ಆ್ಯಪ್ನಗರ

ಇಂದ್ರಜಿತ್‌ ಲಂಕೇಶ್‌ ಸಾರ್ವಜನಿಕವಾಗಿ ಡ್ರಗ್ಸ್‌ ದಂಧೆ ಬಗ್ಗೆ ಮಾತಾಡಿದ್ದಕ್ಕೆ ಇಲ್ಲಿದೆ 5 ಕಾರಣಗಳು!

ನಿರ್ದೇಶಕ ಇಂದ್ರಜಿತ್‌ ಡ್ರಗ್ಸ್‌ ದಂಧೆಯ ಬಗ್ಗೆ ಹೇಳಿದ ಮಾತುಗಳು ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿ ಮಾಡಿವೆ. ತಾನೇಕೆ ಈ ವಿಷಯವನ್ನು ಸಾರ್ವಜನಿಕವಾಗಿ ಮಾತನಾಡಿದೆ ಎಂಬುದನ್ನು ಅವರು ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ.

Vijaya Karnataka 3 Sep 2020, 8:16 am
ಸ್ಯಾಂಡಲ್‌ವುಡ್‌ನಲ್ಲಿಯೂ ಡ್ರಗ್ಸ್‌ ದಂಧೆ ನಡೆಯುತ್ತಿದೆ ಎಂಬ ವಿಚಾರ ಕೇಳಿ ಅನೇಕರು ಶಾಕ್‌ ಆಗಿದ್ದಾರೆ. ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಈ ಬಗ್ಗೆ ಅನೇಕ ವಿಚಾರಗಳನ್ನು ಜನರ ಎದುರು ತೆರೆದಿಟ್ಟಿದ್ದಾರೆ. ತಮ್ಮ ಹತ್ತಿರ ಇರುವ ಮಾಹಿತಿಯನ್ನು ಸಿಸಿಬಿ ಪೊಲೀಸರ ಬಳಿಯೂ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಅವರು ಈ ವಿಚಾರವನ್ನು ಸಾರ್ವಜನಿಕವಾಗಿ ಹೇಳಿದ್ದು ಯಾಕೆ? ಅದಕ್ಕೆ ಅವರೇ ನೀಡಿದ 5 ಕಾರಣಗಳು ಇಲ್ಲಿವೆ...
Vijaya Karnataka Web drug abuse in sandalwood 5 reasons why indrajit lankesh spoke about it publicly
ಇಂದ್ರಜಿತ್‌ ಲಂಕೇಶ್‌ ಸಾರ್ವಜನಿಕವಾಗಿ ಡ್ರಗ್ಸ್‌ ದಂಧೆ ಬಗ್ಗೆ ಮಾತಾಡಿದ್ದಕ್ಕೆ ಇಲ್ಲಿದೆ 5 ಕಾರಣಗಳು!


ಕಾರಣ 1:
ಇಡೀ ಕನ್ನಡ ಚಿತ್ರರಂಗ ಡ್ರಗ್‌ ಮಾಫಿಯಾದಲ್ಲಿದೆ ಎಂಬಂತೆ ಸುದ್ದಿಗಳು ಮಾಧ್ಯಮದಲ್ಲಿ ಬಿತ್ತರವಾಗುತ್ತಿತ್ತು. ಇದು ಅಪ್ಪಟ್ಟ ಸುಳ್ಳು, ಕನ್ನಡ ಇಂಡಸ್ಟ್ರಿಗೆ ಒಂದು ಸಾಂಸ್ಕೃತಿಕ ಇತಿಹಾಸವಿದೆ. ಆ ಇತಿಹಾಸಕ್ಕೆ ಧಕ್ಕೆ ಬರಬಾರದು ಎಂಬ ಉದ್ದೇಶದಿಂದ ಮಾತನಾಡಿದೆ.

ಕಾರಣ 2:
ಈ ಜಾಲದಲ್ಲಿ ಇರುವಂಥವರಿಗೆ ಕನ್ನಡ ಇಂಡಸ್ಟ್ರಿಯ ಬಗ್ಗೆ ಅರಿವಿಲ್ಲ, ಶಿಸ್ತಿಲ್ಲ. ಅಂಥವರಿಗೆ ಶಿಸ್ತು ಮೂಡಿಸಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂಬ ಕಾಳಜಿಯಿಂದ ಮಾತನಾಡಿದೆ.

ಕಾರಣ 3:
ಸದ್ಯ ಡ್ರಗ್ಸ್‌ ಎನ್ನುವುದು ಶಾಲಾ, ಕಾಲೇಜಿನ ಮೆಟ್ಟಿಲು ಹತ್ತಿದೆ. ಅಂಥವರಿಗೆಲ್ಲ ಈ ದಂಧೆಯಲ್ಲಿರುವ ನಟನಟಿಯರು ರಾಯಭಾರಿಗಳಾಗಬಾರದು. ಸಮಾಜಕ್ಕೆ ಯುವ ಪೀಳಿಗೆಗೆ ಒಂದು ಉತ್ತಮ ಸಂದೇಶ ನೀಡಬೇಕು ಮತ್ತು ಅವರಿಗೆ ಭಯ ಹುಟ್ಟಿಸಬೇಕು ಎಂಬ ಉದ್ದೇಶವೂ ಸಹ ನಾನು ಮಾತನಾಡಿದ್ದರಲ್ಲಿದೆ.

also read: ಬಣ್ಣದ ಲೋಕಕ್ಕೆ ನಶೆ ನಂಟು: ಇಂದ್ರಜಿತ್‌ ಲಂಕೇಶ್‌ ಮಾತಿಗೆ ನಟ ಚಂದನ್‌ ಕುಮಾರ್‌ ಬೆಂಬಲ!

ಕಾರಣ 4:
ಇವೆಲ್ಲದರ ಜತೆಗೆ ಡ್ರಗ್ಸ್‌ ತೆಗೆದುಕೊಳ್ಳುವ ಕೆಲ ನಟ, ನಟಿಯರಿಂದ ನನಗೆ ವೈಯಕ್ತಿಕವಾಗಿ ಮುಜುಗರವಾಗಿದೆ. ಅವರಿಗೆ ಕನ್ನಡ ಚಿತ್ರರಂಗದ ಬಗ್ಗೆ ಗೊತ್ತಿಲ್ಲ. ನಮ್ಮದು ಬಹಳ ಶಿಸ್ತಿನ ಉದ್ಯಮ. ಅದಕ್ಕೆ ಕಳಂಕ ತರುವಂತಹ ಕೆಲಸ ಇವರೆಲ್ಲರೂ ಮಾಡುತ್ತಿದಾರೆ.

also read: ಇಂದ್ರಜಿತ್‌ ಲಂಕೇಶ್‌ ಜೊತೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಕಿಚ್ಚ ಸುದೀಪ್‌! ಕಾರಣ ಏನು?

ಕಾರಣ 5:
ರಾತ್ರಿಯೆಲ್ಲಾ ಪಾರ್ಟಿ ಮಾಡಿ ಚಿತ್ರೀಕರಣಕ್ಕೆ ಬರುತ್ತಾರೆ. ಇದರಿಂದ ನಿರ್ದೇಶಕರಿಗೆ ನಿರ್ಮಾಪಕರಿಗೆ ತೊಂದರೆಯಾಗುತ್ತದೆ. ಕನ್ನಡ ಚಿತ್ರರಂಗದ ಹಿತದೃಷ್ಟಿಯಿಂದ ಪೊಲೀಸರು ಕರೆದರೂ ನಾನು ಹೋಗುತ್ತೇನೆ. ಅವರ ತನಿಖೆಗೆ ಸಹಾಯ ಮಾಡುತ್ತೇನೆ. ನನಗೆ ಚಿತ್ರರಂಗದ ಹಿತಾಸಕ್ತಿ ಬಿಟ್ಟರೆ ಬೇರೆ ಯಾವುದೇ ಉದ್ದೇಶ ಇಲ್ಲ. ನನ್ನ ಈ ಕೆಲಸಕ್ಕೆ ಎಲ್ಲ ರೀತಿಯ ಬೆಂಬಲ ಸಾಕಷ್ಟು ಜನರಿಂದ ಸಿಕ್ಕಿದೆ. ಒಂದಷ್ಟು ಮಂದಿ ನಿನಗ್ಯಾಕೆ ಬೇಕಾಗಿತ್ತು ಎಂದು ಸಹ ಹೇಳಿದ್ದಾರೆ. ಆದರೆ ತೊಂದರೆಯಿಲ್ಲ. ನಾನು ಏನೇ ಆದರೂ ಡ್ರಗ್ಸ್‌ ವಿರುದ್ಧ ಹೋರಾಟವನ್ನು ಮುಂದುವರೆಸುತ್ತಲೇ ಇರುತ್ತೇನೆ ಎಂದು ಹೇಳುತ್ತಾರೆ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌.

also read: 'ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಯಾವುದೇ ಸಾಕ್ಷ್ಯಾಧಾರಗಳನ್ನು ನೀಡಿಲ್ಲ'- ಸಿಸಿಬಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌