ಆ್ಯಪ್ನಗರ

ಪುನೀತ್‌, ಶ್ರೀಮುರಳಿ, ಮಯೂರಿ ಮನೆಯಲ್ಲಿ ಹೇಗೆ ನಡೆಯುತ್ತಿದೆ ಗೊತ್ತಾ ಗೌರಿ-ಗಣೇಶನ ಹಬ್ಬ?

ಕೋವಿಡ್‌ನಿಂದ ಬಸವಳಿದ ಮನಕ್ಕೆ ತುಸು ಚೈತನ್ಯ ನೀಡಲು ಗಣೇಶ ಹಬ್ಬ ಬಂದಿದೆ. ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ಈ ಬಾರಿ ಶೂಟಿಂಗ್‌ ಕೆಲಸವಿಲ್ಲದ ಕಾರಣ ಮನೆಯವರೊಂದಿಗೆ ಹಬ್ಬ ಆಚರಿಸುತ್ತಿದ್ದಾರೆ.

Vijaya Karnataka Web 22 Aug 2020, 1:16 pm
ಪ್ರತಿವರ್ಷದಂತೆ ಈ ವರ್ಷವೂ ಗಣೇಶ ಹಬ್ಬ ಬಂದಿದೆ. ಆದರೆ, ಎಂದಿನಂತೆ ಈ ವರ್ಷ ಹಬ್ಬದಾಚರಣೆ ಮಾಡಲು ಕೊರೊನಾ ಅಡ್ಡಗಾಲು ಹಾಕಿದೆ. ಮನೆಯಲ್ಲೇ ಇದ್ದು ಬೋರ್‌ ಆಗಿರುವ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳಲ್ಲಿ ಮತ್ತೆ ಉತ್ಸಾಹ, ರಿಲ್ಯಾಕ್ಸ್‌ ತಂದಿದೆ ಗಣೇಶ ಹಬ್ಬ. ಯಾರ‍್ಯಾರು ಹೇಗೆ ಹಬ್ಬವನ್ನು ಸೆಲೆಬ್ರೇಟ್‌ ಮಾಡಲಿದ್ದಾರೆ ಎಂಬುದರ ವಿವರ ಇಲ್ಲಿದೆ.
Vijaya Karnataka Web ganesh chaturthi 2020 celebration in sandalwood celebrities home
ಪುನೀತ್‌, ಶ್ರೀಮುರಳಿ, ಮಯೂರಿ ಮನೆಯಲ್ಲಿ ಹೇಗೆ ನಡೆಯುತ್ತಿದೆ ಗೊತ್ತಾ ಗೌರಿ-ಗಣೇಶನ ಹಬ್ಬ?


ಎಲ್ಲರ ಜತೆ ಹಬ್ಬ ಮಾಡಲಾಗದ ಬೇಸರ
ನಟಿ ಐಶಾನಿ ಶೆಟ್ಟಿ ಮಂಗಳೂರಿನವರು. ಈ ಬಾರಿ ಅಕ್ಕಪಕ್ಕದ ಮನೆಯವರೊಂದಿಗೆ ಗಣೇಶೋತ್ಸವದಲ್ಲಿ ಭಾಗವಹಿಸಲು ಆಗುತ್ತಿಲ್ಲ ಎಂದಿದ್ದಾರೆ. 'ನಮ್ಮ ಮನೆಯಲ್ಲಿ ಗಣೇಶ ಮೂರ್ತಿ ಕೂರಿಸುತ್ತಿಲ್ಲ. ಆದರೆ, ಪೂಜೆ, ಹಬ್ಬದಾಚರಣೆ ಎಲ್ಲಾ ಇರುತ್ತೆ. ಕಡುಬು ಜತೆ ವಿಶೇಷ ಅಡುಗೆ ಮಾಡುತ್ತೇವೆ' ಎಂದಿದ್ದಾರೆ ಐಶಾನಿ ಶೆಟ್ಟಿ.

ಮಯೂರಿ ಮನೆಯಲ್ಲಿ 'ದಗ್ದುಶೇತ್‌ ಗಣೇಶ'
ಮಹಾರಾಷ್ಟ್ರದಲ್ಲಿ 'ದಗ್ದುಶೇತ್‌ ಗಣೇಶ'ನನ್ನು ಕೂರಿಸುವುದು ಪದ್ಧತಿ ಇದೆ ಎನ್ನುವ ಮಯೂರಿ ಮನೆಯಲ್ಲಿಯೂ ಇದೇ ಗಣೇಶನನ್ನು ಕೂರಿಸುತ್ತಿದ್ದಾರಂತೆ. 'ಅಲ್ಲಿ ಗಣೇಶ ಮೂರ್ತಿಗೆ ಒಡವೆ, ಕಿರೀಟ ಎಲ್ಲಾ ಇರುವಂತೆ ಅಲಂಕಾರ ಮಾಡಲಾಗಿರುತ್ತೆ. ರಿಚ್‌ ಗಣಪ. ಮೊದಲೇ ಮೂರ್ತಿ ಮಾಡುವವರಿಗೆ ಹೇಳಿ ರೆಡಿ ಮಾಡಿಸಿದ್ದೇವೆ' ಎಂದಿದ್ದಾರೆ ಮಯೂರಿ.

ಅಪ್ಪು ಮನೆಯಲ್ಲಿ ಭರ್ಜರಿ ಭೋಜನ

ಈ ಬಾರಿಯ ಗಣೇಶ ಹಬ್ಬದಲ್ಲಿ ಆರ್ಕೆಸ್ಟ್ರಾವನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ ಅಂದಿದ್ದಾರೆ ನಟ ಪುನೀತ್‌ ರಾಜ್‌ಕುಮಾರ್‌. 'ಪ್ರತಿವರ್ಷ ಗಣೇಶ ಚತುರ್ಥಿಯ ಸಂಭ್ರಮಕ್ಕೆ ಆರ್ಕೆಸ್ಟ್ರಾಗಳೇ ಮೊದಲ ಕಾರಣವಾಗಿರುತ್ತಿದ್ದವು. ಈ ಬಾರಿ ಅದು ಇಲ್ಲ. ಆಚರಣೆಯಲ್ಲೂ ಕೋವಿಡ್‌ನಿಂದಾಗಿ ಸಂಭ್ರಮ ಕಡಿಮೆಯಾಗಿದೆ. ನಾವು ನಮ್ಮ ಕಾಂಪೌಂಡ್‌ನಲ್ಲಿರುವ ಮೂರ್ತಿಗೆ ವಿಶೇಷ ಅಲಂಕಾರ ಮಾಡುತ್ತೇವೆ. ಮನೆಯೊಳಗಿನ ಗಣೇಶ ಪೋಟೋಗೂ ಇಂದು ವಿಶೇಷ ಪೂಜೆ ಇರುತ್ತದೆ. ಇನ್ನು ಮನೆಯೊಳಗೆ ಭರ್ಜರಿ ಭೋಜನವಂತೂ ಇದ್ದೇ ಇರುತ್ತದೆ. ಹಿಂದಿನ ವರ್ಷಗಳಲ್ಲೆಲ್ಲ ನಮ್ಮ ಹುಡುಗರೆಲ್ಲರೂ ಸೇರಿ ಪಾರ್ಕ್ ಬಳಿ ಗಣೇಶ ಕೂರಿಸುತ್ತಿದ್ದರು. ಈ ಬಾರಿ ಅದಿಲ್ಲ. ಜನ ಈ ಬಾರಿ ಶೇ. 80ರಷ್ಟು ಪರಿಸರಸ್ನೇಹಿ ಗಣೇಶನನ್ನು ಖರೀದಿ ಮಾಡಿದ್ದಾರಂತೆ. ಇದು ಒಳ್ಳೆಯ ಬೆಳವಣಿಗೆ' ಎಂದು ನಟ ಪುನೀತ್‌ ರಾಜ್‌ಕುಮಾರ್‌ ಹೇಳಿದ್ದಾರೆ.

also read: ಕಲ್ಯಾಣಿಗಳಲ್ಲೇ ಮೂರ್ತಿಗಳ ವಿಸರ್ಜನೆಗೆ ವ್ಯವಸ್ಥೆ ಮಾಡಲು ಮಹಾನಗರ ಗಣೇಶೋತ್ಸವ ಸಮಿತಿ ಒತ್ತಾಯ!

​ಹಬ್ಬದೂಟವನ್ನು ಮಿಸ್‌ ಮಾಡುವುದಿಲ್ಲ

ನಟ ಶ್ರೀಮುರಳಿ ಅವರಿಗೆ ಗಣೇಶ ಹಬ್ಬ ಎಂದರೆ ಬೇರೆ ಬೇರೆ ತಿನಿಸುಗಳು ಜ್ಞಾಪಕಕ್ಕೆ ಬರುತ್ತವಂತೆ. 'ನನ್ನ ಪತ್ನಿ, ಅಮ್ಮ ಎಲ್ಲರೂ ಸೇರಿಕೊಂಡು ಮಿನಿಮಮ್‌ ಐದಾರು ರೀತಿಯ ತಿನಿಸುಗಳನ್ನು ಮಾಡುತ್ತಾರೆ. ಅದನ್ನು ಮಿಸ್‌ ಮಾಡುವುದೇ ಇಲ್ಲ. ಚಿಕ್ಕ ವಯಸ್ಸಿನಲ್ಲಿ ಸ್ನೇಹಿತರ ಜತೆ ಸೇರಿ ಗಣೇಶ ಕೂರಿಸುತ್ತಿದ್ದೆವು. ಈಗ ಮನೆಯಲ್ಲಿಯೇ ಪೂಜೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಮಕ್ಕಳು ಏನಾದರು ಆಸೆಪಟ್ಟರೆ ನೋಡಬೇಕು' ಎಂದಿದ್ದಾರವರು.

also read: ಶ್ರೀ ಗೌರಿ ಗಣೇಶ ಹಬ್ಬಕ್ಕೆ ಶುಭಾಶಯ ಕೋರಿದ ಸೆಲೆಬ್ರಿಟಿಗಳು

ನವ ಜೋಡಿಗೆ ಮೊದಲ ಗಣೇಶ ಹಬ್ಬ

ನಟಿ ಮಯೂರಿ ಅರುಣ್‌ರನ್ನು ಮದುವೆಯಾದ ನಂತರ ಆಚರಿಸುತ್ತಿರುವ ಮೊದಲ ಗೌರಿ ಗಣೇಶ ಹಬ್ಬವಿದು. 'ನಮ್ಮೂರು ಹುಬ್ಬಳ್ಳಿ ಕಡೆ ದೊಡ್ಡ ಹಬ್ಬ. ನಮಗೆ ಮೊದಲಿನಿಂದ ಈ ಹಬ್ಬ ಬಹಳ ವಿಶೇಷ. ನಮ್ಮ ತಂದೆ ಬದುಕಿದ್ದಾಗ ಗಣಪತಿ ತಂದು ಕೂರಿಸೋರು, ಅಮ್ಮ ಸ್ವರ್ಣಗೌರಿ ವ್ರತ ಮಾಡುತ್ತಿದ್ದರು. ಅಪ್ಪನನ್ನು ಕಳೆದುಕೊಂಡ ನಂತರ ನಾಲ್ಕು ವರ್ಷಗಳಿಂದ ನಿಂತು ಹೋಗಿದ್ದನ್ನು ಈ ವರ್ಷ ನಾನು, ನನ್ನ ಪತಿ ಪ್ರಾರಂಭಿಸುತ್ತಿದ್ದೇವೆ. ಹಾಗಾಗಿ ಬಹಳ ವಿಶೇಷ ಎನ್ನಿಸುತ್ತಿದೆ. ತುಂಬಾ ಖುಷಿಯಾಗ್ತಿದೆ. ಈ ವರ್ಷ ನಾನು ಸ್ವರ್ಣಗೌರಿ ವ್ರತವನ್ನು ಮಾಡಿದೆ. ನನ್ನ ಪತಿ ಅರುಣ್‌ ಗಣೇಶ ಪೂಜೆ ಮಾಡಲಿದ್ದಾರೆ. ಎರಡೂ ಮನೆಯವರು ಒಟ್ಟಿಗೆ ಹಬ್ಬ ಮಾಡುತ್ತಿದ್ದೇವೆ' ಎಂದಿದ್ದಾರೆ ನಟಿ ಮಯೂರಿ.

also read: ಗೌರಿ ಗಣೇಶ ಹಬ್ಬಕ್ಕೆ ಶುಭಕೋರಿದ ನಟ ದರ್ಶನ್, ಯಶ್, ಕನ್ನಡ ಕಿರುತೆರೆ ಕಲಾವಿದರು!

ಅಪ್ಪ ಅಮ್ಮನ ಜತೆ ಗಣೇಶ ಹಬ್ಬ

ನಟಿ ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ ಈ ಬಾರಿ ಮನೆಯಲ್ಲಿ ಅಪ್ಪ ಅಮ್ಮನ ಜತೆ ಗಣೇಶ ಹಬ್ಬ ಆಚರಿಸುತ್ತಿದ್ದಾರೆ. 'ಸಾಮಾನ್ಯವಾಗಿ ಏನಾದ್ರೂ ಇವೆಂಟ್‌, ಶೂಟ್‌ ಇರುತ್ತಿದ್ದುದರಿಂದ ನಮಗೆ ಹಬ್ಬದ ಸಮಯದಲ್ಲಿ ಊರಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಊರಲ್ಲಿರುವ ಅಪ್ಪ ಅಮ್ಮ ಬೆಂಗಳೂರಿಗೆ ಬಂದಿದ್ದರು. ಲಾಕ್‌ಡೌನ್‌ ಆಗಿದ್ದರಿಂದ ಇಲ್ಲೇ ಉಳಿದಿದ್ದರು. ಹಾಗಾಗಿ ಈ ಬಾರಿ ಅವರ ಜತೆ ಹಬ್ಬ ಆಚರಿಸುತ್ತಿರುವ ಖುಷಿ ಇದೆ. ಕೆಲ ವರ್ಷಗಳ ನಂತರ ಎಲ್ಲರೂ ಒಟ್ಟಿಗೆ ಹಬ್ಬ ಮಾಡುತ್ತಿದ್ದೇವೆ. ಮಂಗಳೂರಿನ ಕಡೆ ಮಾಡುವ ವಿಶೇಷ ಅಡುಗೆ ಇರುತ್ತೆ. ಬಾಳೆ ಎಲೆ ಊಟದಲ್ಲಿ ಹೋಳಿಗೆ ಇದ್ದೇ ಇರುತ್ತೆ' ಎಂದಿದ್ದಾರೆ ಅದ್ವಿತಿ ಶೆಟ್ಟಿ.

also read: ಬೆಂಗಳೂರು: 3 ದಿನಗಳವರೆಗೆ ಮಾತ್ರ ಗಣೇಶ ಪ್ರತಿಷ್ಠಾಪನೆಗೆ ಅವಕಾಶ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌