ಆ್ಯಪ್ನಗರ

Bigg Boss Jayashree Suicide: 'ಬಿಗ್ ಬಾಸ್' ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ!

'ಬಿಗ್ ಬಾಸ್' ರಿಯಾಲಿಟಿ ಶೋ ಮೂಲಕ ಜನಪ್ರಿಯಗೊಂಡಿದ್ದ ಜಯಶ್ರೀ ರಾಮಯ್ಯ, ಸೋಮವಾರ (ಜ.25) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಜೀವ ಕಳೆದುಕೊಂಡಿದ್ದಾರೆ.

Vijaya Karnataka Web 25 Jan 2021, 2:38 pm
'ಉಪ್ಪು ಹುಳಿ ಖಾರ', 'ಕನ್ನಡ್‌ ಗೊತ್ತಿಲ್ಲ' ಮುಂತಾದ ಸಿನಿಮಾಗಳಲ್ಲಿ ನಟಿಸಿ ಗಮನಸೆಳೆದಿದ್ದ 'ಬಿಗ್‌ ಬಾಸ್‌' ಕನ್ನಡ ಸೀಸನ್ 3ರ ಮಾಜಿ ಸ್ಪರ್ಧಿ ಜಯಶ್ರೀ ರಾಮಯ್ಯ ಅವರು ಸೋಮವಾರ (ಜ.25) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆಯ ಗೊಲ್ಲರಹಟ್ಟಿಯ ಪ್ರಗತಿ ಬಡಾವಣೆಯಲ್ಲಿರುವ ಸಂಧ್ಯಾಕಿರಣ ಆಶ್ರಮದ ಕೊಠಡಿಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಸದ್ಯ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಗೊತ್ತಾಗಿಲ್ಲ. ಬಹಳ ದಿನಗಳಿಂದ ಜಯಶ್ರೀ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.
Vijaya Karnataka Web Jayashree Ramaiah


ಜುಲೈನಲ್ಲಿ ಆತ್ಮಹತ್ಯೆ ಪ್ರಯತ್ನ ಮಾಡಿದ್ದ ನಟಿ
ಹಲವು ತಿಂಗಳಿನಿಂದ ಖಿನ್ನತೆಯಿಂದ ಬಳಲುತ್ತಿದ್ದ ಜಯಶ್ರೀ, ಜುಲೈ 22ರಂದು ಆತ್ಮಹತ್ಯೆ ಪ್ರಯತ್ನ ಮಾಡಿದ್ದರು. ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ 'I Quit... ಖಿನ್ನತೆಯಿಂದ ಬಳಲುತ್ತಿದ್ದು, ಈ ಜಗತ್ತಿಗೆ ಗುಡ್‌ಬೈ ಹೇಳುತ್ತೇನೆ' ಎಂಬರ್ಥದ ಪೋಸ್ಟ್ ಹಾಕಿಕೊಂಡಿದ್ದರು ಅವರು. ಆ ಸಮಯದಲ್ಲಿ ಅವರ ಅಭಿಮಾನಿ ವಲಯದಲ್ಲಿ ಸಾಕಷ್ಟು ಆತಂಕ ಮನೆ ಮಾಡಿತ್ತು. ಅವರಿಗೆ ಕರೆ ಮಾಡಿದರೂ, ಸಂಪರ್ಕ ಸಾಧ್ಯವಾಗಿರಲಿಲ್ಲ. ಖಿನ್ನತೆಯಿಂದ ಒಳಗಾಗಿದ್ದ ಅವರನ್ನು ರಿಹ್ಯಾಬಿಲಿಟೇಷನ್‌ ಕೇಂದ್ರಕ್ಕೆ ಸೇರಿಸಲಾಗಿತ್ತು. ಅಲ್ಲಿಂದಲೇ ಅವರು ಈ ರೀತಿ ಪೋಸ್ಟ್‌ ಮಾಡಿದ್ದರು. ಕೆಲ ಘಂಟೆಗಳ ಬಳಿಕ 'ನಾನು ಸರಿಯಾಗಿ, ಸುರಕ್ಷಿತವಾಗಿದ್ದೇನೆ. ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ' ಎಂದು ಜಯಶ್ರೀ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿತ್ತು.

ಆತ್ಮವಿಶ್ವಾಸ ತುಂಬಿದ್ದ ಸುದೀಪ್‌ ಮಾತುಗಳು

ಖಿನ್ನತೆಯಿಂದ ಬಳಲುತ್ತಿದ್ದ ಜಯಶ್ರೀಗೆ ನಟ ಸುದೀಪ್‌ ಅವರು ಸಹಾಯ ಮಾಡಿದ್ದರು. ಅದನ್ನೂ ಕೂಡ ಜಯಶ್ರೀ ಅವರೇ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. 'ನಿಮ್ಮ ಕಾಳಜಿಗೆ ಧನ್ಯವಾದಗಳು ಸುದೀಪ್‌ ಸರ್‌. ನೀವು ನನ್ನನ್ನು ಬದುಕಿಸಿದ್ದೀರಿ. ಸುದೀಪ್‌ ಅವರ ತಂಡದ ಸದಸ್ಯರು, ನನ್ನ ಸ್ನೇಹಿತರು ಮತ್ತು ಅಭಿಮಾನಿಗಳನ್ನು ನಾನು ಪ್ರೀತಿಸುತ್ತೇನೆ. ನಿಮ್ಮನ್ನೆಲ್ಲ ಆತಂಕಕ್ಕೆ ತಳ್ಳಿದ್ದಕ್ಕೆ ಕ್ಷಮೆ ಇರಲಿ. ನಾನು ಮತ್ತೆ ಸಹಜ ಸ್ಥಿತಿಗೆ ಮರಳಿದ್ದೇನೆ. ಬೆಂಬಲ ನೀಡಿದ ಮಾಧ್ಯಮದವರಿಗೂ ಧನ್ಯವಾದಗಳು' ಎಂದು ಬರೆದುಕೊಂಡಿದ್ದರು ಜಯಶ್ರೀ. ಆದರೆ, ಇಂದು ಪುನಃ ಅವರು ಸಾವಿನ ಹಾದಿಯನ್ನೇ ಹಿಡಿದಿದ್ದಾರೆ. ಈ ಬಾರಿ ಮರಳಿ ಬಾರದೂರಿನತ್ತ ಪಯಣ ಬೆಳೆಸಿದ್ದಾರೆ.

ಸಾಯಲು ಹೊರಟಿದ್ದ 'ಬಿಗ್‌ ಬಾಸ್‌' ಜಯಶ್ರೀ ಈಗ ಸುದೀಪ್‌ಗೆ ಧನ್ಯವಾದ ಹೇಳುತ್ತಿರುವುದು ಏಕೆ?

ಬಿಗ್ ಬಾಸ್ ಮೂಲಕ ಫೇಮಸ್ ಆಗಿದ್ದ ಜಯಶ್ರೀ
ಬಿಗ್ ಬಾಸ್ ಕನ್ನಡ ಸೀಸನ್‌ 3ರಲ್ಲಿ ಸ್ಪರ್ಧಿಯಾಗಿ ಗಮನಸೆಳೆದ ಜಯಶ್ರೀ ಅಲ್ಲಿ ಇದ್ದಿದ್ದು ಬರೀ 2 ವಾರ ಮಾತ್ರ! ಆನಂತರ 'ಉಪ್ಪು ಹುಳಿ ಖಾರ', 'ಕನ್ನಡ್‌ ಗೊತ್ತಿಲ್ಲ' ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. ಜೊತೆಗೆ ಮಾಡೆಲಿಂಗ್ ಕೂಡ ಮಾಡುತ್ತಿದ್ದರು. ಈ ಮಧ್ಯೆ ಒಂದಷ್ಟು ಕೌಟುಂಬಿಕ ಸಮಸ್ಯೆಗಳ ಬಗ್ಗೆಯೂ ಅವರು ಆಗಾಗ ಹೇಳಿಕೊಂಡಿದ್ದರು. ಕಳೆದ ಹಲವು ದಿನಗಳಿಂದ ಸಂಧ್ಯಾಕಿರಣ ಆಶ್ರಮದ ರಿಹ್ಯಾಬಿಲಿಟೇಷನ್‌ ಕೇಂದ್ರದಲ್ಲಿ ಅವರು ಇದ್ದರು.

I Quit... ಎಂದು ಫೇಸ್‌ಬುಕ್‌ ಮೂಲಕ ಶಾಕಿಂಗ್‌ ಸಂದೇಶ ನೀಡಿದ ಬಿಗ್‌ ಬಾಸ್‌ ಜಯಶ್ರೀ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌