ಆ್ಯಪ್ನಗರ

ದೇಶಕ್ಕಾಗಿ ಹಾಡಲು ಹೆಮ್ಮೆ ಎಂದ ಸುಹಾನಾ ಸಯ್ಯದ್

ರಿಯಾಲಿಟಿ ಶೋನಲ್ಲಿ ಭಕ್ತಿಗೀತೆ ಹಾಡಿದರು ಎಂಬ ಕಾರಣಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದವರು ಸುಹಾನಾ ಸಯ್ಯದ್‌. ನಂತರ ಅವರು ಸಂಗೀತ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎಂಬ ಮಾತು ವ್ಯಕ್ತವಾಗಿತ್ತು.

Vijaya Karnataka 19 Apr 2018, 11:14 am
*ಶರಣು ಹುಲ್ಲೂರು
Vijaya Karnataka Web suhana


ರಿಯಾಲಿಟಿ ಶೋನಲ್ಲಿ ಭಕ್ತಿಗೀತೆ ಹಾಡಿದರು ಎಂಬ ಕಾರಣಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದವರು ಸುಹಾನಾ ಸಯ್ಯದ್‌. ನಂತರ ಅವರು ಸಂಗೀತ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎಂಬ ಮಾತು ವ್ಯಕ್ತವಾಗಿತ್ತು. ಈಗ ಸಿನಿಮಾಗಾಗಿ 'ವಂದೇ ಮಾತರಂ' ದೇಶಭಕ್ತಿಗೀತೆಯನ್ನು ಹಾಡುವ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶ ಮಾಡಿದ್ದಾರೆ. ಅವರೊಂದಿಗಿನ ಮಾತುಕತೆ ಇಲ್ಲಿದೆ.

* ರಿಯಾಲಿಟಿ ಶೋ ನಂತರ ನಮ್ಮ ಸಿನಿಮಾ ಜರ್ನಿ ಹೇಗಿದೆ?

ತುಂಬಾ ಚೆನ್ನಾಗಿದೆ. ಅನೇಕ ವೇದಿಕೆಗಳಲ್ಲಿ ಹಾಡಿದ್ದೇನೆ. ಒಂದಷ್ಟು ಹಾಡುಗಳು ರೆಕಾಡಿಂಗ್ಸ್‌ ಕೂಡ ಆಗಿವೆ. ಸದ್ಯ ಎರಡು ತುಳು ಮತ್ತು ಒಂದು ಕನ್ನಡ ಸಿನಿಮಾಗಾಗಿ ಹಾಡಿದ್ದೇನೆ. ರಾಜೇಶ್‌ ಕೃಷ್ಣ ಜತೆ ಡ್ಯುಯೆಟ್‌ ಸಾಂಗ್‌ ಹೇಳಿದ್ದರೆ, ಮತ್ತೊಂದು ಹಾಡಿಗೆ ವಿ.ಮನೋಹರ್‌ ಸಂಗೀತ ನೀಡಿದ್ದಾರೆ. ನಿಜಕ್ಕೂ ಖುಷಿ ಆಗುತ್ತಿದೆ.

* ಭಕ್ತಿಗೀತೆಯೊಂದಿಗೆ ನೀವು ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದೀರಿ. ಈಗ ದೇಶಭಕ್ತಿ ಗೀತೆಯೊಂದಿಗೆ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದೀರಿ?

ಹೌದು, ಸ್ಟೇಟ್‌ಮೆಂಟ್‌ 8/11 ಎಂಬ ಹೆಸರಿನ ಚಿತ್ರದಲ್ಲಿ ನಾನು 'ವಂದೇ ಮಾತರಂ' ದೇಶಭಕ್ತಿ ಗೀತೆಯನ್ನು ಹಾಡಿದ್ದೇನೆ. ದೇಶಭಕ್ತಿ ಗೀತೆಯೊಂದಿಗೆ ಸಿನಿಮಾ ಜರ್ನಿ ಶುರು ಮಾಡುತ್ತಿರುವುದು ಹೆಮ್ಮೆ ಅನಿಸುತ್ತಿದೆ. ಈಗಾಗಲೇ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನಾನಾ ಯಾವಾಗಲೂ ಐಕ್ಯತೆಗಾಗಿ ಪ್ರಾರ್ಥಿಸುವವಳು. ಹಾಗಾಗಿ ಮೊದಲ ಹಾಡೇ ಈ ಕುರಿತಾಗಿ ಸಿಕ್ಕಿದ್ದು ಖುಷಿ ತಂದಿದೆ. ನನ್ನ ಚೊಚ್ಚಲು ಹಾಡನ್ನು ಒಪ್ಪಿಕೊಳ್ಳಲು ಕಾರಣವೇ ಇದೊಂದು ದೇಶಭಕ್ತಿ ಗೀತೆ ಅನ್ನುವ ಕಾರಣಕ್ಕೆ. ನನ್ನ ಕರಿಯರ್‌ ಈ ಹಾಡಿನಿಂದಲೇ ಶುರುವಾಗಲಿ ಅನಿಸಿತು. ಹಾಗಾಗಿ ಒಪ್ಪಿಕೊಂಡೆ.

*ಭಕ್ತಿಗೀತೆ ಹಾಡಿದಿರಿ ಎಂಬ ಕಾರಣಕ್ಕಾಗಿ ವಿವಾದವಾಯಿತು. ಅದು ನಿಮ್ಮ ಕರಿಯರ್‌ಗೆ ತೊಂದರೆ ಮಾಡೀತಾ?

ಈ ಕುರಿತು ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಕರಿಯರ್‌ಗೆ ತೊಂದರೆ ಆಗಿರಬಹುದು, ಆಗದೇನೂ ಇರಬಹುದು. ನಾನು ಸಂಗೀತ ಕ್ಷೇತ್ರವನ್ನು ನಂಬಿಕೊಂಡವಳು. ಹಾಗಾಗಿ ಅದರತ್ತ ಹೆಚ್ಚು ಗಮನ ಕೊಡುತ್ತಿದ್ದೇನೆ. ಉತ್ತಮ ಆಗಿರುವುದನ್ನು ಮಾತ್ರ ಜನರು ತಗೆದುಕೊಳ್ಳುತ್ತಾರೆ.

* ಒಂದು ಕಡೆ ಎಜ್ಯುಕೇಷನ್‌ ಮತ್ತೊಂದು ಕಡೆ ಮ್ಯೂಸಿಕ್‌. ನಿಮ್ಮ ಆಯ್ಕೆ ಯಾವುದು?

ನನಗೆ ಸಂಗೀತ ಕ್ಷೇತ್ರದಲ್ಲಿಯೇ ಮುಂದುವರೆಯು ಆಸೆ. ಜತೆಗೆ ಎಜ್ಯುಕೇಷನ್‌ ಕೂಡ ಮುಖ್ಯ. ಸದ್ಯ ಎಂಬಿಎಯ ಕೊನೆಯ ಸೆಮಿಸ್ಟರಿಯಲ್ಲಿ ಓದುತ್ತಿದ್ದೇನೆ. ಇನ್ನೆರಡು ತಿಂಗಳಿಗೆ ಅಂತಿಮ ಎಂಬಿಎ ಮುಗಿಯುತ್ತದೆ. ನಂತರ ಸಂಗೀತ ಕ್ಷೇತ್ರದಲ್ಲಿಯೇ ತೊಡಗಿಕೊಳ್ಳುವೆ.

* ನೀವು ಸುಂದರವಾಗಿ ಕೂಡ ಇದ್ದೀರಿ. ನಟನೆಯತ್ತ ಆಸಕ್ತಿ ಇಲ್ಲವಾ?

ನಾನು ಹುಟ್ಟಿ ಬೆಳೆದದ್ದೇ ಹೆಗ್ಗೋಡು ಸಮೀಪದ ಹಳ್ಳಿಯೊಂದರಲ್ಲಿ. ಚಿಕ್ಕವಳಿದ್ದಾಗ ನೀನಾಸಂನ ಅನೇಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೇನೆ. ಸಂಗೀತ ಕ್ಷೇತ್ರಕ್ಕೆ ಬರುವುದಕ್ಕೆ ನೀನಾಸಂ ಕೂಡ ಕಾರಣ. ಹಾಗಾಗಿ ರಂಗಭೂಮಿಯ ಚಟುವಟಿಕೆಗಳು ಕೂಡ ನನ್ನನ್ನು ಆಕರ್ಷಿಸಿವೆ. ಈಗಾಗಲೇ ನಟಿಸುವಂತೆ ಕೆಲವರು ಕೇಳಿದ್ದಾರೆ. ಸದ್ಯ ಬೇಡ ಅಂತ ಸುಮ್ಮನಿದ್ದೇನೆ. ಎರಡು ದೋಣಿಯ ಮೇಲೆ ಕಾಲಿಡಲು ನನಗೆ ಇಷ್ಟವಿಲ್ಲ.

* ಕಠುವಾ ಘಟನೆಯ ಬಗ್ಗೆ ಏನು ಹೇಳುತ್ತೀರಿ?

ಎಂಟು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದಿದೆ ಎಂಬುದನ್ನೇ ಅರಗಿಸಿಕೊಳ್ಳಲು ಆಗುತ್ತಿಲ್ಲ. ಮನಸ್ಸಿಗೆ ತುಂಬಾ ಹಿಂಸೆ ಅನಿಸುತ್ತದೆ. ಮನುಷ್ಯತ್ವ ಎಲ್ಲಿಯೂ ಉಳಿದಿಲ್ಲವಲ್ಲ ಅಂತ ಆತಂಕ ಆಗುತ್ತದೆ. ಎಲ್ಲದಕ್ಕೂ ಧರ್ಮದ ಲೇಪನ ಕಟ್ಟುವುದು ಬೇಡ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌