ಆ್ಯಪ್ನಗರ

ಬಾಲಿವುಡ್‌ ಚಿತ್ರದಿಂದ ಒಂದೇ ದಿನಕ್ಕೆ ಹೊರಬಂದ ಮಹಾನಟಿ! ಇದು ಪ್ರಿಯಾಮಣಿಗೆ ಸಿಹಿ; ಕೀರ್ತಿ ಸುರೇಶ್‌ ಅಭಿಮಾನಿಗಳಿಗೆ ಕಹಿ!

ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿರುವ ನಟಿ ಕೀರ್ತಿ ಸುರೇಶ್‌ ಅಭಿಮಾನಿಗಳಿಗೆ ಒಂದು ಕಹಿ ಸುದ್ದಿ ಕೇಳಿಬಂದಿದೆ. ಇದೇ ಮೊದಲ ಬಾರಿಗೆ ಬಾಲಿವುಡ್‌ಗೆ ಎಂಟ್ರಿ ಪಡೆಯುತ್ತಿದ್ದ ಈ ನಟಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ.

Vijaya Karnataka Web 18 Jan 2020, 8:17 pm
ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿರುವ ನಟಿ ಕೀರ್ತಿ ಸುರೇಶ್‌ ಅಭಿಮಾನಿಗಳಿಗೆ ಒಂದು ಕಹಿ ಸುದ್ದಿ ಕೇಳಿಬಂದಿದೆ. ಇದೇ ಮೊದಲ ಬಾರಿಗೆ ಬಾಲಿವುಡ್‌ಗೆ ಎಂಟ್ರಿ ಪಡೆಯುತ್ತಿದ್ದ ಈ ನಟಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಚಿಕ್ಕದೊಂದು ಕಾರಣ ನೀಡಿ, ಬಹುನಿರೀಕ್ಷಿತ ಚಿತ್ರದಿಂದ ಅವರನ್ನು ಹೊರ ಹಾಕಲಾಗಿದೆ! ಅವರಿಂದ ತೆರವಾದ ಸ್ಥಾನವನ್ನು ಕನ್ನಡತಿ ಪ್ರಿಯಾಮಣಿ ತುಂಬುತ್ತಿದ್ದಾರೆ. ಯಾವುದು ಆ ಸಿನಿಮಾ? ಏನಿದು ಬೆಳವಣಿಗೆ? ಇಲ್ಲಿದೆ ಪೂರ್ಣ ಮಾಹಿತಿ.
Vijaya Karnataka Web priyamani replaces keerthy suresh in ajay devgn starrer maidaan film
ಬಾಲಿವುಡ್‌ ಚಿತ್ರದಿಂದ ಒಂದೇ ದಿನಕ್ಕೆ ಹೊರಬಂದ ಮಹಾನಟಿ! ಇದು ಪ್ರಿಯಾಮಣಿಗೆ ಸಿಹಿ; ಕೀರ್ತಿ ಸುರೇಶ್‌ ಅಭಿಮಾನಿಗಳಿಗೆ ಕಹಿ!


ಮೈದಾನ್‌ ಸಿನಿಮಾದಲ್ಲಿ ಕೀರ್ತಿಗೆ ಇಲ್ಲ ಚಾನ್ಸ್‌!

ಟಾಲಿವುಡ್‌ನ 'ಮಹಾನಟಿ' ಸಿನಿಮಾದಲ್ಲಿ ಲೆಜೆಂಡರಿ ಚಿತ್ರನಟಿ ಸಾವಿತ್ರಿ ಅವರ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಕೀರ್ತಿ ಸುರೇಶ್‌ಗೆ ಅಭಿಮಾನಿ ಬಳಗ ದೊಡ್ಡದಾಯಿತು. ಗಲ್ಲಾಪೆಟ್ಟಿಗೆಯಲ್ಲೂ ಸಿನಿಮಾ ಸೂಪರ್‌ ಹಿಟ್‌ ಆಗಿದ್ದರಿಂದ ಏಕಾಏಕಿ ಅವರ ಬೇಡಿಕೆಯೂ ಹೆಚ್ಚಾಯಿತು. ಪರಿಣಾಮವಾಗಿ ಅಜಯ್‌ ದೇವಗನ್‌ ನಾಯಕತ್ವದ 'ಮೈದಾನ್‌' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುವ ಅವಕಾಶ ಒದಗಿಬಂದು. ಆದರೆ ಯಾಕೋ ಅವರು ಈ ಪಾತ್ರಕ್ಕೆ ಸೂಕ್ತ ಆಗುತ್ತಿಲ್ಲ ಎಂಬ ನೆಪ ನೀಡಿ ಅವರನ್ನು ಹೊರ ಹಾಕಲಾಗಿದೆ.

ಸ್ಲಿಮ್‌ ಆಗಿದ್ದೇ ತಪ್ಪಾಗಿ ಬಿಡ್ತು!

ಸಾಮಾನ್ಯವಾಗಿ ನಟಿಯರು ಸ್ಲಿಮ್‌ ಆಗಿರಲು ಇಷ್ಟಪಡುತ್ತಾರೆ. ಅದೇ ರೀತಿ ಕೀರ್ತಿ ಸುರೇಶ್‌ ಕೂಡ ಇತ್ತೀಚೆಗೆ ಸಿಕ್ಕಾಪಟ್ಟೆ ವರ್ಕೌಟ್‌ ಮಾಡಿ ತೆಳ್ಳಗಾಗಿದ್ದರು. ಅವರನ್ನು ಕಂಡ ಅಭಿಮಾನಿಗಳು ಅಚ್ಚರಿಗೊಂಡಿದ್ದರು. ಆದರೆ ಅದೇ ಈಗ ಅವರಿಗೆ ಮುಳುವಾಗಿದೆ. 'ಮೈದಾನ್‌' ಸಿನಿಮಾದಲ್ಲಿ ಅಜಯ್‌ ದೇವಗನ್‌ ಪತ್ನಿಯಾಗಿ ಅವರು ನಟಿಸಬೇಕಿತ್ತು. ಮೊದಲ ದಿನದ ಶೂಟಿಂಗ್‌ನಲ್ಲೂ ಅವರು ಪಾಲ್ಗೊಂಡರು. ಆಗ ಅವರನ್ನು ಕಂಡ ನಿರ್ದೇಶಕರಿಗೆ ಕೊಂಚ ಚಿಂತೆ ಆಗಿದೆ. ಇಷ್ಟೊಂದು ಸ್ಲಿಮ್‌ ಆಗಿರುವುದರಿಂದ ತುಂಬ ಚಿಕ್ಕ ಹುಡುಗಿಯಂತೆ ಕಾಣುತ್ತಾರೆ ಎಂಬ ಅಭಿಪ್ರಾಯ ಚಿತ್ರತಂಡದವರಲ್ಲಿ ಮೂಡಿದೆ. ಈ ಅಭಿಪ್ರಾಯಕ್ಕೆ ಕೀರ್ತಿ ಕೂಡ ಸಹಮತ ಸೂಚಿಸಿದ್ದು, ಚಿತ್ರದಿಂದ ಹೊರಬರಲು ಒಪ್ಪಿದ್ದಾರಂತೆ.

ಪ್ರಿಯಾಮಣಿಗೆ ಮತ್ತೊಂದು ಬಾಲಿವುಡ್‌ ಆಫರ್‌

ಕೀರ್ತಿ ಸುರೇಶ್‌ ಬದಲಿಗೆ ಆ ಪಾತ್ರಕ್ಕೆ ಪ್ರಿಯಾಮಣಿ ಸೂಕ್ತ ಎಂದು 'ಮೈದಾನ್‌' ಚಿತ್ರತಂಡ ನಿರ್ಧರಿಸಿದೆ. ಇತ್ತೀಚೆಗೆ 'ದಿ ಫ್ಯಾಮಿಲಿ ಮ್ಯಾನ್‌' ವೆಬ್‌ ಸರಣಿ ಮೂಲಕ ಹಿಂದಿ ಪ್ರೇಕ್ಷಕರನ್ನು ಪ್ರಿಯಾಮಣಿ ರಂಜಿಸಿದ್ದಾರೆ. ಬಾಲಿವುಡ್‌ ಅವರಿಗೆ ಹೊಸದೇನೂ ಅಲ್ಲ. ಮಣಿ ರತ್ನಂ ನಿರ್ದೇಶನದ 'ರಾವಣ್‌' ಚಿತ್ರದಲ್ಲಿ ಅವರು ನಟಿಸಿದ್ದರು. ಶಾರುಖ್‌ ಖಾನ್‌ ಮತ್ತು ದೀಪಿಕಾ ಪಡುಕೋಣೆ ಜೋಡಿಯ 'ಚೆನ್ನೈ ಎಕ್ಸ್‌ಪ್ರೆಸ್‌' ಚಿತ್ರದ ವಿಶೇಷ ಹಾಡಿಗೂ ಹೆಜ್ಜೆ ಹಾಕಿದ್ದರು. ಈಗ 'ಮೈದಾನ್‌' ಮೂಲಕ ಮತ್ತೆ ಬಾಲಿವುಡ್‌ಗೆ ಕಾಲಿಡುವಂತಹ ಚಾನ್ಸ್‌ ಅವರಿಗೆ ಸಿಕ್ಕಿದೆ.

ಅಜಯ್‌ ದೇವಗನ್‌ಗೆ 'ಮೈದಾನ್‌' ಮೇಲೆ ಸಖತ್‌ ನಿರೀಕ್ಷೆ

ಈ ವರ್ಷದ ಆರಂಭದಲ್ಲೇ 'ತಾನಾಜಿ; ದ ಅನ್‌ಸಂಗ್‌ ವಾರಿಯರ್‌'ಚಿತ್ರದ ಮೂಲಕ ಅಜಯ್‌ ದೇವಗನ್‌ ದೊಡ್ಡ ಗೆಲುವು ಸಾಧಿಸಿದ್ದಾರೆ. ಕೆಲವೇ ದಿನಗಳಲ್ಲಿ ಆ ಚಿತ್ರ 100 ಕೋಟಿ ರೂ. ಗಳಿಸಿ ಮುನ್ನುಗ್ಗುತ್ತಿದೆ. ಆ ಯಶಸ್ಸಿನ ಬಳಿಕ ಅವರ ಮುಂಬರುವ ಸಿನಿಮಾಗಳ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ಹಾಗಾಗಿ 'ಮೈದಾನ್‌' ಅತ್ಯುತ್ತಮವಾಗಿ ಮೂಡಿಬರಬೇಕಾದ ಅನಿವಾರ್ಯತೆ ಇದೆ. 1952ರಿಂದ 1962ರವರೆಗೆ ಭಾರತೀಯ ಫುಟ್‌ಬಾಲ್‌ ತಂಡ ಮಾಡಿದ ಸಾಧನೆಯನ್ನು ಆಧರಿಸಿ ಈ ಚಿತ್ರ ತಯಾರಾಗುತ್ತಿದೆ. 'ಬದಾಯಿ ಹೋ' ಖ್ಯಾತಿಯ ಅಮಿತ್‌ ಶರ್ಮ ನಿರ್ದೇಶನ ಮಾಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌