(ಹರೀಶ್ ಬಸವರಾಜ್)
ಶಿವಣ್ಣನಿಗೆ ಪುನೀತ್ ನಿರ್ದೇಶನ
ಕಿಕ್ಕಿರಿದು ತುಂಬಿದ್ದ ಸಭಾಂಗಣ ಮತ್ತು ಮಾಧ್ಯಮದವರೆಲ್ಲರ ಮುಂದೆ 'ಸಲಗ' ಮೂಲಕ ಮೊದಲ ಬಾರಿ ನಿರ್ದೇಶನಕ್ಕಿಳಿದ ದುನಿಯಾ ವಿಜಯ್ ಅವರಿಗೆ ಒಳ್ಳೆಯದಾಗಲಿ ಎಂದ ಪುನೀತ್ ರಾಜ್ಕುಮಾರ್ 'ಸಲಗ'ದ 'ಟಿಣಿಂಗ ಮಿಣಿಂಗ ಟಿಶ್ಶಾ...' ಹಾಡಿನ ಕೆಲವು ಸಾಲುಗಳನ್ನು ಹಾಡಿಯೂ ಬಿಟ್ಟರು. ಅಷ್ಟರಲ್ಲಿ ನಿರೂಪಕಿ ಅನುಶ್ರೀ, 'ಶಿವಣ್ಣ ಅವರಿಗೆ ನಿರ್ದೇಶನ ಮಾಡುತ್ತೀರಾ..' ಎಂದು ಸವಾಲೆಸೆದರು. ಸರಿ ಎಂದು ತಕ್ಷಣ ರೆಡಿಯಾಗಿಬಿಟ್ಟರು ಅಪ್ಪು. ಅವರು, 'ರೋಲಿಂಗ್.. ಸೌಂಡ್.. ಆ್ಯಕ್ಷನ್..' ಎಂದು ಹೇಳಿದ್ದೇ ತಡ ಅವರ ಹಿಂದೆಯೇ ನಿಂತಿದ್ದ ಶಿವರಾಜ್ಕುಮಾರ್ 'ಓಂ' ಸಿನಿಮಾದ ಸ್ಟೈಲ್ನಲ್ಲಿ ತಾವೇ 'ಐ ಲವ್ ಯೂ.. ಯೂ ಮಸ್ಟ್ ಲವ್ ಮೀ..' ಎಂದು ಹಾಡಿಕೊಂಡು ವೇದಿಕೆಯ ಮುಂಭಾಗದವರೆಗೂ ತಮ್ಮ ಸಿಗ್ನೇಚರ್ ಸ್ಟೈಲ್ನಲ್ಲಿ ಬಂದರು. ತಕ್ಷಣ ಅಲ್ಲಿಯೇ ಇದ್ದ ಉಪೇಂದ್ರ ಎದ್ದು ವೇದಿಕೆ ಮೇಲೆ ಬಂದು, ಶಿವಣ್ಣಗೆ ಸಾಥ್ ನೀಡಿದರು. ನಿಜಕ್ಕೂ ಅಪ್ಪು ನಿರ್ದೇಶನಕ್ಕೆ ಶಿವರಾಜ್ಕುಮಾರ್ ನಟಿಸುವ ದಿನ ಬಂದೇ ಬರಬಹುದು ಎಂದು ನೆರೆದವರಲ್ಲಿ ನಿರೀಕ್ಷೆ ಹುಟ್ಟಿಸಿತು ಈ ಸನ್ನಿವೇಶ.
Salaga: ಸಖತ್ ವೈರಲ್ ಆಗ್ತಿದೆ 'ಸಲಗ' ಚಿತ್ರದ 'ಟಿಣಿಂಗ ಮಿಣಿಂಗ ಟಿಷ್ಯಾ' ಸಾಂಗ್! ಈ ಹಾಡು ಹುಟ್ಟಿದ್ದೇಗೆ?
ವಾರಕ್ಕೆ ಐದು ಸಿನಿಮಾ ನೋಡುತ್ತಿದ್ದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, 'ಅಂದು ದುನಿಯಾ ವಿಜಯ್ ಅವರು ಸಲಗ ಚಿತ್ರಕ್ಕೆ ಕ್ಲ್ಯಾಪ್ ಮಾಡಿಸಿದ್ರು. ಇದೀಗ ಆ ಸಿನಿಮಾ ಅ.14ರಂದು ತೆರೆಗೆ ಬರುತ್ತಿದೆ. ನಾನು ಈಗ ಚಿತ್ರಮಂದಿರದಲ್ಲಿ ಸಿನಿಮಾ ನೋಡೋದು ತುಂಬ ಕಮ್ಮಿ. ಆಗ ವಿದ್ಯಾರ್ಥಿಯಾಗಿದ್ದಾಗ ವಾರಕ್ಕೆ 5-6 ಸಿನಿಮಾ ನೋಡ್ತಾ ಇದ್ದೆ. ಡಾ. ರಾಜ್ಕುಮಾರ್ ಅವರು ನನ್ನ ನೆಚ್ಚಿನ ನಟ. ಈ ಸಲಗ ಸಿನಿಮಾವನ್ನು ನಾನು ಒಮ್ಮೆ ಸಮಯ ಮಾಡಿಕೊಂಡು ಹೋಗಿ ನೋಡ್ತಿನಿ. 'ಸಲಗ' ಸಿನಿಮಾ ಟ್ರೇಲರ್ ನೋಡಿದರೆ ಇದೊಂದು ಮಾಸ್ ಎಂಟರ್ಟೇನರ್ ರೀತಿ ಅನಿಸುತ್ತಿದೆ. ಇದನ್ನು ನೋಡುತ್ತೇನೆ. ಕೊರೊನಾ ಬಂದು ಚಿತ್ರರಂಗಕ್ಕೆ ದೊಡ್ಡ ಹೊಡೆತ ಬಿತ್ತು. ಚಿತ್ರಮಂದಿರಗಳು ಮುಚ್ಚಿದ್ದವು. ಅನೇಕ ಸಿನಿಮಾಗಳು ರಿಲೀಸ್ ಆಗಿಲ್ಲ. ಅಷ್ಟರಮಟ್ಟಿಗೆ ಕೊರೊನಾ ನಮ್ಮ ಜನರ ಅಸ್ತವ್ಯಸ್ತಗೊಳಿಸಿತು. ಸಿನಿಮಾಗಳು ಸಮಾಜಕ್ಕೆ ಸಂದೇಶ ನೀಡುವಂತೆ ಇರಬೇಕು. ನಾಡಿನ ಜನ ಈ ಸಿನಿಮಾ ನೋಡಿ ಖುಷಿಪಡಲಿ' ಎಂದು ಹೇಳಿದರು.
'ಸಲಗ' ಸಿನಿಮಾದ ಬಗ್ಗೆ ಚೇತನ್ ಕುಮಾರ್ & ಸಂತೋಷ್ ಆನಂದ್ರಾಮ್ ಹೇಳಿದ್ದೇನು?
ಡಿಸ್ಟ್ರಿಬ್ಯೂಟರ್ ಆಗಿದ್ದ ಡಿಕೆಶಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ್ದರು. 'ನಾನು ಮೂಲತಃ ಸಿನಿಮಾದ ವಿತರಕನಾಗಿದ್ದೆ. ಗಾಂಧಿನಗರದಿಂದ ಚಿತ್ರಮಂದಿರಗಳಿಗೆ ರೀಲು ಬಾಕ್ಸ್ಗಳನ್ನು ಹೊತ್ತುಕೊಂಡು ಹೋಗಿದ್ದೆ. ರಾಜಕೀಯಕ್ಕೆ ಬಂದ ಮೇಲೆ ಸಿನಿಮಾ ಸಂಪರ್ಕ ಕಡಿಮೆಯಾಗಿತ್ತು. ಸಿನಿಮಾದವರು ಬಣ್ಣ ಹಚ್ಚಿಕೊಂಡು ನಾಟಕ ಮಾಡುತ್ತೀರಿ, ನಾವು ಬಣ್ಣ ಹಚ್ಚಿಕೊಳ್ಳದೆ ನಾಟಕ ಮಾಡುತ್ತೇವೆ. ಶೀಘ್ರದಲ್ಲೇ ನಮ್ಮ ಕಡೆಯಿಂದ 25ಕ್ಕೂ ಹೆಚ್ಚು ಸ್ಕ್ರೀನ್ಗಳುಳ್ಳ ಮಲ್ಟಿಪ್ಲೆಕ್ಸ್ ತೆರೆಯುತ್ತಿದ್ದೇವೆ. 6-8 ತಿಂಗಳಲ್ಲಿ ಅದು ಚಿತ್ರರಂಗದ ಸೇವೆಗೆ ತೆರೆದುಕೊಳ್ಳಲಿದೆ' ಎಂದರು.
‘ಸಲಗ’ ಚಿತ್ರಕ್ಕೆ ಪಂಚಿಂಗ್ ಸಂಭಾಷಣೆಗಳನ್ನು ಬರೆದಿರುವ ‘ಟಗರು’ ಖ್ಯಾತಿಯ ಮಾಸ್ತಿ
ನಿರ್ಮಾಪಕರಿಗೆ ಲಕ್ಕಿ ಚಾಂಪ್ ಡಾಲಿ
ನಟ ಶಿವರಾಜ್ಕುಮಾರ್ ಮಾತನಾಡುತ್ತಾ, 'ನಿರ್ಮಾಪಕ ಕೆ.ಪಿ. ಶ್ರೀಕಾಂತ್ಗೆ 'ಡಾಲಿ' ಧನಂಜಯ ಲಕ್ಕಿ ಚಾಂಪ್ ಇರಬೇಕು. ಹಾಗಾಗಿ 'ಟಗರು' ಸಿನಿಮಾದ ನಂತರ 'ಸಲಗ'ಕ್ಕೂ ಹಾಕಿಕೊಂಡಿದ್ದಾರೆ. ನಾನು ಕೂಡ ಅವರ ಜತೆ ಮತ್ತೆ 'ಭೈರಾಗಿ' ಸಿನಿಮಾ ಮಾಡುತ್ತಿದ್ದೇನೆ. ಲಕ್ಕಿ ಚಾಂಪ್ ನನಗೂ ಮುಂದುವರಿಯಲಿ ಎಂದು ಮತ್ತೊಂದು ಸಿನಿಮಾ ಮಾಡುತ್ತೇನೆ. ದುನಿಯಾ ವಿಜಯ್ ದೊಡ್ಡ ಹೀರೋ. ಆದರೂ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಣ್ಣ ನಟನಾಗಿದ್ದ ದಿನದಿಂದಲೂ ಅವರನ್ನು ಗೊತ್ತು. ಕಷ್ಟದಿಂದ ಮೇಲೆ ಬಂದಿರುವುದರಿಂದ ಅವರಿಗೆ ಸಕ್ಸಸ್ ಸಿಗುತ್ತದೆ. ಮಂದೊಂದು ದಿನ ವಿಜಯ್ ಅವರು ನನಗೆ ಸಿನಿಮಾ ನಿರ್ದೇಶನ ಮಾಡಿದರೆ ಖಂಡಿತ ಒಪ್ಪಿಕೊಳ್ಳುತ್ತೇನೆ. ಅವರ ಸಿನಿಮಾದಲ್ಲಿ ಪೌರಕಾರ್ಮಿಕನ ಪಾತ್ರ ಮಾಡಬೇಕೆಂಬ ಆಸೆ ಇದೆ' ಎಂದರು.
ನಟ ಉಪೇಂದ್ರ, ಶಾಸಕ ಬೈರತಿ ಸುರೇಶ್, ನಟಿಯರಾದ ಸಂಜನಾ ಆನಂದ್, ಅಮೃತಾ ಅಯ್ಯಂಗಾರ್ ಮತ್ತು ಸಿನಿಮಾ ತಂಡದ ಸದಸ್ಯರು ಕಾರ್ಯಕ್ರಮದಲ್ಲಿಭಾಗವಹಿಸಿದ್ದರು.
Yogi: 'ಲೂಸ್ ಮಾದ' ಯೋಗಿ ಸಿನಿಮಾಗೆ ಸಾಥ್ ನೀಡಿದ 'ಡಾಲಿ' ಧನಂಜಯ!