ಆ್ಯಪ್ನಗರ

Shankar Nag: ಕನ್ನಡ ಚಿತ್ರರಂಗದ ಅನನ್ಯ ಪ್ರತಿಭೆ ಶಂಕರ್ ನಾಗ್‌ ಅಗಲಿ ಇಂದಿಗೆ 30 ವರ್ಷ!

ಕನ್ನಡ ಚಿತ್ರರಂಗ ಕಂಡ ಅಪರೂಪದ ಪ್ರತಿಭೆ ಶಂಕರ್ ನಾಗ್. ಇಂದು (ಸೆ.30) ಅವರ ಪುಣ್ಯಸ್ಮರಣೆ. ಅವರು ನಿಧನರಾಗಿ 30 ವರ್ಷ ಕಳೆದಿವೆ. ಹಿನ್ನೆಲೆಯಲ್ಲಿ ಶಂಕರ್‌ ನಾಗ್ ಅವರ ಕುರಿತಾದ ಲೇಖನ ಇಲ್ಲಿದೆ.

Vijaya Karnataka Web 30 Sep 2020, 10:18 am
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಶಂಕರ್‌ ನಾಗ್ ಅವರದ್ದು ಒಂದು ಸುವರ್ಣ ಅಧ್ಯಾಯ ಎಂದರೆ ತಪ್ಪಾಗಲಾರದು. ಅವರು ಚಿತ್ರರಂಗದಲ್ಲಿ ಕೆಲಸ ಮಾಡಿದ್ದು ಬರೀ 12 ವರ್ಷಗಳು ಮಾತ್ರ! ಆದರೆ, ಮಾಡಿದ ಕೆಲಸ, ತೋರಿದ ಸಾಧನೆ ನೂರಾರು ವರ್ಷ ನೆನಪಿರುವಂಥದ್ದು. ಇಂದಿಗೆ (ಸೆ.30) ಇಂಥ ಮಹಾನ್ ಪ್ರತಿಭೆ ನಿಧನರಾಗಿ 30 ವರ್ಷ. 1990ರಂದು ಸೆ.30ರಂದು ದಾವಣಗೆರೆಯ ಬಳಿಯ ಅನಗೋಡಿನಲ್ಲಿ ಶಂಕರ್ ನಾಗ್‌ ಪ್ರಯಾಣಿಸುತ್ತಿದ್ದ ಕಾರು ಮತ್ತು ಎದುರಿಗೆ ಬಂದ ಲಾರಿ ಮುಖಾಮುಖಿ ಡಿಕ್ಕಿಯಾಗಿ, ಶಂಕರ್ ಸ್ಥಳದಲ್ಲೇ ಸಾವನಪ್ಪಿದ್ದರು. ಆ ದಿನ ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ಕರಾಳ ದಿನವಾಗಿತ್ತು!
Vijaya Karnataka Web Shankar Nag


1990, ಸೆ.30ರ ಆ ಕರಾಳ ದಿನ!
ಜೋಕುಮಾರಸ್ವಾಮಿ ಆ ಕಾಲಕ್ಕೆ ಭಾರಿ ಯಶಸ್ಸು ಕಂಡ ನಾಟಕ. ಅದನ್ನು ಸಿನಿಮಾ ಮಾಡುವ ಪ್ರಯತ್ನಕ್ಕೆ ಕೈಹಾಕಿದ್ದರು ಶಂಕರ್. ಆ ಸಲುವಾಗಿ ಬಾಗಲಕೋಟೆಯ ಮುಧೋಳ ತಾಲ್ಲೂಕಿನ ಲೋಕಾಪುರಕ್ಕೆ ಹೋಗಬೇಕಿತ್ತು. 1990ರಂದು ಸೆ.30ರಂದು ಶಂಕರ್ ನಾಗ್ ತಮ್ಮ ಪತ್ನಿ ಅರುಂಧತಿ ನಾಗ್ ಮತ್ತು ಮಗಳು ಕಾವ್ಯಾ ಜೊತೆ ಬೆಂಗಳೂರಿನಿಂದ ಹೊರಟಿದ್ದರು. ಆದರೆ, ದಾವಣಗೆರೆಯ ಅನಗೋಡು ಬಳಿ ಯಮಸ್ವರೂಪಿಯಾಗಿ ಬಂದ ಲಾರಿಗೆ ಶಂಕರ್ ನಾಗ್‌ ಕಾರು ಡಿಕ್ಕಿಯಾಗಿತ್ತು. ಘಟನೆಯಲ್ಲಿ ಶಂಕರ್ ನಾಗ್ ಮತ್ತು ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದರು.

12 ವರ್ಷ 90+ ಸಿನಿಮಾ!
ಶಂಕರ್ ನಾಗ್ ಅವರ ವೃತ್ತಿಜೀವನ ನೋಡಿದ ಎಂಥವರಿಗಾದರೂ ಅಚ್ಚರಿಯಾಗದೇ ಇರಲು ಸಾಧ್ಯವಿಲ್ಲ. ಯಾಕೆಂದರೆ, ಅವರು ಸಿನಿಮಾರಂಗಕ್ಕೆ ಕಾಲಿಟ್ಟಿದ್ದು 1978ರಲ್ಲಿ. 'ಒಂದಾನೊಂದು ಕಾಲದಲ್ಲಿ..' ಅವರ ಮೊದಲ ಸಿನಿಮಾ. 1990ರಲ್ಲಿ ಅವರು ನಿಧನರಾದರು. ಆ 12 ವರ್ಷಗಳ ಕಡಿಮೆ ಅವಧಿಯಲ್ಲಿ ಅವರು ನಟಿಸಿದ್ದ ಸಿನಿಮಾಗಳ ಸಂಖ್ಯೆ 90ಕ್ಕೂ ಅಧಿಕ! ಜೊತೆಗೆ ರಂಗಭೂಮಿ, ಸಿನಿಮಾ ನಿರ್ಮಾಣ, ಸ್ಟುಡಿಯೋ.. ಹೀಗೆ ಹತ್ತಾರು ಕೆಲಸಗಳನ್ನು ಒಟ್ಟೊಟ್ಟಿಗೆ ಮಾಡುತ್ತಿದ್ದ ಮಿಂಚಿನ ವೇಗದ ವ್ಯಕ್ತಿತ್ವ ಶಂಕರ್ ನಾಗ್ ಅವರದ್ದಾಗಿತ್ತು. ಅವರ ಆಲೋಚನೆಗಳು ಯಾವಾಗಲೂ ಹತ್ತಿಪ್ಪತ್ತು ವರ್ಷ ಮುಂದೆ ಇರುತ್ತಿದ್ದವು.

ಮೆಟ್ರೋ ನಿಲ್ದಾಣಕ್ಕೆ ನಟ, ನಿರ್ದೇಶಕ ಶಂಕರ್‌ ನಾಗ್ ಹೆಸರನ್ನು ಇಡುವಂತೆ ಮನವಿ

26ನೇ ವಯಸ್ಸಿಗೆ ಸಿನಿಮಾ ನಿರ್ದೇಶನ!
1978ರಲ್ಲಿ 'ಒಂದಾನೊಂದು ಕಾಲದಲ್ಲಿ..' ಚಿತ್ರದ ಮೂಲಕ ಸಿನಿಮಾರಂಗಕ್ಕೆ ನಟನಾಗಿ ಕಾಲಿಡುವ ಶಂಕರ್, ಮರುವರ್ಷವೇ ಸಿನಿಮಾ ನಿರ್ದೇಶನಕ್ಕೆ ಅಣಿಯಾಗುತ್ತಾರೆ. ತಮ್ಮ 26ನೇ ವಯಸ್ಸಿಗೆ 'ಮಿಂಚಿನ ಓಟ' ಸಿನಿಮಾ ಮಾಡುತ್ತಾರೆ. ಮೊದಲ ಯತ್ನದಲ್ಲೇ ಫಿಲ್ಮ್‌ಫೇರ್ ಪ್ರಶಸ್ತಿ ಸೇರಿದಂತೆ ಏಳು ರಾಜ್ಯ ಪ್ರಶಸ್ತಿಗಳನ್ನು ಆ ಸಿನಿಮಾ ಪಡೆದುಕೊಳ್ಳುತ್ತದೆ. ಆನಂತರ ಅವರ ನಿರ್ದೇಶನದ 'ನೋಡಿ ಸ್ವಾಮಿ ನಾವಿರೋದೇ ಹೀಗೆ', 'ಆ್ಯಕ್ಸಿಡೆಂಟ್' ಸಿನಿಮಾಗಳಿಗೂ ರಾಜ್ಯ-ರಾಷ್ಟ್ರ ಪ್ರಶಸ್ತಿಗಳು ಸಿಕ್ಕಿವೆ. ಒಟ್ಟು ಅವರು 9 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಡಾ. ರಾಜ್‌ಕುಮಾರ್ ಅವರಿಗೆ 'ಒಂದು ಮುತ್ತಿನ ಕಥೆ' ಸಿನಿಮಾ ನಿರ್ದೇಶಿಸಿದ್ದರು ಶಂಕರ್ ನಾಗ್‌. ಇದರ ಮಧ್ಯೆ 'ಮಾಲ್ಗುಡಿ ಡೇಸ್' ಧಾರಾವಾಹಿಯನ್ನು ನಿರ್ದೇಶನ ಮಾಡಿದ್ದರು.

ಶಂಕರ್‌ ನಾಗ್ ಕಾರು ಅಪಘಾತದ ಬಗ್ಗೆ ಮಾತನಾಡಿದ 'ರಾಮಾಯಣದ ಸೀತೆ'! ಇದು 'ಹೊಸ ಜೀವನ'ದ ಕಥೆ

ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದ ಶಂಕರ್ ಮಿಂಚಿನ ವೇಗದಲ್ಲೇ ತಮ್ಮ ಬದುಕಿನ ಪಯಣ ಮುಗಿಸಿದ್ದು ಬೇಸರದ ಸಂಗತಿ..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌