ಬಸವರಾಜ ಬೊಮ್ಮಾಯಿ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣ ಸ್ಯಾಂಡಲ್ವುಡ್ನಲ್ಲಿ ಹೊಸ ಸಂಚಲನ ಮೂಡಿದೆ. ಹೊಸ ಸಿಎಂ ಅವರು ಕೋವಿಡ್, ಪ್ರವಾಹ ಮುಂತಾದ ಸಮಸ್ಯೆಗಳ ಜೊತೆಗೆ ಚಿತ್ರರಂಗದ ಸಮಸ್ಯೆಗಳನ್ನೂ ಪರಿಹರಿಸುತ್ತಾರೆ ಎಂಬ ಅಭಿಪ್ರಾಯ ಚಿತ್ರರಂಗದವರಿಂದ ವ್ಯಕ್ತವಾಗಿದೆ. ಕೊರೊನಾ ಬಂದಾಗಿನಿಂದಲೂ ಚಿತ್ರರಂಗ ಸಂಕಷ್ಟದಲ್ಲಿದೆ. ಸಿನಿಮಾಗಳ ಬಿಡುಗಡೆ ಸರಿಯಾಗಿ ಆಗುತ್ತಿಲ್ಲ. ಈ ಹಿಂದೆ ವರ್ಷಕ್ಕೆ ಸುಮಾರು 300 ಚಿತ್ರಗಳು ತಯಾರಾಗುತ್ತಿದ್ದವು. ಈಗ ಆ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಮತ್ತು ಹತ್ತಾರು ಚಿತ್ರಮಂದಿರಗಳು ಮುಚ್ಚುತ್ತಿವೆ. ಈ ಎಲ್ಲಾ ಸಮಸ್ಯೆಗಳನ್ನು ಹೊಸ ಮುಖ್ಯಮಂತ್ರಿಗಳಿಗೆ ತಲುಪಿಸಬೇಕಾದ ಅಗತ್ಯ ಚಿತ್ರರಂಗದ ಪ್ರಮುಖರಿಗೆ ಇದೆ.
ಸಹಕಾರದ ನಿರೀಕ್ಷೆ
ಈ ಬಗ್ಗೆ ಮಾತನಾಡಿರುವ ಹಿರಿಯ ನಟ ಅನಂತನಾಗ್, 'ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರ ಯಾರು ಸಿಎಂ ಆಗುತ್ತಾರೆ ಎಂಬುದರ ಚರ್ಚೆ ಜೋರಾಗಿ ನಡೆಯುತ್ತಿತ್ತು. ಆಗಲೇ ನನಗೆ ಬಸವರಾಜ ಬೊಮ್ಮಾಯಿ ಸಿಎಂ ಆಗುತ್ತಾರೆ ಎಂದು ಅನಿಸಿತ್ತು. ಸಂಜೆ ಹೊತ್ತಿಗೆ ಅದು ನಿಜವಾಯಿತು. ನಾನು ರಾಜಕೀಯದಲ್ಲಿದ್ದ ಸಮಯದಲ್ಲಿ ಅವರ ತಂದೆ ಸಿಎಂ ಆಗಿದ್ದರು. ಬಸವರಾಜ ಬೊಮ್ಮಾಯಿ ನಿಷ್ಠಾವಂತ, ಮಿತಭಾಷಿ ಮತ್ತು ಓದಿಕೊಂಡಿದ್ದಾರೆ. ಚಿತ್ರರಂಗಕ್ಕೆ ಎಲ್ಲ ಮುಖ್ಯಮಂತ್ರಿಗಳು ಸಹಕಾರ ನೀಡಿದ್ದಾರೆ. ಅದರಂತೆ ಬೊಮ್ಮಾಯಿವರು ಸಹ ನೀಡುತ್ತಾರೆ. ಕೋವಿಡ್ನಿಂದಾಗಿ ಚಿತ್ರರಂಗಕ್ಕೆ ಅಪಾರ ಹಾನಿಯಾಗಿದೆ. ಅದನ್ನು ಹಂತ ಹಂತವಾಗಿ ಸರಿ ಮಾಡಬೇಕಿದೆ' ಎಂದಿದ್ದಾರೆ.
ಸೀಟು ಭರ್ತಿಗೆ ಬೇಡಿಕೆ
'ಬಸವರಾಜ ಬೊಮ್ಮಾಯಿಯವರು ಮೊದಲು ಚಿತ್ರಮಂದಿರದಲ್ಲಿ ಶೇ. 100 ಸೀಟು ಭರ್ತಿಗೆ ಅವಕಾಶ ನೀಡಬೇಕು. ನನಗೆ ಗೊತ್ತಿರುವಂತೆ ಏಕಪರದೆ ಚಿತ್ರಮಂದಿರಗಳು ಗಣನೀಯವಾಗಿ ಕಡಿಮೆಯಾಗುತ್ತಿವೆ. ಎಲ್ಲಾ ಊರುಗಳಲ್ಲಿಯೂ ಮಾಲ್, ಮಲ್ಟಿಪ್ಲೆಕ್ಸ್ ತೆರೆಯಲಾಗುವುದಿಲ್ಲ. ಹಾಗಾಗಿ ಏಕಪರದೆ ಚಿತ್ರಮಂದಿರಗಳ ಅವಶ್ಯಕತೆ ಇದ್ದೇ ಇರುತ್ತದೆ. ಅವುಗಳನ್ನು ರಕ್ಷಣೆ ಮಾಡಬೇಕು. ಅದೇ ರೀತಿ ಕೇರಳ ಸರ್ಕಾರ ಸಿನಿಮಾಗಳನ್ನು ಪ್ರೋತ್ಸಾಹಿಸಲು ಸರ್ಕಾರದ ವತಿಯಿಂದ ಒಟಿಟಿ ಮಾಡಲು ಯೋಚಿಸುತ್ತಿದೆ ಎಂಬ ಸುದ್ದಿ ಓದಿದೆ. ಇದನ್ನು ಕರ್ನಾಟಕದಲ್ಲಿಯೂ ಮಾಡಿದರೆ ಒಳ್ಳೆಯದು. ಇನ್ನೂ ಅನೇಕ ವಿಷಯಗಳಿವೆ. ಬೊಮ್ಮಾಯಿಯವರು ಮಂತ್ರಿಮಂಡಲ ರಚಿಸಿದ ಮೇಲೆ ಬೇಡಿಕೆಗಳನ್ನು ಇಡೋಣ' ಎಂದು ಅನಂತನಾಗ್ ಹೇಳಿದ್ದಾರೆ.
ಚಿತ್ರಮಂದಿರಗಳಲ್ಲಿ 100%ರಷ್ಟು ಅವಕಾಶ
ಬೊಮ್ಮಾಯಿವರು ನಮ್ಮ ಸಿಎಂ ಆಗಿದ್ದು ಸಂತೋಷದ ವಿಚಾರ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಹೇಳಿದ್ದಾರೆ. 'ನಾವು ಸಿಎಂ ಬಳಿಗೆ ಯಾವುದೇ ಮನವಿ ತೆಗೆದುಕೊಂಡು ಹೋದಾಗಲೂ ಅವರು ಇರುತ್ತಿದ್ದರು. ಚಿತ್ರರಂಗದ ಬಗ್ಗೆ ಅವರು ಬಹಳ ತಿಳಿದುಕೊಂಡಿದ್ದಾರೆ. ಕೋವಿಡ್ ಸಮಯದಲ್ಲಿಬಹಳ ನಷ್ಟವಾಗಿದೆ ಎಂದು ನಮ್ಮ ಬಳಿ ಹೇಳಿದ್ದರು. ಅವರಿಂದ ಬಹಳ ನಿರೀಕ್ಷೆಗಳಿವೆ. ಈ ಪೈಕಿ ಶೇ. 100 ಸೀಟು ಭರ್ತಿಗೆ ಅವಕಾಶ ಕೊಡುವಂತೆ ಮಾಡುವುದು ಒಂದು. ಅದೇ ರೀತಿ ಚಿತ್ರಮಂದಿರಗಳು ಸಂಕಷ್ಟದಲ್ಲಿವೆ. ಈಗಾಗಲೇ ತೆರಿಗೆಯನ್ನು ವಿನಾಯಿತಿ ನೀಡಲಾಗಿದೆ. ಇದರೊಂದಿಗೆ ಇನ್ನೂ ಒಂದಷ್ಟು ಬೇಡಿಕೆಗಳಿವೆ. ಸಮಯ ಸಿಕ್ಕ ತಕ್ಷಣ ಮುಖ್ಯಮಂತ್ರಿಗಳನ್ನು ಭೇಟಿಯಾಗುತ್ತೇವೆ. ಚಿತ್ರರಂಗದ ಜತೆಗೆ ಅವರು ನಿಲ್ಲುತ್ತಾರೆ ಎಂಬ ನಂಬಿಕೆ ಇದೆ. ಅವರಿಗೆ ವಾಣಿಜ್ಯ ಮಂಡಳಿ ಮತ್ತು ಚಿತ್ರರಂಗದ ಕಡೆಯಿಂದ ಶುಭಾಶಯ ತಿಳಿಸುತ್ತೇನೆ' ಎಂದಿದ್ದಾರೆ ಅವರು.
'ಸಿನಿಮಾಟೋಗ್ರಾಫ್ ಆಕ್ಟ್ 1952'ಗೆ ತಿದ್ದುಪಡಿ; ಸರ್ಕಾರವೇ ಸೂಪರ್ ಸೆನ್ಸಾರ್
ಬಸವರಾಜ ಬೊಮ್ಮಾಯಿಯವರಿಗೆ ಚಿತ್ರರಂಗದ ಬಗ್ಗೆ ಅಪಾರ ಕಾಳಜಿ !
ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಚಿತ್ರರಂಗದ ಬಗ್ಗೆ ಅಪಾರ ಕಾಳಜಿ ಇದೆ ಎಂದಿದ್ದಾರೆ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್. 'ಬೊಮ್ಮಾಯಿಯವರು ಕೋವಿಡ್ ಸಂಕಷ್ಟದ ಸಮಯದಲ್ಲಿ ನಮ್ಮ ಜತೆಗೆ ನಿಂತಿದ್ದರು. ಪ್ರತಿ ಬಾರಿ ಚಿತ್ರರಂಗದವರು ಸಿಎಂ ಭೇಟಿಗೆ ಹೋದಾಗ ಅವರು ಸಾಕ್ಷಿಯಾಗುತ್ತಿದ್ದರು. ಇನ್ನು ಮುಂದೆಯೂ ಅವರು ನಮ್ಮ ಜತೆಗೆ ಇರುತ್ತಾರೆ. ಈಗಾಗಲೇ ವಾಣಿಜ್ಯ ಮಂಡಳಿ ಮತ್ತು ಇನ್ನಿತರ ಚಿತ್ರರಂಗದ ಸಂಸ್ಥೆಗಳ ಜತೆಗೆ ಚರ್ಚೆ ಮಾಡಿದ್ದೇವೆ. ಅವರನ್ನು ಭೇಟಿ ಮಾಡಿ ಚಿತ್ರರಂಗದ ಅಭಿವೃದ್ಧಿಗೆ ಸಹಕಾರಿಯಾಗುವಂತೆ ಮನವಿ ಮಾಡುತ್ತೇವೆ' ಎಂದು ಅವರು ತಿಳಿಸಿದ್ದಾರೆ.
ಚಿತ್ರರಂಗದ ಹಿರಿಯರನ್ನು ಮತ್ತು ಗಣ್ಯರನ್ನು ಸಿಎಂ ಬಳಿಗೆ ಕರೆದುಕೊಂಡು ಹೋಗಿ ಚಿತ್ರರಂಗದ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡುವ ಬಗ್ಗೆ ಯೋಚಿಸಿದ್ದೇವೆ. ಚಿತ್ರಮಂದಿರಗಳನ್ನು ಉಳಿಸುವ ಬಗ್ಗೆ ಮೊದಲು ಮಾತನಾಡಬೇಕಿದೆ.
ಬಸವರಾಜ ಬೊಮ್ಮಾಯಿಗೆ ಕಿಚ್ಚ ಸುದೀಪ್ ಶುಭಾಶಯ
'ಏಕಪರದೆ ಚಿತ್ರಮಂದಿರಗಳನ್ನು ಉಳಿಸಿಕೊಳ್ಳುವುದು, ಚಿತ್ರರಂಗದ ಕಾರ್ಮಿಕರಿಗೆ ಇಲಾಖೆಯ ಎಲ್ಲಾಸವಲತ್ತುಗಳನ್ನು ಸಿಗುವಂತೆ ಮಾಡುವುದು, ಸದ್ಯದ ಪರಿಸ್ಥಿತಿಯಲ್ಲಿ ಚಿತ್ರಮಂದಿರಗಳ ಟ್ಯಾಕ್ಸ್ ಸೇರಿದಂತೆ ಯಾವುದನ್ನು ಕಡಿಮೆ ಮಾಡಬಹುದು ಎಂಬ ಬಗ್ಗೆ ಹಾಗೂ 60 ದಾಟಿದ ಹಿರಿಯ ಕಲಾವಿದರಿಗೆ ಪಿಂಚಣಿ ವ್ಯವಸ್ಥೆ ಮಾಡುವ ಕುರಿತಾದ ಆಲೋಚನೆಗಳನ್ನು ಪತ್ರ ರೂಪದಲ್ಲಿ ಮುಖ್ಯಮಂತ್ರಿಗಳಿಗೆ ಸದ್ಯದಲ್ಲೇ ತಲುಪಿಸುತ್ತೇನೆ' ಎಂದು ಅವರು ಹೇಳಿದ್ದಾರೆ. ಹೊಸ ಸಿಎಂಗೆ ನಟ ಕಿಚ್ಚ ಸುದೀಪ್ ಸೇರಿದಂತೆ ಸ್ಯಾಂಡಲ್ವುಡ್ನ ಅನೇಕ ತಾರೆಯರು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರಿದ್ದಾರೆ.
ಪ್ರಶಸ್ತಿ ಪ್ರದಾನ
ಹೊಸ ಸಿಎಂ ಆಡಳಿತದಲ್ಲಾದರೂ ನೆನೆಗುದಿಗೆ ಬಿದ್ದಿರುವ ರಾಜ್ಯ ಚಲನಚಿತ್ರ ಪ್ರಶಸ್ತಿ ವಿತರಣಾ ಸಮಾರಂಭ ನಡೆಯುತ್ತದೆ ಎಂಬ ಆಶಾಭಾವನೆಯಲ್ಲಿ ಚಿತ್ರರಂಗವಿದೆ. ಕಳೆದ ಮೂರು ವರ್ಷಗಳಿಂದ ಬೇರೆ ಬೇರೆ ಕಾರಣಗಳಿಂದ ಪ್ರಶಸ್ತಿ ಪ್ರದಾನವಾಗಿಲ್ಲ.
ಈಗಷ್ಟೇ ಸಿಎಂ ಆಗಿದ್ದಾರೆ. ಮಂತ್ರಿಮಂಡಲ ರಚಿಸಲಿ. ಅವರು ವಾರ್ತಾ ಇಲಾಖೆಗೆ ಯಾರನ್ನು ನೇಮಿಸುತ್ತಾರೋ ನೋಡಬೇಕಿದೆ. ಚಿತ್ರರಂಗಕ್ಕೆ ಬೊಮ್ಮಾಯಿ ಖಂಡಿತಾ ನೆರವಾಗುತ್ತಾರೆ ಎಂಬ ನಂಬಿಕೆ ನನಗಿದೆ ಎಂದಿದ್ದಾರ ಅನಂತನಾಗ್