ಆ್ಯಪ್ನಗರ

ವಿಶ್ವಕಪ್‌ ಕ್ರಿಕೆಟ್‌ ಅಬ್ಬರ: ಚಿತ್ರರಂಗ, ಕಿರುತೆರೆ ತತ್ತರ

ಗುರುವಾರದಿಂದ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಆರಂಭವಾಗಿದ್ದು, ಇದರಿಂದ ಸ್ಯಾಂಡಲ್‌ವುಡ್‌ಗೆ ದೊಡ್ಡ ಹೊಡೆತ ಬೀಳುವ ಸಂಭವವಿದೆ. ಈ ಬಗ್ಗೆ ಚಿತ್ರರಂಗದವರು ಏನು ಹೇಳುತ್ತಾರೆ ಎಂಬುದು ಇಲ್ಲಿದೆ.

Vijaya Karnataka 31 May 2019, 5:00 am
-ಹರೀಶ್‌ ಬಸವರಾಜ್‌
Vijaya Karnataka Web gundkal 1


ಐಪಿಎಲ್‌ ಮತ್ತು ಲೊಕಸಭೆ ಚುನಾವಣೆ, ನಂತರ ಮಳೆ.. ಹೀಗೆ ಎಲ್ಲ ಸಂಕಷ್ಟಗಳಿಂದ ಪಾರಾಗುತ್ತಲೇ ಬಂದ ಸ್ಯಾಂಡಲ್‌ವುಡ್‌ಗೆ ಈಗ ವಿಶ್ವಕಪ್‌ ಎದುರಾಗಿದೆ. ಈ ಬಾರಿಯ ಟೂರ್ನಿ ಮುಗಿಯುವವರೆಗೂ ಕನ್ನಡದಲ್ಲಿ ಯಾವುದೇ ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ.

2019 ಆರಂಭವಾಗಿ ಅರ್ಧ ವರ್ಷ ಕಳೆದರು ಸ್ಯಾಂಡಲ್‌ವುಡ್‌ಗೆ ಸಮಾಧಾನಪಡುವಂಥ ಫಸಲೇನು ಸಿಕ್ಕಿಲ್ಲ. ಐಪಿಎಲ್‌, ಚುನಾವಣೆ, ಪರಿಕ್ಷೆಗಳು ಸೇರಿದಂತೆ ಸಾಕಷ್ಟು ಕಾರಣಗಳು ಇದರ ಹಿಂದಿವೆ. ಈಗ ಗುರುವಾರದಿಂದ ಆರಂಭವಾಗಿರುವ ಕ್ರಿಕೆಟ್‌ ವಿಶ್ವಕಪ್‌ ಕೂಡ ಸ್ಯಾಂಡಲ್‌ವುಡ್‌ ಮೇಲೆ ತೊಂದರೆ ಮಾಡುತ್ತಿದೆ. ಈ ಬಾರಿ ಸ್ಯಾಂಡಲ್‌ವುಡ್‌ ಜತೆಗೆ ಕನ್ನಡ ಕಿರುತೆರೆಯೂ ವಿಶ್ವಕಪ್‌ ಹೊಡೆತಕ್ಕೆ ಸಿಲುಕುತ್ತಿದೆ.

'ಕ್ರಿಕೆಟ್‌ ಎನ್ನುವುದು ಸಿನಿಮಾ ರಂಗಕ್ಕೆ ದೊಡ್ಡ ಕಂಟಕವಾಗುತ್ತಿದೆ. ಇಷ್ಟು ದಿನ ಐಪಿಎಲ್‌ ಆಯ್ತು, ಈಗ ವಿಶ್ವಕಪ್‌. ಪ್ರತಿದಿನ ಸಂಜೆಯಾದರೆ ಜನ ಟಿವಿ ಮುಂದೆ ಕುಳಿತುಬಿಡುತ್ತಾರೆ. ಇದರಿಂದ ದೊಡ್ಡ ದೊಡ್ಡ ನಟರ ಸಿನಿಮಾಗಳೇ ಜೂನ್‌ ಮತ್ತು ಜುಲೈನಲ್ಲಿ ಬಿಡುಗಡೆಯಾಗದೆ, ಆಗಸ್ಟ್‌ನಲ್ಲಿ ಬಿಡುಗಡೆ ಆಗುತ್ತಿವೆ. ಈ ಬಾರಿಯ ವಿಶ್ವಕಪ್‌ನಿಂದ ಸ್ಯಾಂಡಲ್‌ವುಡ್‌ಗೆ ಹೊಡೆತ ಬಿದ್ದಿರುವುದಂತು ಸತ್ಯ'ಎನ್ನುತ್ತಾರೆ ವಿತರಕ, ನಿರ್ಮಾಪಕ ಜಾಕ್‌ ಮಂಜು.

ಅಗಸ್ಟ್‌ನಲ್ಲಿ ಸ್ಟಾರ್‌ ಹಬ್ಬ

ಜೂನ್‌ ಮತ್ತು ಜುಲೈನಲ್ಲಿ ಯಾವುದೇ ಸ್ಟಾರ್‌ಗಳ ಚಿತ್ರ ಬಿಡುಗಡೆಯಾಗುತ್ತಿಲ್ಲ. ಸುದೀಪ್‌ ಅವರ ಪೈಲ್ವಾನ್‌, ರಕ್ಷಿತ್‌ ಶೆಟ್ಟಿ ನಟನೆಯ ಅವನೇ ಶ್ರೀಮನ್ನಾರಾಯಣ, ದರ್ಶನ್‌ರ ಕುರುಕ್ಷೇತ್ರಹೀಗೆ ಸಾಕಷ್ಟು ಸಿನಿಮಾಗಳು ಅಗಸ್ಟ್‌ನಲ್ಲಿ ಬಿಡುಗಡೆಯಾಗುತ್ತಿವೆ. ಅಲ್ಲದೆ ಒಂದೇ ತಿಂಗಳಿನ ಅಂತರದಲ್ಲಿ ದೊಡ್ಡ ದೊಡ್ಡ ಸ್ಟಾರ್‌ಗಳ ಚಿತ್ರ ಬರುತ್ತಿರುವುದು ಬಹುಶಃ ಕ್ರಿಕೆಟ್‌ ಕಾರಣದಿಂದಲೇ ಅನಿಸುತ್ತದೆ.

ಕಿರುತೆರೆಯ ಮೇಲೂ ಎಫೆಕ್ಟ್

ಈ ಬಾರಿಯ ವಿಶ್ವಕಪ್‌ ಟೂರ್ನಿ ಸೀರಿಯಲ್‌ಗಳ ಮೇಲೂ ಪರಿಣಾಮ ಬೀರುತ್ತಿದೆ. ಅದರಲ್ಲೂ ಭಾರತದ ಪಂದ್ಯ ಇರುವ ದಿನವಂತೂ ಜನ ಬರೀ ಕ್ರಿಕೆಟ್‌ ಮಾತ್ರ ನೋಡುವುದರಿಂದ ಸೀರಿಯಲ್‌ಗಳ ಟಿಆರ್‌ಪಿಯೂ ಕಡಿಮೆಯಾಗುವ ಸಂಭವವಿದೆ ಎನ್ನುತ್ತಾರೆ ಕಿರುತೆರೆ ನಿರ್ದೇಶಕರು.

'ಭಾರತೀಯ ಪಂದ್ಯಗಳು ಸಂಜೆ 3 ಗಂಟೆ ಮತ್ತು 6 ಗಂಟೆಗ ಶೆಡ್ಯೂಲ್‌ ಆಗಿವೆ. ಇದು ಪೀಕ್‌ ಅವರ್‌. ಈ ಪಂದ್ಯಗಳು ನಡೆಯುವಾಗ ಜನ ಸೀರಿಯಲ್‌ಗಿಂತಲೂ ಕ್ರಿಕೆಟ್‌ ಮೇಲೆ ಹೆಚ್ಚಿನ ಗಮನ ಹರಿಸುತ್ತಾರೆ. ಹಾಗಾಗಿ ಇದು ಸಹಜ ಎನ್ನುತ್ತಾರೆ' ಆತ್ಮಬಂಧನ ಸೀರಿಯಲ್‌ನ ನಿರ್ದೇಶಕ ಸತೀಶ್‌ ಕೃಷ್ಣ.

ಬಾಲಿವುಡ್‌ನಲ್ಲಿಯೂ ವಿಶ್ವಕಪ್‌ ಮುಗಿಯವರೆಗೂ ಬಿಡುಗಡೆಯಾಗುವ ಸಿನಿಮಾಗಳ ಸಂಖ್ಯೆ ಕಡಿಮೆ ಇದೆ. ತೆಲುಗು, ತಮಿಳು, ಮಲೆಯಾಳಂ ಎಲ್ಲ ಚಿತ್ರರಂಗದಲ್ಲಿಯೂ ಕ್ರಿಕೆಟ್‌ ಜ್ವರ ಇಳಿದ ಮೇಲೆ ಸಿನಿಮಾ ಬಿಡುಗಡೆಯಾಗುತ್ತವೆ.

ಒಟ್ಟಿನಲ್ಲಿ ವಿಶ್ವಕಪ್‌ ಮುಗಿದ ಮೇಲೆ ಚಿತ್ರರಂಗದ ಮೇಲೆ ಒಮ್ಮೆ ಸುನಾಮಿಯಂತೆ ಸ್ಟಾರ್‌ಗಳ ಸಿನಿಮಾಗಳು ಬಿಡುಗಡೆಯಾಗುತ್ತವೆ.

----

ವಿಶ್ವಕಪ್‌ ಎಲ್ಲ ಪಂದ್ಯಗಳಿಂದ ನಮಗೆ ಅಷ್ಟೊಂದು ತೊಂದರೆಯಾಗುವುದಿಲ್ಲ. ಭಾರತೀಯ ಪಂದ್ಯಗಳಷ್ಟೇ ನಮಗೆ ಸ್ವಲ್ಪ ತೊಂದರೆ ಆಗುತ್ತದೆ. ಅದರಲ್ಲೂ ಪಾಕಿಸ್ತಾನದ ವಿರುದ್ಧ ನಡೆಯುವ ಪಂದ್ಯದ ದಿನವಂತೂ ನಮಗೆ ಇದ್ದಿದ್ದೂ ಕಷ್ಟ.

-ಪರಮೇಶ್ವರ್‌ ಗುಂಡ್ಕಲ್‌, ಬಿಸ್ನೆಸ್‌ ಹೆಡ್‌, ಕಲರ್ಸ್‌ ಕನ್ನಡ ಕ್ಲಸ್ಟರ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌