ಆ್ಯಪ್ನಗರ

ಅಮ್ಮ ಮಾಡುತ್ತಿದ್ದ ಅಡುಗೆಯನ್ನು ನೆನೆದು ಭಾವುಕರಾದ 'ನವರಸ ನಾಯಕ' ಜಗ್ಗೇಶ್‌!

'ನವರಸ ನಾಯಕ' ಜಗ್ಗೇಶ್‌ ಅವರಿಗೆ ತಮ್ಮ ತಾಯಿ ಬಗ್ಗೆ ಅಪಾರ ಗೌರವ ಇದೆ. ಇದೀಗ ಅವರು ಅಮ್ಮನ ಕೈರುಚಿಯನ್ನು ನೆನೆದು ಭಾವುಕರಾಗಿದ್ದಾರೆ. ಅಮ್ಮ ಮಾಡಿಕೊಡುತ್ತಿದ್ದ ಆಹಾರದ ಬಗ್ಗೆ ಬರೆದುಕೊಂಡಿದ್ದಾರೆ.

Vijaya Karnataka Web 24 Nov 2020, 8:12 am
ನಟ ಜಗ್ಗೇಶ್ ತುಂಬ ಭಾವುಕ ಜೀವಿ. ಅದು ಅವರ ಮಾತುಗಳನ್ನು ಕೇಳಿದವರಿಗೆ ಗೊತ್ತಾಗುತ್ತದೆ. ಅದರಲ್ಲೂ ಅವರಿಗೆ ಅಮ್ಮ ಎಂದರೆ ಪ್ರಾಣ. ತಮ್ಮ ತಾಯಿ ಬಗ್ಗೆ ಅನೇಕ ಬಾರಿ ಜಗ್ಗೇಶ್‌ ಸೋಶಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಅಂದಹಾಗೆ, ಜಗ್ಗೇಶ್‌ ಅವರಿಗೆ ಈಗ ಅಮ್ಮನ ಕೈರುಚಿಯನ್ನು ಸವಿಯವ ಮನಸ್ಸಾಗಿದೆ. ಆದರೆ, ಮಾಡಿಕೊಡಲು ಅಮ್ಮ ಇಲ್ಲ ಎಂಬ ನೋವು ಅವರನ್ನು ಕಾಡುತ್ತಿದೆ. ಅಷ್ಟಕ್ಕೂ ಒಂದು ಕಾಲದಲ್ಲಿ, ಅವರು ತಮ್ಮ ತಾಯಿ ಅಡುಗೆಯನ್ನೇ ಹಂಗಿಸಿದ್ದರು! ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಜಗ್ಗೇಶ್ ಹಂಚಿಕೊಂಡ ಮಾಹಿತಿ ಇಲ್ಲಿದೆ.
Vijaya Karnataka Web Jaggesh


ಬೆಳಿಗ್ಗೆಯೇ ಮುದ್ದೆ ಸಾರು ತಿನ್ನಬೇಕಿತ್ತು
'ನಮ್ಮದು ಸಂಪ್ರದಾಯ ಗಂಗಟಿಗಾರ ಒಕ್ಕಲಿಗ ಮನೆತನ. ಹಾಸನ, ತುಮಕೂರು, ಮಂಡ್ಯ, ಬೆಂಗಳೂರು ಗ್ರಾಮಾಂತರದ ಸಂತತಿ. ಎಲ್ಲರ ಊಟದ ತಯಾರಿಕೆ ಒಂದೇ ಬಗೆ. ಅಂತೆಯೇ ಎಲ್ಲಾ ತಲೆಮಾರು ಪದ್ಧತಿ ಅಮ್ಮ ಅನುಸರಿಸುತ್ತಿದ್ದಳು. ಕಾಲೇಜಿನಲ್ಲಿ ಎಲ್ಲಾ ಜನಾಂಗದ ಮಿತ್ರರು ನನಗಿದ್ದರು. ಅದರಲ್ಲಿ ರವಿಚಂದ್ರ (ಜೈನ ಪಂಕ್ತದವರು) ಸಹವಾಸದಿಂದ ಅವರ ಮನೆಯ ಊಟ ತಿಂಡಿ ನನಗೆ ಪಂಚಪ್ರಾಣ. ನಮ್ಮ ಮನೆಯಲ್ಲಿ ಅಮ್ಮ ಮಾಡುತ್ತಿದ್ದ ಮಸ್ಸೊಪ್ಪು, ಬಸ್ಸಾರು, ಉಪ್ ಸಾರು, ರಾಗಿ ರೊಟ್ಟಿ ಉಚ್ಚೆಳ್ ಚಟ್ನಿ, ಹುಣಿಸೆ ಗೊಜ್ಜು, ಚಿತ್ರಾನ್ನ ದಿನ ನಿತ್ಯದ ಅಡುಗೆ ಆಗಿತ್ತು. ಬೆಳಿಗ್ಗೆಯೇ ಮುದ್ದೆ ಸಾರು ತಿನ್ನಬೇಕಿತ್ತು' ಎಂದಿದ್ದಾರೆ ಜಗ್ಗೇಶ್.

ಯೌವ್ವನದ ಮದ ಅಂದು ಅರಿವಾಗಲಿಲ್ಲ!
'ಸ್ನೇಹಿತನ ಮನೆಯ ತಿಂಡಿ ಪಳಗಿದ ನಾನು ಅಮ್ಮನ ಅಡುಗೆ ಹಂಗಿಸಿ, 'ಬರೀ ಇದೆ ತಿಂದು ಸಾಯಬೇಕು' ಎಂದು ತಟ್ಟೆ ಎಸೆದು ಹೋಗುತ್ತಿದ್ದೆ! ಆಗ ನೊಂದ ಅಮ್ಮ, 'ಮಗನೇ, ಈಶ ನಾವು ಹಳ್ಳಿಮಕ್ಕಳು. ನನಗೆ ನಮ್ಮ ಹಿರಿಯರು ಕಲಿಸಿದ್ದು ಮಾತ್ರ ಕಲಿತಿರುವೆ. ನಿನ್ನ ಸ್ನೇಹಿತರ ಮನೆಯ ಅಡುಗೆ ನನಗೆ ಬರದು ಕಂದ. ನಾವು ಎಷ್ಟೇ ಬೆಳೆದರು ನಮ್ಮ ಸಂಪ್ರದಾಯ ಬಿಡಬಾರದು ಕಂದ. ಭಗವಂತ ಕೊಟ್ಟು ನೋಡುತ್ತಾನೆ. ಬದಲಾದರೆ ಅದನ್ನೇ ಬಯಸಿ, ಕೊರಗುವ ದಿನ ಕೊಡುತ್ತಾನೆ' ಎಂದು ಬುದ್ದಿ ಹೇಳುತ್ತಿದ್ದಳು. ಯೌವ್ವನದ ಮದ ಅಂದು ಅರಿವಾಗಲಿಲ್ಲಾ. ಇಂದು ಆ ಸಂಪ್ರದಾಯದ ಅಜ್ಜಿ, ಅಮ್ಮ, ದೊಡ್ಡಮ್ಮ, ಚಿಕ್ಕಮ್ಮ ಯಾರು ಇಲ್ಲಾ. ಇಂದು ನಾನು ಬಯಸಿದ್ದು ಎಲ್ಲಾ ಊಟ ಉಪಚಾರ ಸಿಗುತ್ತಿದೆ. ಆದರೆ ಅಮ್ಮನ ನೆಚ್ಚಿನ ಕೈ ಅಡುಗೆ ಸಿಗುತ್ತಿಲ್ಲಾ..' ಎಂಬ ನೋವು ಜಗ್ಗೇಶ್ ಅವರದ್ದು.

'ಅಂದು ನಮ್ಮ ಸಂಪ್ರದಾಯದ ಊಟ ಜರಿದ ನಾನು ಇಂದು ಅದೆ ಊಟ ಬಯಸುತ್ತಿರುವೆ. ಆ ಕಾಲದ ಸಂಪ್ರದಾಯ ಕಲಿತವರು ಯಾರು ಇಲ್ಲಾ. ಎಲ್ಲಾ ಆಧುನಿಕ ಅಡುಗೆ ಕಲಿತವರೆ ಇದ್ದಾರೆ. ನನ್ನ ಪುಣ್ಯಕ್ಕೆ ನನ್ನ ಹಿರಿ ಅಕ್ಕ ಮಹಾದೇವಿ, ಅಮ್ಮನ ಕೈಚಳಕ ಕಲಿತವಳು ಇದ್ದಾಳೆ. ಏನು ಮಾಡೋದು, ಅವಳ ಮಕ್ಕಳು ಅಮೇರಿಕ, ದುಬೈನಲ್ಲಿ ಇದ್ದಾರೆ. ಹಾಗಾಗಿ ಎರಡು ವರ್ಷ ಅವಳು ದೂರ ಇದ್ದಳು. ಕಳೆದ ವಾರ ವಾಪಸ್ ಬಂದುಬಿಟ್ಟಳು. ಆಕೆ ಏನು ಬೇಕು?ಎಂದು ಕೇಳಿದ್ದೆ ತಡ, 'ಮಾದೇವಮ್ಮ, ಅಮ್ಮನಂತೆ ಉಪ್ಪ್ ಸಾರು ಮಾಡಿಕೊಡಮ್ಮ' ಎಂದೆ. ಬಹಳ ಖುಷಿಯಿಂದ ಉಪ್ ಸಾರು, ಅವರೇ ಪಲ್ಯ ಮಾಡಿಕೊಟ್ಟಳು. ಯಾರ ಬಳಿ ಮಾತಾಡದೆ ತಿನ್ನುತ್ತಿದ್ದೆ ಕಣ್ಣೀರು. ಅಮ್ಮನ ನೆನೆದು ಕೆನ್ನೆಯಿಂದ ಜಾರುತ್ತಿತ್ತು. ಸೂಕ್ಷ್ಮ ಮನಸ್ಸು, ಯೌವ್ವನದಲ್ಲಿ ಅಮ್ಮನ ಊಟ ಜರಿದ ನನ್ನ ಕ್ಯಾಕರಿಸಿ ಉಗಿಯುತ್ತಿತ್ತು..' ಎಂದು ಬರೆದುಕೊಂಡಿದ್ದಾರೆ ಅವರು.

ಇಂದು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳಿಂದ ಪವಾಡ: ಘಟನೆ ಬಿಚ್ಚಿಟ್ಟ ನಟ ಜಗ್ಗೇಶ್!

'ಸ್ನೇಹಿತರೆ ಲೋಕ ಎಷ್ಟೇ ಮುಂದೆ ಹೋದರು ಅನೇಕರು ಅನೇಕ ಪದ್ದತಿ ಪಾಲಿಸಿದರು. ನಾವು ಬೆಳೆದ ಪರಿಸರ, ಅಪ್ಪ ಅಮ್ಮನ ಮಡಿಲು, ಅವರ ಊಟದ ಪದ್ದತಿ, ಸಂಪ್ರದಾಯ ಅವರ ಭಾವನಾತ್ಮಕ ಸಂಬಂಧ ಅವರ ನಿಶ್ಕಲ್ಮಷ ಪ್ರೀತಿ ಜಗತ್ತಿನಲ್ಲಿ ಯಾವುದು ಸಮವಲ್ಲಾ. ಇದ್ದಾಗ ಅವರ ಅನುಸರಿಸಿ ಮುಂದಿನ ಜನ್ಮಕ್ಕಾಗುವಷ್ಟು ಪ್ರೀತಿಸಿಬಿಡಿ. ಅವರು ನಮ್ಮ ಬಿಟ್ಟು ಹೋದರೆ ನಮಗೆ ಸಿಗುವ ನೆನಪು ಕಣ್ಣೀರು. ಅಮ್ಮನ ಕೈ ರುಚಿ ನನ್ನ ಹಿಂದಕ್ಕೆ ಸರಿಸಿ ಅಣಕಿಸಿತು. ಅಮ್ಮ ಐ ಲವ್ ಯೂ...' ಎಂದು ಭಾವುಕರಾಗಿದ್ದಾರೆ ಅವರು.

ಕಷ್ಟ, ಅವಮಾನಗಳ ಮಧ್ಯೆ ಯಶಸ್ವಿ 40 ವರ್ಷ ಕಳೆದ 'ನವರಸನಾಯಕ' ಜಗ್ಗೇಶ್! ಶುಭಾಶಯಗಳ ಸುರಿಮಳೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌