ಆ್ಯಪ್ನಗರ

ಸ್ಯಾಂಡಲ್‌ವುಡ್‌ ತಾರೆಗಳ ಟೆಂಪಲ್‌ ರನ್‌; ನಟ ನಟಿಯರನ್ನು ನೋಡಲು ಜನಜಾತ್ರೆ

ನಾನು ಪ್ರತಿ ಸಿನಿಮಾ ಆರಂಭ ಮಾಡುವಾಗಲೂ ದೇವಸ್ಥಾನಕ್ಕೆ ತಪ್ಪದೇ ಭೇಟಿ ನೀಡುತ್ತೇನೆ. ಆದರೆ ಈ ಬಾರಿ ನಾನೇ ಬರೆದ ಕಥೆ ಇತ್ತು. ಅದನ್ನು ದೇವರ ಮುಂದೆ ಇಟ್ಟು ಪೂಜೆ ಮಾಡಿದ್ದೇನೆ. ನಾನು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವುದರಿಂದ ಜನರ ಆಶೀರ್ವಾದದ ಜತೆಗೆ ವೈವಾನುಗ್ರಹ ಸಹ ಬೇಕು. ಹಾಗಾಗಿ ನಾನು ದೇವಸ್ಥಾನಗಳಿಗೆ ಹೋಗಿದ್ದೇನೆ ಎಂದಿದ್ದಾರೆ ದುನಿಯಾ ವಿಜಯ್.

Vijaya Karnataka 28 Jun 2019, 6:06 pm
* ಹರೀಶ್‌ ಬಸವರಾಜ್‌
Vijaya Karnataka Web temple-fun


ಚುನಾವಣೆ ಹೊತ್ತಿನಲ್ಲಿ ಮತ್ತು ಅದಕ್ಕೂ ಮುನ್ನ ರಾಜಕಾರಣಿಗಳು ಟೆಂಪಲ್‌ ರನ್‌ ಮಾಡಿದ್ದ ಬೆನ್ನಲ್ಲೇ ಇದೀಗ ಸ್ಯಾಂಡಲ್‌ವುಡ್‌ ಸಿಲೆಬ್ರಿಟಿಗಳು ಕೂಡ ನಾನಾ ಕಾರಣಗಳಿಗಾಗಿ ದೇಗುಲಗಳಿಗೆ ಮೊರೆ ಹೋಗುತ್ತಿದ್ದಾರೆ.

ಸಿನಿಮಾ ತಾರೆಯರ ಟೆಂಪಲ್‌ ರನ್‌ ಎಲ್ಲರ ಗಮನ ಸೆಳೆದಿದ್ದು, ದೇಗುಲಗಳಿಗೆ ಭೇಟಿ ನೀಡುವ ನಟ ನಟಿಯರನ್ನು ನೋಡಲು ಜನಜಾತ್ರೆಯೇ ಸೇರುತ್ತಿದೆ. ಇನ್ನು ಕೆಲವರು ಸದ್ದಿಲ್ಲದೆ ದೈವ ದರ್ಶನ ಪಡೆದು ಬರುತ್ತಿದ್ದಾರೆ.

ದುನಿಯಾ ವಿಜಯ್‌
'ದುನಿಯಾ' ಚಿತ್ರದ ಮೂಲಕ ಹೀರೋ ಎಂಟ್ರಿಕೊಟ್ಟಿದ್ದ ನಟ ವಿಜಯ್‌, 'ಸಲಗ' ಮೂಲಕ ನಿರ್ದೇಶಕರಾಗಿದ್ದಾರೆ. ದೈವಭಕ್ತರಾಗಿರುವ ಅವರು ತಾವು ನಿರ್ದೇಶನ ಆರಂಭಿಸುವುದಕ್ಕೂ ಮುನ್ನ ಸವದತ್ತಿ ಯಲ್ಲಮ್ಮ, ಹುಬ್ಬಳ್ಳಿಯ ಸಿದ್ಧಾರೂಢ ಮಠ, ದಾವಣಗೆರೆ ಬಳಿಯ ಅಜ್ಜಯ್ಯನ ದೇವಸ್ಥಾನಕ್ಕೆ ಭೇಟಿ ನೀಡಿ ಸ್ಕ್ರಿಪ್ಟ್‌ ಪೂಜೆ ಮಾಡಿದ್ದರು.

ಚಾರ್‌ದಾಮ್‌ ಯಾತ್ರೆ ಮಾಡಿದ ಕೋಮಲ್‌
ನಾಲ್ಕು ವರ್ಷಗಳ ನಂತರ ತೆರೆ ಮೇಲೆ ಬರುತ್ತಿರುವ ನಟ ಕೋಮಲ್‌ ಕುಮಾರ್‌, ಇತ್ತೀಚೆಗಷ್ಟೇ 'ಕೆಂಪೇಗೌಡ-2' ಚಿತ್ರದ ಆಡಿಯೋ ಬಿಡುಗಡೆ ಮಾಡಿದರು. ಅದು ಬಿಡುಗಡೆಯಾದ ಮಾರನೇ ದಿನವೇ ಅವರು ತಮ್ಮ ಸಹೋದರ ಜಗ್ಗೇಶ್‌ ಜತೆಗೂಡಿ ಚಾರ್‌ಧಾಮ ಯಾತ್ರೆ ಕೈಗೊಂಡಿದ್ದರು. ಇಷ್ಟು ದಿನ ಕಾಮಿಡಿ ಮಾಡಿ ಪ್ರೇಕ್ಷಕರನ್ನು ನಗಿಸಿದ್ದ ಕೋಮಲ್‌, ಈಗ 'ಕೆಂಪೇಗೌಡ-2' ಮೂಲಕ ಆ್ಯಕ್ಷನ್‌ ಹೀರೋ ಆಗುತ್ತಿದ್ದಾರೆ. ಹಾಗಾಗಿ ಅವರು ತಮ್ಮ ಸಿನಿಮಾಗೆ ದೇವರ ಅನುಗ್ರಹ ಸಹ ಇರಲಿ ಎಂಬ ಉದ್ದೇಶದಿಂದ ಚಾರ್‌ಧಾಮ ಯಾತ್ರೆ ಕೈಗೊಂಡಿದ್ದಾರೆ. ಇದರ ಜತೆಯಲ್ಲಿ ಅವರು ಪ್ರತಿವಾರವೂ ತಮ್ಮ ಊರಿನಲ್ಲಿರುವ ಕಾಲ ಭೈರವೇಶ್ವರನ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ.

ನುಗ್ಗೇಕೇರಿಯಲ್ಲಿ ಪುನೀತ್‌
ಧಾರವಾಡ ಸಮೀಪದ ನುಗ್ಗೇಕೇರಿಯ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಪುನೀತ್‌ ಇತ್ತೀಚೆಗೆ ಭೇಟಿ ನೀಡಿದ್ದರು. 'ಯುವರತ್ನ' ಸಿನಿಮಾದ ಚಿತ್ರೀಕರಣಕ್ಕೆ ಒಂದು ದಿನದ ಬ್ರೇಕ್‌ ನೀಡಿ ಅವರು ದೇವಾಲಯಕ್ಕೆ ಭೇಟಿ ನೀಡಿದ್ದರು. ದೇವಸ್ಥಾನ ಮತ್ತು ಸುತ್ತಲಿನ ಪ್ರಾಂಗಣ ಪ್ರದಕ್ಷಿಣೆ ಮಾಡಿದ್ದ ಅವರು, ಬಹುಹೊತ್ತು ದೇಗುಲದಲ್ಲೇ ಇದ್ದು ಪೂಜೆ ಸಲ್ಲಿಸಿದ್ದರು. ಅಲ್ಲದೆ 'ಯುವರತ್ನ' ಸಿನಿಮಾದ ಚಿತ್ರೀಕರಣ ಸಾಂಗವಾಗಿ ನಡೆಯಲಿ, ಈ ಸಿನಿಮಾ ಸಹ ರಾಜಕುಮಾರ ಚಿತ್ರದಂತೆ ಯಶಸ್ಸು ಕಾಣಲಿ ಎಂದು ಅವರು ದೇವರ ಬಳಿ ಪ್ರಾರ್ಥನೆ ಮಾಡಿದ್ದಾರೆ.

ಕುಕ್ಕೆ, ಧರ್ಮಸ್ಥಳಕ್ಕೆ ದರ್ಶನ್‌
'ಒಡೆಯ', 'ರಾಬರ್ಟ್‌' ಚಿತ್ರಗಳಲ್ಲಿ ನಟಿಸುತ್ತಿರುವ ದರ್ಶನ್‌ ಇತ್ತೀಚೆಗೆ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಜತೆಗೆ ಮಂಡ್ಯದಲ್ಲಿ ಸುಮಲತಾ ಅವರ ಪರ ಹಗಲಿರುಳು ಪ್ರಚಾರ ನಡೆಸಿದ್ದರಲ್ಲದೆ, ಅವರ ಗೆಲುವಿಗೆ ಕಾರಣರಾಗಿದ್ದರು.

ತುಲಾಭಾರ ಮಾಡಿಸಿದ ಸುಮಲತಾ
ಇದೇ ನುಗ್ಗೇಕೇರಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್‌ ತುಲಾಭಾರ ಮಾಡಿಸಿದ್ದರು. ಅವರ ಜತೆ ನಟ, ಪುತ್ರ ಅಭಿಷೇಕ್‌ ಸಹ ತೆರಳಿದ್ದರು. ಅಭಿಷೇಕ್‌ ನಟನೆಯ 'ಅಮರ್‌' ಸಿನಿಮಾದ ಸಕ್ಸಸ್‌ ಯಾತ್ರೆಯಲ್ಲಿ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅವರು ಪುತ್ರನ ಸಿನಿಮಾ ಇನ್ನಷ್ಟು ಹಿಟ್‌ ಆಗಲಿ ಎಂದು ಅವರ ಬೇಡಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌