ಆ್ಯಪ್ನಗರ

PB Sreenivas: ಗಾಯಕ ಪಿ.ಬಿ. ಶ್ರೀನಿವಾಸ್ ಕನ್ನಡದಲ್ಲಿ ಹಾಡಿರುವ ಜನಪ್ರಿಯ ಗೀತೆಗಳ ಮಾಹಿತಿ ಇಲ್ಲಿದೆ

ಭಾರತ ಸಿನಿಮಾರಂಗ ಕಂಡ ಅಪ್ರತಿಮ ಗಾಯಕರಾದ ಪಿ.ಬಿ. ಶ್ರೀನಿವಾಸ್ ಅವರಿಗೆ ಇಂದು (ಸೆ.22) ಜನ್ಮದಿನ. ಆ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಶ್ರೀನಿವಾಸ್ ಅವರು ಹಾಡಿದ ಕೆಲ ಉತ್ತಮ ಗೀತೆಗಳ ವಿವರವನ್ನು ನೀಡಲಾಗಿದೆ.

Vijaya Karnataka Web 22 Sep 2020, 8:13 pm
ಗಾಯಕ ಪಿ ಬಿ ಶ್ರೀನಿವಾಸ್‌ ಅವರು ಮೂಲತಃ ತೆಲುಗು ಭಾಷಿಕರು. ಆದರೆ, ಅವರು ಹೆಚ್ಚು ಜನಪ್ರಿಯರಾಗಿದ್ದು ಕರ್ನಾಟಕದಲ್ಲಿ ಅನ್ನೋದು ವಿಶೇಷ. ಅವರ ಪೂರ್ಣ ಹೆಸರು 'ಪ್ರತಿವಾದಿ ಭಯಂಕರಂ ಶ್ರೀನಿವಾಸ್'! 'ಪ್ರತಿವಾದಿ ಭಯಂಕರಂ' ಎನ್ನುವುದು ಅವರ ಮನೆತನದ ಹೆಸರು. 1930ರ ಸೆ.22ರಂದು ಜನಿಸಿದ ಪಿಬಿಎಸ್‌ಗೆ ಇಂದು ಜನ್ಮದಿನ. ಅವರು ಬದುಕಿದ್ದರೆ ಇಂದು ಅವರಿಗೆ 90 ವರ್ಷ ತುಂಬುತ್ತಿತ್ತು. ಭೌತಿಕವಾಗಿ ಅವರು ಇಲ್ಲವಾದರೂ, ಹಾಡುಗಳ ಮೂಲಕ ಜನಮಾನಸದಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದ್ದಾರೆ ಅವರು.
Vijaya Karnataka Web PB Sreenivas: ಗಾಯಕ ಪಿ.ಬಿ. ಶ್ರೀನಿವಾಸ್ ಕನ್ನಡದಲ್ಲಿ ಹಾಡಿರುವ ಜನಪ್ರಿಯ ಗೀತೆಗಳ ಮಾಹಿತಿ ಇಲ್ಲಿದೆ


ತಮ್ಮ 22ನೇ ವಯಸ್ಸಿಗೆ ಹಾಡಲು ಶುರು ಮಾಡಿದ ಪಿಬಿಎಸ್‌, ಮೊದಲು ಹಾಡಿದ್ದು ಹಿಂದಿ ಸಿನಿಮಾಕ್ಕೆ! ಆನಂತರ ತಮಿಳು, ಕನ್ನಡ, ತೆಲುಗು, ಮಲಯಾಳಂ ಭಾಷೆಗಳ ಸಾವಿರಾರು ಹಾಡುಗಳಿಗೆ ಧ್ವನಿಯಾದರು. ಅದರಲ್ಲೂ ಕನ್ನಡದಲ್ಲಿ ಡಾ. ರಾಜ್‌ಕುಮಾರ್ ಅವರು ನಟಿಸಿದ್ದ ಅನೇಕ ಹಾಡುಗಳಿಗೆ ಪಿಬಿಎಸ್‌ ಧ್ವನಿಯಾಗಿದ್ದಾರೆ. ಸುಮಾರು 20 ವರ್ಷ ರಾಜ್‌ ಅವರ ಸಿನಿಮಾಗಳ ಹಾಡಿಗೆ ಅವರು ಧ್ವನಿ ನೀಡಿದ್ದರು. ಎಷ್ಟೋ ಬಾರಿ, 'ನಾನು ಶರೀರ, ಅವರು ಶಾರೀರ' ಎಂದು ಪಿ ಬಿ ಶ್ರೀನಿವಾಸ್‌ ಅವರ ಬಗ್ಗೆ ಅಣ್ಣಾವ್ರು ಹೇಳುತ್ತಿದ್ದರು. ಇಂದು ಪಿಬಿಎಸ್‌ ಜನ್ಮದಿನವಾದ್ದರಿಂದ ಅವರು ಕನ್ನಡದಲ್ಲಿ ಹಾಡಿದ ಒಂದಷ್ಟು ಜನಪ್ರಿಯ ಗೀತೆಗಳ ಕುರಿತ ಮಾಹಿತಿ ಇಲ್ಲಿದೆ.

ವಿಜಯನಗರದ ವೀರಪುತ್ರ: ನಟ ಸುದರ್ಶನ್ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರದ 'ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು..' ಹಾಡನ್ನು ಪಿಬಿಎಸ್‌ ಹಾಡಿದ್ದರು. ಈ ಹಾಡಿಗೆ ಆರ್‌.ಎನ್‌. ಜಯಗೋಪಾಲ್‌ ಸಾಹಿತ್ಯ ಬರೆದಿದ್ದರು.

ಬೆಟ್ಟದ ಹುಲಿ: ಡಾ. ರಾಜ್‌ಕುಮಾರ್ ನಟನೆಯ 'ಬೆಟ್ಟದ ಹುಲಿ' ಚಿತ್ರದಲ್ಲಿ ಪಿಬಿಎಸ್‌ ಹಾಡಿದ್ದ 'ಆಡುತಿರುವ ಮೋಡಗಳೇ, ಹಾರುತಿರುವ ಹಕ್ಕಿಗಳೇ.. ಯಾರ ತಡೆಯೂ ನಿಮಗಿಲ್ಲ ನಿಮ್ಮ ಭಾಗ್ಯ ನಮಗಿಲ್ಲ..' ಹಾಡು ದೊಡ್ಡ ಹಿಟ್ ಆಗಿತ್ತು. ಗೀತಪ್ರಿಯ ಇದಕ್ಕೆ ಸಾಹಿತ್ಯ ಬರೆದಿದ್ದರು.

ಮಂತ್ರಾಲಯ ಮಹಾತ್ಮೆ: ಡಾ. ರಾಜ್‌ಕುಮಾರ್ ನಟಿಸಿದ್ದ ಈ ಚಿತ್ರದಲ್ಲಿ ಪಿ ಬಿ ಶ್ರೀನಿವಾಸ್‌ ಅವರು 4 ಹಾಡುಗಳನ್ನು ಹಾಡಿದ್ದರು. ಅದರಲ್ಲಿ ಮುಖ್ಯವಾಗಿ 'ಇಂದು ಎನಗೆ ಗೋವಿಂದ..' ಹಾಡು ಭಾರಿ ಯಶಸ್ಸು ಕಂಡಿತ್ತು.

ಭಕ್ತ ಕನಕದಾಸ: ಡಾ. ರಾಜ್‌ಕುಮಾರ್ ಅಭಿನಯಿಸಿದ್ದ ಈ ಚಿತ್ರದ ಎಲ್ಲ ಹಾಡುಗಳನ್ನು ಪಿ ಬಿ ಶ್ರೀನಿವಾಸ್‌ ಹಾಡಿದ್ದರು. 'ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ..' ಹಾಡು ಜನಪ್ರಿಯವಾಗಿತ್ತು.

ದೇವರು ಕೊಟ್ಟ ತಂಗಿ: ಡಾ. ರಾಜ್ ನಟಿಸಿದ್ದ ಈ ಸಿನಿಮಾದಲ್ಲಿ ಪಿಬಿಎಸ್‌ ಹಾಡಿದ್ದ 'ಈ ಲೋಕವೆಲ್ಲಾ ನೀನೇ ಇರುವ ಪೂಜಾ ಮಂದಿರ, ನಾ ಕಾಣುತಿರುವ ನೋಟವೆಲ್ಲಾ ಸತ್ಯ ಸುಂದರ...' ಹಾಡು ಯಶಸ್ಸಾಗಿತ್ತು. ಇದನ್ನು ಕು.ರ.ಸೀ ಬರೆದಿದ್ದರು.

ಭಕ್ತ ಕುಂಬಾರ: ಈ ಚಿತ್ರದ 'ಮಾನವ ದೇಹವು ಮೂಳೆ ಮಾಂಸದ ಥಡಿಕೆ..' ಹಾಡನ್ನು ಪಿಬಿಎಸ್ ಹಾಡಿದ್ದರು. ಈ ಚಿತ್ರದಲ್ಲಿ ಒಟ್ಟು ಅವರು ಆರು ಹಾಡುಗಳನ್ನು ಹಾಡಿದ್ದರು.

ಹೀಗೆ ಸಾವಿರಾರು ಅತ್ಯುತ್ತಮ ಗೀತೆಗಳನ್ನು ಅವರು ಹಾಡಿದ್ದಾರೆ. ಇಲ್ಲಿ ಕನ್ನಡದ ಹಾಡುಗಳನ್ನು ಮಾತ್ರ ಪಟ್ಟಿ ಮಾಡಲಾಗಿದೆ. ಬೇರೆ ಬೇರೆ ಭಾಷೆಗಳಲ್ಲಿಯೂ ಅವರ ಸಾರ್ವಕಾಲಿಕ ಹಿಟ್ ಗೀತೆಗಳು ಸಿಗುತ್ತವೆ.

'ಯಾರೇ ಕೂಗಾಡಲಿ' ಅಂತ ಡಾ. ರಾಜ್‌ಕುಮಾರ್‌ ಹಾಡಿದ್ದಕ್ಕೆ ಇಳಯರಾಜ ಕಾರಣ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌