ಆ್ಯಪ್ನಗರ

ಜನಜಾಗೃತಿಗಾಗಿ ಪೊಲೀಸರ ಜತೆ ಕೈಜೋಡಿಸಿದ ಯಶ್‌

ಮಕ್ಕಳ ಕಳ್ಳರಿದ್ದಾರೆಂಬ ಸುಳ್ಳು ಸುದ್ದಿಗೆ ಅಮಾಯಕರು ಬಲಿಯಾಗುತ್ತಿರುವುದು ಪೊಲೀಸ್‌ ಇಲಾಖೆಯ ನಿದ್ದೆಗೆಡಿಸಿದೆ. ಸುಳ್ಳು ವದಂತಿಗಳಿಗೆ ಕಿವಿಗೊಡದಂತೆ ಜನಜಾಗೃತಿಗೆ ಮುಂದಾಗಿದ್ದಾರೆ ಬೆಂಗಳೂರು ಪಶ್ಚಿಮ ವಲಯದ ಡಿಸಿಪಿ ರವಿ ಚನ್ನಣ್ಣನವರ್‌. ಈ ಜಾಗೃತಿಯಲ್ಲಿ ಯಶ್‌ ಪಾಲ್ಗೊಂಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ ಕನ್ನಡದ ಸಿಂಗಂ.

Vijaya Karnataka 4 Jun 2018, 11:31 am
*ಶರಣು ಹುಲ್ಲೂರು
Vijaya Karnataka Web yash


ಈಗಾಗಲೇ ಪೊಲೀಸ್‌ ಇಲಾಖೆಯೊಂದಿಗೆ ಸೇರಿ ಹಲವು ಜಾಗೃತಿ ಕಾರ‍್ಯಕ್ರಮಗಳಲ್ಲಿ ಭಾಗವಹಿಸಿರುವ ಯಶ್‌, ಈಗ ಮತ್ತೊಂದು ಮಹತ್ವದ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ರಾಜ್ಯಾದ್ಯಂತ ಮಕ್ಕಳ ಕಳ್ಳರ ಬಗ್ಗೆ ಎದ್ದಿರುವ ವದಂತಿಯ ಕುರಿತು ಜನಜಾಗೃತಿಗೆ ಯಶ್‌ ಮುಂದಾಗಿದ್ದಾರೆ.

'ಮಕ್ಕಳ ಕಳ್ಳರ ಬಗೆಗಿನ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ. ಅಮಾಯಕ ವ್ಯಕ್ತಿಗಳನ್ನು ಕೊಲ್ಲಬೇಡಿ' ಎಂಬ ಸಂದೇಶ ಹೊತ್ತ ಕರಪತ್ರ ಹಿಡಿದು ಯಶ್‌ ಜಾಗೃತಿ ಮೂಡಿಸುತ್ತಿದ್ದಾರೆ. ಈ ಫೋಟೋವನ್ನು ಪೊಲೀಸ್‌ ಇಲಾಖೆ ತನ್ನ ಟ್ವಿಟರ್‌ ಮತ್ತು ಫೇಸ್‌ಬುಕ್‌ ಖಾತೆಯಲ್ಲಿ ಹಾಕಿಕೊಂಡು ಅರಿವು ಮೂಡಿಸುತ್ತಿದೆ.

ಕಳೆದೆರಡು ತಿಂಗಳಿಂದ ಮಕ್ಕಳ ಕಳ್ಳರ ಬಗೆಗಿನ ಸುದ್ದಿಗಳು ಸದ್ದು ಮಾಡುತ್ತಿವೆ. ಮಕ್ಕಳ ಕಳ್ಳರೆಂದು ಅಮಾಯಕರನ್ನು ಹಿಡಿದು ಹಿಂಸಿಸುವ ವಿಡಿಯೋಗಳು ವಾಟ್ಸಾಪ್‌ನಲ್ಲಿ ಹರಿದಾಡುತ್ತಿವೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬನನ್ನು ಇದೇ ಕಾರಣಕ್ಕೆ ಕೊಲ್ಲಲಾಯಿತು. ಈ ಘಟನೆಗಳು ಪೊಲೀಸ್‌ ಇಲಾಖೆಯನ್ನು ನಿದ್ದೆಗೆಡಿಸಿದ್ದವು.

'ನಮ್ಮ ಪೊಲೀಸ್‌ ಸಿಬ್ಬಂದಿಗಳು ಜನ ಜಾಗೃತಿಯ ಕರಪತ್ರಗಳನ್ನು ಹಂಚುತ್ತಿರುವಾಗ ಜಿಮ್‌ ಮುಗಿಸಿಕೊಂಡು ಅದೇ ಹಾದಿಯಲ್ಲಿ ಯಶ್‌ ಹೋಗುತ್ತಿದ್ದರು. ಅವರಿಗೂ ಕರಪತ್ರ ನೀಡಲಾಗಿದೆ. ಅವರೇ ಸ್ವಯಂಸ್ಫೂರ್ತಿಯಿಂದ, ಕರಪತ್ರಗಳನ್ನು ಪ್ರದರ್ಶಿಸಿದ್ದಾರೆ. ಮಕ್ಕಳ ಕಳ್ಳರ ಸುಳ್ಳು ವದಂತಿಯ ಜಾಗೃತಿಗೆ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ಹಾಗಾಗಿ ಯಶ್‌ ಅವರನ್ನು ಪೊಲೀಸ್‌ ಇಲಾಖೆ ಅಭಿನಂದಿಸುತ್ತದೆ' ಎನ್ನುತ್ತಾರೆ ಬೆಂಗಳೂರು ಪಶ್ಚಿಮ ವಲಯದ ಡಿಸಿಪಿ ರವಿ ಚನ್ನಣ್ಣನವರ್‌.

ಈ ಕಾರ‍್ಯದ ಕುರಿತು ಯಶ್‌ ಅಭಿಮಾನಿಗಳು ಕೂಡ ಕೈ ಜೋಡಿಸಿದ್ದಾರೆ. ಕರಪತ್ರ ಹಿಡಿದಿರುವ ಯಶ್‌ ಅವರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಹೀಗಾಗಿ ಆ ಫೋಟೋಗಳು ಟ್ವಿಟರ್‌ ಮತ್ತು ಫೇಸ್‌ಬುಕ್‌ನಲ್ಲಿ ವೈರಲ್‌ ಆಗಿವೆ.

ಯಶ್‌ ಅವರ ಜನಜಾಗೃತಿ ಕಾರ‍್ಯಕ್ಕಾಗಿ ಪೊಲೀಸ್‌ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತದೆ. ಈ ರೀತಿ ಪೊಲೀಸ್‌ ಇಲಾಖೆಯೊಂದಿಗೆ ಎಲ್ಲರೂ ಕೈ ಜೋಡಿಸಿದರೆ, ಒಳ್ಳೆಯ ಸಮಾಜವನ್ನು ನಿರ್ಮಾಣ ಮಾಡಲು ಸಹಕಾರಿ ಆಗುತ್ತಿದೆ.
ರವಿ ಡಿ ಚೆನ್ನಣ್ಣನವರ್‌, ಡಿಸಿಪಿ, ಬೆಂಗಳೂರು ಪಶ್ಚಿಮ ವಲಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌