ಆ್ಯಪ್ನಗರ

ಗಂಗಾವತಿಯ ಸರ್ಕಾರಿ ಶಾಲೆಗೆ ಧನ ಸಹಾಯ ಮಾಡಿದ ನಟ ಪುನೀತ್ ರಾಜ್‌ಕುಮಾರ್

ಗಂಗಾವತಿಯಲ್ಲಿ 'ಜೇಮ್ಸ್' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ 'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್, ಅಲ್ಲಿನ ಸರ್ಕಾರಿ ಶಾಲೆಯೊಂದಕ್ಕೆ ಆರ್ಥಿಕ ನೆರವು ನೀಡಿದ್ದಾರೆ. ಆ ಕುರಿತು ಇಲ್ಲಿದೆ ಪೂರ್ಣ ಮಾಹಿತಿ.

Vijaya Karnataka Web 28 Oct 2020, 4:07 pm
'ಪವರ್ ಸ್ಟಾರ್' ಪುನೀತ್ ರಾಜ್‌ಕುಮಾರ್ ಸಾಮಾಜಿಕ ಕಾರ್ಯಗಳಲ್ಲಿ ಸದಾ ಮುಂದೆ ಇರುತ್ತಾರೆ. ಯಾವುದೇ ಪ್ರಚಾರ ಬಯಸದೇ ತಮ್ಮಿಂದ ಏನು ಸಹಾಯ ಸಾಧ್ಯವಾಗುತ್ತದೋ, ಅದನ್ನು ಮಾಡಿಬಿಡುತ್ತಾರೆ ಅಪ್ಪು. ಕೆಲ ತಿಂಗಳ ಹಿಂದಷ್ಟೇ ಅವರು ರಾಜ್ಯ ಸರ್ಕಾರಕ್ಕೆ 50 ಲಕ್ಷ ರೂ. ದೇಣಿಗೆ ನೀಡಿದ್ದರು. ಸದ್ಯ ಅವರು 'ಜೇಮ್ಸ್‌' ಸಿನಿಮಾದ ಶೂಟಿಂಗ್‌ಗಾಗಿ ಕೊಪ್ಪಳದ ಗಂಗಾವತಿಯಲ್ಲಿದ್ದಾರೆ. ಈ ಮಧ್ಯೆ ಅಲ್ಲಿನ ಸರ್ಕಾರಿ ಪ್ರೌಢ ಶಾಲೆಯೊಂದಕ್ಕೆ ಆರ್ಥಿಕ ಸಹಾಯವನ್ನೂ ಮಾಡಿದ್ದಾರೆ!
Vijaya Karnataka Web puneeth rajkumar


ಗಂಗಾವತಿಯ ಮಲ್ಲಾಪುರ ಶಾಲೆಗೆ ಅಪ್ಪು ಸಹಾಯ
ಗಂಗಾವತಿಯ ಮಲ್ಲಾಪುರ ಸರ್ಕಾರಿ ಪ್ರೌಢ ಶಾಲೆಯ ಅಭಿವೃದ್ಧಿಗೆ ಪೂರಕವಾಗಲೆಂದು ಪುನೀತ್ 1 ಲಕ್ಷ ರೂ. ಆರ್ಥಿಕ ಸಹಾಯ ಮಾಡಿದ್ದಾರೆ. ಈ ಕುರಿತು ಶಾಲೆಯು ಅಭಿನಂದನಾ ಪತ್ರವನ್ನು ಬರೆದಿದೆ. ಆ ಲೆಟರ್ ಈಗ ಸಖತ್ ವೈರಲ್ ಆಗಿದೆ. 'ಕನ್ನಡದ ವರನಟ ಡಾ. ರಾಜ್‌ಕುಮಾರ್ ಅವರ ಸುಪುತ್ರರಾದ ಮಾನ್ಯ ಪುನೀತ್ ರಾಜ್‌ಕುಮಾರ್ ಮತ್ತು 'ಜೇಮ್ಸ್' ಚಿತ್ರತಂಡವು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗಾಗಿ, ನಮ್ಮ ಶಾಲೆಯ ಕಲಿಕಾ ವಾತಾವರಣವನ್ನು ಉತ್ತೇಜಿಸಲು ಹಾಗೂ ವಿದ್ಯಾರ್ಥಿಗಳಿಗೆ ಕಲಿಕಾ ಪ್ರೋತ್ಸಾಹ ನೀಡುವ ಉದ್ದೇಶದಿಂದ ಅಕ್ಟೋಬರ್ 21ರಂದು 1 ಲಕ್ಷ ರೂ.ಗಳನ್ನು ಪ್ರೋತ್ಸಾಹ ಧನವನ್ನಾಗಿ ನೀಡಿರುತ್ತಾರೆ. ಕಾರಣ, ಶಾಲೆಯ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಗೂ ಗ್ರಾಮದ ಹಿರಿಯರು ತಮಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ. ತಮ್ಮ ಅಭಿನಯದ 'ಜೇಮ್ಸ್' ಚಿತ್ರಕ್ಕೆ ಯಶಸ್ಸು ಸಿಗಲೆಂದು ಶುಭ ಕೋರುತ್ತೇವೆ' ಎಂದು ಪತ್ರದಲ್ಲಿ ಬರೆಯಲಾಗಿದೆ.

ಇನ್ನು, ಇದೇ ಪತ್ರದಲ್ಲಿ 'ನಿಮ್ಮ ಪ್ರೀತಿಯ ಪುನೀತ್ ರಾಜ್‌ಕುಮಾರ್' ಎಂದು ಅಪ್ಪು ಸಹಿ ಕೂಡ ಮಾಡಿರುವುದನ್ನು ಕಾಣಬಹುದಾಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಲೆಟರ್‌ ಸಖತ್ ವೈರಲ್ ಆಗಿದೆ. ತಮ್ಮ ನೆಚ್ಚಿನ ಸ್ಟಾರ್ ನಟ ಮಾಡಿರುವ ಉತ್ತಮ ಕೆಲಸಕ್ಕೆ ಅವರ ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ. 'ನಿಮ್ಮ ಸಮಾಜಮುಖಿ ಸೇವೆ ಎಲ್ಲರಿಗೂ ಮಾದರಿ... ದೊಡ್ಮನೆ ಹುಡ್ಗನ ದೊಡ್ಡ ಗುಣಕ್ಕೆ ಪ್ರಣಾಮಗಳು' ಎಂದು ಕಾಮೆಂಟ್ ಮಾಡುತ್ತಿದ್ದಾರೆ ಫ್ಯಾನ್ಸ್!

'ಜೇಮ್ಸ್‌' ಪುನೀತ್‌ಗೆ ನಾಯಕಿಯಾದ ಪ್ರಿಯಾ ಆನಂದ್! ಮತ್ತೆ ಒಂದಾಯ್ತು 'ರಾಜಕುಮಾರ' ಜೋಡಿ

ಇನ್ನು, ಚೇತನ್ ಕುಮಾರ್ ನಿರ್ದೇಶನದ 'ಜೇಮ್ಸ್' ಸಿನಿಮಾದ ಶೂಟಿಂಗ್‌ ಗಂಗಾವತಿ, ಹೊಸಪೇಟೆ ಸುತ್ತಮುತ್ತ ಭರದಿಂದ ಸಾಗುತ್ತಿದೆ. 'ಯುವರತ್ನ' ನಂತರ ಅಪ್ಪು ಮಾಡುತ್ತಿರುವ ಸಿನಿಮಾ ಇದಾಗಿದ್ದು, ನಾಯಕಿಯಾಗಿ 'ರಾಜಕುಮಾರ' ಖ್ಯಾತಿಯ ಪ್ರಿಯಾ ಆನಂದ್ ಕಾಣಿಸಿಕೊಳ್ಳಲಿದ್ದಾರೆ. ಚರಣ್ ರಾಜ್ ಸಂಗೀತ ನೀಡುತ್ತಿದ್ದು, ಪ್ರಮುಖ ಪಾತ್ರಗಳಲ್ಲಿ ಅನು ಪ್ರಭಾಕರ್ ಮುಖರ್ಜಿ, ತೆಲುಗು ನಟ ಶ್ರೀಕಾಂತ್ ಕಾಣಿಸಿಕೊಳ್ಳಲಿದ್ದಾರೆ.

'ಜೇಮ್ಸ್‌' ಮೇಲೆ ನಿರೀಕ್ಷೆ ಇಟ್ಟುಕೊಂಡಿರುವ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳಿಗೆ ಇಲ್ಲಿದೆ ಗುಡ್‌ ನ್ಯೂಸ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌