ಆ್ಯಪ್ನಗರ

ಪೇಜಾವರ ಶ್ರೀಗಳ ಬಗ್ಗೆ 'ನಾದಬ್ರಹ್ಮ' ಹಂಸಲೇಖ ಹೇಳಿಕೆ; ವಿಡಿಯೋ ವೈರಲ್‌!

ಮೈಸೂರಿನಲ್ಲಿ ನಡೆದ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಾದಬ್ರಹ್ಮ ಹಂಸಲೇಖ ಹೋಗಿದ್ದರು. ಆ ಕಾರ್ಯಕ್ರಮದಲ್ಲಿ ಅವರು ಹೇಳಿದ ಮಾತೊಂದು ಈಗ ವಿವಾದಕ್ಕೆ ಗುರಿಯಾಗಿದೆ.

Vijaya Karnataka Web 14 Nov 2021, 11:03 pm

ಹೈಲೈಟ್ಸ್‌:

  • ಪೇಜಾವರ ಶ್ರೀಗಳ ಬಗ್ಗೆ ಮಾತನಾಡಿದ ಹಂಸಲೇಖ
  • ಹಂಸಲೇಖ ಮಾತನಾಡಿದ ವಿಡಿಯೋ ವೈರಲ್
  • 'ಯಾರ ಮನಸ್ಸನ್ನು ನೋಯಿಸುವ ಇಷ್ಟವಿಲ್ಲ'- ಹಂಸಲೇಖ ಕ್ಷಮೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Hamsalekha
ಸಂಗೀತ ನಿರ್ದೇಶಕ 'ನಾದಬ್ರಹ್ಮ' ಹಂಸಲೇಖ ಅವರು ಈಚೆಗೆ ಮೈಸೂರಿನಲ್ಲಿ ನಡೆದ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹೋಗಿದ್ದರು. ಆ ವೇಳೆ ಅವರು ದಲಿತರು, ಅಸ್ಪೃಶ್ಯತೆ ಕುರಿತಂತೆ ಮಾತಾನಾಡಿದ್ದರು, ಜೊತೆಗೆ ಪೇಜಾವರ ಶ್ರೀಗಳ ಹೆಸರನ್ನು ಪ್ರಸ್ತಾಪ ಮಾಡಿದ್ದರು. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಹಂಸಲೇಖ ಹೇಳಿದ್ದೇನು?
'ಪೇಜಾವರ ಸ್ವಾಮಿಗಳು ದಲಿತರ ಮನೆಗೆ ವಾಸ್ತವ್ಯಕ್ಕೆ ಹೋಗಿದ್ದಾರೆ ಅಂತ ಸ್ಟೇಟ್‌ಮೆಂಟ್ ಬಂದಿದೆ. ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಹೋಗಿ ಅಲ್ಲಿ ಕುಳಿತು ಕೊಳ್ಳಬಹುದಷ್ಟೇ, ಅವರು ಕೋಳಿ ಕೊಟ್ಟರೆ ತಿನ್ನೋಕೆ ಆಗುತ್ತದೆಯೇ..? ಕೋಳಿ ಬೇಡ, ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ತಿಂತಾರಾ..? ಲಿವರ್ ಫ್ರೈ ತಿಂತಾರಾ, ಆಗತ್ತಾ..? ಅಂದರೆ, ದಲಿತರ ಮನೆಗೆ ಬಲಿತರು ಹೋಗೋದು ಏನ್ ದೊಡ್ಡ ವಿಷ್ಯಾ ಅಂತ ನಂಗ್ ಅನ್ನಿಸ್ತು ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಅಂತ ಶುರು ಮಾಡಿದ್ರು. ಈಗ ಎಲ್ಲರೂ ಗ್ರಾಮ ವಾಸ್ತವ್ಯ ಶುರು ಮಾಡಿದ್ದಾರೆ..' ಎಂದು ಹೇಳಿದ್ದರು.

'ಬಿಳಿಗಿರಿ ರಂಗಯ್ಯ ಸೋಲಿಗರ ಮನೆಯ ಹೆಣ್ಣಿನೊಂದಿಗೆ ರಮಿಸಿದರೆ, ಅದರಲ್ಲಿ ಏನ್ ದೊಡ್ಡ ವಿಷ್ಯ ಇದೆ? ಅದೇ ಸೋಲಿಗರ ಹೆಣ್ಣು ಮಗಳನ್ನು ಕರೆದುಕೊಂಡು ಹೋಗಿ ತನ್ನ ದೇವಾಲಯದಲ್ಲಿ ಇಟ್ಟು ಗೌರವಿಸಿದ್ದರೆ, ಅದು ಬಿಳಿಗಿರಿ ರಂಗಯ್ಯನ ತಾಕತ್ತು. ಸೂರ್ಯ ಉದಯಿಸುವುದಕ್ಕಿಂತ ಮುಂಚೆ ಸೋಲಿಗರ ಮನೆಗೆ ಬಂದು ಆ ಹೆಣ್ಣು ಮಗಳೊಂದಿಗೆ ಬಿಳಿಗಿರಿ ರಂಗಯ್ಯ ಸಂಸಾರ ನಡೆಸಿ ಬೆಳಕು ಹರಿಯುವುದರೊಳಗೆ ಹೋಗಿ ಕಲ್ಲಾಗುತ್ತಾನಂತೆ! ಅದೇನು ದೊಡ್ಡ ವಿಷಯ, ಅದೊಂದು ನಾಟಕ, ಬೂಟಾಟಿಕೆ. ದಲಿತರ ಮನೆಗೆ ಬಲಿತರು ಹೋಗುವುದು ಅದೇನು ದೊಡ್ಡ ವಿಷಯವೇ..? ದಲಿತರನ್ನು ಬಲಿತರು ತಮ್ಮ ಮನೆಗಳಿಗೆ ಕರೆದುಕೊಂಡು ಹೋಗಬೇಕು. ಅವರ ಮನೆಯಲ್ಲಿ ಊಟ ಹಾಕಬೇಕು, ದಲಿತರ ಮುಟ್ಟಿದ ಲೋಟಗಳನ್ನು ನಾವು ತೊಳೆಯುತ್ತೀವಿ ಎಂದು ಬಲಿತರು ಹೇಳಬೇಕು' ಎಂದು ಹಂಸಲೇಖ ಹೇಳಿದ್ದಾರೆ.

ಹಂಸಲೇಖ ಮಾತಿಗೆ ಪರ-ವಿರೋಧ!
ಸೋಶಿಯಲ್ ಮೀಡಿಯಾದಲ್ಲಿ ಹಂಸಲೇಖ ಅವರು ಮಾತನಾಡಿದ ವಿಡಿಯೋ ವೈರಲ್‌ ಆಗುತ್ತಿದ್ದಂತೆಯೇ, ಸಾಕಷ್ಟು ಪರ-ವಿರೋಧ ಚರ್ಚೆಗಳು ಆರಂಭಗೊಂಡಿವೆ. ಕೆಲವರು ಹಂಸಲೇಖ ಅವರು ಹೇಳಿದ್ದು ಸರಿಯಾಗಿಯೇ ಇದೆ ಎಂದರೆ, ಇನ್ನೂ ಕೆಲವರು, 'ಹಂಸಲೇಖ ಕ್ಷಮೆ ಕೇಳಬೇಕು. ಬಿಳಿಗಿರಿ ರಂಗಯ್ಯ, ಪೇಜಾವರ ಶ್ರೀಗಳ ಬಗ್ಗೆ ವ್ಯಂಗ್ಯ ಮಾತನಾಡಿದ್ದು ಸರಿಯಲ್ಲ..' ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

'SPB ಅಗಲಿಕೆಗಿಂತ ದೊಡ್ಡ ದುರಂತವನ್ನು ನನ್ನ ಜೀವನದಲ್ಲಿ ನೋಡಲಾರೆ'- ಹಂಸಲೇಖ
ಕ್ಷಮೆ ಕೇಳಿದ ಹಂಸಲೇಖ
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಹಂಸಲೇಖ ಕ್ಷಮೆ ಕೇಳಿದ್ದಾರೆ. ಕ್ಷಮೆ ಕೇಳಿರುವ ವಿಡಿಯೋವನ್ನು ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. 'ಮೊದಲಿಗೆ ಕ್ಷಮೆ ಇರಲಿ, ಎರಡನೇದಾಗಿಯೂ ಕ್ಷಮೆ ಇರಲಿ.. ಎಲ್ಲ ಮಾತುಗಳು ವೇದಿಕೆಗೆ ಅಲ್ಲ ಅನ್ನೋದು ನನಗೆ ಗೊತ್ತಿದೆ, ತಪ್ಪು. ಅದು ಒಂದು ಪ್ರಶಸ್ತಿ ಪುರಸ್ಕಾರ ಸಭೆ ಅದು. ಅಲ್ಲಿ, ನುಡಿದರೆ ಮುತ್ತಿನ ಹಾರದಂತೆ ಇರಬೇಕು ಎನ್ನುವಂತೆ ಇರಬೇಕಿತ್ತು. ನಾನು ಹಾಗೇ ಅಲಂಕರಿಸಬೇಕಿತ್ತು, ತಪ್ಪು. ಅಸ್ಪೃಶ್ಯತೆ ನಮ್ಮ ದೇಶಕ್ಕೆ ಅಂಟಿದ ಶಾಪ. ಇದು ಜಿಡ್ಡು ಕೃಷ್ಣಮೂರ್ತಿಗಳ ಮಾತು, ನನ್ನ ಮಾತಲ್ಲ. ಅಸ್ಪೃಶ್ಯತೆಯ ಅನಿಷ್ಟವನ್ನು ತೊಡೆದು ಹಾಕೋದಕ್ಕೆ ಪೇಜಾವರ ಶ್ರೀಗಳು ಸೇರಿದಂತೆ ಎಲ್ಲ ಗುರು-ಹಿರಿಯರು ಪ್ರಯತ್ನ, ಸಂಧಾನಗಳನ್ನು ಮಾಡುತ್ತಲೇ ಇದ್ದಾರೆ. ಆ ಪ್ರಯತ್ನ, ಸಂಧಾನಗಳ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ದಶಕಗಳ ಹಿಂದೆ ನಮ್ಮ ಕಲಾರಂಗದಲ್ಲೂ ಅಸ್ಪೃಶ್ಯತೆ ದಟ್ಟವಾಗಿತ್ತು. ಮನುಷ್ಯವಶಾತ್ ಇಲ್ಲಿ ಅದು ಕರಗಿ ಮಾಯಾವಾಗಿದೆ. ಭಾರತದಲ್ಲೂ ಕೂಡ ಅದು ಕರಗಿ ಮಾಯಾವಾಗುವ ದಿನವಿದೆ. ನಾನು ಅಲ್ಲಿ ಆಡಿದ ಕೆಲ ಮಾತುಗಳು ನನ್ನ ಹೆಂಡತಿಗೂ ಇಷ್ಟವಾಗಲಿಲ್ಲ. ಆಕೆಯ ಕ್ಷಮೆಯನ್ನೂ ನಾನು ಕೇಳಿದ್ದೇನೆ. ನಾನು ಸಂಗೀತಗಾರ. ನನಗ್ಯಾಕೆ ಈ ಟ್ರೋಲ್. ಕಂಟ್ರೋಲ್ ಆಗಿರುವುದಷ್ಟೇ ನಮ್ಮ ಕೆಲಸ. ಯಾರ ಮನಸ್ಸನ್ನು ನೋಯಿಸುವ ಇಷ್ಟವಿಲ್ಲ. ನನ್ನ ಸಂಗೀತ ಹೇಗೆ ಎಲ್ಲರಿಗೂ ಸುಖ ಕೊಡುತ್ತದೆಯೋ, ನನ್ನ ಮಾತು, ಬದುಕು ಕೂಡ ಎಲ್ಲರಿಗೂ ಸುಖ ಕೊಡಬೇಕು' ಎಂದು ಹಂಸಲೇಖ ಹೇಳಿದ್ದಾರೆ.

'ಕಲೆಯೇ ಅನ್ನ ಎಂದವರ ತಟ್ಟೆಗೆ ನರಕ ಬಂದು ಬಿತ್ತಲ್ಲಪ್ಪಾ..'-ಚಿರು ಸರ್ಜಾಗೆ ಹಂಸಲೇಖ ಗೀತನಮನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌