ಆ್ಯಪ್ನಗರ

ಕನ್ನಡ ಚಿತ್ರ ನಿರ್ಮಾಪಕರ ನೂತನ ಸಾರಥಿ ಡಿಕೆ ರಾಮಕೃಷ್ಣ ಸಂದರ್ಶನ

ನಿರ್ಮಾಪಕರ ಸಂಘದಿಂದ ಆಗಬೇಕಾಗಿರುವ ಕೆಲಸಗಳು ಬಹಳಷ್ಟಿವೆ. ಅದನ್ನೆಲ್ಲವನ್ನು ನನ್ನ ಅಧಿಕಾರವಧಿಯಲ್ಲಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಇದಕ್ಕೆ ನನ್ನ ಕಮಿಟಿ ಕೂಡ ಸಹಕಾರಿಯಾಗಿದೆ. ವಾಣಿಜ್ಯ ಮಂಡಳಿ ಮತ್ತು ಇತರೆ ಎಲ್ಲರ ಸಹಕಾರದಿಂದ ಸದ್ಯದಲ್ಲೇ ಒಂದು ದೊಡ್ಡ ಈವೆಂಟ್‌ ಕೂಡ ಮಾಡುವ ಐಡಿಯಾ ಇದೆ ಎನ್ನುತ್ತಾರೆ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಅಧ್ಯಕ್ಷರಾದ ಡಿ.ಕೆ. ರಾಮಕೃಷ್ಣ.

Vijaya Karnataka 31 Dec 2019, 7:23 pm

* ಹರೀಶ್ ಬಸವರಾಜು
Vijaya Karnataka Web ಡಿಕೆ ರಾಮಕೃಷ್ಣ


ನಾನು 1985ರಿಂದ ಇಂಡಸ್ಟ್ರಿಯಲ್ಲಿದ್ದೇನೆ. ನಿರ್ಮಾಪಕರ ಕಷ್ಟಗಳೇನು, ಅವರ ಸಮಸ್ಯೆಗಳೇನು ಎಂಬುದರ ಅರಿವಿದೆ. ಹಾಗಾಗಿ ಪ್ರತಿ ತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ ಎರಡನೇ ಭಾನುವಾರ ಸಭೆ ನಡೆಸಿ ನಿರ್ಮಾಪಕರ ಕಷ್ಟ-ನಷ್ಟಗಳನ್ನು ಚರ್ಚೆ ಮಾಡುತ್ತೇವೆ. ಎಲ್ಲರನ್ನು ಒಟ್ಟಾಗಿ ಸೇರಿ ಸಂಘವನ್ನು ಬಲಪಡಿಸುತ್ತೇನೆ.

ಕೋಟ್ಯಂತರ ರೂಪಾಯಿ ಬಂಡವಾಳ ಹೂಡುವ ನಿರ್ಮಾಪಕರ ಸಂಘಕ್ಕೆ ಒಂದು ಕಟ್ಟಡವೇ ಇಲ್ಲವಲ್ಲ?
ಹೌದು. ನಾನು ಅಧಿಕಾರ ವಹಿಸಿಕೊಂಡ ಮೇಲೆ ಮೊದಲು ಮಾಡುವ ಕೆಲಸ ಸಂಘಕ್ಕೆ ಒಂದು ಭವನ ನಿರ್ಮಿಸುವುದು. ಬೆಂಗಳೂರಿನ ಶಿವಾನಂದ ಸರ್ಕಲ್‌ ಬಳಿ 3,700 ಚದರ ಅಡಿ ಜಾಗವಿದೆ. ಅದರಲ್ಲಿಉತ್ತಮ ವ್ಯವಸ್ಥೆಯುಳ್ಳ ಕಟ್ಟಡವನ್ನು ನಿರ್ಮಾಣ ಮಾಡುತ್ತೇವೆ.

ದಕ್ಷಿಣದ ಇತರೆ ರಾಜ್ಯಗಳಲ್ಲಿ ನಿರ್ಮಾಪಕರ ಸಂಘ ಸ್ಟ್ರಾಂಗ್‌ ಆಗಿದೆ. ಅದೇ ರೀತಿ ಇಲ್ಲಿಯೂ ಆಗಬಹುದಾ?
ನಮ್ಮದು ಸಹ ಸ್ಟ್ರಾಂಗ್‌ ಆಗಿಯೇ ಇದೆ. ಉಳಿದಂತೆ ತಮಿಳುನಾಡಿನ ಕೌನ್ಸಿಲ್‌, ಹೈದರಾಬಾದ್‌ನಲ್ಲಿರುವ ಕೌನ್ಸಿಲ್‌ ಸೇರಿ ಎಲ್ಲರ ಜತೆ ಆಗಾಗ ಸಭೆ ಸೇರಿ ಚರ್ಚೆ ಮಾಡುತ್ತೇವೆ. ಅವರ ಕಾರ್ಯಶೈಲಿಯನ್ನು ಇಲ್ಲಿಯಾವ ರೀತಿ ಅಳವಡಿಸಿಕೊಳ್ಳಬಹುದು, ಇಲ್ಲಿನ ಕೆಲ ಕಾರ್ಯಶೈಲಿಗಳು ಅವರಿಗೆ ಹೇಗೆ ಸಹಾಯವಾಗಬಹುದು ಎಂಬುದರ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತೇವೆ. ನಾವು ಸಹ ಬಹಳ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೇವೆ. ಪರಭಾಷೆ ಚಿತ್ರಗಳು 7 ವಾರಗಳ ನಂತರ ಬರಬೇಕು ಎಂದು ನಾವೇ ನಿರ್ಧಾರ ಮಾಡಿದ್ದು. ಅದರಂತೆ ಒಂದಷ್ಟು ವರ್ಷ ನಡೆಯಿತು. ಮುಂದಿನ ದಿನಗಳಲ್ಲಿಒಳ್ಳೊಳ್ಳೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಆಲೋಚನೆ ಇದೆ.

ಹೊಸ ನಿರ್ಮಾಪಕರಿಗೆ ನಿಮ್ಮ ಸಂಘದ ಬೆಂಬಲ ಯಾವ ರೀತಿ ಇರುತ್ತದೆ?
ಸಾಕಷ್ಟು ಅನುಕೂಲಗಳನ್ನು ಮಾಡಲು ನಾನು ಪ್ರಯತ್ನ ಮಾಡುತ್ತಿದ್ದೇವೆ. ಈಗಾಗಲೇ 6 ಲಕ್ಷದಷ್ಟು ವಿಮೆಯ ಸೌಲಭ್ಯ ನಮ್ಮಲ್ಲಿದೆ. ಅನಾರೋಗ್ಯದ ಸಮಯದಲ್ಲಿ ಸಂಘ ಅವರ ಕಷ್ಟಕ್ಕೆ ಮಿಡಿಯುತ್ತದೆ. ಒಂದು ವೇಳೆ ಮರಣ ಹೊಂದಿದರೆ 3 ಲಕ್ಷದಷ್ಟು ವಿಮೆ ಅವರ ಕುಟುಂಬಕ್ಕೆ ಸಿಗುತ್ತದೆ. ಹೀಗೆ ಇನ್ನೂ ಹತ್ತು ಹಲವು ಉಪಯೋಗಗಳು ನಮ್ಮ ಸಂಘದಿಂದ ಆಗುತ್ತವೆ.

ಜೂನ್ 29ಕ್ಕೆ ಫಿಲ್ಮ್‌ ಚೇಂಬರ್‌ ಚುನಾವಣೆ: ತಾರಕಕ್ಕೇರಿದ ಬಣ ರಾಜಕೀಯ

ಕನ್ನಡದಲ್ಲಿ ವಾರಕ್ಕೆ 8ರಿಂದ 10 ಸಿನಿಮಾಗಳು ಬಿಡುಗಡೆಯಾಗುತ್ತವೆ. ಇದರಿಂದ ಯಾರಿಗೆ ಉಪಯೋಗ?
ಯಾರಿಗೂ ಪ್ರಯೋಜನವಿಲ್ಲ. ಇಂತಹ ವಿಚಾರಗಳನ್ನು ಚರ್ಚೆ ಮಾಡಲೆಂದೇ ನಾನು ಸೆಕೆಂಡ್‌ ಸಂಡೆ ಮೀಟಿಂಗ್‌ ಮಾಡಲು ಯೋಚಿಸಿರುವುದು. ಮೊದಲ ಸಭೆಯಲ್ಲಿಈ ವಿಷಯದ ಬಗ್ಗೆ ಮಾತನಾಡುತ್ತೇನೆ. ಯಾಕೆ ಅಷ್ಟೊಂದು ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್‌ ಆಗುತ್ತಿವೆ, ಸಬ್ಸಿಡಿಗಾಗಿ ಸಿನಿಮಾ ಮಾಡುವವರ ಸಂಖ್ಯೆ ಹೆಚ್ಚಾಗಿದೆಯಾ ಎಂಬ ವಿಷಯಗಳನ್ನು ಅಲ್ಲಿ ನಾನು ಪ್ರಸ್ತಾಪಿಸಲು ಪ್ಲಾನ್‌ ಮಾಡಿಕೊಂಡಿದ್ದೇನೆ.

ಸಂಕಷ್ಟದಲ್ಲಿ ಸಿಲುಕುವ ನಿರ್ಮಾಪಕರಿಗೆ ನಿಮ್ಮ ಸಂಘದಿಂದ ಏನು ಸಹಾಯ ಮಾಡುತ್ತೀರಾ?
ಈಗಾಗಲೇ ನಿರ್ಮಾಪಕರ ಸಂಘದಿಂದ ವಿಮೆ ಸೌಲಭ್ಯವಿದೆ. ಇನ್ನು ಹೆಚ್ಚಿನ ಹಣದ ಅವಶ್ಯಕತೆ ಬಿದ್ದರೆ ವಾಣಿಜ್ಯ ಮಂಡಳಿಯಲ್ಲಿರುವ ಹೆಚ್ಚುವರಿ ಹಣ ಸಹ ನೀಡಬಹುದು. ಉಳಿದಂತೆ ಸಂಘವು ಅವರಿಗೆ ಮಾನಸಿಕವಾಗಿ ಬೆನ್ನೆಲುಬಾಗಿ ಯಾವಾಗಲು ಇರುತ್ತದೆ. ಏನೇ ಸಮಸ್ಯೆ ಇದ್ದರು ನೇರವಾಗಿ ಬಂದು ಚರ್ಚೆ ಮಾಡಬಹುದು.

ವಾಣಿಜ್ಯ ಮಂಡಳಿಗಳು ನಾಲ್ಕು ಇವೆ. ಇದರಲ್ಲಿನೀವು ಯಾರ ಜತೆ ಗುರುತಿಸಿಕೊಳ್ಳುತ್ತೀರಾ?
ನಮಗೆ ಗೊತ್ತಿರುವುದು, ನಮಗೆ ಇರೋದು ಬೆಂಗಳೂರಿನ ಶಿವಾನಂದ ಸರ್ಕಲ್‌ನಲ್ಲಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾತ್ರ. ಹಾಗಾಗಿ ಅವರ ಜತೆ ಜತೆಯಾಗಿ ನಾವು ಕನ್ನಡ ಚಿತ್ರರಂಗದ ಏಳ್ಗೆಗಾಗಿ ಶ್ರಮಿಸುತ್ತೇವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌