ಆ್ಯಪ್ನಗರ

ಕ್ಯಾನ್ಸರ್‌ ರೋಗಿಗಳಿಗಾಗಿ ಬಳಕೆ ಆಗಲಿದೆ ಧ್ರುವ ಸರ್ಜಾ ಕೂದಲು! ಬದಲಾಯ್ತು 'ಆ್ಯಕ್ಷನ್ ಪ್ರಿನ್ಸ್' ಲುಕ್‌!

ನಟ ಧ್ರುವ ಸರ್ಜಾ 'ಪೊಗರು' ಸಿನಿಮಾ ಶೂಟಿಂಗ್‌ ಮುಗಿಸಿದ್ದಾರೆ. ಅದರ ಬೆನ್ನಲ್ಲೇ ಅವರು ಇನ್ನೊಂದು ಹೊಸ ವಿಚಾರವನ್ನು ಹಂಚಿಕೊಂಡಿದ್ದಾರೆ. ಕ್ಯಾನ್ಸರ್‌ ರೋಗಿಗಳಿಗೆ ಬೆಂಬಲವಾಗಿ ನಿಲ್ಲುವ ಸಲುವಾಗಿ ವಿಶೇಷವಾದ ಕಾರ್ಯ ಮಾಡಿದ್ದಾರೆ.

Vijaya Karnataka Web 21 Nov 2020, 3:32 pm
ಇಷ್ಟು ದಿನ ರಗಡ್‌ ಲುಕ್‌ನಿಂದಲೇ ಗಮನ ಸೆಳೆಯುತ್ತಿದ್ದ ನಟ ಧ್ರುವ ಸರ್ಜಾ ಈಗ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಹುನಿರೀಕ್ಷಿತ 'ಪೊಗರು' ಸಿನಿಮಾ ಸಲುವಾಗಿ ಅವರು ಉದ್ದ ಕೂದಲು ಬಿಟ್ಟಿದ್ದರು. ಆದರೆ ಈಗ ಶೂಟಿಂಗ್‌ ಮುಕ್ತಾಯಗೊಂಡಿದ್ದು, ಕೂದಲಿಗೆ ಕತ್ತರಿ ಹಾಕಿದ್ದಾರೆ. ಹೊಸ ಲುಕ್‌ ಮೂಲಕ ಅಭಿಮಾನಿಗಳ ಎದುರು ಬಂದಿದ್ದಾರೆ 'ಆ್ಯಕ್ಷನ್ ಪ್ರಿನ್ಸ್'.
Vijaya Karnataka Web ಧ್ರುವ ಸರ್ಜಾ


'ಪೊಗರು' ಸಿನಿಮಾದ ಪಾತ್ರಕ್ಕಾಗಿ ಕಳೆದ ಎರಡು ವರ್ಷಗಳಿಂದಲೂ ಧ್ರುವ ಈ ಹೇರ್‌ ಸ್ಟೈಲ್‌ ನಿಭಾಯಿಸಿಕೊಂಡು ಬಂದಿದ್ದರು. ಅಂತೂ ಈಗ ಆ ಗೆಟಪ್‌ಗೆ ವಿದಾಯ ಹೇಳುವ ಸಮಯ ಬಂದಿದೆ. ಅದಕ್ಕಾಗಿ ಅವರು ಹೇರ್‌ ಕಟ್‌ ಮಾಡಿಸಿದ್ದಾರೆ. ಆದರೆ ಸುಮ್ಮನೆ ಹೊಸ ಹೇರ್‌ ಸ್ಟೈಲ್‌ ಮಾಡಿಕೊಳ್ಳುವ ಬದಲು, ಅದರಲ್ಲೂ ಅವರು ಸಮಾಜಮುಖಿಯಾಗಿ ಆಲೋಚಿಸಿದ್ದಾರೆ. ಕ್ಯಾನ್ಸರ್‌ ರೋಗಿಗಳ ಸಲುವಾಗಿ ಕೂದಲು ಡೊನೇಟ್‌ ಮಾಡಿದ್ದಾರೆ.

ಈ ಬಗ್ಗೆ ಅವರು ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಾವು ಹೇರ್‌ ಕಟ್ ಮಾಡಿಸುತ್ತಿರುವ ವಿಡಿಯೋವನ್ನು ಶೇರ್‌ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. 'ಪೊಗರು ಸಿನಿಮಾ ಶೂಟಿಂಗ್‌ ಮುಗಿಯಿತು. ಇನ್ನೇನು ಹೇರ್‌ ಕಟ್‌ ಮಾಡಿಸಬೇಕು ಎಂದಾಗ ಸ್ನೇಹಿತರೆಲ್ಲ ಸೇರಿಕೊಂಡು ಒಂಚೂರು ಎಜುಕೇಟ್‌ ಮಾಡಿದರು. ಹತ್ತು ಇಂಚಿಗಿಂತಲೂ ಹೆಚ್ಚು ಉದ್ದವಾಗಿರುವ ಕೂದಲು ಡೊನೇಟ್‌ ಮಾಡುವ ವಿಷಯ ತಿಳಿಸಿದರು. ನಾನೊಬ್ಬನೇ ಅಲ್ಲ, ಸಾಕಷ್ಟು ಜನ ಡೊನೇಟ್‌ ಮಾಡಿದ್ದಾರೆ' ಎಂದು ಹೇಳಿದ್ದಾರೆ ಧ್ರುವ.

'ಕ್ಯಾನ್ಸರ್‌ ಬಂದಿರುವ 15 ವರ್ಷಕ್ಕಿಂತ ಕೆಳಗೆ ಇರುವ ಕೆಲವು ಮಕ್ಕಳಿಗೆ ಕಿಮೋ ಥೆರಪಿ ಮಾಡಿದಾಗ ಸ್ವಲ್ಪ ಹೇರ್‌ ಲಾಸ್‌ ಆಗಿರುತ್ತದೆ. ಅಂಥವರಿಗಾಗಿ ವಿಗ್‌ ಮಾಡಿಸಿದಾಗ ನಾವು ನೈತಿಕವಾಗಿ ಬೆಂಬಲ ನೀಡುತ್ತೇವೆ. ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿಯೂ ನಾವು ಇದನ್ನು ಮಾಡುತ್ತಿದ್ದೇನೆ. ಹೇರ್‌ ಕಟ್‌ ಮಾಡಿಸುವ ಎಲ್ಲರೂ ಈ ರೀತಿ ಮಾಡಿಸಿದರೆ ಎಷ್ಟೋ ಜನರಿಗೆ ಉಪಯೋಗ ಆಗುತ್ತದೆ' ಎಂದಿದ್ದಾರೆ ಧ್ರುವ.

also read: ಧ್ರುವ ಸರ್ಜಾ ನಟನೆಯ 'ಪೊಗರು' ಬಿಡುಗಡೆಗೆ ದಿನಾಂಕ ಫಿಕ್ಸ್! ರಿಲೀಸ್‌ ಬಗ್ಗೆ ನಿರ್ದೇಶಕರು ಹೇಳಿದ್ದೇನು?

'ಪೊಗರು' ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಇದರಲ್ಲಿ ಧ್ರುವ ಸರ್ಜಾಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ನಂದಕಿಶೋರ್‌ ನಿರ್ದೇಶನ ಮಾಡಿದ್ದು, ಚಂದನ್‌ ಶೆಟ್ಟಿ ಸಂಗೀತ ಸಂಯೋಜನೆ ಮಾಡಿದ್ದಾರೆ. 'ಖರಾಬು..' ಹಾಡು ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದೆ. ಆ ಮೂಲಕ ಸಿನಿಮಾ ಮೇಲೆ ಇರುವ ನಿರೀಕ್ಷೆ ದುಪ್ಪಟ್ಟಾಗಿದೆ.

also read: 'ಅದ್ದೂರಿ', 'ಭರ್ಜರಿ' ನಂತರ 'ದುಬಾರಿ' ಆದ ನಟ ಧ್ರುವ ಸರ್ಜಾ! ಸೆಟ್ಟೇರಿತು ಐದನೇ ಸಿನಿಮಾ!

View this post on Instagram A post shared by Dhruva Sarja (@dhruva_sarjaa)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌