ಒಂಬತ್ತು ದಿನಗಳ ನವರಾತ್ರಿಯನ್ನು ರಾಜ್ಯದಲ್ಲಿಒಂದೊಂದು ಕಡೆ ಒಂದೊಂದು ರೀತಿಯಲ್ಲಿಆಚರಿಸಲಾಗಿದೆ. ಎಲ್ಲೆಲ್ಲೂ ಆತಂಕದ ಸುದ್ದಿಗಳೇ ಬರುತ್ತಿರುವ ದಿನಗಳಲ್ಲಿಒಂದಷ್ಟು ಸ್ಥೈರ್ಯ ತುಂಬುವ ಉದ್ದೇಶದಿಂದ ಸ್ಯಾಂಡಲ್ವುಡ್ ನಟಿಯರು ಈ ಬಾರಿ ವಿಶೇಷ ಫೋಟೋ ಶೂಟ್ ಮೂಲಕ ನವರಾತ್ರಿ ಹಬ್ಬ ಆಚರಿಸಿದ್ದಾರೆ. ಸೋನು ಗೌಡ, ಹಿಂದಿ ಕಿರುತೆರೆ ನಟಿಯರಾದ ರಿಷಿನಾ ಕಂಧಾರಿ, ರಶ್ಮಿ ದೇಸಾಯಿ ವಿಭಿನ್ನವಾಗಿ ಫೋಟೋ ಶೂಟ್ ಮಾಡಿಸಿದ್ದಾರೆ. ದುರ್ಗೆಯ ಒಂಭತ್ತು ಅವತಾರಗಳಲ್ಲಿಅವಳಿ ಸಹೋದರಿಯರಾದ ನಟಿ ಅದ್ವಿತಿ ಶೆಟ್ಟಿ, ಅಶ್ವಿತಿ ಶೆಟ್ಟಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ನಟಿ ಶ್ವೇತಾ ಶ್ರೀವಾತ್ಸವ್ ಆಧುನಿಕ ಮಹಿಳೆಯ ಮಲ್ಟಿ ಟಾಸ್ಕಿಂಗ್ ಸಾಮರ್ಥ್ಯವನ್ನು ಫೋಟೋ ಮೂಲಕ ತೆರೆದಿಟ್ಟಿದ್ದಾರೆ. ಕೊರೊನಾ ದಾಳಿಯಿಂದ ಕಂಗೆಟ್ಟ ಸಮಾಜದಲ್ಲಿ ಪಾಸಿಟಿವ್ ಎನರ್ಜಿ ನೀಡುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
9 ಅವತಾರಗಳಲ್ಲಿಅದ್ವಿತಿ ಶೆಟ್ಟಿ, ಅಶ್ವಿತಿ ಶೆಟ್ಟಿ
ನಟಿಯರಾದ ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ ವಿಶೇಷವಾಗಿ ಫೋಟೋ ಶೂಟ್ ಮಾಡಿಸಿದ್ದಾರೆ. ಪ್ರತಿದಿನ ಒಂದೊಂದು ದೇವಿ ಅವತಾರದ ಫೋಟೋ ಜತೆ ವಿಶೇಷ ಶಕ್ತಿಯ ವಿವರಗಳನ್ನೂ ಎಫ್ಬಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕೂಷ್ಮಾಂಡ, ಮಹಾಗೌರಿ, ಕಾಳರಾತ್ರಿ ಮತ್ತು ಬ್ರಹ್ಮಚಾರಿಣಿಯಾಗಿ ನಟಿ ಅಶ್ವಿತಿ ಶೆಟ್ಟಿ ಕಾಣಿಸಿಕೊಂಡರೆ, ಕಾತ್ಯಾಯಿನಿ, ಶೈಲಪುತ್ರಿ, ಸಿದ್ಧಿಧಾತ್ರಿ, ಚಂದ್ರಘಟ್ಟ, ಸ್ಕಂದಮಾತಾ ಅವತಾರಗಳಲ್ಲಿಅದ್ವಿತಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
ದೇವತೆಯಾಗಿ ಕಾಣಿಸಿಕೊಳ್ಳೋದು ತುಂಬ ಕಷ್ಟ: ಅದ್ವಿತಿ ಶೆಟ್ಟಿ
'ವಿದೇಶಗಳಲ್ಲಿ ದುರ್ಗಾ ನೃತ್ಯ ಮಾಡಿದ್ದೆವು. ದೇವತೆಯಾಗಿ ಕಾಣಿಸಿಕೊಳ್ಳುವುದು ಬಹಳ ಟಫ್. ಅಲ್ಲದೆ, ಕಾಸ್ಟ್ಯೂಮ್ ಕೂಡ ಬಹಳ ಹೆವಿ ಇತ್ತು. ಕಿರೀಟ, ಅಕ್ಸೆಸರೀಸ್ ಎಲ್ಲವೂ. ಆದರೆ ಧರಿಸಿದ ನಂತರ ನಮಗೆ ಹಾಗನ್ನಿಸುತ್ತಿರಲಿಲ್ಲ. ತ್ರಿಶೂಲ ಹಿಡಿದಾಗ, ಕ್ಯಾಮೆರಾ ಮುಂದೆ ನಿಂತಾಗ ನವಿರಾಗಿ ಕಂಪಿಸುವಂತಾಗುತ್ತಿತ್ತು. ಆ ಎನರ್ಜಿಯ ಅನುಭವ ನಮಗಾಗಿದೆ. ಇದೊಂದು ವಿಶೇಷ ಅನುಭವ. ಕೆಲವು ಅವತಾರಕ್ಕೆ ದೇಹಕ್ಕೂ ಬಣ್ಣ ಹಚ್ಚಿಕೊಳ್ಳಲು 2 ಗಂಟೆ ಬೇಕಾಯ್ತು' ಎಂದಿದ್ದಾರೆ ನಟಿ ಅದ್ವಿತಿ ಶೆಟ್ಟಿ.
ನಟಿ ಅಶ್ವಿತಿ ಶೆಟ್ಟಿ ಈ ಫೋಟೋ ಶೂಟ್ಗೆ ತಯಾರಾದ ಬಗೆ ವಿವರಿಸಿದ್ದಾರೆ. 'ಇದು ಸುಲಭ ಅಂತ ತುಂಬಾ ಜನ ಅಂದುಕೊಳ್ಳುತ್ತಾರೆ. ಆದರೆ, ಬಹಳ ಕಷ್ಟ. ಕಾಳಿ ರೂಪದಲ್ಲಿ ಕಾಣಿಸಿಕೊಳ್ಳುವುದು ಸಣ್ಣ ವಿಷಯವಲ್ಲ. ಪವರ್ಫುಲ್ ದೇವಿಯ ರೀತಿ ಕಾಣಿಸಿಕೊಳ್ಳಲು ಬೇಕಾದ ತಯಾರಿ ಒಂದು ಕಡೆಯಾದರೆ, ಆ ಎನರ್ಜಿ ಪಡೆಯುವುದು ಇನ್ನೊಂದು ಕಡೆ. ಶೂಟ್ಗೆ ಮೊದಲು ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದೆವು. ಬಹಳ ಶುದ್ಧತೆ ಕಾಪಾಡಬೇಕು. ಅದು ನಮ್ಮಲ್ಲಿ ಬಹಳ ಬದಲಾವಣೆ ತರುತ್ತೆ. ನಮಗೆ ಎನರ್ಜಿ ಸಿಗುತ್ತೆ. ಶೂಟ್ ಆದ ನಂತರವೂ ಅರಿಶಿನ ನೀರಿನ ಸ್ನಾನ ಮಾಡಿದೆವು. ಡಾನ್ಸ್ ಮಾಡುವಾಗಲೂ ಹೀಗೇ ಮಾಡುತ್ತಿದ್ದೆವು. ದೇವರ ಅನುಗ್ರಹ ಪಡೆದು ಇದನ್ನು ಮಾಡಿದ್ದರಿಂದ ಅದರ ಪ್ರತಿಫಲ ಫೋಟೋದಲ್ಲಿ ಕಾಣುತ್ತಿದೆ. ಜನರಿಂದ ಅದ್ಭುತವಾದ ಪ್ರತಿಕ್ರಿಯೆ ಸಿಕ್ಕಿತು' ಎಂದಿದ್ದಾರೆ ಅಶ್ವಿತಿ ಶೆಟ್ಟಿ.
ಶೂಟ್ಗೆ ಹೇಗೆಲ್ಲ ತಯಾರಿ ಮಾಡಿಕೊಳ್ಳಲಾಗಿತ್ತು?
'ಇದಕ್ಕೆ ಪ್ರಾಪರ್ಟಿಗಳನ್ನೂ ವಿಶೇಷವಾಗಿ ಬಳಸಿದೆವು. ಕೈಯಲ್ಲಿ ಹಿಡಿದ ಕಳಸ, ತ್ರಿಶೂಲದಲ್ಲಿ ದೇವರಿದೆ. ಒಂದೊಂದು ಅವತಾರದಲ್ಲಿ ಒಂದೊಂದು ರೀತಿ ಹಣೆಬೊಟ್ಟು ಇಟ್ಟೆವು. ಮೇಕಪ್, ಕಾಸ್ಟ್ಯೂಮ್ ಎಲ್ಲವೂ ಅಥೆಂಟಿಕ್ ಆಗಿರಬೇಕಾಗಿತ್ತು. ಫೋಟೋ ಶೂಟ್ ಮಾಡಿಸಲು ನಿರ್ಧರಿಸಿದ 2 ದಿನಗಳಲ್ಲಿ ಶೂಟ್ಗೆ ಎಲ್ಲವನ್ನೂ ತಂಡ ರೆಡಿ ಮಾಡಿಕೊಂಡು 2 ದಿನಗಳಲ್ಲಿ 9 ಅವತಾರಗಳ ಶೂಟ್ ಮಾಡಿದ್ದೆವು. ರಾತ್ರಿ 2 ಗಂಟೆವರೆಗೆ ಶೂಟ್ ಮಾಡಿದೆವು. ಕಾಳರಾತ್ರಿ ಪೋಸ್ಗೆ ಮೂರು ಗಂಟೆ ಮೇಕಪ್ ಮಾಡಿದ್ದಾರೆ. ಸುಹಾಸ್ ಅವರ ನೇತೃತ್ವದಲ್ಲಿ ಉಷಾ, ಶ್ವೇತಾ, ರಾಧಾ ಮತ್ತಿತರರು ಅದ್ಭುತ ಕೆಲಸ ಮಾಡಿದ್ದಾರೆ. ಶೂಟ್ ಸಮಯದಲ್ಲಿ ನೋಡಿದವರು ದೇವರನ್ನು ನೋಡಿದಂತೆ ಆಯ್ತು ಅಂತ ಮನೆಗೆ ಕರೆದುಕೊಂಡು ಹೋಗಿ ಸತ್ಕರಿಸಿದರು. ಇದೆಲ್ಲಾ ಒಂದು ರೀತಿಯಲ್ಲಿ ಪಾಸಿಟಿವ್ ಎನರ್ಜಿ ಕೊಟ್ಟಿದೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ ನಟಿ ಅಶ್ವಿತಿ ಶೆಟ್ಟಿ.
Also Read-ನಾಡಹಬ್ಬ ದಸರಾ: ವಿಧ ವಿಧವಾಗಿ ಶುಭಾಶಯ ತಿಳಿಸಿದ ನಟ ದರ್ಶನ್, ಅನುಷ್ಕಾ ಶೆಟ್ಟಿ, ಜಗ್ಗೇಶ್!
ಶ್ವೇತಾ ಶ್ರೀವಾತ್ಸವ್
'ಈಗ ತಾಯಂದಿರ ಜವಾಬ್ದಾರಿ ಜಾಸ್ತಿ ಆಗಿದೆ. ಅಪ್ಪ ಅಮ್ಮನ ನಡವಳಿಕೆ ನೋಡಿ ಮಕ್ಕಳು ಕಲಿಯುತ್ತಾರೆ. ನನ್ನ ಮಗಳಿಗೆ ಪೌರಾಣಿಕ ಕಥೆಗಳನ್ನು ಹೇಳುತ್ತಿದ್ದಾಗ ಈ ಐಡಿಯಾ ಬಂತು. ನಮ್ಮೊಳಗಿನ ದುಷ್ಟಶಕ್ತಿಯನ್ನು ಕೊಲ್ಲಬೇಕು ಅನ್ನೋ ಕಾನ್ಸೆಪ್ಟ್ ಬಗ್ಗೆ ಯೋಚಿಸಿದೆ. ಆಗ ನನ್ನ ಅಸ್ತ್ರಗಳೇನು ಎಂದುಕೊಂಡಾಗ ಇವೆಲ್ಲಾ ಹೊಳೆಯಿತು, ಅದೇ ಪರಿಕಲ್ಪನೆಯಲ್ಲಿ ಫೋಟೋ ಶೂಟ್ ಮಾಡಿಸಿದೆ' ಎಂದಿದ್ದಾರೆ ಶ್ವೇತಾ.
ಭಗವದ್ಗೀತೆ, ಚಾಕು, ಲ್ಯಾಪ್ಟಾಪ್, ಪೆನ್ನು, ಯೋಗ ಮ್ಯಾಟ್, ಮೈಕ್, ಗಿಡ, ಮಗುವನ್ನು ಕೈಗಳಲ್ಲಿ ಹಿಡಿದುಕೊಂಡ ಅವರ ಫೋಟೋ ಹೆಣ್ಣು ಎಷ್ಟೆಲ್ಲ ಮಲ್ಟಿ ಟಾಸ್ಕ್ ಮಾಡಬಲ್ಲಳು ಎಂಬುದನ್ನು ಹೇಳುತ್ತಿದೆ. 'ಮನೆಯಲ್ಲಿ ಹೆಣ್ಣು ಮಗು ಒಂದು ಶಕ್ತಿ ಇದ್ದಂತೆ. ಅದಕ್ಕೇ ಮಗಳನ್ನೂ ಎತ್ತಿಕೊಂಡೆ. ಅವಳು ನನ್ನ ಅಸ್ತ್ರದಂತೆ' ಎಂದಿದ್ದಾರೆ ಅವರು. ಮಗಳಿಗೂ ದೇವಿ ಕಾಸ್ಟ್ಯೂಮ್ನಲ್ಲಿ ಫೋಟೋ ತೆಗೆದಿದ್ದಾರೆ.
ಅನನ್ಯಾ ಭಟ್
ಅನನ್ಯಾ ಭಟ್ ಈ ಬಾರಿ ನವರಾತ್ರಿಗಾಗಿ ಹೊಸ ಆಲ್ಬಂ ಸಾಂಗ್ ಹಾಡಿದ್ದಾರೆ. 9 ದಿನ ದುರ್ಗೆಯ 9 ಅವತಾರಗಳನ್ನು 9 ಹಾಡುಗಳಲ್ಲಿ ಪ್ರಸ್ತುತಪಡಿಸುವುದರ ಜತೆ ಪ್ರತಿಯೊಂದು ವಿಡಿಯೋ ಸಾಂಗ್ನಲ್ಲೂ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಶೈಲಪುತ್ರಿ, ಕಾಲರಾತ್ರಿ, ಸಿದ್ಧಿಧಾತ್ರಿ, ಕೂಷ್ಮಾಂಡ, ಚಂದ್ರಘಂಟಾ, ಸ್ಕಂದಮಾತಾ, ಮಹಾಗೌರಿ, ಬ್ರಹ್ಮಚಾರಿಣಿ, ಕಾತ್ಯಾಯಿನಿ ಆರಾಧನೆಯಲ್ಲಿ ದೇವಿ ಶ್ಲೋಕಗಳನ್ನು ಹಾಡಿದ್ದಾರೆ. ಒಂದೊಂದು ಹಾಡಿನಲ್ಲೂ ಬೇರೆ ಬೇರೆ ಭಾಷೆಗಳ ಪ್ರಾದೇಶಿಕತೆಯನ್ನು ಅವರ ಗೆಟಪ್ನಲ್ಲಿ ಕಾಣಬಹುದು.
ಎಲ್ಲೆಲ್ಲೂ ಕಷ್ಟವನ್ನು ನೋಡುತ್ತಿದ್ದೇವೆ. ಈ ವರ್ಷಪೂರ್ತಿ ಯಾಕೋ ಸರಿಯಾಗಿಲ್ಲ. ಮುಂದಿನ ವರ್ಷವಾದರೂ ಒಳ್ಳೆಯ ದಿನಗಳು ಬರಲಿ ಅಂತ ಪಾಸಿಟಿವ್ ವೈಬ್ ಹರಡುವ ಉದ್ದೇಶದಿಂದ ಈ ಫೋಟೋ ಶೂಟ್ ಮಾಡಿಸಿದೆವು.
-ಅದ್ವಿತಿ ಶೆಟ್ಟಿ, ನಟಿ
ಹೆಣ್ಣು ಎಷ್ಟು ಸಮರ್ಥಳು ಎನ್ನುವುದನ್ನು ಇದರಲ್ಲಿಕಾಣಬಹುದು. ಎಲ್ಲರೂ ಒಂದು ಗಂಡು ಮಗು ಬೇಕು ಎನ್ನುತ್ತಾರೆ. ನನ್ನ ಪ್ರಕಾರ ಪ್ರತಿಯೊಂದು ಮನೆಗೂ ದುರ್ಗೆಯಂಥ ಒಬ್ಬಳು ಹೆಣ್ಣು ಮಗಳು ಬೇಕು. ಅವಳೇ ನಮ್ಮ ಶಕ್ತಿ.
-ಶ್ವೇತಾ ಶ್ರೀವಾತ್ಸವ್, ನಟಿ