ಆ್ಯಪ್ನಗರ

Ravichandran: 'ಕನ್ನಡಿಗ' ಚಿತ್ರದಲ್ಲಿ 'ಸ್ಟಾರ್' ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ಗೆ ಏನು ಪಾತ್ರ?

'ಕ್ರೇಜಿ ಸ್ಟಾರ್‌' ರವಿಚಂದ್ರನ್ ನಾಯಕತ್ವದ 'ಕನ್ನಡಿಗ' ಸಿನಿಮಾದ ಶೂಟಿಂಗ್ ಬಹುತೇಕ ಕೊನೇ ಹಂತ ತಲುಪಿದೆ. ಇದೀಗ ಚಿತ್ರಕ್ಕೆ ಹೊಸದಾಗಿ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್ ಸೇರಿಕೊಂಡಿದ್ದಾರೆ. ಅವರಿಲ್ಲಿ ಒಂದು ಮುಖ್ಯ ಪಾತ್ರ ಮಾಡುತ್ತಿದ್ದಾರೆ.

Vijaya Karnataka Web 2 Dec 2020, 9:50 am
ಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಂ. ಗಿರಿರಾಜ್ ನಿರ್ದೇಶನದಲ್ಲಿ ಸಿದ್ಧಗೊಳ್ಳುತ್ತಿರುವ 'ಕನ್ನಡಿಗ' ಚಿತ್ರದಲ್ಲಿ 'ಕ್ರೇಜಿ ಸ್ಟಾರ್' ರವಿಚಂದ್ರನ್‌ ಐತಿಹಾಸಿಕ ಪಾತ್ರವೊಂದಕ್ಕೆ ಬಣ್ಣ ಹಚ್ಚಿರುವುದು ಗೊತ್ತೇ ಇದೆ. ಲಾಕ್‌ಡೌನ್ ತೆರವುಗೊಳ್ಳುತ್ತಿದ್ದಂತೆಯೇ ಶೂಟಿಂಗ್ ಆರಂಭಿಸಿದ್ದ ತಂಡ, ಈಗ ಬರೋಬ್ಬರಿ 80% ಶೂಟಿಂಗ್ ಮುಗಿಸಿದೆ. ಇದೀಗ ಚಿತ್ರಕ್ಕೆ ಹೊಸ ನಟರೊಬ್ಬರು ಸೇರಿಕೊಂಡಿದ್ದಾರೆ. ಯಾರವರು? ಖ್ಯಾತ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್‌!
Vijaya Karnataka Web Rockline Venkatesh


ಸಾಮಂತಭದ್ರನ ಸ್ನೇಹಿತನಾಗಿ ವೆಂಕಟೇಶ್‌
'ಕನ್ನಡಿಗ' ಚಿತ್ರದಲ್ಲಿ ರವಿಚಂದ್ರನ್‌ ಸಾಮಂತಭದ್ರ ಎಂಬ ಪಾತ್ರ ಮಾಡುತ್ತಿದ್ದಾರೆ. ಅವರಿಗೆ ಅಪ್ತ ಸ್ನೇಹಿತನ ಪಾತ್ರದಲ್ಲಿ ರಾಕ್‌ಲೈನ್ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಇವರಿಬ್ಬರು 'ರಸಿಕ' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಅಲ್ಲದೆ, 'ಕುರುಕ್ಷೇತ್ರ' ಚಿತ್ರದಲ್ಲಿ ರವಿಚಂದ್ರನ್ ಕೃಷ್ಣನಾಗಿದ್ದರೆ, ರಾಕ್‌ಲೈನ್‌ ಶಲ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಇನ್ನು, ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿರುವ 'ರಸಿಕ', 'ಯಾರೆ ನೀನು ಚೆಲುವೆ', 'ಪ್ರೀತ್ಸೋದ್ ತಪ್ಪಾ', 'ನಾನು ನನ್ನ ಹೆಂಡ್ತೀರು', 'ಉಸಿರೇ', 'ಒಂದಾಗೋಣಾ ಬಾ' ಸಿನಿಮಾಗಳಲ್ಲಿ ರವಿಚಂದ್ರನ್ ಹೀರೋ ಆಗಿದ್ದರು. ಈಗ 'ಕನ್ನಡಿಗ' ಮೂಲಕ ಮತ್ತೊಮ್ಮೆ ಒಂದಾಗಿದ್ದಾರೆ.

ದ್ವಿಪಾತ್ರದಲ್ಲಿ ರವಿಚಂದ್ರನ್‌
ಈ ಮೊದಲು ಸಾಮಂತಭದ್ರ ಎಂಬ ಲಿಪಿಕಾರನ ಪಾತ್ರದಲ್ಲಿ ರವಿಚಂದ್ರನ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಅದರ ಜೊತೆಗೆ ಗುಣಭದ್ರನೆಂಬ ಯೋಧನ ಪಾತ್ರಕ್ಕೂ ರವಿಚಂದ್ರನ್‌ ಜೀವ ತುಂಬಲಿದ್ದಾರೆ. ಇದು ಸಾಮಂತಭದ್ರನ ಪೂರ್ವಜರ ಪಾತ್ರವಂತೆ. 'ರಾಣಿ ಚೆನ್ನಭೈರಾದೇವಿ ಸೇನೆಯ ಯೋಧನಾಗಿ ರವಿಚಂದ್ರನ್‌ ಕಾಣಿಸಿಕೊಳ್ಳುತ್ತಾರೆ. ಈ ಥರದ ಪಾತ್ರವನ್ನು ಅವರು ಮಾಡಿರುವುದು ಇದೇ ಮೊದಲು. ಇದು ಗುಣಭದ್ರನ ಪೂರ್ವಜರ ಪಾತ್ರವಾಗಿದೆ' ಎಂದು ನಿರ್ಮಾಪಕ ಎನ್‌.ಎಸ್. ರಾಜ್‌ಕುಮಾರ್ ಹೇಳಿಕೊಂಡಿದ್ದರು.

'ಕನ್ನಡಿಗ' ಚಿತ್ರಕ್ಕಾಗಿ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡ 'ಕ್ರೇಜಿ ಸ್ಟಾರ್‌' ರವಿಚಂದ್ರನ್‌!

80% ಶೂಟಿಂಗ್ ಮುಗಿಸಿರುವ ನಿರ್ದೇಶಕ ಗಿರಿರಾಜ್, ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳತ್ತ ಗಮನ ನೀಡಿದ್ದಾರೆ. ಚಿಕ್ಕಮಗಳೂರು, ಸಾಗರ ಸುತ್ತಮುತ್ತ ಸೆಟ್‌ ಹಾಕಿ ಚಿತ್ರೀಕರಣ ಮಾಡಲಾಗಿದೆ. ಯುದ್ಧದ ಸನ್ನಿವೇಶಗಳು ಮಾತ್ರ ಬಾಕಿ ಉಳಿದಿವೆ. ಭವಾನಿ ಪ್ರಕಾಶ್, ಪಾವನಾ ಗೌಡ, ಚಿ. ಗುರುದತ್, ದತ್ತಣ್ಣ, ಬಾಲಾಜಿ ಮನೋಹರ್, ಅಚ್ಯುತ್ ಕುಮಾರ್, ಸ್ವಾತಿ ಚಂದ್ರಶೇಖರ್, ಜೆಮಿ ವಾಲ್ಟರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದು, ಜಿಎಸ್‌ವಿ ಸೀತಾರಾಮ್‌ ಛಾಯಾಗ್ರಹಣ ಮಾಡುತ್ತಿದ್ದಾರೆ.

ಮೊದಲ ಬಾರಿಗೆ ಯೋಧನಾಗಿ ಕಾಣಿಸಿಕೊಂಡ ರವಿಚಂದ್ರನ್! ಯಾವ ಚಿತ್ರಕ್ಕಾಗಿ ಈ ಗೆಟಪ್?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌