ಆ್ಯಪ್ನಗರ

ನಟಿ ಸೌಂದರ್ಯಾ 16 ವರ್ಷಗಳ ಹಿಂದೆ 'ದ್ರೌಪದಿ' ಪಾತ್ರ ಮಾಡಿದ್ದ ಸಿನಿಮಾ ಈಗ ರಿಲೀಸ್!

ನಟಿ ಸೌಂದರ್ಯಾ ಅಭಿನಯದ ಕೊನೆಯ ಚಿತ್ರ 'ಆಪ್ತಮಿತ್ರ'. ಆದರೆ, ಅವರ ನಿಧನಕ್ಕೂ ಮೊದಲು ಒಂದು ಬಿಗ್ ಬಜೆಟ್ ಸಿನಿಮಾದ ಶೂಟಿಂಗ್‌ ನಡೆಯುತ್ತಿತ್ತು. ಇದೀಗ ಆ ಸಿನಿಮಾವನ್ನೂ ರಿಲೀಸ್ ಮಾಡುವುದಕ್ಕೆ ಸಿದ್ಧತೆಗಳು ಆರಂಭವಾಗಿವೆ.

Vijaya Karnataka Web 20 Oct 2020, 3:00 pm
ನಟಿ ಸೌಂದರ್ಯಾ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ, ಬಹುಭಾಷೆಯ ಚಿತ್ರರಂಗದಲ್ಲಿ ಗುರುತಿಸಿಕೊಂಡವರು. 13 ವರ್ಷಗಳ ಚಿತ್ರರಂಗದಲ್ಲಿ ಕೆಲಸ ಮಾಡಿದ ಅವರು, ನಟಿಸಿದ ಸಿನಿಮಾಗಳ ಸಂಖ್ಯೆ ನೂರಾರು. 2004ರಲ್ಲಿ ಅವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಅದೇ ವರ್ಷ ಅವರು ಒಂದು ತೆಲುಗು ಸಿನಿಮಾವನ್ನೂ ಒಪ್ಪಿಕೊಂಡಿದ್ದರು. ದೊಡ್ಡ ಮಟ್ಟದಲ್ಲಿ ಲಾಂಚ್‌ ಆಗಿದ್ದ ಆ ಬಹುನಿರೀಕ್ಷಿತ ಸಿನಿಮಾ, ತೆರೆಗೆ ಬರಲೇ ಇಲ್ಲ! ಕಾರಣ, ಸೌಂದರ್ಯಾ ಸಾವು! ಇದೀಗ ಆ ಸಿನಿಮಾವನ್ನು ಸಿನಿಪ್ರಿಯರ ಮುಂದಿಡುವ ಸಾಹಸ ಮಾಡಲಾಗುತ್ತಿದೆ!
Vijaya Karnataka Web Soundarya Narthanasala


2004ರಲ್ಲಿ ಸೆಟ್ಟೇರಿತ್ತು 'ನರ್ತನಶಾಲಾ'
ಈ ಪೌರಾಣಿಕ ಸಿನಿಮಾವನ್ನು ಮಾಡಬೇಕೆಂದು ನಿರ್ಧಾರ ಮಾಡಿದವರು ಜನಪ್ರಿಯ ನಟ ನಂದಮೂರಿ ಬಾಲಕೃಷ್ಣ. ಅದು ಅವರ ಮೊದಲ ನಿರ್ದೇಶನದ ಸಿನಿಮಾವಾಗಿತ್ತು. ಬಹಳ ದೊಡ್ಡಮಟ್ಟದಲ್ಲಿ ಲಾಂಚ್ ಮಾಡಿದ್ದರು. ಈ ಚಿತ್ರದಲ್ಲಿ ದ್ರೌಪದಿ ಪಾತ್ರವನ್ನು ಸೌಂದರ್ಯಾ ನಿಭಾಯಿಸಿದ್ದರು. ಒಂದಷ್ಟು ದಿನಗಳ ಕಾಲ ಶೂಟಿಂಗ್ ಕೂಡ ಮಾಡಿದ್ದರು. ಆದರೆ, ಅಷ್ಟರಲ್ಲೇ ಸೌಂದರ್ಯಾ ಅವರು ಅಪಘಾತದಲ್ಲಿ ನಿಧನರಾದರು. ಆನಂತರ ಶೂಟಿಂಗ್ ಮಾಡುವುದನ್ನೇ ನಿಲ್ಲಿಸಿಬಿಟ್ಟ ಬಾಲಕೃಷ್ಣ, 'ನರ್ತನಶಾಲಾ'ಗೆ ಕೊನೇ ಹಾಡಿದರು! ಇದೀಗ ಆ ಸಿನಿಮಾದ 17 ನಿಮಿಷಗಳ ಅವಧಿಯ ಫೂಟೇಜ್‌ ಅನ್ನು ರಿಲೀಸ್ ಮಾಡುವುದಕ್ಕೆ ಪ್ಲ್ಯಾನ್ ಮಾಡಲಾಗಿದೆ. ಅ.24ರಂದು ದಸರಾ ಹಬ್ಬದ ಪ್ರಯುಕ್ತ ಅದನ್ನು ಆನ್‌ಲೈನ್‌ನಲ್ಲಿ ಲಾಂಚ್ ಮಾಡಲಾಗುತ್ತಿದೆ!

ಬಹುತಾರಾಗಣದ ಸಿನಿಮಾ!

ಎನ್‌ಟಿಆರ್ ನಾಯಕತ್ವದಲ್ಲಿ 1963ರಲ್ಲಿ ತೆರೆಕಂಡಿದ್ದ 'ನರ್ತನಶಾಲಾ'ವನ್ನೇ ರಿಮೇಕ್ ಮಾಡುವುದಕ್ಕೆ ನಂದಮೂರಿ ಪ್ಲ್ಯಾನ್ ಮಾಡಿಕೊಂಡಿದ್ದರು. ನಿರ್ದೇಶನ ಮಾಡುವುದರ ಜೊತೆಗೆ ಅರ್ಜುನ ಮತ್ತು ಕೀಚಕ ಪಾತ್ರಗಳನ್ನು ಅವರು ನಿಭಾಯುಸುತ್ತಿದ್ದರು. ಸೌಂದರ್ಯಾ ದ್ರೌಪದಿ ಪಾತ್ರ ಮಾಡುತ್ತಿದ್ದರು. ಉಳಿದಂತೆ, ಶ್ರೀಹರಿ, ಉದಯ್ ಕಿರಣ್, ಶರತ್ ಬಾಬು, ಸಾಯಿಕುಮಾರ್‌, ಆಸೀನ್ ಉಳಿದ ಪಾತ್ರಗಳಲ್ಲಿ ಇದ್ದರು. 2004ರ ಮಾರ್ಚ್‌ 1ರಂದು ಚಿತ್ರೀಕರಣ ಆರಂಭವಾಗಿತ್ತು. ಆದರೆ, 2004ರ ಏಪ್ರಿಲ್‌ 17ರಂದು ಸೌಂದರ್ಯಾ ನಿಧನರಾದರು. ಅವರಿಲ್ಲದೆ ಈ ಸಿನಿಮಾ ಮಾಡುವುದು ಸಾಧ್ಯವಿಲ್ಲ ಎಂದು ಬಾಲಯ್ಯ ತಿಳಿಸಿದ್ದರು. ಈಗ ರಿಲೀಸ್ ಮಾಡಲಿರುವ 17 ನಿಮಿಷದ ಫೂಟೇಜ್‌ನಿಂದ ಬರುವ ಹಣವನ್ನು ಚಾರಿಟಿಗೆ ನೀಡುವುದಕ್ಕೆ ಬಾಲಯ್ಯ ನಿರ್ಧಾರ ಮಾಡಿದ್ದಾರೆ.

ಪಂಚಭಾಷಾ ತಾರೆಯಾಗಿದ್ದ ಸೌಂದರ್ಯಾ

1992ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಸೌಂದರ್ಯಾ, 13 ವರ್ಷಗಳ ಕಾಲ ಚಿತ್ರರಂಗದಲ್ಲಿದ್ದರು. ಅವರು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ನಟಿಸಿದ್ದರು. ಅಮಿತಾಭ್ ಬಚ್ಚನ್, ರಜನಿಕಾಂತ್, ಕಮಲ್ ಹಾಸನ್, ವಿಷ್ಣುವರ್ಧನ್, ಮೋಹನ್‌ ಲಾಲ್‌, ರವಿಚಂದ್ರನ್‌, ಚಿರಂಜೀವಿ, ನಾಗಾರ್ಜುನ, ವಿಕ್ಟರಿ ವೆಂಕಟೇಶ್‌, ಜಗಪತಿ ಬಾಬು, ಮೋಹನ್ ಬಾಬು ಸೇರಿದಂತೆ ಅನೇಕ ಘಟಾನುಘಟಿ ಕಲಾವಿದರ ಜೊತೆ ಸೌಂದರ್ಯಾ ಕೆಲಸ ಮಾಡಿದ್ದರು. ಅವರ ಪ್ರತಿಭೆಗೆ 6 ಬಾರಿ ಫಿಲ್ಮ್‌ಫೇರ್‌ ಪ್ರಶಸ್ತಿ ಕೂಡ ಲಭಿಸಿದೆ. ಒಂದು ಬಾರಿ ರಾಷ್ಟ್ರ ಪ್ರಶಸ್ತಿ, ಐದು ಬಾರಿ ರಾಜ್ಯ ಪ್ರಶಸ್ತಿ ಕೂಡ ಸೌಂದರ್ಯಾಗೆ ಸಂದಿವೆ. ಈಚೆಗೆ ಅವರ ಕುರಿತು ಬಯೋಪಿಕ್‌ ಮಾಡಲಾಗುತ್ತಿದೆ ಎಂಬ ಮಾಹಿತಿ ಕೇಳಿಬಂದಿದ್ದು, ಅವರ ಪಾತ್ರವನ್ನು ನಟಿ ಸಾಯಿ ಪಲ್ಲವಿ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾವಾಗಲಿದೆಯೇ ನಟಿ ಸೌಂದರ್ಯಾ ಬದುಕು? ಈ ಕನ್ನಡತಿಯ ಪಾತ್ರ ಮಾಡುವುದು ಯಾರು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌