ಆ್ಯಪ್ನಗರ

ಗೆಳೆಯರ ಕನಸಿನ ಮಹಾನುಭಾವರು

ಬಾಲಚಂದರ್‌ ನಟಿಸಿ, ನಿರ್ಮಿಸಿರುವ 'ಮಹಾನುಭಾವರು' ಚಿತ್ರ ಇಂದು ರಾಜ್ಯಾದ್ಯಂತ ರಿಲೀಸ್‌ ಆಗುತ್ತಿದೆ ಹೊಸ ಹುಡುಗರ ಈ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ...

Vijaya Karnataka 17 Nov 2017, 5:00 am

*ಶರಣು ಹುಲ್ಲೂರು

ಮಹಾನುಭಾವರು ಸಿನಿಮಾದ ನಾಯಕರಾದ ಬಾಲಚಂದರ್‌, ಗೋಕುಲ್‌ ರಾಜ್‌ ಮತ್ತು ನಿರ್ದೇಶಕ ಸಂದೀಪ್‌ ನಾಗಲೀಕರ್‌ ಸ್ನೇಹಿತರು. ಒಂಬತ್ತು ವರ್ಷಗಳ ಇವರ ಗೆಳೆತನಕ್ಕೆ ಸಾಕ್ಷಿಯಾಗಿ ಮೂಡಿ ಬಂದಿದೆ ಈ ಸಿನಿಮಾ. ಈ ವಾರ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿರುವ ಸಿನಿಮಾದಲ್ಲಿ ಹಲವು ವಿಶೇಷತೆಗಳು ಇದ್ದು, ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂದು ನಟ, ನಿರ್ಮಾಪಕ ಬಾಲಚಂದರ್‌ ಹೇಳಿದ್ದಾರೆ.

'ಗೆಳೆಯರೆಲ್ಲ ಸೇರಿ ಸಣ್ಣ ಬಜೆಟ್‌ನಲ್ಲಿ ಸಿನಿಮಾ ಮಾಡುವ ಪ್ಲಾನ್‌ ಮಾಡಿದೆವು. ಕತೆ ಬರೆದುಕೊಂಡು, ಸಿನಿಮಾ ಮಾಡಲು ಹೊರಟಾಗ ಬಜೆಟ್‌ ಏರಿತು. ಮೊದಲ ಕಾಪಿ ಬರುವ ಹೊತ್ತಿಗೆ ಕೋಟಿ ದಾಟಿದೆ. ಕಥೆ ಏನು ಕೇಳಿದೆಯೋ ಎಲ್ಲವನ್ನೂ ಕೊಟ್ಟಿದ್ದೇವೆ. ಹಾಗಾಗಿ ಮಹಾನುಭಾವರು ಸಿನಿಮಾ ಕಲರ್‌ಫುಲ್‌ ಆಗಿ ಬಂದಿದೆ' ಅಂತಾರೆ ಬಾಲಚಂದರ್‌.

ಇದು ಸಂಪೂರ್ಣ ಹೊಸಬರ ತಂಡ. ಬಾಲಚಂದರ್‌ ಮತ್ತು ಗೋಕುಲ್‌ ರಾಜ್‌ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಯಾವುದೇ ಪ್ಲಾನ್‌ ಮಾಡದೆ, ಆ ಕ್ಷಣ ಹೇಗೆ ಬರುತ್ತದೆಯೋ ಹಾಗೆ ಬದುಕುವ ಪಾತ್ರದಲ್ಲಿ ಗೋಕುಲ್‌ ರಾಜ್‌ ಕಾಣಿಸಿಕೊಂಡಿದ್ದಾರೆ. ಇವರ ವಿರುದ್ಧದ ಪಾತ್ರ ಬಾಲಚಂದರ್‌ ಅವರದ್ದು. ಈಗಿನ ಟ್ರೆಂಡ್‌ಗೆ ತಕ್ಕ ಕಥೆ ಸಿನಿಮಾದಲ್ಲಿದ್ದು, ಯುವಕರಿಗೆ ಹೇಳಿ ಮಾಡಿಸಿದ ಸಿನಿಮಾ ಇದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

'ಕಥೆ ಮಾಡಿಕೊಂಡಾಗ ಮೊದಲು ಹಾಡಿರಲಿಲ್ಲ. ಸಾಂಗ್ಸ್‌ ಇಲ್ಲದೇ ಸಿನಿಮಾ ಮಾಡುವ ಪ್ಲಾನ್‌ ನಮ್ಮ ತಂಡದ್ದಾಗಿತ್ತು. ಕಥೆ ಚೆನ್ನಾಗಿ ಬಂದಿದ್ದರಿಂದ, ಹಾಡು ಬೇಕು ಅನಿಸಿತು. ಯೋಗರಾಜ್‌ ಭಟ್‌ ಸಾಹಿತ್ಯ ಬರೆದ ಮೇಲೆ ಕಥೆಗೆ ಮತ್ತಷ್ಟು ತೂಕ ಬಂತು. ಪುನೀತ್‌ ರಾಜಕುಮಾರ್‌ ಮತ್ತು ಶ್ರೀಮುರಳಿ ತಲಾ ಒಂದೊಂದು ಹಾಡು ಹಾಡಿದ್ದಾರೆ. ಹಾಗಾಗಿ ಮನರಂಜನೆಗೆ ಬೇಕಿರುವ ಎಲ್ಲ ಅಂಶಗಳು ಸಿನಿಮಾದಲ್ಲಿವೆ' ಅನ್ನುವುದು ನಿರ್ದೇಶಕ ಸಂದೀಪ್‌ ನಾಗಲೀಕರ್‌ ಹೇಳುವ ಮಾತು.

ದೊಡ್ಡ ಸಾಧನೆ ಮಾಡಿದವರು ಮಾತ್ರ ಮಹಾನುಭಾವರು ಅಲ್ಲ, ಸಣ್ಣ ಸಣ್ಣ ಆಸೆಗಳನ್ನು ಈಡೇರಿಸಿಕೊಂಡವರೂ ಮಹಾನುಭಾವರು ಅನ್ನುವುದು ಸಿನಿಮಾದ ಒನ್‌ಲೈನ್‌ ಸ್ಟೋರಿ. ಪ್ರಧಾನ ಎರಡು ಪಾತ್ರಗಳ ಮೂಲಕ ಇದನ್ನು ಹೇಳಲು ಹೊರಟಿದೆ ಚಿತ್ರತಂಡ. ಒಬ್ಬ ನಾಳೆಯ ಬಗ್ಗೆ ಯೋಚನೆ ಮಾಡದವ. ಮತ್ತೊಬ್ಬ ಮುಂದಿನ ಭವಿಷ್ಯದ ಬಗ್ಗೆ ಯೋಚಿಸುವಂಥವನು. ಈ ಇಬ್ಬರ ನಡುವಿನ ಕತೆಯೇ ಮಹಾನುಭಾವರು ಸಿನಿಮಾವಾಗಿದೆ.

ಸಿನಿಮಾದ ಮತ್ತೊಂದು ವಿಶೇಷತೆ ಅಂದರೆ, ಮೊದಲ ಬಾರಿಗೆ ಅರ್ಜುನ್‌ ಜನ್ಯ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸತೀಶ್‌ ಮೌರ್ಯ ಸಂಗೀತ ಸಂಯೋಜನೆ ಹಾಡುಗಳು ಹಿಟ್‌ ಆಗಿವೆ. ಪ್ರಿಯಾಂಕ ಹಾಗೂ ಅನುಷಾ ರೈ ನಾಯಕಿಯರಾಗಿ ನಟಿಸಿದ್ದು, ಚೇತನ್‌ ನೀನಾಸಂ, ಲೋಕೇಶ್‌ ತಾರಾಗಣದಲ್ಲಿ ಇದ್ದಾರೆ. ಮುನ್ನುಡಿ ಕ್ರಿಯೇಷನ್‌ನಲ್ಲಿ ಚಿತ್ರ ಮೂಡಿ ಬಂದಿದೆ.

Vijaya Karnataka Web two friends movie mahanabhavaru
ಗೆಳೆಯರ ಕನಸಿನ ಮಹಾನುಭಾವರು

'ಒಬ್ಬ ನಾಯಕನಿಗೆ ಇವತ್ತಿನ ಬಗ್ಗೆ ಮಾತ್ರ ಯೋಚನೆ ಮಾಡಿ, ಬಿಂದಾಸ್‌ ಆಗಿ ಇರಬೇಕು ಅನ್ನುವ ಕನಸು. ಮತ್ತೊಬ್ಬನದ್ದು ಇದರ ವಿರುದ್ಧದ ಲೈಫ್‌. ಇವರ ಜೀವನ ಹೇಗಿರುತ್ತದೆ ಅನ್ನುವುದನ್ನು ತೋರಿಸುತ್ತಾ, ಅದಕ್ಕೆ ಕೆಲ ಮನರಂಜನೆಯ ಅಂಶಗಳನ್ನು ಬೆರೆಸಿದ್ದೇವೆ. ಹಾಗಾಗಿ ಪ್ರೇಕ್ಷಕರಿಗೆ ಸಖತ್‌ ಮನರಂಜನೆ ಸಿಗಲಿದೆ'

- ಸಂದೀಪ್‌ ನಾಗಲೀಕರ್‌, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌