜತೆ ಸಿನಿಮಾ ನೋಡುವ ಸೌಭಾಗ್ಯ ಕಲ್ಪಿಸಿದ ವಿಜಯ ಕರ್ನಾಟಕ ಮತ್ತು ಲವಲವಿಕೆ ಬಳಗಕ್ಕೆ ಧನ್ಯವಾದ. ಜನ ನೀಡುತ್ತಿರುವ ಪ್ರೀತಿಯನ್ನು ನಾನು ಎಂಜಾಯ್‌ ಮಾಡುತ್ತಿದ್ದೇನೆ. ಪತ್ರಿಕೆಯ ಓದುಗರನ್ನು ಕಂಡು ವಿಸ್ಮಿತನಾಗಿದ್ದೇನೆ-ನಿಖಿಲ್‌ಕುಮಾರ್‌, ನಟ

ಅಂಬಿಗೆ ನಮಿಸಿದ ನಿಖಿಲ್‌

ಸಂವಾದ ಕಾರ್ಯಕ್ರಮಕ್ಕೂ ಮುನ್ನ ಕಲಾವಿದರ ಸಂಘದ ಕಟ್ಟಡದಲ್ಲಿ ಇದ್ದ ಹಿರಿಯ ನಟ ಅಂಬರೀಷ್‌ ಅವರ ಫೋಟೋಗೆ ನಿಖಿಲ್‌ಕುಮಾರ್‌ ಪುಷ್ಪ ನಮನ ಸಲ್ಲಿಸಿದರು. ಈ ಸಮಯದಲ್ಲಿ ಅಂಬರೀಷ್‌ ಅವರು ಈ ಕಲಾವಿದರ ಸಂಘದ ಕಟ್ಟಡದ ಮೇಲೆ ಬಹಳ ಸೆಂಟಿಮೆಂಟ್‌ ಇಟ್ಟುಕೊಂಡಿದ್ದರು. ಇದು ಬಹಳ ಉಪಯೋಗವಾದ ಕಟ್ಟಡ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌