ಆ್ಯಪ್ನಗರ

'ಅಮ್ಮಚ್ಚಿ'ಗೆ ಅನ್ಯಾಯವಾಯಿತೇ? ರಾಜ್ಯ ಪ್ರಶಸ್ತಿ ಕಮಿಟಿ ವಿರುದ್ಧ ನಿರ್ದೇಶಕಿ ಚಂಪಾ ಬಹಿರಂಗ ಅಸಮಾಧಾನ!

2018ರ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆ ಆಗಿದೆ. ಅದರ ಬೆನ್ನಲ್ಲೇ ಅಸಮಾಧಾನ ಕಾಣಿಸಿಕೊಂಡಿದೆ. 'ಅಮ್ಮಚ್ಚಿಯೆಂಬ ನೆನಪು' ಚಿತ್ರದ ನಿರ್ದೇಶಕಿ ಚಂಪಾ ಶೆಟ್ಟಿ ಬಹಿರಂಗವಾಗಿಯೇ ಆ ಬಗ್ಗೆ ಹೇಳಿಕೊಂಡಿದ್ದಾರೆ!

Vijaya Karnataka Web 10 Jan 2020, 6:52 pm
2018ರಲ್ಲಿ ತೆರೆಕಂಡ 'ಅಮ್ಮಚ್ಚಿಯೆಂಬ ನೆನಪು' ಸಿನಿಮಾದ ಬಗ್ಗೆ ಸಾಕಷ್ಟು ಉತ್ತಮ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಚಂಪಾ ಶೆಟ್ಟಿ ಮೊದಲ ಬಾರಿಗೆ ಆ ಸಿನಿಮಾ ಮೂಲಕ ನಿರ್ದೇಶಕಿಯಾಗಿದ್ದರು. ವಿಮರ್ಶಾತ್ಮಕವಾಗಿ ಗಮನಸೆಳೆದ 'ಅಮ್ಮಚ್ಚಿ'ಗೆ ಪ್ರಶಸ್ತಿಗಳು ಸರಿಯಾಗಿ ಸಿಕ್ಕಿಲ್ಲ ಎಂಬ ಅಸಮಾಧಾನದ ಹೊಗೆಯಾಡುತ್ತಿದೆ. ಸ್ವತಃ ನಿರ್ದೇಶಕಿ ಚಂಪಾ ಶೆಟ್ಟಿ ಶುಕ್ರವಾರ ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.
Vijaya Karnataka Web ಚಂಪಾ ಶೆಟ್ಟಿ


'ಅಮ್ಮಚ್ಚಿ' ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಎರಡರಲ್ಲಿಯೂ ವಂಚಿತಳಾಗಿದ್ದಾಳೆ. ಪ್ರಶಸ್ತಿಗಳ ಮಾನದಂಡ ಏನು? ಪತ್ರಿಕಾ ವಿಮರ್ಶಕರು ಹಾಗೂ ಪ್ರೇಕ್ಷಕರ ಅಭಿಪ್ರಾಯದ ಪ್ರಕಾರ, 'ಅಮ್ಮಚ್ಛಿ' ಸಿನಿಮಾ, ಅತ್ಯುತ್ತಮ ಚಿತ್ರ, ಕಥೆ, ಚಿತ್ರಕಥೆ, ನಿರ್ದೇಶನ, ಸಾಹಿತ್ಯ, ಸಂಗೀತ, ಛಾಯಾಗ್ರಹಣ, ಸಂಕಲನ ,ಕಲಾ ನಿರ್ದೇಶನ, ಹೀಗೆ ಎಲ್ಲ ವಿಭಾಗದಲ್ಲಿಯೂ ಪ್ರಶಸ್ತಿಗೆ ಅರ್ಹತೆ ಇರುವ ಚಿತ್ರ. ಆದರೆ ತೀರ್ಪುಗಾರರು ಛಾಯಾಗ್ರಹಣ ಒಂದು ಬಿಟ್ಟು ಬೇರೆ ಯಾವ ವಿಭಾಗವನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂಬುದೇ ದುರಂತ ಎಂದು ಅವರು ಹೇಳಿದ್ದಾರೆ. ಈ ಬಾರಿಯ ಪ್ರಶಸ್ತಿ ಪಟ್ಟಿಯಲ್ಲಿ 'ಅಮ್ಮಚ್ಚಿ' ಚಿತ್ರದ ಛಾಯಾಗ್ರಹಣಕ್ಕೆ ಪ್ರಶಸ್ತಿ ಸಿಕ್ಕಿದೆ.

ಅದ್ಭುತವಾಗಿ 'ಪುಟ್ಟಮ್ಮತ್ತೆ' ಪಾತ್ರ ಮಾಡಿದ ಉರಾಳ ಅವರು ಯಾವ ತೀರ್ಪುಗಾರರ ಕಣ್ಣಿಗೂ ಬೀಳಲಿಲ್ಲ ಏಕೆ? ವೈದೇಹಿ ಅವರ ಸೂಕ್ಷ ಸಂವೇದನೆವುಳ್ಳ ಸಾಹಿತ್ಯ ಇವರಿಗೆ ಅರ್ಥವಾಗಲಿಲ್ಲ ಏಕೆ? ರಾಷ್ಟ್ರ ಪ್ರಶಸ್ತಿಯ ತೀರ್ಪುಗಾರರಲ್ಲಿ ಒಬ್ಬರು ಪತ್ರಿಕೆಯಲ್ಲಿ ನೀಡಿರುವ ಹೇಳಿಕೆಯ ಪ್ರಕಾರ, ಕೊನೆಯ ಹಂತದವರೆಗೂ ಇದ್ದ 'ಅಮ್ಮಚ್ಚಿ' ಹೆಸರು ಕಡೆಯಲ್ಲಿ ತಪ್ಪಿ ಹೋಯಿತು. ರಾಜ್ಯ ಪ್ರಶಸ್ತಿಯಲ್ಲಿ ಏನಾಯಿತು ದೇವರೇ ಬಲ್ಲ.
ಸಿನಿಮಾ ಮಾಡುವುದು ಪ್ರಶಸ್ತಿಗಾಗಿ ಅಲ್ಲ ನಿಜ. 31 ದಿನ ಚಿತ್ರಮಂದಿರಗಳಲ್ಲಿ ಮತ್ತು ಅನೇಕ ಸಿನಿಮೊತ್ಸವಗಳಲ್ಲಿ ಅಮ್ಮಚ್ಚಿಯನ್ನು ನೋಡಿದ ಪ್ರೇಕ್ಷಕರು ಈಗಾಗಲೇ ಎಲ್ಲ ಪ್ರಶಸ್ತಿಗಳನ್ನು ನೀಡಿ ಆಗಿದೆ ಎಂದಿದ್ಧಾರೆ ಅವರು.


ಎಷ್ಟೋ ಜನ ಕನ್ನಡದಲ್ಲಿ ಇಂತಹ ಒಂದು ಸಿನಿಮಾ ಆಗಿರುವುದು ನಮ್ಮ ಹೆಮ್ಮೆ ಅಂತ ಹೇಳಿದ್ದಾರೆ. ಇದರಿಂದ ಸಿನಿಮಾ ಮಾಡಿದ ಸಾರ್ಥಕತೆ ಸಿಕ್ಕಿದೆ. ಆದರೆ ಇಷ್ಟೆಲ್ಲ ಅರ್ಹತೆ ಇದ್ದರೂ ಪ್ರಶಸ್ತಿ ತಪ್ಪಿ ಹೋಗುವಂತಹ ಸಮಯದಲ್ಲಿ ಬೇಡವೆಂದರೂ ವ್ಯವಸ್ಥೆಯ ಬಗ್ಗೆ ಬೇಸರ, ಸಿಟ್ಟು ಎರಡು ಬರುತ್ತದೆ. ಇದಕ್ಕೆ ಪರಿಹಾರವೇನು? ಮಲಯಾಳಿ, ತಮಿಳು, ಬಂಗಾಳಿ , ಮರಾಠಿ ಮುಂತಾದ ಭಾಷೆಗಳಲ್ಲಿ ಹೊಸಬರಿಗೆ, ಹೊಸ ಪ್ರಯತ್ನಗಳಿಗೆ ನೀಡುವ ಪ್ರೋತ್ಸಾಹ, ಸದಭಿರುಚಿಯ ಸಿನೆಮಾಗಳಿಗೆ ಸಿಕ್ಕುವ ಮಾನ್ಯತೆ , ಕನ್ನಡದಲ್ಲಿ ಏಕೆ ಸಿಗುತ್ತಿಲ್ಲ? ಎಂದಿರುವ ಅವರು, 'ಇನ್ನು ಮುಂದೆ ಸಿನೆಮಾ ಮಾಡುವ ತರಬೇತಿ ಶಾಲೆಗಳಿಗಿಂತ ಲಾಬಿ ಮಾಡುವುವುದನ್ನು ಕಲಿಸುವ ಶಾಲೆಗಳನ್ನು ತೆರೆದರೆ ಒಳ್ಳೆಯದೆನೋ' ಎಂದು ವಿಶೇಷ ಸೂಚನೆ ಹಾಕಿ ಬರೆದಿದ್ಧಾರೆ!

2018ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ; ವಿಜೇತರ ಪಟ್ಟಿ ಇಲ್ಲಿದೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌