ಅದೊಂದು ಕಾಲವಿತ್ತು, ಸೆನ್ಸಾರ್ ಮಂಡಳಿಯ ಮುಂದೆ ಸಿನಿಮಾಗಳು ಸಾಲುಗಟ್ಟಿ ನಿಲ್ಲುತ್ತಿದ್ದವು. ಅದರ ಸದಸ್ಯರೂ ಬಿಡುವಿಲ್ಲದಂತೆ ಚಿತ್ರಗಳನ್ನು ನೋಡುವಂತಾಗುತ್ತಿತ್ತು. ಆದರೆ ಈಗ ಸೆನ್ಸಾರ್ ಮಂಡಳಿಯ ಮುಂದೆ ಬೆರಳೆಣಿಕೆಯ ಚಿತ್ರಗಳಷ್ಟೇ ಇವೆ. ನಿರ್ಮಾಣವಾದ ಬಹುತೇಕ ಚಿತ್ರಗಳೂ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿಯೇ ಇಲ್ಲ.
ಕೊರೊನಾ ಕಾರಣದಿಂದಾಗಿ ಎಲ್ಲ ಉದ್ಯಮಗಳು ನೆಲ ಕಚ್ಚಿವೆ. ಅದರಂತೆ ಚಿತ್ರರಂಗ ಕೂಡ ಸಮಸ್ಯೆಯಲ್ಲಿದೆ. ಚಿತ್ರಮಂದಿರಗಳು, ಕಲಾವಿದರು, ತಂತ್ರಜ್ಞರು, ಕಾರ್ಮಿಕರು ತಿಂಗಳುಗಟ್ಟಲೆಯ ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಈ ಹೊತ್ತಿನಲ್ಲಿ ಪೂರ್ತಿ ಸಿದ್ಧಗೊಂಡಿರುವ ಚಿತ್ರಗಳನ್ನೂ ಸೆನ್ಸಾರ್ಗೆ ಕಳಿಸದೇ ಚಿತ್ರತಂಡಗಳು ಸುಮ್ಮನಿರುವ ವಿದ್ಯಮಾನ ಬಹಿರಂಗವಾಗಿದೆ.
ಸೆನ್ಸಾರ್ ಮುಂದೆ ಎಂಟೇ ಚಿತ್ರಗಳು!
ಲವಲವಿಕೆಗೆ ಸಿಕ್ಕಿರುವ ಮಾಹಿತಿ ಪ್ರಕಾರ ಸೆನ್ಸಾರ್ಗಾಗಿ ಕೇವಲ 8 ಸಿನಿಮಾಗಳು ಮಾತ್ರ ಅರ್ಜಿ ಸಲ್ಲಿಸಿವೆ. ಮೊದಲೆಲ್ಲ ಸೆನ್ಸಾರ್ ಪ್ರಮಾಣಕ್ಕಾಗಿ ಕನಿಷ್ಠ 30ರಿಂದ 40 ಚಿತ್ರಗಳು ಕಾಯುತ್ತಿರುತ್ತಿದ್ದವು. ಹಿಂದೆಲ್ಲ ದಿನಕ್ಕೆ ನಾಲ್ಕರಂತೆ ಮಂಡಳಿಯ ಸದಸ್ಯರು ಸಿನಿಮಾ ನೋಡಿದ್ದಿದೆ. ಈಗ ದಿನಕ್ಕೆ ಎರಡರಂತೆ ನೋಡಿ ಪ್ರಮಾಣ ಪತ್ರ ನೀಡಲು ಮಂಡಳಿ ಸಿದ್ಧತೆ ನಡೆಸಿದೆ.
ಹಲವು ಸಿನಿಮಾ ತಂಡಗಳು ಸೆನ್ಸಾರ್ ಮಾಡಲು ಅರ್ಜಿ ಹಾಕಿಲ್ಲ
ಇದಕ್ಕೆ ಮುಖ್ಯ ಕಾರಣ ಕೋವಿಡ್ ಮತ್ತು ಲಾಕ್ಡೌನ್. ಕೋವಿಡ್ನಿಂದ ಚಿತ್ರೀಕರಣ ಸ್ಥಗಿತಗೊಂಡಿತು. ಇದರಿಂದ ಅಂದುಕೊಂಡ ಸಮಯಕ್ಕೆ ಶೂಟಿಂಗ್ ಮುಗಿದಿಲ್ಲ. ಇದು ಒಂದು ಕಾರಣವಾದರೆ, ಸಿದ್ಧವಾಗಿರುವ ಸಿನಿಮಾಗಳನ್ನು ರಿಲೀಸ್ ಮಾಡಲು ಚಿತ್ರಮಂದಿರದ ಲಭ್ಯತೆ ಇಲ್ಲ. ಒಂದು ಸಾರಿ ಸೆನ್ಸಾರ್ ಮಾಡಿಸಿದರೆ, ಯಾವುದೇ ದೃಶ್ಯವನ್ನು ಸೇರಿಸಲು ಅಥವಾ ಕತ್ತರಿಸಲು ಆಗುವುದಿಲ್ಲ. ಒಂದೊಮ್ಮೆ ಹೆಚ್ಚುವರಿಯಾಗಿ ಏನನ್ನಾದರೂ ಸೇರಿಸಿದರೂ ಮತ್ತೆ ಸೆನ್ಸಾರ್ ಮಾಡಿಸಬೇಕಾಗುತ್ತದೆ. ಈ ಕಾರಣಕ್ಕೂ ಹಲವು ಚಿತ್ರತಂಡಗಳು ಸೆನ್ಸಾರ್ ಮಾಡಲು ಅರ್ಜಿ ಹಾಕಿಲ್ಲ.
ಒಟಿಟಿಯಲ್ಲಿ ನೇರವಾಗಿ ಬಿಡುಗಡೆ ಮಾಡುವವರಿಗೆ ಸೆನ್ಸಾರ್ ಪ್ರಮಾಣ ಪತ್ರದ ಅವಶ್ಯಕತೆ ಇದೆ.
ಸರ್ಕಾರದ ವಿಶೇಷ ಪ್ಯಾಕೇಜ್ನ್ನು ಕನ್ನಡ ಚಿತ್ರರಂಗದ ಕಾರ್ಮಿಕರು, ಕಲಾವಿದರು ಪಡೆದುಕೊಳ್ಳೋದು ಹೇಗೆ?
ವರ್ಷಕ್ಕೆ 200 ಸಿನಿಮಾ ರಿಲೀಸ್
ಕೆಲ ಕನ್ನಡ ಚಿತ್ರಗಳು ಸೆನ್ಸಾರ್ಗಾಗಿ ಅರ್ಜಿ ಸಲ್ಲಿಸಿವೆ. 8 ಸಿನಿಮಾಗಳ ಪಟ್ಟಿಯಲ್ಲಿ ಒಟಿಟಿ ವೇದಿಕೆಗೆ ಹೋಗುವ ಸಿನಿಮಾಗಳೂ ಸೇರಿವೆ.
ಎರಡು ವರ್ಷಗಳ ಹಿಂದೆ ಸ್ಯಾಂಡಲ್ವುಡ್ ಒಂದರಲ್ಲೇ 200ಕ್ಕೂ ಹೆಚ್ಚಿನ ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು. 350ಕ್ಕೂ ಹೆಚ್ಚಿನ ಸಿನಿಮಾಗಳು ಸೆಟ್ಟೇರುತ್ತಿದ್ದವು. ಅವುಗಳಿಗೆ ಸಿಗುತ್ತಿದ್ದ ಗೆಲುವು ಕಡಿಮೆಯೇ ಆದರೂ ಚಿತ್ರರಂತದಲ್ಲಿ ವ್ಯವಹಾರ ಮಾತ್ರ ನಿರಂತರವಾಗಿ ನಡೆಯುತ್ತಿತ್ತು. ಈಗ ಕೋವಿಡ್ ಕೊಟ್ಟ ಹೊಡೆತಕ್ಕೆ ಬಿಡುಗಡೆಯ ಮಾತು ದೂರವಿರಲಿ, ಸಿನಿಮಾಗಳು ಸೆಟ್ಟೇರುತ್ತಲೂ ಇಲ್ಲ. ಇದರಿಂದ ಸಿನಿಮಾವನ್ನು ನಂಬಿಕೊಂಡಿದ್ದವರು ಬೇರೆ ಬೇರೆ ಉದ್ಯೋಗಗಳತ್ತ ಮುಖ ಮಾಡುತ್ತಿದ್ದಾರೆ.
ಸಿಎಂ ಬಿಎಸ್ ಯಡಿಯೂರಪ್ಪ ಘೋಷಿಸಿದ ಹೊಸ ಪ್ಯಾಕೇಜ್ನಲ್ಲಿ ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದೇನು?
ಅನ್ಲಾಕ್ ಆದ ನಂತರ ಹೆಚ್ಚು
ಸಿನಿಮಾಗಳು ಸೆಟ್ಟೇರುವುದು ಕಡಿಮೆಯಾದರೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ಗಳ ರಿಜಿಸ್ಪ್ರೇಷನ್ ಯಥಾಸ್ಥಿತಿಯಲ್ಲಿಆಗುತ್ತಿದೆಯಂತೆ. 'ಲಾಕ್ಡೌನ್ನಿಂದಾಗಿ ಕಚೇರಿ ಮುಚ್ಚಿದ್ದ ಸಮಯದಲ್ಲಿ ನೊಂದಣಿಯಾಗಿಲ್ಲ. ಆದರೆ, ಉಳಿದಂತೆ ಒಂದಷ್ಟು ಹೊಸ ಹೊಸ ಟೈಟಲ್ಗಳ ನೊಂದಣಿ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಹೊಸ ನಿರ್ಮಾಣ ಸಂಸ್ಥೆಗಳ ನೊಂದಣಿ ಕಡಿಮೆಯಾಗಿದೆ ಅಷ್ಟೇ' ಎಂದು ಹೇಳುತ್ತಾರೆ ಜೈರಾಜ್.
ಸೋಮವಾರವಷ್ಟೇ ಎಲ್ಲ ಚಟುವಟಿಕೆಗಳಿಗೆ ಸರ್ಕಾರ ಅನುಮತಿ ನೀಡಿದೆ. ಈ ವಾರದಲ್ಲಿಚಿತ್ರೀಕರಣ ಆರಂಭವಾಗುತ್ತದೆ. ಚಿತ್ರರಂಗದವರಿಗೂ ಕೊರೊನಾ ಬಂದುದರಿಂದ ಚಿತ್ರತಂಡಗಳು ಕೊಂಚ ನಿಧಾನವಾಗಿಯೇ ಕೆಲಸ ಆರಂಭಿಸಲಿವೆ. ಚಿತ್ರಮಂದಿರಗಳಿಗೆ ಪ್ರದರ್ಶನಕ್ಕೆ ಅನುಮತಿ ನೀಡಿದ ಮೇಲೆ ಒಂದಷ್ಟು ಮಂದಿ ಸೆನ್ಸಾರ್ಗೆ ಹೋಗಲಿದ್ದಾರೆ ಎಂದು ನಿರ್ಮಾಪಕರೊಬ್ಬರು ತಿಳಿಸಿದ್ದಾರೆ.
ಒಳಾಂಗಣ ಚಿತ್ರೀಕರಣಕ್ಕೆ ಮನವಿ
ಸರ್ಕಾರ ಸಧ್ಯ ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ ನೀಡಿದೆ. ಆದರೆ ಒಳಾಂಗಣ ಅಂದರೆ ಸ್ಟುಡಿಯೋಗಳಲ್ಲಿಮತ್ತು ಸೆಟ್ನಲ್ಲಿಶೂಟಿಂಗ್ ಮಾಡಲು ಅನುಮತಿ ನೀಡಬೇಕು ಎಂದು ವಾಣಿಜ್ಯ ಮಂಡಳಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗಿದೆ. ಉಪಾಧ್ಯಕ್ಷ ಉಮೇಶ್ ಬಣಕಾರ್ ಸಿಎಂ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಈ ಮನವಿ ಸಲ್ಲಿಸಿದ್ದಾರೆ.
ಸಂಪೂರ್ಣವಾಗಿ ಅನ್ಲಾಕ್ ಆದರೆ ಚಿತ್ರರಂಗದ ವಾಸ್ತವದ ಪರಿಸ್ಥಿತಿ ಎಲ್ಲರಿಗೂ ತಿಳಿಯುತ್ತದೆ. ಕಳೆದ ವರ್ಷದಿಂದ ಸಿನಿಮಾಗಳ ಸಂಖ್ಯೆಯಂತೂ ಗಣನೀಯವಾಗಿ ಕಡಿಮೆಯಾಗಿದೆ ಎಂದು ಹೇಳಿದ್ದಾರೆ ವಾಣಿಜ್ಯ ಮಂಡಳಿ ಅಧ್ಯಕ್ಷ
ಜೈರಾಜ್
ಲಾಕ್ಡೌನ್ ಇದ್ದ ಪರಿಣಾಮ ಸೆನ್ಸಾರ್ ಮಂಡಳಿ ಮುಂದೆ ಯಾರೂ ಹೋಗಿಲ್ಲ. ಇದೀಗ ಲಾಕ್ಡೌನ್ ತೆರೆದಿರುವುದರಿಂದ ಇನ್ನುಮುಂದೆ ಸೆನ್ಸಾರ್ಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಬಹುದು ಎಂದಿದ್ದಾರೆ ನಿರ್ದೇಶಕ ಲಿಂಗದೇವರು