*ಹರೀಶ್ ಬಸವರಾಜ್
ಮಾಲಾಶ್ರೀ, ಅನುಶ್ರೀ, ಜಯಶ್ರೀ ಮುಖ್ಯ ಭೂಮಿಕೆಯಲ್ಲಿರುವ ಉಪ್ಪು ಹುಳಿ ಖಾರ ಸಿನಿಮಾ ಇದೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತದೆ. ವಿಶೇಷ ಎಂದರೆ ಈ ಚಿತ್ರದ ಕಥೆಗೆ ಮೊದಲು ಗ್ರೀನ್ ಸಿಗ್ನಲ್ ಕೊಟ್ಟವರು ಇನ್ಫೋಸಿಸ್ ಫೌಂಡೇಶನ್ನ ಅಧ್ಯಕ್ಷೆ ಸುಧಾ ಮೂರ್ತಿ. ಈ ಗುಟ್ಟನ್ನು ಬಿಚ್ಚಿಟ್ಟವರು ಸ್ವತಃ ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ.
ಉಪ್ಪು ಹುಳಿ ಖಾರ ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ ಐಟಿ ದೈತ್ಯ ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಯವರ ಬಳಿ ಕೆಲಸ ಮಾಡುತ್ತಿದ್ದ ವರು. ತಾನು ಚಿತ್ರ ನಿರ್ಮಾಪಕರಾಗುವುದಕ್ಕೂ ಇನ್ಫೋಸಿಸ್ ನಾರಾಯಣ ಮೂರ್ತಿ, ಸುಧಾ ಮೂರ್ತಿ ಮೊದಲಾವರೇ ಕಾರಣ ಎನ್ನುತ್ತಾರವರು.
'ನನಗೆ ಚಿಕ್ಕ ವಯಸ್ಸಿನಿಂದಲೂ ಸಿನಿಮಾ ಮಾಡಬೇಕು ಎಂಬ ಹಂಬಲವಿತ್ತು. ಗಾರೆ ಕೆಲಸ ಮಾಡುವಾಗ ಮಾರ್ನಿಂಗ್ ಶೋ, ಮ್ಯಾಟ್ನಿ, ಹೀಗೆ ಸಿಕ್ಕಾಪಟ್ಟೆ ಸಿನಿಮಾಗಳನ್ನು ನೋಡುತ್ತಿದ್ದೆ. ಆಗಿನಿಂದಲೂ ನನಗೆ ಸಿನಿಮಾ ಮಾಡುವ ಹುಚ್ಚು ಹತ್ತಿತ್ತು. ಆ ಆಸೆ ಈಡೇರಿಸಿಕೊಳ್ಳಲು, ರಾಮದಾಸ್ ಕಾಮತ್, ಸಿ ವಿ ಕರ್ನಲ್, ಸುಧಾ ಮೂರ್ತಿ, ಸಂಜಯ್ ಭಟ್ ಇವರೆಲ್ಲರೂ ಕಾರಣ. ನನಗೆ ವಿದ್ಯಾಭ್ಯಾಸ ಇಲ್ಲದೇ ಹೋದರೂ ನನ್ನ ಬೆನ್ನು ತಟ್ಟಿ, ಕೆಲಸ ಕೊಟ್ಟರು. ಆ ಕೆಲಸದಿಂದ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ನಾನು ಇಂದು ಒಂದು ಸಿನಿಮಾ ನಿರ್ಮಾಪಕನಾಗಿ ನಿಂತಿದ್ದೇನೆ ಎಂದರೆ ಅದಕ್ಕೆ ಅವರೇ ಕಾರಣಕರ್ತರು,' ಎನ್ನುತ್ತಾರೆ ರಮೇಶ್.
ಹೀಗೆ ನಿರ್ಮಾಪಕರಾಗಿ ಕೈಗೆತ್ತಿಕೊಂಡ ಮೊದಲ ಸಿನಿಮಾದ ಕಥೆಯನ್ನು ರಮೇಶ್ ರೆಡ್ಡಿ ಮೊದಲು ಕೇಳಿಸಿದ್ದು ಸುಧಾ ಮೂರ್ತಿಯವರಿಗಂತೆ. ಅವರು ಓಕೆ ಮಾಡಿದರೆ ನಾನು ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂದು ರಮೇಶ್ ಇಮ್ರಾನ್ಗೆ ಮೊದಲೇ ಹೇಳಿದ್ದರಂತೆ. ಅದರಂತೆ ಸುಧಾ ಮೂರ್ತಿ ಕತೆ ಕೇಳಿ ಚೆನ್ನಾಗಿದೆ ಎಂದ ಮೇಲೆ ರಮೇಶ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ. 'ಚಿತ್ರದಲ್ಲಿ ಒಂದೊಳ್ಳೆ ಮೆಸೇಜ್ ಇದೆ. ಇಂದಿನ ಯುವಕರು ಎಲ್ಲರೂ ಸಿನಿಮಾ ಮೆಚ್ಚಿಕೊಳ್ಳುತ್ತಾರೆ. ಇಮ್ರಾನ್ ಸರ್ದಾರಿಯಾ ಉತ್ತಮವಾಗಿ ನಿರ್ದೇಶನ ಮಾಡಿದ್ದು, ಈಗಾಗಲೇ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿಯವರು ಚಿತ್ರ ನೋಡಿ ಮೆಚ್ಚಿಕೊಂಡಿದ್ದಾರೆ, ಜನ ಸಹ ಮೆಚ್ಚಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ' ಎನ್ನುತ್ತಾರೆ ನಿರ್ಮಾಪಕ ರಮೇಶ್ ರೆಡ್ಡಿ.
ಉಪ್ಪು ಹುಳಿ ಖಾರ ಚಿತ್ರ ತೇಜಸ್ವಿನಿ ಎಂಟರ್ ಪ್ರೈಸಸ್ ಬ್ಯಾನರ್ನಲ್ಲಿ ನಿರ್ಮಾಣಗೊಂಡಿದ್ದು, ಶರತ್, ಧನು, ಶಶಿ ಎಂಬ ಮೂವರು ಯುವಕರು ಈ ಚಿತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
'ರಮೇಶ್ ರೆಡ್ಡಿಯವರಿಗೆ ಸಿನಿಮಾದ ಬಗ್ಗೆ ಬಹಳ ಪ್ಯಾಷನ್ ಇದೆ. ಕಂಟೆಂಟ್ ನಂಬಿ ಗಾರೆ ಕೆಲಸ ಮಾಡಿ ದುಡಿದ ಹಣವನ್ನು ಹೊಸಬರ ಮೇಲೆ ಇನ್ವೆಸ್ಟ್ ಮಾಡಿರುವುದಕ್ಕೆ ನಾನು ಅವರಿಗೆ ಥ್ಯಾಂಕ್ಸ್ ಹೇಳುತ್ತೇನೆ.'
-ಇಮ್ರಾನ್ ಸರ್ದಾರಿಯಾ, ನಿರ್ದೇಶಕ