ಆ್ಯಪ್ನಗರ

ಅಯೋಧ್ಯೆ ತೀರ್ಪು: ಬೆಂಗಳೂರಿನಲ್ಲಿ ಸಿನಿಮಾ ಪ್ರದರ್ಶನ ಇದೆಯೋ? ಇಲ್ಲವೋ?

ಭಾರತೀಯರ ಪಾಲಿಗೆ ಇಂದು (ನವೆಂಬರ್ 9) ಮಹತ್ವದ ದಿನ. ಸುಪ್ರೀಂ ಕೋರ್ಟ್‌ನಿಂದ ಅಯೋಧ್ಯೆ ತೀರ್ಪು ಹೊರಬೀಳುತ್ತಿದ್ದು, ದೇಶದ ಗಮನ ಅತ್ತ ನೆಟ್ಟಿದೆ. ಇತ್ತ ಸ್ಯಾಂಡಲ್‌ವುಡ್ ಮೇಲೆ ಇದು ಯಾವ ಪರಿಣಾಮ ಬೀರಿದೆ ಅನ್ನೋದರ ಬಗ್ಗೆ ಇಲ್ಲಿದೆ ಮಾಹಿತಿ.

Vijaya Karnataka Web 9 Nov 2019, 11:02 am
ನವೆಂಬರ್ 9ರಂದು ಇಡೀ ದೇಶದ ಜನರ ಕಣ್ಣು ಅಯೋಧ್ಯೆ ತೀರ್ಪಿನತ್ತ ನೆಟ್ಟಿದೆ. ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪಂಚ ನ್ಯಾಯಾಧೀಶರ ಪೀಠವು ಅಯೋಧ್ಯ ವಿವಾದ ಕುರಿತು ಏನು ತೀರ್ಪು ನೀಡಲಿದೆ ಎಂಬ ಕುತೂಹಲ ಇದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯದಲ್ಲೂ ಪೊಲೀಸ್ ಇಲಾಖೆ ಅಗತ್ಯ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇದರಿಂದ ಚಿತ್ರರಂಗದ ಮೇಲೆ ಏನು ಪರಿಣಾಮ ಉಂಟಾಗಿದೆ?
Vijaya Karnataka Web ಚಿತ್ರಮಂದಿರ


ಅಯೋಧ್ಯೆ ತೀರ್ಪು: ಪ್ರಕರಣದ ಸುದೀರ್ಘ ಇತಿಹಾಸದ ವಿವರ ಇಲ್ಲಿದೆ

ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಬೆಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ 144 ಸೆಕ್ಷನ್ ಜಾರಿ ಮಾಡಿದ್ದಾರೆ. ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಆದರೆ, ಚಿತ್ರಮಂದಿರಗಳಿಗೆ ಯಾವುದೇ ಸಮಸ್ಯೆ ಇಲ್ಲ. ಚಿತ್ರ ಪ್ರದರ್ಶನ ಎಂದಿನಂತೆ ಮುಂದುವರಿದಿದೆ.
ಸದ್ಯಕ್ಕೆ ಚಿತ್ರ ಪ್ರದರ್ಶನ ಮಾಡದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದಲೂ ಯಾವುದೇ ಆದೇಶ ಹೊರಬಿದ್ದಿಲ್ಲ. ಜತೆಗೆ ಜಿಲ್ಲಾಧಿಕಾರಿ ಅಥವಾ ಪೊಲೀಸ್ ಇಲಾಖೆಯಿಂದಲೂ ಚಿತ್ರಮಂದಿರ ಮಾಲೀಕರಿಗೆ ಸಿನಿಮಾ ಪ್ರದರ್ಶನ ಮಾಡದಂತೆ ಯಾವುದೇ ಸೂಚನೆ ಬಂದಿಲ್ಲ. ಹಾಗಾಗಿ, ಎಂದಿನಂತೆ ಸಿನಿಮಾಗಳ ಪ್ರದರ್ಶನ ನಡೆಯಲಿದೆ. ಪರಿಸ್ಥಿತಿ ಅನುಗುಣವಾಗಿ ಸಿನಿಮಾ ಪ್ರದರ್ಶನ ಮಾಡಬೇಕೋ, ಬೇಡವೋ ಎಂಬುದನ್ನು ಚಿತ್ರಮಂದಿರದ ಮಾಲೀಕರು ಕೊನೆ ಕ್ಷಣದಲ್ಲಿ ನಿರ್ಧಾರ ಮಾಡುವ ಸಾಧ್ಯತೆಗಳಿವೆ.

ವಿಡಿಯೋ: ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಸೇನಾಪಡೆ, ಡ್ರೋಣ್‌ಗಳ ಕಣ್ಗಾವಲು

ಶುಕ್ರವಾರವಷ್ಟೇ ಆರು ಕನ್ನಡ ಸಿನಿಮಾಗಳು ತೆರೆಗೆ ಬಂದಿವೆ. ರವಿಚಂದ್ರನ್ ಅವರ 'ಆ ದೃಶ್ಯ', ರವಿ ಬಸ್ರೂರ್ ನಿರ್ದೇಶನದ 'ಗಿರ್ಮಿಟ್‌' ಮತ್ತು ಬಾಲು ನಾಗೇಂದ್ರ ನಟನೆಯ 'ಕಪಟನಾಟಕ ಪಾತ್ರಧಾರಿ' ಚಿತ್ರಗಳು ತೆರೆಕಂಡಿದ್ದು, ಉತ್ತಮ ವಿಮರ್ಶೆ ಪಡೆದುಕೊಂಡಿವೆ. ಇನ್ನು, ಮುಂದಿನ ವಾರ ತೆರೆಕಾಣಬೇಕಿದ್ದ 'ನಮ್‌ ಗಣಿ ಬಿ.ಕಾಂ ಪಾಸ್‌' ಚಿತ್ರತಂಡ ಇಂದು ಪತ್ರಿಕಾಗೋಷ್ಟಿ ಆಯೋಜಿಸಿತ್ತು. ಆದರೆ, ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಅದನ್ನು ಮುಂದೂಡಿದೆ.

ಆಡಿಷನ್‌ ಮುಂದೂಡಿದ ರಿಷಭ್‌
ರಿಷಭ್ ಶೆಟ್ಟಿ ನಿರ್ದೇಶನದಲ್ಲಿ 'ರುದ್ರ ಪ್ರಯಾಗ' ಚಿತ್ರ ಘೋಷಣೆ ಆಗಿದೆ. ಜನವರಿಯಿಂದ ಈ ಸಿನಿಮಾಗೆ ಶೂಟಿಂಗ್ ಮಾಡಬೇಕಿದೆ. ಚಿತ್ರಕ್ಕೆ ಉತ್ತರ ಕರ್ನಾಟಕದ ಕಲಾವಿದರ ಅವಶ್ಯಕತೆ ಇದ್ದು, ಶನಿವಾರ ಅವರು ಆಡಿಷನ್‌ ಹಮ್ಮಿಕೊಂಡಿದ್ದರು. ಆದರೆ, ಅಯೋಧ್ಯೆ ತೀರ್ಪು ಹೊರಬರುತ್ತಿರುವ ಹಿನ್ನೆಲೆಯಲ್ಲಿ ಆಡಿಷನ್‌ ಮುಂದೂಡಲಾಗಿದೆ. 'ಇಂದು ಅಯೋಧ್ಯೆ ತೀರ್ಪು ಹೊರಬರುವುದರಿಂದ, ಪರಿಸ್ಥಿತಿ ಸೂಕ್ಷ್ಮವಾಗಿದ್ದು. ರಾಜ್ಯಾದ್ಯಂತ ಹೈ ಅಲರ್ಟ್‌ ಘೋಷಿಸಲಾಗಿದೆ. ಇದೆ ಕಾರಣಕ್ಕಾಗಿ ಇಂದು ನಡೆಯಬೇಕಿದ್ದ 'ರುದ್ರಪ್ರಯಾಗ' ಸಿನೆಮಾದ ಓಪನ್ ಆಡಿಷನ್‌ ಅನ್ನು ನಾಳೆಗೆ ಮುಂದೂಡಲಾಗಿದೆ. ಕ್ಷಮೆಯಿರಲಿ' ಎಂದಿದ್ಧಾರೆ ರಿಷಭ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌