ಆ್ಯಪ್ನಗರ

'ಕನ್ನಡಿಗ' ಚಿತ್ರಕ್ಕಾಗಿ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡ 'ಕ್ರೇಜಿ ಸ್ಟಾರ್‌' ರವಿಚಂದ್ರನ್‌!

'ಕ್ರೇಜಿ ಸ್ಟಾರ್‌' ರವಿಚಂದ್ರನ್‌ ಅಭಿನಯದ 'ಕನ್ನಡಿಗ' ಚಿತ್ರದ ಶೂಟಿಂಗ್ ಆರಂಭಗೊಂಡಿದೆ. ಅದರಲ್ಲಿ ರವಿಚಂದ್ರನ್ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಆ ಲುಕ್ ಹೇಗಿದೆ ಎಂದು ಬಹಿರಂಗಗೊಂಡಿದೆ.

Vijaya Karnataka Web 8 Nov 2020, 4:00 pm
ಕೆಲ ದಿನಗಳ ಹಿಂದಷ್ಟೇ 'ಕ್ರೇಜಿ ಸ್ಟಾರ್‌' ರವಿಚಂದ್ರನ್‌ ನಾಯಕತ್ವದಲ್ಲಿ 'ಕನ್ನಡಿಗ' ಸಿನಿಮಾ ಸೆಟ್ಟೇರಿತ್ತು. ಐತಿಹಾಸಿಕ ಕಥೆಯುಳ್ಳ ಈ ಸಿನಿಮಾದಲ್ಲಿ ರವಿಚಂದ್ರನ್, ಲಿಪಿಕಾರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಿ.ಎಂ. ಗಿರಿರಾಜ್ ನಿರ್ದೇಶನದ ಈ ಚಿತ್ರದಲ್ಲಿ ರವಿಚಂದ್ರನ್ ಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಈ ಹಿಂದೆಯೇ ಹೇಳಲಾಗಿತ್ತು. ಇದೀಗ ಅದಕ್ಕೆ ಸಾಕ್ಷಿ ಸಿಕ್ಕಿದ್ದು, 'ಕನ್ನಡಿಗ' ಚಿತ್ರದಲ್ಲಿ ಅವರ ಪಾತ್ರದ ಲುಕ್ ರಿವೀಲ್ ಆಗಿದೆ.
Vijaya Karnataka Web Ravichandra


ಡಿಫರೆಂಟ್ ಲುಕ್‌ನಲ್ಲಿ ರವಿಚಂದ್ರನ್‌

'ಕನ್ನಡಿಗ' ಚಿತ್ರದಲ್ಲಿ ರವಿಚಂದ್ರನ್‌ ಭಿನ್ನ ಲುಕ್‌ನಲ್ಲಿ ಗಮನಸೆಳೆಯುತ್ತಿದ್ದಾರೆ. ತಲೆಗೊಂದು ಪೇಟ ಸುತ್ತಿಕೊಂಡು, ಭಿನ್ನ ಕಾಸ್ಟ್ಯೂಮ್‌ನಲ್ಲಿ ಲಿಪಿಕಾರ ಗುಣಭದ್ರನಾಗಿ ಮಿಂಚುತ್ತಿದ್ದಾರೆ. ಇದೇ ಮೊದಲ ಬಾರಿಗೆ ಈ ಥರದ ಲುಕ್‌ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. 'ಕನ್ನಡಿಗ' ಚಿತ್ರದಲ್ಲಿನ ಅವರ ಹೊಸ ಅವತಾರ ಕಂಡು ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಪ್ರಸ್ತುತ ಚಿಕ್ಕಮಗಳೂರು ಸುತ್ತಮುತ್ತ ಸಿನಿಮಾದ ಶೂಟಿಂಗ್ ಸಾಗುತ್ತಿದೆ. ಚಿತ್ರದಲ್ಲಿ ರವಿಚಂದ್ರನ್‌ ಪತ್ನಿಯಾಗಿ ಪಾವನಾ ಕಾಣಿಸಿಕೊಂಡಿದ್ದಾರೆ. ಕಿಟ್ಟಲ್ ಪಾತ್ರದಲ್ಲಿ ಜೆಮಿ ವಾಲ್ಟರ್ ಕಾಣಿಸಿಕೊಳ್ಳಲಿದ್ದಾರೆ. ಕಮರೀಲ ಭಟ್ಟನಾಗಿ ಚಿ. ಗುರುದತ್, ಮಠದ ಸ್ವಾಮಿಯ ಪಾತ್ರದಲ್ಲಿ ದತ್ತಣ್ಣ, ಮಲ್ಲಿನಾಥನಾಗಿ ಬಾಲಾಜಿ ಮನೋಹರ್ ಮತ್ತು ಅಚ್ಯುತ್ ಕುಮಾರ್ ಹರಿಗೋಪಾಲನ ಪಾತ್ರ ನಿರ್ವಹಿಸುತ್ತಿದ್ದಾರೆ. ರಾಣಿ ಚಿನ್ನಬೈರಾದೇವಿ ಪಾತ್ರದಲ್ಲಿ ನಟಿ ಸುಮಲತಾ ಅಂಬರೀಷ್ ಕಾಣಿಸಿಕೊಳ್ಳಲಿದ್ದಾರೆ

150 ವರ್ಷಕ್ಕೂ ಹಿಂದಿನ ಕಥೆ 'ಕನ್ನಡಿಗ' ಚಿತ್ರದಲ್ಲಿದ್ದು, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಮಾಡುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ ಶೂಟಿಂಗ್ ಆದಮೇಲೆ ಸಾಗರ ಸುತ್ತಮುತ್ತಲಿನ ಕೆಲವು ಪ್ರದೇಶಗಳಲ್ಲಿಯೂ ಶೂಟಿಂಗ್ ನಡೆಯಲಿದೆ. ನವೆಂಬರ್‌ನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಸುವುದು ಚಿತ್ರತಂಡದ ಸದ್ಯದ ಯೋಜನೆ. ಜಿ.ಎಸ್.ವಿ. ಸೀತಾರಾಮ್ ಛಾಯಾಗ್ರಹಣ ಮಾಡುತ್ತಿದ್ದು, ರವಿ ಬಸ್ರೂರ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಅರ್ಜುನ್ ಕಿಟ್ಟು ಸಂಕಲನ ಮಾಡುತ್ತಿದ್ದಾರೆ. 'ಜಟ್ಟ' ಮತ್ತು 'ಮೈತ್ರಿ' ಎರಡು ಸಿನಿಮಾಗಳನ್ನು ನಿರ್ಮಿಸಿದ್ದ ಎನ್.ಎಸ್. ರಾಜ್‌ಕುಮಾರ್ 'ಕನ್ನಡಿಗ'ನಿಗೆ ಹಣ ಹಾಕುತ್ತಿದ್ದಾರೆ.

'ಕನ್ನಡಿಗ' ಚಿತ್ರದಲ್ಲಿ ರವಿಚಂದ್ರನ್ ಪಾತ್ರವೇನು? ರಾಣಿಯಾಗಿ ಸಂಸದೆ ಸುಮಲತಾ ಅಂಬರೀಷ್‌ ನಟನೆ

ಅಂದಹಾಗೆ, ಈ ಚಿತ್ರಕ್ಕೆ ರವಿಚಂದ್ರನ್‌ ಅವರನ್ನು ಆಯ್ಕೆ ಮಾಡಿಕೊಂಡಿದ್ದರ ಬಗ್ಗೆ ಈ ಹಿಂದೆ ನಿರ್ದೇಶಕ ಗಿರಿರಾಜ್ ಹೀಗೆ ಹೇಳಿಕೊಂಡಿದ್ದರು. 'ಸಿನಿಮಾದಲ್ಲಿ ಬರುವ ನಾಯಕನ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡಿಕೊಳ್ಳುವುದು? ಅಪಾರ ಘನತೆ ಹೊಂದಿರುವ ಈ ಪಾತ್ರಕ್ಕೆ ಅಷ್ಟೇ ಪ್ರಮುಖ ಕಲಾವಿದರೇ ಬೇಕು ಎಂದು ಯೋಚಿಸಿದಾಗ ಮೊದಲು ನೆನಪಾಗಿದ್ದೇ ರವಿಚಂದ್ರನ್ ಅವರು. ಈ ಪಾತ್ರಕ್ಕೆ ಅವರು ಹೇಳಿ ಮಾಡಿಸಿದಂತಹ ವ್ಯಕ್ತಿ. ಪೂರ್ತಿ ಕಥೆ ಕೇಳಿದ ಅವರು ಸಿನಿಮಾದಲ್ಲಿ ನಟಿಸಲು ನನ್ನ ಅಭ್ಯಂತರವಿಲ್ಲ. ಆದರೆ ಇದು ಸಂಪೂರ್ಣ ಬೇರೆಯದ್ದೇ ಪ್ರಾಕಾರದಲ್ಲಿ ಇರೋದರಿಂದ ಮೇಕಿಂಗ್ ಇತ್ಯಾದಿಗಳನ್ನೆಲ್ಲಾ ನೀವೇ ನಿಭಾಯಿಸಿಕೊಳ್ಳಬೇಕು. ನಟಿಸೋದು ಮಾತ್ರ ನನ್ನ ಜವಾಬ್ದಾರಿ ಎಂದು ಹೇಳಿದ್ದರು. ಆ ಮೂಲಕ 'ಕನ್ನಡಿಗ'ನ ಪಾತ್ರಕ್ಕೆ ರವಿಚಂದ್ರನ್ ಅವರ ಆಗಮನವಾಯಿತು' ಎಂದು ಅವರು ಹೇಳಿದ್ದರು.

ರವಿಚಂದ್ರನ್ ಹೊಸ ಚಿತ್ರದ ಶೀರ್ಷಿಕೆ 'ಕನ್ನಡಿಗ'! ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಒಬ್ಬ 'ಸ್ಪೆಷಲ್‌' ನಟ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌