ಆ್ಯಪ್ನಗರ

ವರ್ಮ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸ್ತಾರಾ ಸುದೀಪ್‌?

ಹಿಂದೆ ರಾಮ್‌ಗೋಪಾಲ್‌ ವರ್ಮ ಚಿತ್ರಗಳಲ್ಲಿ ನಟಿಸಿದ್ದ ಕಿಚ್ಚ ಸುದೀಪ್‌ ಮತ್ತೆ ಅವರ ಜತೆ ಸಿನಿಮಾ ಮಾಡ್ತಾರಾ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ...

Vijaya Karnataka 10 Apr 2019, 12:44 pm
ರಾಮ್‌ಗೋಪಾಲ್‌ ವರ್ಮ ನಿರ್ದೇಶನದ ಮೂರು ಚಿತ್ರಗಳಲ್ಲಿ ಈಗಾಗಲೇ ನಟಿಸಿರುವ ನಟ ಸುದೀಪ್‌ ಮತ್ತೆ ವರ್ಮ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಾರಾ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
Vijaya Karnataka Web Missing Boy_(181)


ಭಾನುವಾರ ಹುಟ್ಟುಹಬ್ಬ ಆಚರಿಸಿಕೊಂಡ ವರ್ಮ ಅವರಿಗೆ ವಿಶ್‌ ಮಾಡಿದ್ದ ಸುದೀಪ್‌, ಸದ್ಯದಲ್ಲೇ ವರ್ಮ ಅವರನ್ನು ಭೇಟಿ ಆಗಲಿರುವುದಾಗಿ ಟ್ವೀಟ್‌ ಮಾಡಿದ್ದರು. ಇದರ ಬೆನ್ನಲ್ಲೇ ವರ್ಮ ನಿರ್ದೇಶನದ ಹೊಸ ಚಿತ್ರದ ಪೋಸ್ಟರ್‌ ರಿಲೀಸ್‌ ಆಗಿದೆ. ಕೋಬ್ರಾ ಹೆಸರಿನ ಚಿತ್ರದಲ್ಲಿ ಭೂಗತ ಜಗತ್ತಿನ ನಟೋರಿಯಸ್‌ ಡಾನ್‌ಗಳ ಕಥೆ ಇದೆ ಎಂದು ಗೊತ್ತಾಗಿದೆ. ಈ ಚಿತ್ರದಲ್ಲಿ ಸ್ವತಃ ವರ್ಮ ಮೊದಲ ಬಾರಿಗೆ ಬಣ್ಣ ಹಚ್ಚಲಿದ್ದಾರೆ. ಇಂಟೆಲಿಜೆನ್ಸ್‌ ಆಫೀಸರ್‌ ಪಾತ್ರದಲ್ಲಿ ಅವರು ನಟಿಸಲಿದ್ದು, ಈ ಚಿತ್ರದ ಪೋಸ್ಟರ್‌ ರಿಲೀಸ್‌ ಮಾಡಿದ್ದಾರೆ. ಇದರಲ್ಲಿ ಆರ್‌ಜಿವಿ ಲುಕ್‌ಗೆ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಕೂಡ ಫಿದಾ ಆಗಿದ್ದಾರೆ. ನನಗೊಬ್ಬ ಸ್ಪರ್ಧಿ ಹುಟ್ಟಿಕೊಂಡ ಎಂದು ಬಿಗ್‌ಬಿ ಅವರು ವರ್ಮ ಕಾಲೆಳೆದಿದ್ದಾರೆ.

'ಫೈನಲೀ..!! ರಾಮ್‌ಗೋಪಾಲ್‌ ವರ್ಮ.. 'ಸರ್ಕಾರ್‌' ನಿಜವಾದ ಉದ್ಯೋಗವನ್ನು ಹುಡುಕಿಕೊಂಡಿದ್ದಾರೆ.. ಆಕ್ಟಿಂಗ್‌!! ಆಲ್‌ ದಿ ಬೆಸ್ಟ್‌ ಸರ್ಕಾರ್‌..ಇನ್ನೊಂದು ಸ್ಪರ್ಧೆ!!' ಎಂದು ಅಮಿತಾಭ್‌ ಟ್ವೀಟ್‌ ಮಾಡಿದ್ದಾರೆ. ಇದನ್ನು ಸುದೀಪ್‌ ಕೂಡ ರಿ ಟ್ವೀಟ್‌ ಮಾಡಿದ್ದು, 'ಒರಿಜನಲ್‌ ಸರ್ಕಾರ್‌ ಮಾಡಿರುವ ಸ್ವೀಟ್‌ ಮಾತುಗಳನ್ನು ಇಷ್ಟಪಟ್ಟೆ' ಎಂದು ಅಮಿತಾಭ್‌ ಅವರಿಗೆ ಪ್ರತಿಕ್ರಿಯಿಸಿದ್ದಾರೆ. ಮುಂದುವರಿದು ವರ್ಮಗೆ, 'ನಿಮ್ಮ ಹೊಸ ಅವತಾರ ನಿಮ್ಮೊಂದಿಗೆ ಕೆಲಸ ಮಾಡಿದ ಎಲ್ಲರಿಗೂ ಎಕ್ಸೈಟ್‌ಮೆಂಟ್‌ ತಂದಿದೆ. ನಾವೆಲ್ಲರೂ ಒಟ್ಟಿಗೆ ಈ ಸಿನಿಮಾ ನೋಡೋಣ. ಮಜಾ ಕೊಡುತ್ತದೆ. ಸಿನಿಮಾ ಬಗೆಗಿನ ನಿಮ್ಮ ಒಲವು ಮೆಚ್ಚುತ್ತೇನೆ' ಎಂದು ಬರೆದಿದ್ದಾರೆ. ಇದರ ನಡುವೆ ಮತ್ತೊಂದು ಟ್ವೀಟ್‌ನಲ್ಲಿ ಸದ್ಯದಲ್ಲೇ ನಿಮ್ಮನ್ನು ಭೇಟಿ ಮಾಡುವೆ ಎಂದಿರುವುದು ಅಭಿಮಾನಿಗಳ ಕುತೂಹಲ ಕೆರಳಿಸಿದೆ. ಈ ಹೊಸ ಸಿನಿಮಾದಲ್ಲಿ ಸುದೀಪ್‌ ನಟಿಸುತ್ತಾರ ಎಂಬ ಸುದ್ದಿ ಜೋರಾಗಿದೆ.

'ಇದು ಅತ್ಯಂತ ಡೇಂಜರಸ್‌ ಕ್ರಿಮಿನಲ್‌ನ ಬಯೋಪಿಕ್‌. ಇವನನ್ನು ಅರೆಸ್ಟ್‌ ಮಾಡಿದರೆ ಅರ್ಧ ಪೋಲಿಸ್‌ ಡಿಪಾರ್ಟ್‌ಮೆಂಟ್‌ ಜೈಲಿಗೆ ಹೋಗಬೇಕಾಗುತ್ತದೆ' ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಕೋಬ್ರಾ ಹಿಂದಿ ಮತ್ತು ತೆಲುಗಿನಲ್ಲಿ ತೆರೆಕಾಣಲಿದೆ. ಚಿತ್ರದಲ್ಲಿ ನವನಟರೊಬ್ಬರು ಡಾನ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ.

' ರೌಟಿ ಶೀಟರ್‌ ಒಬ್ಬ ನಕ್ಸಲೈಟ್‌ ಆಗಿ ಬದಲಾಗಿ ನಂತರ ಪೊಲೀಸ್‌ ಮಾಹಿತಿದಾರನಾಗಿ, ನಂತರ ಗ್ಯಾಂಗ್‌ಸ್ಟರ್‌ ಆಗಿ ಬದಲಾದ ಕಥೆ ಈ ಚಿತ್ರದಲ್ಲಿದೆಯಂತೆ. ದಾವೂದ್‌ ಇಬ್ರಾಹಿಂ ಮತ್ತು ಛೋಟಾ ಶಕೀಲ್‌ ರೀತಿಯ ಬ್ರಾಂಡ್‌ ಹೆಸರಿನಲ್ಲಿ ಪಾತಕ ಲೋಕವನ್ನು ಆಳಿದ ವ್ಯಕ್ತಿಯ ಕಥೆ. ಸಾಯುವವರೆಗೆ ಯಾರಿಗೂ ಈತನ ಬಗ್ಗೆ ಗೊತ್ತಿರಲಿಲ್ಲ' ಎಂದಿದ್ದಾರೆ ವರ್ಮ.

ಸುದೀಪ್‌ ಈ ಹಿಂದೆ ವರ್ಮ ನಿರ್ದೇಶನದ ಫೂಂಕ್‌, ರಕ್ತಚರಿತ್ರ, ರಣ್‌ ಚಿತ್ರಗಳಲ್ಲಿ ನಟಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌